Wednesday 31 December 2014

ಉಸಿರು - ಜಲಾಲುದ್ದೀನ್ ರೂಮಿ






ನಾನು ಕ್ರೈಸ್ತನಲ್ಲ, ಯಹೂದಿ, ಮುಸಲ್ಮಾನ, ಹಿಂದುವೂ ಅಲ್ಲ
ಬೌದ್ಧ, ಸೂಫಿ, ಝೆನ್ ಧರ್ಮದವನೂ ಅಲ್ಲ

ಯಾವುದೇ ಪರಂಪರೆಯವನಲ್ಲ. ಪೂರ್ವದವನಲ್ಲ
ಪಶ್ಚಿಮದವನಲ್ಲ, ಕಡಲೊಳಗಿನಿಂದೆದ್ದು ಬಂದವನಲ್ಲ

ನೆಲದಿಂದ ಉದ್ಭವಿಸಲಿಲ್ಲ, ನೈಸರ್ಗಿಕವಲ್ಲ, ದೈವಿಕವೂ ಅಲ್ಲ
ಪಂಚಭೂತಗಳಿಂದಾದವನಲ್ಲವೇ ಅಲ್ಲ, ನಾ ಎಂಬುದಿಲ್ಲವೇ ಇಲ್ಲ

ಇಹದಲೂ ಪರದಲೂ ನಾ ಕುರುಹಲ್ಲ
ಆಡಂ ಈವರ ವಂಶದ ಕುಡಿಯಲ್ಲ

ಯಾವ ವಂಶಾವಳಿಯೂ ನನಗಿಲ್ಲ, ನೆಲೆಯಿರದವ ನಾನು
ದೇಹವಲ್ಲ, ಆತ್ಮವೂ ಅಲ್ಲ, ನಿಶ್ಶೇಷದ ಶೇಷ

ನಾ ಪ್ರೇಮಿಯವ, ಎರಡು ಲೋಕಗಳ ಒಂದಾಗಿ ಕಂಡವ
ಪ್ರೇಮ ನನ್ನ ಕರೆಯುವುದು, ಅರಿತುಕೊಳುವುದು

ಮೊದಲ, ಕೊನೆಯ, ಹೊರಗಿನ, ಒಳಗಿನ
ಎಲ್ಲವೂ ಬರಿ ಪ್ರೇಮ, ಬರೀ ಪ್ರೇಮ
ಅದು ಪ್ರಾಣ, ಅದೇ ಉಸಿರು,

ಉಸಿರಾಡು ಮನುಜನೇ..



Thursday 18 December 2014

‘ನಾನು ಪೇಶಾವರ ಹತ್ಯಾಕಾಂಡ ನೋಡಿದೆ’





೧೨ ವರ್ಷದ ಅಲಿ, ಪೇಶಾವರ ಶಾಲಾ ಮಕ್ಕಳ ಹತ್ಯಾಕಾಂಡದಲ್ಲಿ ಬದುಕುಳಿದವ, ಪತ್ರಕರ್ತ ಕಿರಣ್ ನಾಜಿಶ್‌ಗೆ ಹೇಳಿದ ಮಾತುಗಳು ಇವು:

ಪರಮ ದಯಾಳುವೂ, ಕರುಣಾಳುವೂ ಆದ ದೇವರ ಹೆಸರಿನಲ್ಲಿ,

ನಮಸ್ತೆ. ನನ್ನ ಹೆಸರು ಅಲಿ. ೧೨ ವರ್ಷ.

ನಮ್ಮ ಮೊದಲ ಪೀರಿಯಡ್. ಪಾಠ ಕೇಳ್ತ ಕೂತಿದ್ವಿ. ಇದ್ದಕ್ಕಿದ್ದಂತೆ ಗುಂಡು ಸಿಡಿದ ಶಬ್ದ ಆಯ್ತು. ಅದು ಭಯಾನಕ ಶಬ್ದ. ಅದೇನಿರಬೋದು ಅಂತ ಊಹೆ ಮಾಡಕ್ಕೂ ಟೈಮಿರ್ಲಿಲ್ಲ.

ಆ ಶಬ್ದ ನಮ್ಮ ಕ್ಲಾಸ್ ಹತ್ರತ್ರನೇ ಬಂದಂಗೆ ನಮ್ಮ ಟೀಚರ್ ಬೆಂಚಿನ ಅಡಿ ಅಡಕ್ಕಳಿ ಅಂದ್ರು.

‘ಬೇಗ, ಬೇಗ, ನಿಮ್ಮ ಡೆಸ್ಕಿನಡಿ ತೂರಿಕೊಳ್ಳಿ.’ ಅವರು ಹೇಳಿದ್ರು. ಕೆಲವರು ಅಡಗಿದ್ವಿ. ಉಳ್ದ ಕೆಲವರು ಹೆದ್ರಿಕೆ, ಗೊಂದಲ ಆಗಿ ಏನು ಮಾಡದಂತ ತಿಳಿದೇ ಕಂಗಾಲಾಗಿ ನಿಂತ್ರು. ಇಡೀ ಕ್ಲಾಸು ಟೀಚರನ್ನು ‘ಏನಾಯ್ತು ಟೀಚರ್’ ಅಂತ ಕೇಳ್ತನೇ ಇತ್ತು.

ಪಕ್ಕದ ಕ್ಲಾಸಿನಿಂದ ಮಕ್ಕಳು ಕೂಗುವುದು, ಕಿರುಚುವುದು ಕೇಳ್ಸಕ್ ಶುರು ಆಯ್ತು. ನಂಗಂತೂ ಎಷ್ಟು ಹೆದರಿಕೆ ಆಯ್ತು ಅಂದ್ರೆ ಕಿರುಚಕ್ಕೆ ಹೋದ್ರೆ ಧ್ವನಿನೇ ಬರ್ಲಿಲ್ಲ.

ನಂ ಟೀಚರ್ರು ಇನ್ನೇನು ಬಾಗ್ಲು ಹಾಕ್ಬೇಕು ಅಂತಿದ್ರು, ಅಷ್ಟೊತ್ಗೆ ಮೂರ‍್ಜನ ಧಢಾರ್ ಅಂತ ಬಾಗ್ಲು ದಬ್ಬಿ ಬಂದೇ ಬಿಟ್ರು.

ಅವ್ರು ಗುಂಡು ಹಾರಿಸ್ತನೇ ಬಂದ್ರು. ನಂ ಟೀಚರ್ ಮತ್ತೆ ಫ್ರೆಂಡ್ಸಿಗೆ ಪೆಟ್ಟಾಗಿದ್ದನ್ನ ನೋಡ್ದೆ. ಹೊಡತ ತಿಂದು ನನ್ ಕೆಲ ಫ್ರೆಂಡ್ಸ್ ಕೆಳಗ್ ಬಿದ್ರು. ತುಂಬ ಜನ ಟೇಬಲ್ ಕೆಳಗೆ ಅಡಕ್ಕಂಡ್ವಿ.

ನಾನ್ ಸತ್ತೋಗ್ತಿನಿ ಅಂತ ಗೊತ್ತಾಯ್ತು. ಅಳಕ್ಕೆ ಶುರುಮಾಡ್ದೆ. ಎಲ್ಲರು ಅಳ್ತಿದ್ರು, ಆದ್ರೆ ಯಾರೂ ಓಡಿ ಹೊರಗೋಗೋ ಧೈರ್ಯ ಮಾಡ್ಲಿಲ್ಲ.

ನಂ ಫ್ರೆಂಡ್ಸ್‌ನ ತಲೆ, ಎದೆ, ಹೊಟ್ಟೆ, ಕೈಯಿ, ಕಾಲು ಹಿಂಗೆ ಎಲ್ಲೆಲ್ಲೋ ಹೊಡದ್ರು. ಎಲ್ರು ನೆಲದ ಮೇಲೆ ಬಿದ್ರು. ಅವ್ರಿಗೆ ಗೊತ್ತಾಯ್ತು. ಇವ್ರಲ್ಲಿ ಒಂದಷ್ಟ್ ಜನ ಬದುಕಿದಾರೆ ಅಂತ, ನೇರ ತಲೆಗೇ ಗುರಿಯಿಟ್ಟು ಗುಂಡು ಹಾರ‍್ಸಕ್ ಶುರುಮಾಡಿದ್ರು.

ನಂ ತಲೆಮೇಲೇ ಗುಂಡು ಹಾರೋದ್ವು. ನನ್ ಬೆಸ್ಟ್ ಫ್ರೆಂಡು ಮತ್ತೆ ಬೆಂಚ್ ಮೇಟ್ ಇರ್ಫಾನುಲ್ಲಾ ಹೇಳ್ದ,

‘ಸತ್ತೋರಂಗೆ ನಾಟ್ಕ ಮಾಡೋಲೋ’. ನಾನು ಹೆದ್ರಿ ಥರಥರ ಅಂತಿದ್ದೆ. ನಂ ಕ್ಲಾಸಲ್ಲಿ ನಮ್ದೆ ಕೊನೇ ಬೆಂಚು.

‘ಅಲ್ಲಾಡ್ದೆ ಮಲ್ಕ ಅಲಿ, ಅಲ್ಲಾಡ್ದೆ ಮಲಗು’ ಅವ್ನು ಪಿಸುಗುಟ್ಟಿದ. ನಾನು ಮಕಾಡೆ ಮಲಕ್ಕಂಡೆ. ಎಲ್ಲ ಸರಸರ ನಡದೋಯ್ತು. ನಂಗೊತ್ತಿತ್ತು ಅವ್ರು ಟೆರರಿಸ್ಟ್ ಅಂತ. ನಂಗೊತ್ತಿತ್ತು ಅವ್ರು ತಾಲಿಬಾನಿನೋರು ಅಂತ.

ನನ್ ಫ್ರೆಂಡ್ ಇರ್ಫಾನಿಗೂ ಗುಂಡು ತಾಕಿ ಗಾಯ ಆಯ್ತು. ಅವ್ನಿಗೆ ಎಲ್ಲಿ ತಾಗ್ತು ಅಂತ ಗೊತ್ತಾಗ್ಲಿಲ್ಲ. ಆದ್ರೆ ಅವ್ನು ಉಸಿರಾಡಿದ್ದು ನಂಗೆ ಕೇಳಿಸ್ತಿತ್ತು.

ಒಬ್ಬ ಟೆರರಿಸ್ಟ್ ಮತ್ತೊಬ್ಬನಿಗೆ ಕೂಗ್ದ: ‘ಅವ್ನು ಸತ್ನಾ ನೋಡು?’ ನಂತ್ರ ಗುಂಡಿನ ಶಬ್ದ ಮತ್ತಷ್ಟು ಕೇಳಿಸ್ತು. ನಂಗಂತೂ ನಾನು ಸತ್ತೋಗಿದೀನಿ ಅಂತ್ಲೇ ಅನಿಸ್ತು.

ಅವ್ರು ಪಾಶ್ತೋ ಮಾತಾಡ್ತಿದ್ರು. ಸಲ್ವಾರ್ ಕಮೀಜ್ ಹಾಕಿದ್ರು. ಎಲ್ರಿಗೂ ಉದ್ದ ಗಡ್ಡ ಇತ್ತು.

ಅವ್ರು ರೂಮಿಂದ ಹೊರಗೋದಾಗ ಇರ್ಫಾನನ್ನ ಕರದೆ. ಅವ್ನು ಉತ್ತರ ಕೊಡ್ಲಿಲ್ಲ. ಅವ್ನು ಇನ್ನೂ ಸತ್ತೋರಂಗೆ ನಾಟ್ಕ ಮಾಡ್ತಿದಾನೆ ಅನಿಸ್ತು. ನಾನು ಸತ್ತೋನಂಗೇ ಮಲ್ಕಂಡೆ.

ಅವ್ರು ಬಂದ್ಬಿಡ್ತಾರೆ ಅಂತ ನಂಗೆ ತುಂಬ ಭಯ ಆಗ್ತಿತ್ತು. ನನ್ ಫ್ರೆಂಡ್ ಯಾವಾಗ ಸತ್ನೋ ನಂಗೆ ಗೊತ್ತೇ ಆಗ್ಲಿಲ್ಲ. ಅವ್ನೇ ನನ್ ಜೀವ ಉಳ್ಸಿದ್ದು.

ನಾನೂ ಸತ್ತೋಗಿದೀನಿ ಅಂತನೇ ತಿಳ್ಕಂಡಿದ್ದೆ. ಎದೆ ಡಬಡಬ ಹೊಡ್ಕತಾ ಇತ್ತು. ನಂಗೆ ಅಲ್ಲಾಡಕ್ಕೂ ಆಗ್ತಿರಲಿಲ್ಲ.

ಎಷ್ಟೋ ತಾಸು ಹಿಂಗೇ ಸತ್ತೋರಂಗೇ ಇದ್ದೆ. ಆಮೇಲೆ ಯಾವಾಗ್ಲೋ ಮಿಲಿಟ್ರಿಯೋರು ಬಂದ್ರು. ಅವ್ರು ಬಂದ್ರೂ ನಾನು ಅಲ್ಲಾಡ್ದೆ ಸುಮ್ನೆ ಮಲಗೇ ಇದ್ದೆ. ಅವ್ರು ನಿಜವಾದ ಸೈನಿಕ್ರು ಹೌದೋ ಅಲ್ವೋ ನಂಗೆ ಗೊತ್ತಿರ್ಲಿಲ್ಲ. ನಂಗೆ ಮಾತಾಡಕ್ಕೂ ಆಗ್ಲಿಲ್ಲ. ತುಂಬ ಭಯ ಆಯ್ತು.

ನಂ ಕ್ಲಾಸ್ ಹೊರ‍್ಗೆ ಗುಂಡಿನ ಶಬ್ದ ಕೇಳ್ತನೇ ಇತ್ತು. ಆದ್ರೆ ನಂಗೆ ಕಣ್ ಬಿಡಕ್ಕೂ ಶಕ್ತಿ ಇರ್ಲಿಲ್ಲ. ತುಂಬ ದೊಡ್ದಾಗಿ ಢಮಾರ್ ಅಂತ ಎಂಥದೋ ಸಿಡೀತು. ಜೋರು ಅಂದ್ರೆ ಜೋರಾಗಿ. ನಾನು ಇಡೀ ಪ್ರಪಂಚನೇ ಇವತ್ತು ಸಿಡಿದು ಹೋಗುತ್ತೆ ಅಂದ್ಕಂಡೆ.

ಯಾರೋ ಬಂದು ನನ್ನ ಎತ್ತಿದ್ರು. ಆಗ್ಲೂ ನಾನು ಕಣ್ಣು ಮುಚ್ಕಂಡೇ ಇದ್ದೆ. ಅವ್ರು ಸೈನಿಕರು.

ನಾನು ಅಳಕ್ ಶುರು ಮಾಡ್ದೆ. ನನ್ನ ಅಮ್ಮ, ಅಪ್ಪನತ್ರ ಕರ‍್ಕಂಡೋಗಿ ಬಿಟ್ರು.

ನಾನೀಗ ಆಸ್ಪತ್ರೇಲಿದೀನಿ. ನನ್ನ ಎಷ್ಟೊಂದು ಫ್ರೆಂಡ್ಸ್ ಇಲ್ಲಿದಾರೆ ಗೊತ್ತ? ಅವ್ರಿಗೆ ರಕ್ತ ಕಮ್ಮಿಯಾಗಿದೆಯಂತೆ. ನಾನು ನನ್ನ ರಕ್ತ ಕೊಡ್ತಾ ಇದೀನಿ.


ನಮ್ಮಪ್ಪ ಅಮ್ಮ ಮನೆಗೋಗಣ ಅಂದ್ರು. ಅವ್ರಿಗೆ ನನ್ ಬಗ್ಗೆ ಚಿಂತೆ ಆಗ್ಬಿಟ್ಟಿದೆ. ಅವ್ರಿಗೆ ದುಃಖ ಆಗಿದೆ. ಅವ್ರಿಗೆ ಭಯ ಆಗಿದೆ. ನಂಗೂ ಭಯ ಆಗಿದೆ. ಆದ್ರೆ ಆಸ್ಪತ್ರೇಲಿದಾರಲ್ಲ, ನಮ್ಮ ಅಣ್ಣತಮ್ಮಂದ್ರು, ಅಕ್ಕತಂಗೀರು ಅವ್ರ ಬಗ್ಗೆನೂ ನಂಗೆ ಚಿಂತೆ ಆಗ್ತಿದೆ.

ಈ ತಾಲಿಬಾನ್ ದುಷ್ಟ.

ನಾ ಬದುಕಿದಿನಿ ಅಂತ ನಂಬಕ್ಕೇ ಆಗ್ತಿಲ್ಲ.

ನಂ ದೇಶ ಬೇಕು ಅಂತಂದ್ರೆ ನಾನು ಪ್ರಾಣ ಬೇಕಾದ್ರೂ ಕೊಟ್ಬಿಡ್ತೀನಿ.

ನನ್ ಫ್ರೆಂಡ್ಸ್‌ನ ಕೊಂದ ಈ ಟೆರರಿಸ್ಟ್ ವಿರುದ್ಧ ನಾನು ಹೋರಾಡೇ ಹೋರಾಡ್ತಿನಿ. ಅವ್ರನ್ನ ನಾನು ಯಾವತ್ತೂ ಕ್ಷಮಿಸಲ್ಲ. ಯಾವತ್ತೂ ಕ್ಷಮಿಸಲ್ಲ.

ದೇವ್ರು ನೋಡ್ತಾ ಇದಾನೆ.



ಸ್ವಚ್ಛ ಭಾರತ: ಕನಸು, ಕನವರಿಕೆ..




ಪ್ರತಿ ಬಾರಿ ರಾತ್ರಿ ಪ್ರಯಾಣ ಮಾಡುವಾಗ ಗಮನಿಸುತ್ತೇನೆ: ಘಟ್ಟ ಹತ್ತಿದ ಮೇಲೆ ಊಟಕ್ಕೆಂದೋ, ಚಹಾಗೆಂದೋ ಬಸ್ ನಿಲ್ಲುತ್ತದೆ. ಬಹುಪಾಲು ಪ್ರಯಾಣಿಕರು ಮೂತ್ರಶಂಕೆಗಾಗಿ ಇಳಿಯುತ್ತಾರೆ. ಹೆಂಗಸರು ಸುಲಭ್ ಶೌಚಾಲಯ ಹುಡುಕಿ ಹೊರಟರೆ ಗಂಡಸರು ರಸ್ತೆಯ ಆಚೀಚೆ ಬಯಲ ಶೌಚಾಲಯದತ್ತ ಧಾವಿಸುತ್ತಾರೆ. ‘ಸುಲಭ’ದ ಗಂಡಸರ ಖೋಲಿ ಖಾಲಿ. ಅದೇ ಹೆಂಗಸರ ಕೋಣೆಯೆದುರು ಸಾಲು ಸರದಿ.

ಒಮ್ಮೆ ಬಸ್ ನಿಂತದ್ದೇ ಯಾರೋ ಗಟ್ಟಿ ದನಿಯಲ್ಲಿ ಅರಚುವುದು ಕೇಳತೊಡಗಿತು. ಕೂಗಿದವನ ಹಾವಭಾವ ನೋಡಿದರೆ ಒಂದೋ ಕುಡಿದಿರಬೇಕು ಇಲ್ಲವೇ ಅರೆಹುಚ್ಚನಿರಬೇಕು. ಕುಡುಕರೂ, ಹುಚ್ಚರೂ ಕೆಲವೊಮ್ಮೆ ನಿಜ ನುಡಿಯುತ್ತಾರೆ. ಆತ ಕಿರುಚುತ್ತಿದ್ದ: ‘ಹ್ವಾಯ್, ರಸ್ತಿ ಬದಿ ಜಟಗ ದೇವ್ರ ಕಲ್ಲು ಇತ್ತ್ ಮಾರ್ರೆ. ನೀವು ಉಚ್ಚಿ ಹುಯ್ಯೂದಾರೆ ಅಲ್ಕಾಣಿ ಹೆಣಮಕ್ಳೆಲ್ಲ ಹ್ವಾತ್ರಲ, ಸುಲಭಕ್ ಹೋಯ್ನಿ. ಹೆಂಗಸ್ರಿಗಿಪ್ಪಷ್ಟ್ ಮಾನಮರ್ಯಾದಿನೂ ಇಲ್ವಾ ನಿಮ್ಗೆ? ಏಳೆಂಟು ನೂರ್ರುಪಾಯ್ ಕೊಟ್ ಬಸ್ ಹತತ್ರಿ, ಮೂರು ರೂಪಾಯ್ ಕೊಟ್ಟು ಉಚ್ಚಿ ಹುಯ್ಯೂಕಾತಿಲ್ವ?’

ಯಾರೇ ಕೂಗಾಡಲಿ, ಊರೇ ಹೋರಾಡಲಿ, ಬಸ್ಸಿಳಿದ ಬಹುಪಾಲು ಜನ ರಸ್ತೆ ಅರಸಿಕೊಂಡು ಮುಂದುಮುಂದೆ ಹಾಗೇ ಹೋದರು. ಅವನ ಕೂಗಿನ ಪರಿಣಾಮ ಇಷ್ಟೇ: ಅವನ ಕಣ್ಣಿಗೆ ಕಾಣದಷ್ಟು ದೂರದಲ್ಲಿ, ಅಕಾ ಆ ಕತ್ತಲಲ್ಲಿ ನಿಂತು ದಮ್ಮೆಳೆಯುತ್ತ ಬಾಧೆ ಮುಗಿಸಿ ಬಂದರು.

ಪ್ರತಿಬಾರಿ ನೋಡುತ್ತೇನೆ, ಸಾರ್ವಜನಿಕ ಶೌಚಾಲಯದೆದುರು ಒಬ್ಬ ಹುಡುಗನೇ ಕೂತಿರುತ್ತಾನೆ. ಒಳಗೆ ಪೊರಕೆ, ಬಕೆಟುಗಳ ನಡುವೆ ಹೆಂಗಸಿರುತ್ತಾಳೆ. ಸಾರ್ವಜನಿಕ ಶೌಚಾಲಯಗಳಲ್ಲಿ ಗಂಡಸರಿಗೆ ಸೇವೆ ಉಚಿತ, ಹೆಂಗಸರಿಗೆ ಕಡ್ಡಾಯ ಶುಲ್ಕ! ದರಪಟ್ಟಿ ಎಷ್ಟೆಂದು ಎಲ್ಲೂ ಹಾಕುವುದಿಲ್ಲ. ಕೆಲ ದೊಡ್ಡ ಬಸ್ಟ್ಯಾಂಡ್‌ಗಳ ಬಳಿ ಹಾಕಿದ್ದರೂ ಎಷ್ಟಾದರೂ ನಮೂದಿಸಿರಲಿ, ಅವ ಎಷ್ಟು ಕೇಳುತ್ತಾನೋ ಅಷ್ಟು ಕೊಡಬೇಕು. ಉಚ್ಚೆ ಹೊಯ್ಯಲು ಬರುವವರ ಕಾಯುತ್ತ ಅವನು ಕುಳಿತಿರುವುದೇ ನಮ್ಮ ಸೌಭಾಗ್ಯ! ಒಂದು ಬಸ್ ಜನ ಪೂರಾ ಒಂದೇ ಬಾರಿ ಇಳಿದರೂ ಸೀರೆ, ಲಂಗದ ಬಣ್ಣ ಹಿಡಿದು ಕರೆದು, ಮೊದಲು ದುಡ್ಡು ಕೊಟ್ಟೇ ಒಳಹೋಗಿ ಎನ್ನುತ್ತಾ ಕಾಸು ವಸೂಲಿ ಮಾಡುತ್ತಾನೆ. ‘ರಾತ್ರಿ ದುಡ್ಡು ಹೆಚ್ಚು, ಹೆಂಗಸರಿಗೆ ಹೆಚ್ಚು, ಯಾಕೆ? ಹಾಗಂತ ಎಲ್ಲಿ ಬರೆದಿದೆ ತೋರಿಸು’ ಎಂದು ತಕರಾರು ತೆಗೆದರೆ ತರಹೇವಾರಿ ಧ್ವನಿಯಲ್ಲಿ ದಬಾಯಿಸುತ್ತಾನೆ. ಬಸ್ ಹಾರ್ನ್ ಆಗುತ್ತಿದ್ದರೂ ದರ-ಅನ್ಯಾಯ ಅಂತೆಲ್ಲ ನಾನು ವಾದ ಮಾಡುತ್ತಿದ್ದರೆ, ಉಳಿದವರು ಎರಡು ರೂಪಾಯಿಗೇಕೆ ಈ ಹೆಂಗಸು ವಾದ ಮಾಡುತ್ತಿದ್ದಾಳೆ ಎಂದುಕೊಳ್ಳುತ್ತ ವಾರೆಗಣ್ಣಲ್ಲಿ ನೋಡುತ್ತ ಮುನ್ನಡೆಯುತ್ತಾರೆ.

ನಮ್ಮ ಉತ್ತರ ಕರ್ನಾಟಕ ಕಡೆಯ ಅಕ್ಕಂದಿರು ಸುಲಭದವನಿಗೆ ಬೆನ್ನುಹಾಕಿ ಗೋಡೆಯೋ, ಮರವೋ, ಕಂಭವೋ ಎಂಥದೋ ಒಂದನ್ನು ಮರೆ ಎಂದುಕೊಂಡು ಕೂತು ಐದು ರೂಪಾಯಿ ಉಳಿಸೇಬಿಡುತ್ತಾರೆ!

ರೈಲೆಂಬ ಚಲಿಸುವ ಶೌಚಾಲಯ


‘ಅಮರಾವತಿ ಎಕ್ಸ್‌ಪ್ರೆಸ್ ನಲವತ್ತು ನಿಮಿಷ ತಡವಾಗಿ ಚಲಿಸುತ್ತಿದೆ..’ - ಈ ಪ್ರಕಟಣೆ ನಾಲ್ಕನೆಯ ಬಾರಿ ಹೊರಬಿತ್ತು. ಅದಾಗಲೇ ಎರಡು ತಾಸು ತಡವಾದ ರೈಲು ಇನ್ನೂ ಒಂದು ತಾಸು ತಡವಾಗಿ ಬರುತ್ತಲಿತ್ತು. ರೈಲಿನ ವಿಳಂಬ ಭೂಮಿ ಮೇಲಿನ ಅಮರಾವತಿಯನ್ನು ಪರಿಚಯಿಸಿತು..

ನಿಂತಲ್ಲೇ ಆಚೀಚೆ ಕಸ ರಾಶಿಯಾಗುತ್ತಿತ್ತು. ಪ್ರತಿ ರೈಲು ಬಂದು, ನಿಂತು, ಹೊರಟ ಮೇಲೂ ನೀರಿನ ಪೈಪು, ಪೊರಕೆ ಹಿಡಿದು ರೈಲ್ವೆ ಸಫಾಯಿ ಕರ್ಮಚಾರಿಗಳು ಹಳಿಯನ್ನು ತೊಳೆದು ಶುದ್ಧಗೊಳಿಸುತ್ತಿದ್ದರು. ಅವರು ತೊಳೆಯುತ್ತಿದ್ದಿದ್ದು ಮಲ ಮೂತ್ರವನ್ನಲ್ಲದೆ ಬೇರೇನಲ್ಲ. ಸಫಾಯಿ ಕರ್ಮಚಾರಿ ಕೆಲಸ ನಿಷೇಧಿಸಿರುವ ಸರ್ಕಾರವೇ ಸಾವಿರಾರು ಜನರನ್ನು ಕೈಯಿಂದ ಮಲಮೂತ್ರ ಬಳಿದು ಸ್ವಚ್ಛಗೊಳಿಸುವ ಕೆಲಸಕ್ಕೆ ನೇಮಿಸಿಕೊಂಡಿದೆ!

ಕೂತು, ಎದ್ದು, ಮಾತಾಡಿದರೂ ಕಾಲ ಸರಿಯುತ್ತಿಲ್ಲ. ಹಳಿಗುಂಟ ನಡೆದು ಹೊರಟೆವು. ಸ್ಟೇಷನ್ ದಾಟಿ, ಸೇತುವೆ ದಾಟಿದ್ದೇ ಊರ ಹೊರಭಾಗವೇ ಬಂದುಬಿಟ್ಟಿತು. ಹಳಿಯ ಎರಡೂ ಬದಿ ಒಂದಷ್ಟು ಮನೆಯೆನಿಸಿಕೊಂಡ ಗೂಡುಗಳು ಕಾಣುತ್ತಿದ್ದವು. ಮುಳುಗುತ್ತಿರುವ ಸೂರ್ಯನ ಬೆಳಕಲ್ಲಿ, ಅಕಾ ಅಷ್ಟು ದೂರದಲ್ಲಿ ಹಳಿಯ ಎರಡೂ ಕಡೆ ಕಂಬಿಗಳ ಮೇಲೆ ಕುಳಿತ ಜನ ಕಾಣಿಸುತ್ತಿದ್ದರು. ನಾವು ಹತ್ತಿರ ಹೋದಾಗ ಕುಕ್ಕುರುಗಾಲಲ್ಲಿ ಎದುರುಬದುರು ಕುಳಿತು ಹರಟೆ ಹೊಡೆಯುತ್ತಿದ್ದವರು ಎದ್ದುನಿಂತಾಗಲೇ ಗೊತ್ತಾಗಿದ್ದು, ಅವರು ಶೌಚಕ್ಕೆ ಕೂತಿದ್ದರೆಂದು!



ಭಾರತೀಯ ರೇಲ್ವೆ, ಪ್ರತಿನಿತ್ಯ ೩ ಕೋಟಿ ಜನರನ್ನು ಒಯ್ಯುತ್ತದೆ. ೬೪,೪೦೦ ಕಿಮೀ ಉದ್ದದ ಹಳಿಗಳ ಪ್ರಪಂಚದ ಅತಿ ದೊಡ್ಡ ಸಂಪರ್ಕ ಜಾಲ ಭಾರತೀಯ ರೈಲ್ವೆ. ಅಷ್ಟೇ ಅಲ್ಲ, ಅದು ವಿಶ್ವದ ಅತಿ ದೊಡ್ಡ ಚಲಿಸುವ ಬಯಲ ಶೌಚಾಲಯವೂ ಹೌದು. ರೇಲ್ವೆಯ ೫೦೦೦೦ ಪ್ಯಾಸೆಂಜರ್ ರೈಲುಗಳು, ಅವುಗಳ ಲಕ್ಷಾಂತರ ಬೋಗಿಗಳ ಟಾಯ್ಲೆಟ್ಟುಗಳಿಂದ ಟನ್ನುಗಟ್ಟಲೆ ಮಲ ನಿತ್ಯ ರೈಲು ಹಳಿಗಳ ನಡುವೆ ಕೆಳಗೆ ಬೀಳುತ್ತದೆ. ‘ರೈಲು ನಿಂತಾಗ, ಸ್ಟೇಷನ್ನುಗಳಲ್ಲಿ ಶೌಚಾಲಯ ಬಳಸಬೇಡಿ’ ಎಂಬ ಬೋರ್ಡು ಕಣ್ಣೆದುರೇ ಇದ್ದರೂ ಚಲಿಸುವಾಗ ಗಡಗಡ ಅಲುಗುವ ಕಂಪನಕ್ಕೆ ಹೆದರುವವರು ರೈಲು ನಿಂತಾಗಲೇ ಶೌಚಾಲಯ ಬಳಸುತ್ತಾರೆ. ರೈಲಿನ ಶೌಚಾಲಯ ಎಂದರೆ ನೆಲಕ್ಕೆ ಕೊರೆದ ಒಂದು ತೂತು ಅಷ್ಟೇ. ಜನರಲ್ ಬೋಗಿಗಳ ಟಾಯ್ಲೆಟ್ಟುಗಳಲ್ಲಿ ಕಾಲಿಡುವ ಪರಿಸ್ಥಿತಿ ಇರುವುದಿಲ್ಲ. ನೀರೂ ಇರುವುದಿಲ್ಲ. ಹೀಗೆ ಹಳಿಗಳ ಮೇಲೆ ಬೀಳುವ, ಬೋಗಿಯ ಅಡಿಭಾಗ ಹಾರುವ ಮಲಮೂತ್ರಗಳಿಂದ ಹಳಿ ತುಕ್ಕು ಹಿಡಿದು ಶಿಥಿಲವಾಗಿ ರೈಲ್ವೆಗೆ ವರ್ಷಕ್ಕೆ ೩೫೦ ಕೋಟಿ ರೂಪಾಯಿ ನಷ್ಟವಾಗುತ್ತದೆ. ಟ್ರ್ಯಾಕ್ ಶುದ್ಧವಾಗುಳಿಯಲು ಸಾವಿರಾರು ದಲಿತ ಸಫಾಯಿ ಕರ್ಮಚಾರಿಗಳು ಸೂಕ್ತ ಸೌಕರ್ಯ-ಸವಲತ್ತುಗಳಿಲ್ಲದೇ ಕೆಲಸ ಮಾಡುತ್ತಾರೆ.


ಇತ್ತೀಚೆಗೆ ಈ ಕುರಿತು ಚರ್ಚೆ ಶುರುವಾಗಿದ್ದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ವಿಚಾರಣೆ ನಡೆಸಿತು. ೨೦೨೨ರ ಹೊತ್ತಿಗೆ ತನ್ನ ಎಲ್ಲ ಬೋಗಿಗಳಿಗೂ ಜೈವಿಕ ಶೌಚಾಲಯಗಳನ್ನು ಅಳವಡಿಸುವುದಾಗಿ ರೈಲ್ವೆಯು ಮಾನವ ಹಕ್ಕುಗಳ ಆಯೋಗಕ್ಕೆ ತಿಳಿಸಿತು. ಈಗ ಪ್ರಯೋಗಾರ್ಥ ಎಸಿ ಹಾಗೂ ಕಾದಿಟ್ಟ ೨೦೦೦ ಬೋಗಿಗಳಿಗೆ ಜೈವಿಕ ಶೌಚಾಲಯಗಳನ್ನು ಅಳವಡಿಸಿದೆ. ಕೆಳಗೆ ಬಿದ್ದ ತ್ಯಾಜ್ಯವನ್ನು ಸಂಗ್ರಹಿಸಿ, ಬ್ಯಾಕ್ಟೀರಿಯಾದಿಂದ ಅಪಾಯರಹಿತ ತ್ಯಾಜ್ಯವಾಗಿ ಪರಿವರ್ತಿಸಿ, ಹೊರಬಿಡುವ ವ್ಯವಸ್ಥೆ ಜೈವಿಕ ಶೌಚಾಲಯದಲ್ಲಿರುತ್ತದೆ. ಎಲ್ಲ ಬೋಗಿಗಳೂ ಇದನ್ನು ಅಳವಡಿಸಿಕೊಂಡರೆ ಪರಿಸರ, ಮನುಷ್ಯ ಘನತೆ, ರೈಲು ಹಳಿ ಎಲ್ಲವೂ ಬಹುಕಾಲ ಬಾಳುವ ಸಾಧ್ಯತೆ ಇದೆ.

ತಲೆಯಲ್ಲಿ ಇಷ್ಟೆಲ್ಲ ಸುಳಿದಾಡುತ್ತಿರುವಾಗ ನೋಡಿದ್ದು ಸಾಕು ಎನ್ನುವಂತೆ ಅಮರಾವತಿ ಸಿಳ್ಳುಹಾಕುತ್ತ ಬಂದೇಬಿಟ್ಟಿತು.

‘ಸ್ವಚ್ಛ ಭಾರತ’


ಕೆಲ ತಿಂಗಳ ಕೆಳಗೆ ಪ್ರಧಾನಿಯಿಂದ ಹಿಡಿದು ಊರೂರ ಗ್ರಾಮ ಪಂಚಾಯ್ತಿ ಸದಸ್ಯರ ತನಕ ಎಲ್ಲರೂ ಭಾರತವನ್ನು ಗುಡಿಸಿ ‘ಸ್ವಚ್ಛ’ಗೊಳಿಸಿದರು. ಇನ್ನೇನು ಭಾರತವೆಂಬ ಬೃಹತ್ ತಿಪ್ಪೆಗುಂಡಿ ತ್ಯಾಜ್ಯ ಮುಕ್ತವಾಗಿ, ದುರ್ವಾಸನೆ ಮುಕ್ತವಾಗಿ ಲಕಲಕ ಹೊಳೆದುಬಿಟ್ಟಂತೆ ಹಲವರಿಗೆ ಕನಸಾಯಿತು. ದೇಶದ ನಾಯಕರೇ ಪೊರಕೆ ಹಿಡಿದ ಮೇಲೆ ಇನ್ನು ನಮ್ಮದೇನು ಎಂದು ಕಂಡಕಂಡವರೆಲ್ಲ ಕಸಬರಿಕೆಯನ್ನು ಒಂದು ದಿನದ ಮಟ್ಟಿಗೆ ಬಾಡಿಗೆ ತಂದು, ಅಡ್ಡಾದಿಡ್ಡಿ ಹಿಡಿದು ಫೊಟೋ ತೆಗೆಸಿಕೊಂಡರು. ಕೆಲವೆಡೆ ಫೋಟೋ ಸೆಷನ್‌ಗಾಗಿ ಕಸ ಗುಪ್ಪೆಯಾಗಿ ಕಾಯತೊಡಗಿತು. ಹಿಡಿಯುವವರಿಗೆ ತಮ್ಮನ್ನು ಎಲ್ಲಿ ಹೇಗೆ ಹಿಡಿಯಬೇಕೆಂದಾದರೂ ಗೊತ್ತಿದೆಯೋ ಇಲ್ಲವೋ ಎಂದು ಪೊರಕೆಗಳು ನಡು ಬಳುಕಿಸಿ ಚೋದ್ಯಪಟ್ಟವು.

ಕ್ಯಾಮೆರಾ ಮೈಕುಗಳೆದುರು ಭಾರೀ ಅಭಿಯಾನವೊಂದು ನಡೆದುಹೋಯಿತು. ನ್ಯೂಯಾರ್ಕ್ ಟೈಮ್ಸ್ ಹಾಗೂ ದಿ ಎಕಾನಮಿಸ್ಟ್‌ನಂತಹ ವಿದೇಶೀ ಪತ್ರಿಕೆಗಳು ಭಾರತದ ಶೌಚ ವ್ಯವಸ್ಥೆಯ ಬಗ್ಗೆ, ಅದರಲ್ಲೂ ಬಯಲ ಶೌಚ ಬಳಸುವ ಬಗ್ಗೆ ಮುಜುಗರಗೊಳ್ಳುವಂತಹ ಅಂಕಿಅಂಶಗಳನ್ನು ಪ್ರಕಟಿಸಿದವು. ಆಸ್ಟ್ರೇಲಿಯಾ, ಸಿಂಗಾಪುರದ ವಿಶ್ವವಿದ್ಯಾಲಯಗಳು ಭಾರತದ ಬಯಲ ಶೌಚ ಪದ್ಧತಿ ಬಗ್ಗೆ ಸಂಶೋಧನೆ ನಡೆಸಿದವು. ಗಾಂಧಿಜಯಂತಿಯಂದು ಪ್ರಧಾನಿ ‘ಸ್ವಚ್ಛ ಭಾರತ ಅಭಿಯಾನ’ವೆಂಬ ಯೋಜನೆ ಘೋಷಿಸಿ ಎರಡು ಲಕ್ಷ ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದರು. ನೂರು ದಿನಗಳಲ್ಲಿ ಲಕ್ಷಾಂತರ ಗೃಹಬಳಕೆಯ ಶೌಚಾಲಯ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಯಿತು. ಅದಾಗಿ ವಾರ ಒಪ್ಪತ್ತು ಕಳೆಯಿತು. ತಿಂಗಳೂ ಕಳೆಯಿತು. ಸರ್ಕಾರದ ಹಣ ಎಲ್ಲೆಲ್ಲಿ ಹೋಯಿತೋ, ೬೮% ಭಾರತೀಯರು ಬಯಲ ಆಶ್ರಯಿಸುವುದು ಹಾಗೇ ಮುಂದುವರೆದಿದೆ. ಇವತ್ತಿಗೂ ಗ್ರಾಮೀಣ ಭಾಗದ ಅತ್ಯಾಚಾರ ಪ್ರಕರಣಗಳಲ್ಲಿ ೪೦% ಶೌಚದ ವೇಳೆ ಸಂಭವಿಸುತ್ತಿವೆ.

ಶೌಚ ವ್ಯವಸ್ಥೆಯ ನೇರ್ಪಡಿಸಲು ಸ್ವಚ್ಛಗ್ರಾಮ, ನಿರ್ಮಲ ಗ್ರಾಮ ಇತ್ಯಾದಿ ಎಷ್ಟೋ ಕಾರ್ಯಕ್ರಮಗಳು ಬಂದುಹೋಗಿವೆ. ಆದರೆ ಎಲ್ಲವೂ ಸಂಪೂರ್ಣ ವಿಫಲವಾಗಿವೆ. ಉಚಿತ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಯಿತು. ಆದರೆ ಮಲ ಕಟ್ಟಿಕೊಂಡು ಗಬ್ಬು ನಾರುವ ಉಚಿತ ಶೌಚಾಲಯಗಳ ಪರಿಸ್ಥಿತಿ ಹೇಗಿದೆ ಎಂದರೆ ಅದರೊಳಗೆ ಕಾಲಿಡಲು ಸಾಧ್ಯವೇ ಇಲ್ಲ. ಇನ್ನು ಹಣ ಕೊಟ್ಟು ಬಳಬೇಕಾದ ಶೌಚಾಲಯಗಳಿಗೆ ಜನ ಹೋಗುವುದಿಲ್ಲ. ದುಡ್ಡು ಕೊಟ್ಟು ದೈನಂದಿನ ಬಾಧೆ ತೀರಿಸಿಕೊಳ್ಳಬೇಕೆಂದು ಜನರಿಗೆ ಅನಿಸುವುದಿಲ್ಲ. ಅದನ್ನು ಹೆಚ್ಚುವರಿ ಖರ್ಚು ಎಂದೇ ಭಾವಿಸುತ್ತಾರೆ. ಅದಕ್ಕಿಂತ ಪುಕ್ಕಟೆ ಇರುವ ಬಯಲು-ಹೊಲ-ಗದ್ದೆ-ತೋಟ-ಗುಡ್ಡಗಳತ್ತ ನಡೆಯುತ್ತಾರೆ. ಪ್ರತಿ ಮನೆಯೂ ಶೌಚಾಲಯ ಹೊಂದಲಿ ಎಂಬ ಉದ್ದೇಶದ ಯೋಜನೆಯೂ ಬಂತು. ‘ಸ್ವಚ್ಛಗ್ರಾಮ’ ಯೋಜನೆಯಡಿ ಒಳಚರಂಡಿ ವ್ಯವಸ್ಥೆಯಿರದ ಹಳ್ಳಿಗಳಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಸರ್ಕಾರ ಹಲವು ಆಮಿಷಗಳನ್ನು ತೋರಿತು. ಸಬ್ಸಿಡಿ ಹಣ, ಪಡಿತರ ಚೀಟಿ, ಚುನಾವಣೆಗೆ ಅನರ್ಹವಾಗುವಿಕೆ ಇತ್ಯಾದಿ ಚತುರೋಪಾಯಗಳನ ಬಳಸಿ ಸ್ವಂತ ಪಾಯಖಾನೆಗಳನ್ನು ಹೊಂದಲು ಪ್ರೇರೇಪಿಸಿತು. ಆದರೆ ಕೊಟ್ಟ ದುಡ್ಡು ಸುಳ್ಳು ದಾಖಲೆ ತೋರಿಸುವುದರಲ್ಲಿ; ಕಟ್ಟಿಕೊಂಡ ಶೌಚಾಲಯಕ್ಕೆ ಸೆಪ್ಟಿಕ್ ಟ್ಯಾಂಕ್ ಕಟ್ಟದೇ ಅದರ ಪೈಪನ್ನು ನದಿಗೆ ಬಿಟ್ಟು ಆರೋಗ್ಯ ಸಮಸ್ಯೆ ಉಲ್ಬಣಿಸುವುದರಲ್ಲಿ ಕೊನೆಯಾಯಿತು. ಸಾಲುಸಾಲಾಗಿ ಸರ್ಕಾರಿ ಯೋಜನೆಗಳು ಬಂದರೂ ಅವು ಕಾರ್ಯಗತವಾದವೇ ಇಲ್ಲವೇ ಎಂಬ ಸೂಕ್ತ ಮೇಲುಸ್ತುವಾರಿ ನಡೆಯದೇ, ಜನರಲ್ಲಿ ತಿಳುವಳಿಕೆ ಮೂಡಿಸದೇ ಎಲ್ಲವೂ ವಿಫಲವಾದವು.  

ಹೀಗೆ ೨೧ನೇ ಶತಮಾನವೆಂಬ ಆಧುನಿಕ-ವೈಜ್ಞಾನಿಕ-ಮೊಬೈಲ್ ಯುಗ ಬಂದರೂ ಜನರಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚ ವ್ಯವಸ್ಥೆ ನೀಡುವಲ್ಲಿ ಸರ್ಕಾರಗಳು ಸೋಲುತ್ತ ಬಂದಿವೆ. ೨೦೧೧ರ ಜನಗಣತಿ ಪ್ರಕಾರ ಭಾರತದ ೨೪ ಕೋಟಿ ಕುಟುಂಬಗಳಿಗೆ ಸ್ವಂತ ಶೌಚಾಲಯ ಇಲ್ಲ. ೨೦೧೪ರಲ್ಲಿಯೂ ಕೂಡಾ ಉತ್ತರ ಮತ್ತು ಪಶ್ಚಿಮ ಭಾರತಗಳಲ್ಲಿ ೯ ಲಕ್ಷ ಡ್ರೈ ಲ್ಯಾಟ್ರಿನ್‌ಗಳಿವೆ. ಆ ಗುಂಡಿಗಳಿಂದ ನಿತ್ಯವೂ ಬಾಚಿಯೇ ಮಲ ಖಾಲಿ ಮಾಡಬೇಕು. ಕಾನೂನು ನಿಷೇಧವಿದ್ದರೇನಂತೆ, ಇವತ್ತಿಗೂ ಐದು ಲಕ್ಷಕ್ಕೂ ಮೀರಿ ಸಫಾಯಿ ಕರ್ಮಚಾರಿಗಳು ಈ ದೇಶದ ಕಕ್ಕಸು ಗುಂಡಿಗಳನ್ನು ಸ್ವಚ್ಛಗೊಳಿಸುತ್ತಾರೆ. ಗುಂಡಿಗೆ ಅನಧಿಕೃತವಾಗಿ ಇಳಿದು, ಪ್ರಾಣ ಕಳೆದುಕೊಳ್ಳುವ ಹತಭಾಗ್ಯರ ಸಂಖ್ಯೆ ಬೆಳೆಯುತ್ತಲೇ ಇದೆ.


ಶೌಚಾಲಯ ಕಟ್ಟಿಕೊಳ್ಳಿ, ಪರಿಸರ ನೈರ್ಮಲ್ಯ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಜನರ ಮನವೊಲಿಸುವುದು; ಸೂರೇ ಇಲ್ಲದ, ಅನ್ನವೇ ಗತಿಯಿಲ್ಲದ ಜನರಿಗೆ ಶೌಚದ ಬಗೆಗಿನ ತಿಳುವಳಿಕೆ, ಪ್ರಾಮುಖ್ಯತೆ ಮನದಟ್ಟು ಮಾಡುವುದು ಅಷ್ಟು ಸುಲಭವಲ್ಲ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಮಲ ಹೊಲಸು, ಅದನ್ನು ಮನೆಯೊಳಗಿರುವ ಗುಂಡಿಯಲ್ಲಿ ತುಂಬಿಸುವುದಲ್ಲ ಎಂದೇ ಜನ ಭಾವಿಸಿದ್ದಾರೆ. ಭಾರತವಷ್ಟೇ ಅಲ್ಲ, ವಿಶ್ವಾದ್ಯಂತ ಹಳ್ಳಿಗರು ಉಚಿತ ಹಾಗೂ ಅನುಕೂಲಕರ ವಿಧಾನ ಯಾವುದೋ ಅದನ್ನಷ್ಟೇ ಶೌಚಕ್ಕೆ ಬಳಸುತ್ತಿದ್ದಾರೆ.

ತೊಗಲ ಮರೆಯ ಕೊಳೆ

ಶೌಚ ವ್ಯವಸ್ಥೆಯಲ್ಲಿ ಎರಡು ಮುಖ್ಯ ಅಂಶಗಳಿವೆ: ಒಂದು ತ್ಯಾಜ್ಯ, ಮತ್ತೊಂದು ಸಫಾಯಿ ಕರ್ಮಚಾರಿ ವೃತ್ತಿ. ದೇಹ ಬಳಸಿ ಬಿಟ್ಟ, ಬೇಡವೆಂದು ಹೊರದಬ್ಬುವ ಆಹಾರವೇ ಮಲ. ಅದು ನೆಲ ಸೇರಿದರೆ ಗೊಬ್ಬರ, ಹುದುಗು ಬಂದರೆ ಜೈವಿಕ ಅನಿಲ. ಆಹಾರ-ನೀರಿನ ಜೊತೆ ಮಿಶ್ರಣವಾದರೆ ರೋಗಕಾರಕ. ಬಯಲಲ್ಲಿ ಮಲ ಬಿದ್ದರೆ ಅದು ಗಾಳಿ-ಮಳೆ-ನೆಲ-ಕ್ರಿಮಿಕೀಟಗಳ ಮೂಲಕ ಕುಡಿಯುವ ನೀರು, ಆಹಾರ ಎಲ್ಲವನ್ನೂ ತಲುಪುತ್ತದೆ. ಮಲದಲ್ಲಿರುವ ಬ್ಯಾಕ್ಟೀರಿಯಾ-ವೈರಸ್-ಪರೋಪಜೀವಿಗಳು ಎಲ್ಲೆಡೆ ಹರಡಿ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಕಾಲರಾ, ಟೈಫಾಯ್ಡ್, ಜಾಂಡೀಸ್, ಪೋಲಿಯೋ, ವಾಂತಿಭೇದಿ, ಜಂತುಹುಳ ಬಾಧೆ ಇತ್ಯಾದಿ ಅನೇಕ ಕಾಯಿಲೆಗಳು ಹರಡುತ್ತವೆ. ಎಂದರೆ ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯ; ಬಯಲ ಶೌಚ ಹಾಗೂ ಸಮುದಾಯ ಆರೋಗ್ಯ ನೇರ ಸಂಬಂಧ ಹೊಂದಿವೆ. ಶೌಚ ವ್ಯವಸ್ಥೆಗೂ, ಅಪೌಷ್ಟಿಕತೆ-ನವಜಾತ ಶಿಶುಗಳ ಮರಣ-ತಾಯಿ ಮರಣ ದರಕ್ಕೂ ಸಂಬಂಧವಿದೆ. ೨೦೧೧ರ ಜನಗಣತಿ ಪ್ರಕಾರ ಕೇರಳದ ೫೦ ಲಕ್ಷ ಕುಟುಂಬಗಳಲ್ಲಿ ೭% ಮಾತ್ರ ಸ್ವಂತ ಶೌಚಾಲಯ ಹೊಂದಿಲ್ಲ. ಅಲ್ಲಿ ನವಜಾತ ಶಿಶುಮರಣ ದರ - ಎಂದರೆ ಪ್ರತಿ ಸಾವಿರ ಸಜೀವ ಜನನಕ್ಕೆ ಸಂಭವಿಸುವ ಶಿಶುಮರಣ ೧೫ ಇದೆ. ಅದೇ ೬೪% ಕುಟುಂಬಗಳು ಶೌಚಾಲಯ ಹೊಂದಿರದ ಉತ್ತರಪ್ರದೇಶ ರಾಜ್ಯದಲ್ಲಿ ಶಿಶುಮರಣ ದರ ೭೦ ಇದೆ.

ಬಯಲು ಶೌಚ ಕೇವಲ ಹಳ್ಳಿಗಳ ಸಮಸ್ಯೆಯಲ್ಲ. ಕೈಗಾರಿಕಾ ಕ್ರಾಂತಿಯ ನಂತರ ಶುರುವಾದ ನಗರೀಕರಣ ಒಡ್ಡಿದ ದೊಡ್ಡ ಸವಾಲು ಅದು. ಕೇವಲ ೧೦೦ ವರ್ಷಗಳ ಕೆಳಗೆ ಎಡಿನ್‌ಬರ್ಗಿನಲ್ಲಿ ಕಕ್ಕಸು ತುಂಬಿದ ಮಡಕೆಗಳನ್ನು ಒಯ್ದು ಊರಾಚೆ ಕಸದ ಜೊತೆ ಬಿಸಾಡುವ ವ್ಯವಸ್ಥೆಯಿತ್ತು. ನದಿ-ಕಾಲುವೆಗಳಿಗೆ ಅಡ್ಡವಾಗಿ ಕಟ್ಟೆ ಕಟ್ಟಿ ಮಲಬಾಧೆ ತೀರಿಸಿಕೊಳ್ಳುವ ವ್ಯವಸ್ಥೆಯಿತ್ತು. ಕ್ರಮೇಣ ನಗರವಾಸಿಗಳು ಹಾಗೂ ಆಡಳಿತಗಾರರು ಕಾರಾ, ಟೈಫಾಯ್ಡ್ ಮತ್ತಿತರ ಕಾಯಿಲೆಗಳು ಕುಡಿಯುವ ನೀರು ಮತ್ತು ಮಲ ಮಿಶ್ರಣಗೊಳ್ಳುವುದರಿಂದ ಬರುತ್ತಿವೆ ಎನ್ನುವುದನ್ನು ಅರಿತರು. ಕಾಯಿಲೆ-ತಡೆಗಟ್ಟುವಿಕೆ ಕುರಿತು ಆರೋಗ್ಯ ವಿಜ್ಞಾನ ಅರಿವು ಮೂಡಿಸುತ್ತ ಹೋದಹಾಗೆ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಶೌಚ ವ್ಯವಸ್ಥೆಯನ್ನು ನಿರ್ವಹಿಸುವ ಸೂಕ್ತ ವ್ಯವಸ್ಥೆ ಕಂಡುಕೊಂಡರು. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ೧೮೯೦ರ ವೇಳೆಗೆ ಶಿಶುಮರಣ ದರ ೧೩೦ ಮುಟ್ಟಿತ್ತು. ಕೂಡಲೇ ಕಾರ್ಯಪ್ರವೃತ್ತವಾದ ನಗರಾಡಳಿತ ಕುಡಿಯುವ ನೀರು ಹಾಗೂ ಶೌಚ ವ್ಯವಸ್ಥೆಯನ್ನು ಆಧುನಿಕಗೊಳಿಸಿ ೧೯೦೪ರಲ್ಲಿ ಅದು ೮೩ಕ್ಕೆ ಇಳಿಯಿತು. ೧೯೪೫ರ ಹೊತ್ತಿಗೆ ಶಿಶುಮರಣ ದರ ೨೯ ಆಯಿತು. ಆದರೆ ಭಾರತದಲ್ಲಿ ಈ ಬದಲಾವಣೆ ಅಷ್ಟು ಸುಲಭವಾಗಿ ಕೈಗೂಡಲಿಲ್ಲ. ಇಲ್ಲಿ ಇನ್ನೂ ಅರ್ಧಕ್ಕರ್ಧ ಜನಸಂಖ್ಯೆ ಬಯಲನ್ನೇ, ಗುಡ್ಡಬೆಟ್ಟನದಿಗಳನ್ನೇ ಶೌಚಕ್ಕೆ ಬಳಸುತ್ತಿದ್ದಾರೆ. ಗಂಗೆ ಮಲಿನಗೊಳ್ಳುತ್ತಲೇ ಇದ್ದಾಳೆ.

ಕೊನೆಗಂತೂ ನಗರಗಳಲ್ಲಿ ನೀರು ಬಳಸಿ ಫ್ಲಷ್ ಮಾಡುವ ಒಳಚರಂಡಿ ವ್ಯವಸ್ಥೆ ಬಂತು. ಆದರೆ ಅಲ್ಲಿನ ಸ್ಲಂವಾಸಿಗಳು, ನಗರದ ಹೊರ ಭಾಗಗಳಲ್ಲಿ ಅನಧಿಕೃತವಾಗಿ ವಾಸಿಸುವವರು, ಅಲೆಮಾರಿಗಳ ಶೌಚದ ಪಾಡು ದೇವರಿಗೂ ಗೊತ್ತಿಲ್ಲ. ಶೌಚಕ್ಕಾಗಿ ಅವರು ರೈಲ್ವೇ ಲೇನುಗಳನ್ನು, ಖಾಲಿ ಜಾಗಗಳನ್ನು, ಪಾಳು ಸ್ಥಳಗಳನ್ನು ಬಳಸಬೇಕು. ಅದಕ್ಕಾಗಿ ಅಂತಹ ಸ್ಥಳಗಳು ನಿರ್ಜನವಾಗುವವರೆಗೆ, ರಾತ್ರಿಯಾಗುವವರೆಗೆ ಕಾಯಬೇಕು. ಹೆಂಗಸರು, ಮುದುಕರು, ಮಕ್ಕಳಿಗೆ ಇದೆಲ್ಲ ಎಂಥ ಸಂಕಟವೋ, ಭಯವೋ ಅದು ನಮ್ಮ ಊಹೆಗೂ ನಿಲುಕುವುದಿಲ್ಲ.


ಹೊಟ್ಟೆಗೆ ತಿನ್ನುವವರೆಲ್ಲ ಮಲಮೂತ್ರ ವಿಸರ್ಜಿಸಲೇಬೇಕು. ಆದರೆ ಈ ನೈಸರ್ಗಿಕ, ಅನೈಚ್ಛಿಕ ಕ್ರಿಯೆಯ ಜೊತೆ ಹೊಂದಿಕೊಂಡ ನಮ್ಮದೇ ದೇಹದ ಅಂಗಾಂಗಗಳನ್ನು, ಅದನ್ನು ನಿಭಾಯಿಸುವ ವೃತ್ತಿಬಂಧುಗಳನ್ನು ಅನಾದಿಯಿಂದ ನಿಕೃಷ್ಟವಾಗಿ ಕಾಣಲಾಗಿದೆ. ಶೌಚದ ಸಮಸ್ಯೆ ಒಂದು ರೀತಿಯದಾದರೆ ಶುಚಿಗೊಳಿಸುವಿಕೆಗೆ ಹೊಂದಿಕೊಂಡವರನ್ನು ನಾವು ನಡೆಸಿಕೊಂಡ ರೀತಿ ಅಮಾನವೀಯವಾದದ್ದು. ಶುಚಿಗೊಳಿಸುವ ಕೆಲಸ ಮಾಡಲಿಕ್ಕೆಂದೇ ಒಂದು ಜಾತಿ ಸೃಷ್ಟಿಸಿ, ಆ ಕಾರಣಕ್ಕೇ ಅವರನ್ನು ದೂರವಿಟ್ಟು ಉಳಿದವರು ಪರಿಶುದ್ಧ, ಮಡಿ ಎಂದುಕೊಂಡೆವು. ನಮ್ಮ ಧರ್ಮ ಸಂಸ್ಕೃತಿಗಳು ಒಳಗಣ ಪಾಪದ ಕಸ ತೊಳೆದುಕೊಳಲು ಪ್ರಾಯಶ್ಚಿತ್ತ, ಹರಕೆಗಳಂತಹ ಸುಲಭ ವಿಧಾನವನ್ನು ಹೇಳಿಕೊಟ್ಟು ಅವನ್ನು ಶ್ರದ್ಧೆಯಿಂದ ಮಾಡಲು ತಿಳಿಸಿದವು. ಆದರೆ ಬಾಹ್ಯದ ಹೊಲಸ ತೆಗೆವವರ ಕುರಿತು ತಿರಸ್ಕಾರ, ಅಸಡ್ಡೆ ಬೆಳೆಸಿಕೊಂಡುಬಂದಿವೆ. ಮನುಷ್ಯರನ್ನು ನಡೆಸಿಕೊಳ್ಳುವಲ್ಲಿ ಇರುವ ತಾರತಮ್ಯ, ಇಬ್ಬಂದಿತನಗಳು ಭಾರತೀಯ ತತ್ವ, ವೇದವೇದಾಂತಗಳನ್ನೆಲ್ಲ ನಗಣ್ಯಗೊಳಿಸಿಬಿಡುವಷ್ಟು ಢಾಳಾಗಿವೆ. ಜಾತಿವ್ಯವಸ್ಥೆಯ ತಳಗಿನ ಈ ಸಮುದಾಯಗಳ ಕುರಿತು ಬುದ್ಧ, ಬಸವಣ್ಣನಂತಹ ಕೆಲವರನ್ನು ಹೊರತುಪಡಿಸಿ ಯಾರೂ ಯೋಚಿಸಲಿಲ್ಲ. ಜಾತಿ-ವೃತ್ತಿ ಸಂಬಂಧ ತೊಲಗಿಸುವ ಸಮಾಜ ಸುಧಾರಣಾ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ನಡೆಯಲಿಲ್ಲ.

ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಮುಲ್ಕ್ ರಾಜ್ ಆನಂದ್ ‘ಅಸ್ಪೃಶ್ಯ’ ಎಂಬ ಕಾದಂಬರಿ ಬರೆದರು. ಅದರಲ್ಲಿ ರಾಕ ಎಂಬ ಭಂಗಿ ಸಮುದಾಯದ ಹುಡುಗನೊಬ್ಬನ ಒಂದು ದಿನದ ದಿನಚರಿಯಿದೆ. ಆ ಸಮುದಾಯದೊಳಗಣ ಕಷ್ಟ, ಅವಮಾನ, ನೋವು, ಬಡತನ, ಅನಕ್ಷರತೆ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಅದರ ಕೊನೆಯಲ್ಲಿ ಒಬ್ಬ ಕವಿ, ಹೋರಾಟಗಾರ ಈ ವೃತ್ತಿ ಮತ್ತು ಅದಕ್ಕಂಟಿದ ಮೈಲಿಗೆಯ ಕಳಂಕ ತೊಳೆಯಲು ಫ್ಲಷ್ ಕಕ್ಕಸು ಬರುವುದೊಂದೇ ದಾರಿ ಎಂದು ಸೂಚಿಸುತ್ತಾನೆ.

‘ಅಸ್ಪೃಶ್ಯ’ ಕಾದಂಬರಿ ಪ್ರತಿಪಾದಿಸಿರುವಂತೆ ಈಗ ಪ್ಲಷ್ ವ್ಯವಸ್ಥೆಯೇನೋ ಬಂದಿದೆ, ತಲೆ ಮೇಲೆ ಮಲ ಹೊರುವವರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಭಂಗಿ ಕೆಲಸದ ಸ್ವರೂಪ ಬೇರೆಯಾಗಿ ಅದು ಒಂದೇ ಸಮುದಾಯಕ್ಕೆ ಸೀಮಿತವಾಗಿದೆ. ಶೌಚಾಲಯಗಳು ಒಳಚರಂಡಿಯೊಂದಿಗೆ ಸಂಪರ್ಕಜಾಲ ಹೊಂದಿರುತ್ತವೆ. ನಡುನಡುವೆ ಕಟ್ಟಿಕೊಳ್ಳುತ್ತವೆ. ಗುಂಡಿ ತುಂಬಿದರೆ ಇಳಿದು ಖಾಲಿ ಮಾಡಲು, ಅವನ್ನು ಸ್ವಚ್ಛಗೊಳಿಸಲು ಮತ್ತೆ ಸಫಾಯಿ ಕರ್ಮಚಾರಿಗಳೇ ಗುಂಡಿಗಿಳಿಯಬೇಕಾಗಿದೆ. ಈಗ ಸಫಾಯಿ ಕೆಲಸವನ್ನು ಮನುಷ್ಯರಿಂದ ಮಾಡಿಸಬಾರದೆಂಬ ಕಟ್ಟುನಿಟ್ಟಿನ ಕಾಯ್ದೆ ಬಂದಿದ್ದು ಅದರ ಬದಲು ವ್ಯಾಕ್ಯೂಂ ಮಶೀನುಗಳನ್ನು ಬಳಸಬೇಕೆಂದು ಹೇಳಲಾಗಿದೆ. ಆದರೂ ಜಾತಿ-ವೃತ್ತಿ ಸಂಬಂಧ ಎಂದಿನಂತೆ ಮುಂದುವರೆದಿದೆ.

ಇತ್ತೀಚೆಗೆ ನಾಗರಾಜ್ ಹೆತ್ತೂರು ಬರೆದ ‘ಜಾಡಮಾಲಿ ಜಗತ್ತು’ ಎಂಬ ಪುಸ್ತಕ ಕೊಂಡುಕೊಂಡೆ. ಅದರ ಮುಖಪುಟ, ಒಳಗಿನ ಬರಹಗಳು ಉಳಿದ ಸಮಾಜ ತಿಳಿಯಲೇಬೇಕಾದ ಜಾಡಮಾಲಿಗಳ ಬದುಕಿನ ಎಷ್ಟೋ ಸಂಕಟದ ಕತೆಗಳ ಹೇಳುತ್ತವೆ. ಮನೆ, ಮಲ, ಹಸಿವು, ಮಂದಿರದಂತಹ ಎದೆಯ ಕಾಡುವ ವಿಷಯಗಳ ನಡುವೆ ರಾಜಕೀಯ ನುಸುಳದಿದ್ದರೆ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ತಿಳಿದುಬರುತ್ತದೆ.

‘ಸುಲಭ್ ಶೌಚಾಲಯ’

ಸರಿಸುಮಾರು ಮುಲ್ಕ್ ರಾಜ್ ಆನಂದ್ ದಿಕ್ಕಿನಲ್ಲಿ ಯೋಚಿಸಿದ ವ್ಯಕ್ತಿಯೊಬ್ಬ ಸರ್ಕಾರೇತರ ಸಂಸ್ಥೆಯೊಂದನ್ನು ಸ್ಥಾಪಿಸಿ ಸಾರ್ವಜನಿಕ ಶೌಚ ವ್ಯವಸ್ಥೆಯಲ್ಲಿ ಹೊಸ ಮಾದರಿ ರೂಪಿಸಿದ. ಆತ ಬಿಹಾರದ ಬಿಂದೇಶ್ವರ ಪಾಠಕ್. ಸಮಾಜ ಶಾಸ್ತ್ರ ಪದವೀಧರರಾಗಿದ್ದ ಪಾಠಕ್ ೧೯೬೮ರಲ್ಲಿ ಬಿಹಾರದ ಗಾಂಧಿ ಜನ್ಮಶತಮಾನೋತ್ಸವ ಸಮಿತಿಯ ‘ಭಂಗಿ ಮುಕ್ತಿ’ ಯೋಜನೆಯಲ್ಲಿ ಭಾಗಿಯಾದರು. ತಮ್ಮ ಪಿಎಚ್‌ಡಿ ಸಂಶೋಧನೆ ಸಲುವಾಗಿ ಭಾರತದಾದ್ಯಂತ ಇರುವ ಸಫಾಯಿ ಕರ್ಮಚಾರಿಗಳ ಕುಟುಂಬದವರನ್ನು ಸಂದರ್ಶಿಸಿದರು. ಆಗ ಅವರಿಗೆ ಸಫಾಯಿ ಕರ್ಮಚಾರಿಗಳ ವೃತ್ತಿ ಬದುಕಿನ ಕಷ್ಟಗಳು ಅರ್ಥವಾದವು. ತಲೆ ಮೇಲೆ ಮಲ ಹೊರುವುದನ್ನು ಕೊನೆಗೊಳಿಸಬೇಕು ಹಾಗೂ ಆ ವೃತ್ತಿಗಿರುವ ಕಳಂಕವನ್ನು ತೆಗೆಯಬೇಕು ಎಂದು ಎರಡು ಗುಂಡಿಗಳಿರುವ ಶೌಚ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ೧೯೭೦ರಲ್ಲಿ ‘ಸುಲಭ ಅಂತರರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆ’ಯಿಂದ ಸುಲಭ್ ಶೌಚಾಲಯಗಳನ್ನು ತೆರೆದರು. ಅದು ಭಾರತದ ಅತಿ ದೊಡ್ಡ ಲಾಭರಹಿತ ಸೇವಾ ಸಂಸ್ಥೆ ಎಂದು ಹೆಸರು ಗಳಿಸಿದೆ. ದಿನವೊಂದಕ್ಕೆ ಒಂದು ಕೋಟಿ ಜನ ಸುಲಭ್ ಶೌಚಾಲಯ ಬಳಸುತ್ತಾರೆ. ಕನಿಷ್ಟ ದರ ನಿಗದಿಪಡಿಸಲಾಗಿದ್ದು ದುಡ್ಡು ಕೊಟ್ಟರೆ ಶೌಚಾಲಯ, ಸ್ನಾನ ಗೃಹ ಬಳಸಿಕೊಳ್ಳಬಹುದು. ಈ ಸಂಸ್ಥೆ ೩೫೦೦೦ ಜನರಿಗೆ ಉದ್ಯೋಗ ಒದಗಿಸಿದೆ. ೨೪೦ ಪಟ್ಟಣಗಳು ಸಫಾಯಿ ಕರ್ಮಚಾರಿಗಳ ಅವಶ್ಯಕತೆಯಿಲ್ಲದೆ ತ್ಯಾಜ್ಯ ವಿಲೇವಾರಿ ಮಾಡುತ್ತಿವೆ. ತ್ಯಾಜ್ಯದಿಂದ ಜೈವಿಕ ಇಂಧನ ಹಾಗೂ ಗೊಬ್ಬರ ತಯಾರಿಕೆಯ ಘಟಕಗಳನ್ನು ಸ್ಥಾಪಿಸಲಾಗಿದೆ.

ಹೀಗೆ ವ್ಯಕ್ತಿಯೊಬ್ಬನಿಗೆ ಹೊಳೆದದ್ದು, ಸಂಸ್ಥೆಯೊಂದಕ್ಕೆ ಸಾಧ್ಯವಾದದ್ದು ಸರ್ಕಾರಕ್ಕೂ ಸಾಧ್ಯವಾಗಬೇಕು. ಹಿಂದಿನ ಆರೋಗ್ಯ ಸಚಿವರು ಶೌಚಾಲಯಗಳನ್ನು ದೇವಾಲಯಕ್ಕೆ ಹೋಲಿಸಿದರು. ಈಗ ದೇವಾಲಯದ ಹೆಸರು ಹೇಳಿ ಅಧಿಕಾರಕ್ಕೆ ಬಂದವರು ಶೌಚಾಲಯ ಕುರಿತು ಮಾತನಾಡುತ್ತಿದ್ದಾರೆ. ಏನೇ ಆಗಲಿ, ದೇಶವಿಡೀ ಅನ್ವಯಿಸುವಂತೆ ಸ್ವಚ್ಛತೆಯ ಅಭಿಯಾನ ಕೈಗೊಳ್ಳುವುದೆಂದರೆ ಅದು ಒಂದೆರೆಡು ಕ್ಷಣಗಳಲ್ಲಿ ಸಂಭವಿಸಿಬಿಡಬಹುದಾದ ಜಾದೂ ಅಲ್ಲ. ಒಂದು ವಿಸ್ತೃತ, ದೀರ್ಘಾವಧಿ ಯೋಜನೆ ಬೇಕು; ಅದರ ರೂಪುರೇಷೆ ನಿರ್ಧರಿಸಿ, ತಕ್ಕ ಮಾನವ ಸಂಪನ್ಮೂಲ ಸಿದ್ಧಪಡಿಸಿಕೊಳ್ಳಬೇಕು; ಪೂರ್ವಭಾವಿಯಾಗಿ ಆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ನಂತರ ಲಕ್ಷ ಕೋಟಿ ರೂಪಾಯಿ ಹಣ ಬಿಡುಗಡೆ ಆಗಬೇಕು.

‘ಭಂಗಿ ಕೆಲಸವೂ ಒಂದು ಆಧ್ಯಾತ್ಮಿಕ ಅನುಭವ’ ಎನ್ನುವವರಿಗೆ ಇದು ಹೊಳೆಯಬಹುದೇ?

***

ತಕ್ಕಡಿಯ ಒಂದು ತಟ್ಟೆ ಎಲ್ಲವನ್ನು ತಾನೇ ತುಂಬಿಕೊಳ್ಳುತ್ತ, ಭಾರವಾಗಿ ಕೆಳ ಜಗ್ಗುತ್ತ ಹೋಗುತ್ತಿದೆ. ಇನ್ನೊಂದು ತಟ್ಟೆ ತನ್ನದನ್ನೆಲ್ಲ ತನಗರಿವಿಲ್ಲದಂತೆ ಕಳೆದುಕೊಳ್ಳುತ್ತ ಖಾಲಿಯಾಗುತ್ತಿದೆ. ಉಳ್ಳವರು, ಇಲ್ಲದವರ ನಡುವಿನ ಅಂತರ ಹೆಚ್ಚುತ್ತಿರುವಾಗ, ನಾನಾ ತೆರನ ಗೋಡೆಗಳು ಜನಸಮುದಾಯವನ್ನು ಒಡೆಯುತ್ತಿರುವಾಗ ಎಲ್ಲರಿಗೂ ಘನತೆಯ ಬದುಕು ಎನ್ನುವ ಸಮಾನತೆಯ ಕನಸು ಕನವರಿಕೆಯಾಗಿಯೇ ಉಳಿದೀತೇ ಎಂಬ ಆತಂಕವಾಗುತ್ತದೆ. ಬಡವರೆಂದರೆ ಹೇಗೆ ಬೇಕಾದರೂ ಹಾಗೆ ಬದುಕಬಲ್ಲವರು ಎಂಬ ಅಭಿಪ್ರಾಯ ಬಂದು ಹೋಗಿದೆ. ಎಂಥ ಪರಿಸ್ಥಿತಿಯಲ್ಲೂ, ಎಷ್ಟು ಸಣ್ಣ ಮನೆಯಲ್ಲೂ, ಮನೆಯಿಲ್ಲದಿದ್ದರೆ ರಸ್ತೆ-ಮೋರಿಗಳ ಮೇಲಾದರೂ, ಎಷ್ಟು ಕಡಿಮೆ ಆಹಾರದಲ್ಲೂ, ಎಂಥ ಅನಾರೋಗ್ಯದಲ್ಲೂ ಬದುಕಬಲ್ಲವರು ಅವರು ಎಂಬ ನಿರ್ಲಕ್ಷವಿದೆ. ಆದರೆ ಬಡವರ ಆತ್ಮಗೌರವವನ್ನು ಜಾಗೃತಗೊಳಿಸುವ ಕೆಲಸ ವೈಯಕ್ತಿಕ ಸ್ವಚ್ಛತೆಯಿಂದಲೇ ಶುರುವಾಗಬೇಕು. ಕನಿಷ್ಠ ಸೂರು, ನೀರು, ಶೌಚಾಲಯ ಪ್ರತಿ ಕುಟುಂಬಕ್ಕೂ ಸಿಗಬೇಕು.

ಭಾರತ ಬಡದೇಶ, ಇಲ್ಲಿ ತಿನ್ನಲಿಕ್ಕೇ ಗತಿ ಇಲ್ಲ; ಇನ್ನು ಸ್ವಚ್ಛತೆ, ಶೌಚ ವ್ಯವಸ್ಥೆಗೆ ಹಣ ಹೊಂದಿಸುವುದು ಹೇಗೆ ಸಾಧ್ಯ ಎನ್ನುವ ಮಾತು ಕೇಳಿಬರುತ್ತದೆ. ಆದರೆ ಭಾರತ ಅತ್ಯಂತ ಸಂಪದ್ಭರಿತ ದೇಶ. ಕೊಳೆತು ಹೋಗುವಷ್ಟು ದುಡ್ಡು, ಚಿನ್ನ ಇರುವ ದೇಶ. ಸಂದುಮೂಲೆ ತುಂಬಿದರೂ ಮಿಗುವಷ್ಟು ಮಾನವ ಸಂಪನ್ಮೂಲ ಇಲ್ಲಿದೆ. ನಮ್ಮ ಸರ್ಕಾರವೂ ಬಡ ಸರ್ಕಾರವಲ್ಲ. ಲಕ್ಷಾಂತರ ಕೋಟಿ ಕಪ್ಪುಹಣ ಎಲ್ಲೆಲ್ಲೋ ಕೊಳೆಯುತ್ತಿರುವ, ಹೇಗೆಹೇಗೋ ಚಲಾವಣೆಯಾಗುತ್ತಿರುವ ಎಕಾನಮಿ ಇದು. ಇವತ್ತು ಕೊರತೆ ಇರುವುದು ಒಂದು ಉದಾತ್ತ ಯೋಚನೆ, ಜಾರಿಗೊಳಿಸುವ ಧೀಶಕ್ತಿ ಇವೆರೆಡರದ್ದೇ ಹೊರತು ಹಣದ್ದಲ್ಲ.

ದೇವಸ್ಥಾನ ಕಟ್ಟಿಟ್ಟರೆ ಸಾಕು, ಜನ ಓಡೋಡಿ ಬರುತ್ತಾರೆ. ಬಳಸುತ್ತಾರೆ. ಆದರೆ ಈ ಮಾತನ್ನು ಶೌಚಾಲಯ ಕುರಿತು ಹೇಳಬರುವುದಿಲ್ಲ. ಶೌಚಾಲಯ ಕಟ್ಟಿದ ಕೂಡಲೇ ಜನ ಅದನ್ನು ಬಳಸುವುದಿಲ್ಲ. ಹೀಗಾಗಿ ಉತ್ತಮ ಶೌಚ ವ್ಯವಸ್ಥೆ ಎಂದರೆ ಅದನ್ನು ಸ್ವಚ್ಛಗೊಳಿಸಲು ಮತ್ತೊಬ್ಬರ ಅಗತ್ಯವಿಲ್ಲದಂತಿರಬೇಕು. ಅದರ ಬಳಕೆ, ತುರ್ತು ಏನೆಂದು ಜನರಿಗೆ ತಿಳಿಯಬೇಕು. ೧೯೯೪ರಲ್ಲಿ ಸೂರತ್‌ನಲ್ಲಿ ಪ್ಲೇಗ್ ಕಾಣಿಸಿಕೊಂಡು ೮೦ ಜನ ಸತ್ತಾಗ ಕೇವಲ ಸೂರತ್‌ನಲ್ಲಷ್ಟೇ ಅಲ್ಲ, ವಿಶ್ವಾದ್ಯಂತ ಆತಂಕ ವ್ಯಕ್ತವಾಯಿತು. ಬಡವಬಲ್ಲಿದರೆನ್ನದೆ ಸೂರತ್ತಿನ ಮೂರನೇ ಒಂದು ಭಾಗ ಜನ ಊರುಬಿಟ್ಟು ಹೋದರು. ನಂತರ ಸ್ವಚ್ಛತೆಯ ಕುರಿತು ಎಂತಹ ಅರಿವು ಮೂಡಿತೆಂದರೆ ಒಂದಾನೊಂದು ಕಾಲದಲ್ಲಿ ಗಲೀಜು ನಗರವಾಗಿದ್ದ ಸೂರತ್ ಈಗ ಭಾರತದಲ್ಲೇ ಮೂರನೇ ಅತಿ ಸ್ವಚ್ಛ ನಗರ! (ಮೊದಲ ಸ್ಥಾನ ೧೦ ಲಕ್ಷ ಜನಸಂಖ್ಯೆಯ ಚಂಢೀಘರಕ್ಕೆ. ಎರಡನೆಯದು ೯ ಲಕ್ಷ ಜನಸಂಖ್ಯೆಯ ಮೈಸೂರು, ಮೂರನೆಯದು ೪೬ ಲಕ್ಷ ಜನಸಂಖ್ಯೆಯ ಸೂರತ್.)

ಜನ ಯಾವಾಗಲೂ ತಮಗೆ ಅಗತ್ಯ, ಅನಿವಾರ್ಯ ಎನಿಸಿದ ಆಧುನಿಕ ವಿಧಾನಗಳನ್ನು ಯಾವ ಪ್ರಚಾರ, ಅಭಿಯಾನವಿಲ್ಲದೆ ಒಪ್ಪಿಕೊಂಡಿದ್ದಾರೆ. ಸುಲಭದ, ಕಡಿಮೆ ದರದ, ಬಳಕೆಗೆ ಸೂಕ್ತವಾದಂತಹ, ಮನೆಬಳಕೆಯ ಅನಿಲ ತಯಾರಿಸಬಲ್ಲ ಶೌಚ ವ್ಯವಸ್ಥೆ ಬರಬೇಕು. ಅದು ಭಾರತದ ವಿಭಿನ್ನ ಭೌಗೋಳಿಕ ಪ್ರದೇಶಗಳಿಗೆ, ಅಲ್ಲಿನ ಜನಸಮುದಾಯಗಳಿಗೆ ಹೊಂದುವಂತಿರಬೇಕು. ನೀರಿರುವಲ್ಲಿ-ಇಲ್ಲದಿರುವಲ್ಲಿ; ತಗ್ಗುಪ್ರದೇಶಗಳಲ್ಲಿ-ಬೆಟ್ಟಬಯಲುಗಳಲ್ಲಿ ಅಲ್ಲಲ್ಲಿಗೆ ಹೊಂದಿಕೆಯಾಗುವ ವ್ಯವಸ್ಥೆಯೇ ಬರಬೇಕು. ಆಗ ಜನ ಮುಗಿಬಿದ್ದು ನಾನು, ತಾನೆಂದು ಅದನ್ನು ಅಳವಡಿಸಿಕೊಳ್ಳಬಹುದು. ಮನೆಬಳಕೆಯ ವಸ್ತುಗಳು, ಮೊಬೈಲು, ಕಂಪ್ಯೂಟರುಗಳನ್ನೆಲ್ಲ ಹೇಗೆ ಮುಗಿಬಿದ್ದು ಕೊಳ್ಳುತ್ತಾರೋ ಹಾಗೆ ಶೌಚ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಬಹುದು.

ಆಗ ಜನಸಾಮಾನ್ಯನೂ ಘನತೆಯ ಬದುಕು-ಆರೋಗ್ಯ ಹೊಂದಲು ಸಾಧ್ಯವಾಗಬಹುದು. ಪಾಪ ತೊಳೆತೊಳೆದು ಮಲಿನವಾದ ಗಂಗೆ ಶುದ್ಧಳಾಗಿ ಹರಿಯಬಹುದು.




Wednesday 10 December 2014

ವಿಮೆನ್ ಇನ್ ಬ್ಲಾಕ್ - ಬೀದಿಯ ಪರ್ಯಾಯ ಶಕ್ತಿ




ಯುದ್ಧ ಕಾಲವೋ, ಶಾಂತಿ ಕಾಲವೋ, ಎಲ್ಲ ಕಾಲದಲ್ಲಿ ಯುದ್ಧಹಿಂಸೆ ಜನರನ್ನು ಬಾಧಿಸಿದೆ. ಅದರ ಸ್ವರೂಪ, ಸ್ಥಳ, ತೀವ್ರತೆ ಏನೇ ಆಗಿರಲಿ, ಯುದ್ಧ ಕೊನೆಗೂ ಬಾಧಿಸುವುದು ಹೆಣ್ಣನ್ನೇ. ಯಾರು ಗೆದ್ದರೂ, ಯಾರು ಸೋತರೂ ವಿಧವೆಯರು, ಮಕ್ಕಳನ್ನು ಕಳೆದುಕೊಂಡ ಅಮ್ಮಂದಿರು, ಸೋದರರನ್ನು ಕಳೆದುಕೊಂಡ ಸೋದರಿಯರು ಸೃಷ್ಟಿಯಾಗುತ್ತಾರೆ. ಸೈನ್ಯದಿಂದ ಹೆಣ್ಣು ಬರ್ಬರ ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾಳೆ. ವೀರರ ಮರಣಗಳು ಸಾವಿರಾರು ಕುಟುಂಬಗಳ ಸಮತೋಲನ ಮತ್ತು ಜೀವಿತವನ್ನೇ ಏರುಪೇರು ಮಾಡುತ್ತವೆ. ಈಗ ದೇಶದೇಶಗಳ ನಡುವೆ ನೇರಾನೇರ ಯುದ್ಧ ನಡೆಯದೇ ಇರಬಹುದು. ಆದರೆ ಗಡಿ, ಉಗ್ರಗಾಮಿ, ರಕ್ಷಣೆಯ ನೆಪದಲ್ಲಿ ನಿರಂತರ ಯುದ್ಧ ಚಾಲ್ತಿಯಲ್ಲಿದೆ. ಅದಕ್ಕೆ ನೀರೆರೆಯಲು ರಾಷ್ಟ್ರೀಯತೆ, ದೇಶಭಕ್ತಿ, ಸುರಕ್ಷತೆ-ಸಮಗ್ರತೆ ಎಂಬಿತ್ಯಾದಿ ಭಾರವಾದ ಶೀರ್ಷಿಕೆಗಳಿವೆ. ಆಂತರಿಕ ಮತ್ತು ಬಾಹ್ಯ ಭದ್ರತೆಯ ಕಾರಣಕ್ಕಾಗಿ ನಮ್ಮದೇ ದೇಶಗಳ ನಮ್ಮದೇ ಸರ್ಕಾರಗಳು ರೂಪಿಸುವ ಯುದ್ಧನೀತಿ ನಮ್ಮ ಮನೆಗೇ ನಾವು ಬೆಂಕಿಯಿಟ್ಟುಕೊಳ್ಳುವಂತಿರುತ್ತವೆ. ಮಿಲಿಟರಿಯ ವಿಷಯ ಗುಪ್ತವಾಗಿರುವುದರಿಂದ ರಾಷ್ಟ್ರೀಯ ಹಿತಾಸಕ್ತಿಗೆಂದು ತೆಗೆದುಕೊಳ್ಳುವ ನಿರ್ಧಾರಗಳು ಪರಿಣಾಮ ಅನುಭವಿಸಿದ ಮೇಲಷ್ಟೇ ಜನಸಾಮಾನ್ಯರಿಗೆ ತಿಳಿದುಬರುತ್ತದೆ.

ಹೆಣ್ಣು, ಹೊನ್ನು, ಮಣ್ಣಿಗಾಗಿ ಎಂಬ ಉನ್ಮಾದದಿಂದ ಮಾಡುವ ಯುದ್ಧ ಮತ್ತು ತತ್ಸಂಬಂಧಿ ಹಿಂಸೆ ಸಮಾಜದ ನೈತಿಕತೆಯ ನೇಯ್ಗೆಯನ್ನೇ ಭ್ರಷ್ಟಗೊಳಿಸುತ್ತದೆ. ಅದು ನೂರಕ್ಕೆ ನೂರು ‘ಅತಿ ಪುರುಷ’ ಮನಸ್ಥಿತಿಯ ಸೃಷ್ಟಿ. ಎಂದೇ ಅದನ್ನು ಪ್ರತಿರೋಧಿಸುವುದು ತಾಯಿ ಮನಸುಗಳಿಗಲ್ಲದೇ ಬೇರೆಯವರಿಗೆ ಸಾಧ್ಯವಿಲ್ಲ. ಮನುಷ್ಯ ಮನುಷ್ಯನಾಗಿ ಉಳಿಯಲು ಹಿಂಸೆಯನ್ನು ಪ್ರತಿರೋಧಿಸುವುದು ಗಡಿಗೆರೆಯಿರದ ತಾಯಂದಿರ ಪರಮ ಕರ್ತವ್ಯ ಎಂದು ಮಹಿಳೆ ಮರೆಯುವಂತಿಲ್ಲ.

ಅಂಥ ಒಂದು ಪ್ರಯತ್ನ ‘ವಿಮೆನ್ ಇನ್ ಬ್ಲಾಕ್’.

೧೯೮೮ರ ಜನವರಿಯಲ್ಲಿ ಜೆರುಸಲೇಂನ ಇಸ್ರೇಲಿ ಮಹಿಳೆಯರಿಂದ ಶುರುವಾದ ‘ವಿಮೆನ್ ಇನ್ ಬ್ಲಾಕ್’ ಕಪ್ಪು ಉಡುಗೆ ಧರಿಸಿದ ಮಹಿಳೆಯರ ಯುದ್ಧವಿರೋಧಿ ಸಂಘಟನೆ. ಕಪ್ಪು ಬಣ್ಣ ದುಃಖ ಸೂಚಕ, ಮರಣ ಸೂಚಕ. ಆದರೆ ಒಂದು ನಿಷ್ಕ್ರಿಯ ಸಂಕೇತವನ್ನು ಹಿಂಸೆಯ ವಿರುದ್ಧ ಪ್ರತಿರೋಧದ ಮತ್ತು ದಿಟ್ಟತನದ ಸಂಕೇತವಾಗಿ ಬಳಸಿಕೊಂಡು ಹುಟ್ಟಿದ್ದು ವಿಮೆನ್ ಇನ್ ಬ್ಲಾಕ್. ಆಕ್ರೋಶವನ್ನು ಪದಗಳಿಲ್ಲದೆ ತೋರಿಸಬಹುದಾದ ಭಾಷೆಯ ಸಂಕೇತ ಮೌನ. ಅದನ್ನೂ ಸಾಂಕೇತಿಕವಾಗಿ ವಿಮೆನ್ ಇನ್ ಬ್ಲಾಕ್ ಬಳಸಿಕೊಂಡಿತು.

೧೯೮೭ರಲ್ಲಿ ಇಸ್ರೇಲ್ ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿ ಆಕ್ರಮಿಸಿಕೊಂಡ ೨೦ ವರ್ಷದ ಬಳಿಕ ಮೊದಲ ಪ್ಯಾಲೆಸ್ಟೀನಿಯನ್ ಇಂತಿಫಾದಾ ಶುರುವಾಯಿತು. ಇಸ್ರೇಲಿ ಸೇನೆ ನಗರಗಳನ್ನಾವರಿಸಿಕೊಂಡಿತು. ಆಗ ಸಂಭವಿಸಿದ ಮಾನವ ಹಕ್ಕು ಉಲ್ಲಂಘನೆಯನ್ನು ವಿರೋಧಿಸಿ ಈ ಸಂಘಟನೆ ಹುಟ್ಟಿಕೊಂಡಿತು. ಆ ಮೊದಲು ದ. ಆಫ್ರಿಕಾ, ಅರ್ಜೆಂಟೀನಾದಲ್ಲಿ ಕಂಡುಬಂದ ಅಹಿಂಸಾತ್ಮಕ ಪ್ರತಿರೋಧದ ಸ್ವರೂಪದಿಂದ ಸ್ಫೂರ್ತಿ ಪಡೆದ ಕೆಲವು ಇಸ್ರೇಲಿ ಮಹಿಳೆಯರು ಪ್ರತಿ ಶುಕ್ರವಾರ ಜೆರುಸಲೇಂನ ನಡುಭಾಗದ ಹಗಾರ್ ಸ್ಕ್ವೇರ್ (ಅಥವಾ ಪ್ಯಾರಿಸ್ ಸ್ಕ್ವೇರ್)ನಲ್ಲಿ ಮಧ್ಯಾಹ್ನ ಒಂದರಿಂದ ಎರಡರ ತನಕ ಚಕಮಕಿಯಲ್ಲಿ ಮಡಿದವರ ಸಾವಿಗೆ ಶೋಕಿಸುತ್ತ ಕಪ್ಪು ಬಟ್ಟೆ ಧರಿಸಿ ಮೌನವಾಗಿ ನಿಂತರು. ಬಿಚ್ಚಿದ ಹಸ್ತದ ಕಪ್ಪು ಪ್ಲಕಾರ್ಡಿನಲ್ಲಿ ‘ಸ್ಟಾಪ್ ಆಕ್ಯುಪೇಷನ್’ ಎಂದು ಬರೆಯಲಾಗಿತ್ತು.

ಕೂಡಲೇ ಇದು ಇಸ್ರೇಲಿನ ಇತರ ನಗರಗಳಿಗೂ ಹರಡಿತು. ಇಸ್ರೇಲ್ ಪ್ರಜೆಗಳಾದ ಅರಬ್ ಪ್ಯಾಲಸ್ಟೀನಿಯನ್ನರು ಹೆಚ್ಚಿರುವ ಉತ್ತರ ಇಸ್ರೇಲಿನಲ್ಲಿ ಗಮನ ಸೆಳೆಯಿತು. ಎರಡೂ ದೇಶಗಳ ನಡುವೆ ಸಂಪರ್ಕವಿರಿಸಿಕೊಂಡ, ಗಡಿ ದಾಟಿ ಎರಡೂ ಕಡೆಯ ಜೈಲುಗಳಿಗೆ ಭೇಟಿ ನೀಡುವ ಸಪ್ಲೈ ಗುಂಪಿನೊಡನೆ ಸಂಪರ್ಕ ಸಾಧಿಸಿತು. ಚಳುವಳಿಯೋಪಾದಿಯಲ್ಲಿ ವಾರಕ್ಕೊಮ್ಮೆ ಮಹಿಳೆಯರು ನಗರದ ಚೌಕಗಳಲ್ಲಿ, ಹೆದ್ದಾರಿ ಜಂಕ್ಷನ್‌ಗಳಲ್ಲಿ, ಮೌನವಾಗಿ ಕಪ್ಪುಬಟ್ಟೆ ಧರಿಸಿ ನಿಂತು ಜನರ ಗಮನ ಸೆಳೆದರು. ಇದಕ್ಕೆ ಯಾವ ನಿರ್ದಿಷ್ಟ ಚೌಕಟ್ಟೂ ಇರಲಿಲ್ಲ. ಪ್ರತಿ ಊರಿನ ಮಹಿಳೆಯರೂ ಅಲ್ಲಲ್ಲಿನ ಸ್ವರೂಪ ನಿರ್ಧರಿಸಿದರು. ೧೯೯೩ರ ತನಕ ಪ್ರತಿವಾರ ಹೆಚ್ಚು ಕಡಿಮೆ ೪೦ ನಗರಗಳಲ್ಲಿ ಈ ಜಾಗೃತಿ ನಡೆಯುತ್ತಿತ್ತು. ೧೯೯೩ರ ಓಸ್ಲೋ ಒಪ್ಪಂದವಾದ ಬಳಿಕ ಮೌನಜಾಗೃತಿಯ ಸಂಖ್ಯೆ ಕಡಿಮೆಯಾದರೂ ಮತ್ತೆ ಹಿಂಸೆ ಶುರುವಾದಾಗ ಮೊದಲಿನಂತೇ ಮುಂದುವರೆಯಿತು.

ಇದು ನಿಧಾನವಾಗಿ ಬೇರೆಬೇರೆ ದೇಶಗಳಿಗೂ ಹಬ್ಬಿತು. ಜರ್ಮನಿ, ಯುಗೋಸ್ಲಾವಿಯಾ, ಭಾರತ, ನೇಪಾಳ, ಅಮೆರಿಕ, ಆಸ್ಟ್ರೇಲಿಯಾ, ಫಿಲಿಪೀನ್ಸ್, ಮಾಲಿ, ಕೆನಡ, ಇಂಗ್ಲೆಂಡ್, ಇಟಲಿ, ಸ್ವಿಜರ್ಲೆಂಡ್, ಜಪಾನ್, ಫ್ರಾನ್ಸ್, ಸ್ವೀಡನ್, ಟರ್ಕಿ, ನೈರೋಬಿ, ದ. ಆಫ್ರಿಕಾ, ಮೆಕ್ಸಿಕೋ, ನೆದರ್‌ಲೆಂಡ್, ಉತ್ತರ ಐರ‍್ಲೆಂಡ್, ಸ್ಪೇನ್ ಹೀಗೇ ಹಲವಾರು ದೇಶಗಳ ಮಹಿಳೆಯರನ್ನು ಸಕ್ರಿಯವಾಗಿಸಿತು. ಉಳಿದ ದೇಶಗಳ ಸಂಘಟನೆಗೆ ಇಸ್ರೇಲಿನ ಸಮಸ್ಯೆ ಜೊತೆಗೆ ಸಂಬಂಧವಿರಲಿಲ್ಲ. ಅವರೆಲ್ಲ ತಂತಮ್ಮನ್ನು ಬಾಧಿಸುತ್ತಿದ್ದ ರಾಜಕೀಯ ಹಾಗೂ ಸಾಮಾಜಿಕ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿದರು. ಜನಾಂಗೀಯ ಕಲಹ, ಯುದ್ಧ, ಅಣ್ವಸ್ತ್ರ, ಶಸ್ತ್ರಾಸ್ತ್ರ ತಯಾರಿಕೆ, ಮಹಿಳಾ ದೌರ್ಜನ್ಯ ಇತ್ಯಾದಿ ಮಾನವ ಹೃದಯಗಳ ನಡುವೆ ಅಸಹನೆ, ದ್ವೇಷ ಬಿತ್ತುವ ಎಲ್ಲ ಪ್ರಯತ್ನಗಳನ್ನು ಈ ಸಂಘಟನೆಯ ಮಹಿಳೆಯರು ಪ್ರತಿಭಟಿಸಿದರು.



ಚಿಕ್ಕ ಆದರೆ ಹರಿತವಾದ ಸಂದೇಶವುಳ್ಳ ಸ್ಲೋಗನ್ನುಗಳನ್ನು ಆ ಮಹಿಳೆಯರು ಹಿಡಿದರು. ಕೆಲ ಸ್ಲೋಗನ್ನುಗಳನ್ನು ನೋಡಿ:
‘ಇನ್ನೂ ಸುರಕ್ಷಿತ ವಿಶ್ವ, ಮಹಿಳೆಯರಿಗಾಗಿ’
‘ಅಹಿಂಸಾತ್ಮಕ ನಾಳೆ, ಮಕ್ಕಳ ಹಕ್ಕು’
‘ಯುದ್ಧಕ್ಕೆ ಋತುಚಕ್ರದ ಮೇಲೆ ಹೊಟ್ಟೆಯುರಿ’
‘ಇನ್ನೂ ಕಾರುಣ್ಯಮಯ ವಿಶ್ವ ಕಲ್ಪಿಸಿಕೊಳ್ಳಿ’
‘ಬೇಕಿರುವುದು ನ್ಯಾಯ, ಪ್ರತೀಕಾರವಲ್ಲ’

ಈ ಸಂಘಟನೆಯು ಬೇರೆಬೇರೆ ಅಹಿಂಸಾ ಮಾರ್ಗಗಳನ್ನೂ ಅನುಸರಿಸಿತು - ಕಪ್ಪು ಬಟ್ಟೆ ಧರಿಸಿ ರಸ್ತೆ ತಡೆ ಮಾಡುವುದು; ಮಿಲಿಟರಿ ಬೇಸ್ ಮತ್ತಿತರ ನಿಷೇಧಿತ ಪ್ರದೇಶಗಳಿಗೆ ಹೋಗುವುದು; ಸಾಕ್ಷಿಗಳೆದುರು ಅಹಿಂಸಾತ್ಮಕವಾಗಿ ಕಾನೂನು ಭಂಗ ಮಾಡುವುದು ಇತ್ಯಾದಿ.

೧೯೯೦ರಲ್ಲಿ ಯುಗೋಸ್ಲಾವಿಯಾದ ಮಹಿಳೆಯರು ಅಲ್ಲಿ ತೀವ್ರಗೊಳ್ಳತೊಡಗಿದ್ದ ರಾಷ್ಟ್ರೀಯತೆ ಹಾಗೂ ಆ ನೆಪದ ಹಿಂಸೆಯನ್ನು ನೇರವಾಗಿ ಖಂಡಿಸಿದರು. ರಾಷ್ಟ್ರವಾದಿಗಳ ರಕ್ತಪಾತದ ರಾಜಕಾರಣವನ್ನು ಟೀಕಿಸಿದರು. ಆದರೆ ಅವರನ್ನು ದೇಶದ್ರೋಹಿಗಳೆಂದು ಜರಿದು ಹಿಂಸಾತ್ಮಕ ಆಕ್ರಮಣ ನಡೆದವು. ಆದರೂ ಮಹಿಳೆಯರು ಮೌನ ಪ್ರತಿಭಟನೆ ನಿಲ್ಲಿಸಲಿಲ್ಲ. ಇಸ್ರೇಲಿನಲ್ಲೂ ಈ ಸಂಘಟನೆಯ ಮಹಿಳೆಯರಿಗೆ ವಿರುದ್ಧವಾಗಿ ‘ಭವಿಷ್ಯದ ಇಸ್ರೇಲ್’ ಎಂಬ ಹಸಿರು ಟೋಪಿ ಧರಿಸಿದ ಮಹಿಳಾ ಸಂಘಟನೆ ಶುರುಮಾಡಲಾಯಿತು. ಇವರನ್ನು ಅರಬ್ ಏಜೆಂಟರಂತೆ ನೋಡಲಾಯಿತು. ದಾರಿಹೋಕರು ‘ಸೂಳೆಯರು’, ‘ದ್ರೋಹಿಗಳು’ ಎಂದು ಜರಿದರು. ಅದೆಲ್ಲವನ್ನು ಘನತೆಯಿಂದ ಸಹಿಸಿ ಮೌನ ಪ್ರದರ್ಶನ ಮುಂದುವರೆಯಿತು.

ಭಾರತದಲ್ಲಿ ಇದು ೧೯೯೨ರಲ್ಲಿ ಶುರುವಾಯಿತು. ಮೊತ್ತಮೊದಲು ಬೆಂಗಳೂರಿನಲ್ಲಿ ಕೌಟುಂಬಿಕ ದೌರ್ಜನ್ಯದ ವಿರುದ್ಧ ಹೋರಾಡುವ ‘ವಿಮೋಚನಾ’ ಸಂಸ್ಥೆ ಮೌನಜಾಗೃತಿಯನ್ನು ಸಂಘಟಿಸಿತು. ಅಯೋಧ್ಯಾ ರಾಮಮಂದಿರ ಗಲಾಟೆ ಮತ್ತು ಬಾಬ್ರಿ ಮಸೀದಿ ಧ್ವಂಸದ ವಿರುದ್ಧ, ಹಿಂದೂ ರಾಷ್ಟ್ರೀಯತೆ ಹೆಸರಿನ ಹಿಂಸಾ ರಾಜಕಾರಣದ ವಿರುದ್ಧ ವಿಮೆನ್ ಇನ್ ಬ್ಲಾಕ್ ಅನ್ನು ಪ್ರತಿ ಗುರುವಾರ ಸಂಘಟಿಸಲಾಯಿತು. ಚೆನ್ನೈ, ಮುಂಬೈ, ಕೊಲ್ಲಾಪುರ, ದೆಹಲಿ ಇತ್ಯಾದಿ ದೇಶದ ನಾನಾ ಕಡೆ ಅಸಹನೆ ಮತ್ತು ದ್ವೇಷದ ರಾಜಕಾರಣ ಹಬ್ಬುವುದು ಬೇಡ ಎಂದು ಮಹಿಳೆಯರು ಮೌನವಾಗಿ ಬೀದಿಬೀದಿಗಳಲ್ಲಿ ನಿಂತರು. ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಕಾನೂನುಬದ್ಧವಾಗಿಯೇ ನಡೆಯುತ್ತಿರುವ ಪ್ರಭುತ್ವದ ಹಿಂಸೆಯನ್ನು ಅದು ಪ್ರಶ್ನಿಸಿತು. ರಾಜಕೀಯ ವಿಷಯಗಳ ಜೊತೆಗೇ ಮಹಿಳಾ ದೌರ್ಜನ್ಯವನ್ನೂ ವಿರೋಧಿಸಲಾಯಿತು. ವರದಕ್ಷಿಣೆ, ವಧುದಹನ, ಸ್ತ್ರೀ ಭ್ರೂಣಹತ್ಯೆ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ನೀಲಿಚಿತ್ರ ಮುಂತಾದ ವಿಷಯಗಳತ್ತ ಪ್ಲಕಾರ್ಡುಗಳು ಗಮನ ಸೆಳೆದವು.

***

ಯಾವುದೇ ದೇಶದ, ಯಾವುದೇ ಗುಂಪಿನ ಮಹಿಳೆಯರು ಒಗ್ಗೂಡಿ ವಿಮೆನ್ ಇನ್ ಬ್ಲಾಕ್ ಸಂಘಟಿಸಬಹುದು. ಮೆರವಣಿಗೆಯಿಲ್ಲ, ಧಿಕ್ಕಾರ ಕೂಗಬೇಕಿಲ್ಲ. ಸುಭವಾಗಿ ಜನರನ್ನು ಸೇರಿಸಬಹುದು, ಮಕ್ಕಳನ್ನೂ ಕರೆತರಬಹುದು. ವಿಮೆನ್ ಇನ್ ಬ್ಲಾಕ್ ಸಂಘಟನೆಗೆ ಸಂವಿಧಾನ ಇಲ್ಲ. ಮ್ಯಾನಿಫೆಸ್ಟೋ ಇಲ್ಲ. ಕ್ರಿಯೆ ಮತ್ತು ಮಾತುಗಳಲ್ಲೇ ಅದರ ಆಶಯ ಸ್ಪಷ್ಟವಾಗಬೇಕು. ಒಂದು ಸ್ತ್ರೀವಾದಿ ತಿಳುವಳಿಕೆ ಗಟ್ಟಿಯಾಗಿ ಅದರ ಬೆನ್ನಿಗಿದೆ: ಯುದ್ಧಕಾಲದಲ್ಲಿ-ಶಾಂತಿ ಕಾಲದಲ್ಲಿ; ಆಂತರಿಕ ಅಥವಾ ಬಾಹ್ಯ ಸ್ವರೂಪಗಳಲ್ಲಿ ಪುರುಷ ಸಮಾಜ ಎಸಗುವ ದೌರ್ಜನ್ಯ ಅಂತರ್‌ಸಂಬಂಧ ಹೊಂದಿದೆ ಎನ್ನುವುದು. ಹಿಂಸೆ ದೊಡ್ಡ ಜನಸಮುದಾಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಧನವಾಗಿದೆ ಎಂಬ ಅರಿವೂ ಅದಕ್ಕಿದೆ. ಆದ್ದರಿಂದ ಅದು ಹಿಂಸೆಯನ್ನು ವಿರೋಧಿಸುತ್ತದೆ. ಹಿಂಸೆ ವಿರೋಧಿಸುವ ಪುರುಷರೂ ಈ ಸಂಘಟನೆಯ ಜೊತೆಗಿದ್ದಾರೆ.

ಇದಕ್ಕೀಗ ವಿಶ್ವಾದ್ಯಂತ ೧೦ ಸಾವಿರಕ್ಕಿಂತ ಅಧಿಕ ಕ್ರಿಯಾಶೀಲ ಮಹಿಳೆಯರು ಕಾರ್ಯಕರ್ತರಾಗಿದ್ದಾರೆನ್ನುವ ಅಂದಾಜಿದೆ. ಜೆರುಸಲೇಂ, ಬೀಜಿಂಗ್, ಸರ್ಬಿಯಾ, ಬ್ರಸೆಲ್ಸ್ ಸೇರಿದಂತೆ ಕೆಲವು ಕಡೆ ಅಂತರರಾಷ್ಟ್ರೀಯ ಸಮ್ಮೇಳನ ನಡೆಸಿದೆ. ಎಲ್ಲ ದೇಶಗಳ ಸಂಘಟನೆಗಳ ಹೆಣ್ಣುಮಕ್ಕಳು ಇ ಮೇಲ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದಾರೆ. ಮಿಲೆನಿಯಂ ಶಾಂತಿ ಪ್ರಶಸ್ತಿ ಲಭಿಸಿದೆ. ವರ್ಲ್ಡ್ ಸೋಶಿಯಲ್ ಫೋರಂನ ಸಹಸಂಘಟನೆಯಾಗಿ ಜಾಗತೀಕರಣ ಮತ್ತು ಸಾಮ್ರಾಜ್ಯಶಾಹಿಯ ಭಿನ್ನ ರೂಪಗಳನ್ನೂ ವಿರೋಧಿಸುತ್ತಿದೆ.

ಹೆಣ್ಣೇನೂ ಅಭಿಜಾತ ಅಹಿಂಸಾ ಪ್ರತಿಪಾದಕಳಲ್ಲ. ಆದರೆ ನ್ಯಾಯ ಮತ್ತು ದಮನ ಈ ಎರಡೂ ಏನು ಎನ್ನುವುದು ಒಂದಲ್ಲ ಒಂದು ಕಾರಣಕ್ಕಾಗಿ ದಮನಿತಳಾದ ಮಹಿಳೆಗೆ ಚೆನ್ನಾಗಿ ಗೊತ್ತು. ಎಂದೇ ಯುದ್ಧ, ಹಿಂಸೆಯ ಅನುಭವ ಗಂಡು ಮತ್ತು ಹೆಣ್ಣಿಗೆ ತುಂಬ ಭಿನ್ನವಾಗಿದೆ. ಹಿಂಸೆ ಕುರಿತ ಸ್ತ್ರೀವಾದಿ ವಿಶ್ಲೇಷಣೆ ಬೇರೆಯೇ ಇರುತ್ತದೆ. ಎಲ್ಲಿ ಹಿಂಸೆಯಿದೆಯೋ ಅಲ್ಲಿ ದೌರ್ಜನ್ಯ ಇದ್ದೇ ಇರುತ್ತದೆ. ಎಂದೇ ಹುತಾತ್ಮಳಾಗಬಯಸದೇ ತನ್ನ ಭಿನ್ನ ದೃಷ್ಟಿ ಹಾಗೂ ಶಕ್ತಿಯನ್ನು ತೋರಿಸುವುದು ಈ ಇಂಥ ಸಂಘಟನೆಗಳ ಹಿಂದಿನ ತಾತ್ವಿಕತೆಯಾಗಿದೆ.

***

ಆಳ್ವಿಕರಿಗೊಂದು ಅಧಿಕಾರವಿದ್ದಂತೆ ಬೀದಿಗೊಂದು ಅಧಿಕಾರವಿರುತ್ತದೆ. ಅಧಿಕಾರ ಒಂದೆಡೆ ಸಂಚಯವಾಗುವುದನ್ನು ತಡೆಗಟ್ಟಿ ವಿಕೇಂದ್ರೀಕರಿಸುವ ಒಂದು ಚಲನಶೀಲ ಸಮತೋಲನದ ಶಕ್ತಿ ಬೀದಿಗಿರುತ್ತದೆ. ಬೀದಿಗಿರುವ ಶಕ್ತಿ ಮತ್ತು ಅಧಿಕಾರ ಎರಡನ್ನೂ ಸರಿಯಾಗಿ ಬಳಸಿಕೊಳ್ಳುವುದರಲ್ಲಿ ಸಮಾಜ ಸೋತಿರುವುದರಿಂದಲೇ ನಾಗರಿಕ ಸಮಾಜದಲ್ಲೂ ಅನಾಗರಿಕ ಕ್ರೌರ್ಯ ಅನಾಯಾಸವಾಗಿ ಪ್ರವೇಶ ಪಡೆದಿದೆ.

ಹಿಂಸೆಗೆಳಸದಂತೆ ಅತ್ಯಂತ ಸರಳವಾಗಿ ಜನರನ್ನು ತಲುಪುವ ಸಾಧ್ಯತೆ ಬೀದಿಗಿದೆ. ವಂಚಿತ ಮತ್ತು ಅಸಹಾಯಕ ವ್ಯಕ್ತಿ ಇಡೀ ಸಮಾಜದ ಅಂತಸ್ಸಾಕ್ಷಿ ಪ್ರಶ್ನಿಸಲು ಹಾಗೂ ತನ್ನೆದೆಯೊಳಗಿನ ಸಿಟ್ಟನ್ನು ನೈತಿಕ ಆಕ್ರೋಶವಾಗಿಸಲು ಬೀದಿಯನ್ನು ಬಳಸಿಕೊಳ್ಳಬೇಕು. ಅದರಲ್ಲೂ ಮಹಿಳೆಯರು ದೌರ್ಜನ್ಯ ನಿಲ್ಲಿಸುವಂತೆ ಹಕ್ಕೊತ್ತಾಯ ತರಲು, ವಂಚಿಸಲ್ಪಟ್ಟ ರಾಜಕೀಯ ಅವಕಾಶವನ್ನು ಸಾಮುದಾಯಿಕವಾಗಿ ಕಂಡುಕೊಳ್ಳಲು ಹಾಗೂ ಸೋದರತೆ-ಮಾನವತೆಗಳನ್ನು ಹಂಚಲು ಈ ಸುಲಭ ವಿಧಾನ ಬಳಸಿಕೊಳ್ಳಲೇಬೇಕು.

ಮಾರ್ಚ್ ೭ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ‘ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ೨೦೧೩ರಲ್ಲಿ ಮಂಗಳೂರಿನಲ್ಲಿ ‘ವಿಮೆನ್ ಇನ್ ಬ್ಲಾಕ್’ ಅನ್ನು ಸಂಘಟಿಸಿತು. ೨೦೧೪ರಲ್ಲಿ ಮೈಸೂರಿನಲ್ಲಿ ‘ವಿಮೋಚನಾ’ ಸಂಸ್ಥೆಯ ಸಹಯೋಗದೊಂದಿಗೆ ಮಾರ್ಚ್ ೭ರ ಸಂಜೆ ವಿಮೆನ್ ಇನ್ ಬ್ಲಾಕ್‌ನಲ್ಲಿ ೧೫೦೦ಕ್ಕೂ ಮಿಕ್ಕಿ ಮಹಿಳೆಯರು ಪಾಲ್ಗೊಂಡಿದ್ದರು.



ಸಂಗಾತಿಗಳೇ, ಕೇವಲ ಮಹಿಳಾ ದಿನಾಚರಣೆಯಷ್ಟೇ ಅಲ್ಲ, ಒಂದು ಊರಿನಲ್ಲಷ್ಟೇ ಅಲ್ಲ; ಎಲ್ಲೇ ಇರಿ, ಯಾವುದೇ ಅನ್ಯಾಯ ಕುರಿತು ಆಕ್ರೋಶ ಹೊಂದಿರಿ, ನಿಮ್ಮ ಮನದಲ್ಲಿರುವುದನ್ನು ಪ್ಲಕಾರ್ಡುಗಳಲ್ಲಿ ಹಿಡಿದು ಕಪ್ಪು ಉಡುಗೆ ಧರಿಸಿ ನಿಲ್ಲಿ. ನಿಮ್ಮ ಸಾತ್ವಿಕ ಸಿಟ್ಟು ಸಮಾಜದ ನೈತಿಕ ಧೈರ್ಯವಾಗಿ ಭಾಷಾಂತರಗೊಳ್ಳಬೇಕಾದರೆ ಒಂದು ಹೆಜ್ಜೆ ಮುಂದಿಡಬೇಕಾದ ಅನಿವಾರ್ಯತೆಯಿದೆ, ನೆನಪಿಡಿ.

ಅವಶ್ಯವೆನಿಸಿದಾಗಲೆಲ್ಲ ನಿಮ್ಮನಿಮ್ಮ ಊರುಗಳಲ್ಲಿ ಈ ಅಹಿಂಸಾತ್ಮಕ ಪ್ರಯೋಗ ಮಾಡಿ ನೋಡಿ.



Monday 8 December 2014

ಎರಡು ಕವಿತೆ



ಸಾವೇ..

ಸಣ್ಣ ಗೀರಿದರೂ ಗಾಯವಾಗುವಷ್ಟು ಚರ್ಮ ಸೂಕ್ಷ್ಮಗೊಂಡಿದೆ
ಗೀರಿದ ಮುಳ್ಳೇ ದಿಕ್ಸೂಚಿಯೆಂದು ಜೀವ ನಂಬಿದೆ
ಕತ್ತಲು ಬೆಳಕಿಗಿಂತ ವೇಗವಾಗಿ ಚಲಿಸುತ್ತಿದೆ

ಸುರಿವ ಮಳೆಯ ಹೊರತು
ಎಲ್ಲೋ ದಿಟ್ಟಿಸುವ ಈ ವಿಷಣ್ಣ ಬೆಕ್ಕಿನ ಹೊರತು
ಸಾಕ್ಷಿಯಿಲ್ಲ ನನ್ನ ಬಳಿ
ಬೆಂಕಿ ಬೆಂಕಿಯನೇ ಸುಡುತ್ತಿರುವ ಕುರಿತು

ನಿನ್ನ ಪಾದದ ಸಪ್ಪಳ ಇಲ್ಲೆಲ್ಲೋ ಕೇಳಿಸುತ್ತಿದೆ
ಪ್ರತಿ ಬೆಳಗೂ ಒಂದು ಹೆಜ್ಜೆ ಸನಿಹ ಬರುತ್ತಿರುವೆ..




ಗೊತ್ತಿಲ್ಲ ಪುಟ್ಟ ಹಕ್ಕಿಗೆ

ಒಂದಾನೊಂದು ಕಾಲದಲಿ
ಕಾಮನಬಿಲ್ಲು ಅರಳಿದ ಮುಗಿಲಿನಲಿ
ಕಾರ್ಮೋಡಗಳೇಕೆ ತುಂಬಿಕೊಂಡವು?
ನಿರುಕಿಸುತ್ತ ಅರಳಿದ ಪಾಪೆಗಳ ಕಣ್ಣಲಿ
ಕಸವೂ ನೀರೂ ಏಕೆ ತುಂಬಿತು?
ಹಾರಲೆಂದು ಎತ್ತಿದ ಹಿಮ್ಮಡಿಗಳೇಕೆ
ಒದ್ದೆ ರೆಕ್ಕೆಗಳಿಗಂಜಿ ಸುಮ್ಮನಾದವು?
ದೂರ ನಾಡಿನ ಕರೆಯ ದನಿ
ಯಾವ ದಿಗಂತದಲಿ ಮಾಯವಾಯಿತು?

ಗೊತ್ತಿಲ್ಲ
ಈ ಗಳಿಗೆ ಇಲ್ಲಿ, ಮರು ಗಳಿಗೆ ಅಲ್ಲಿ,
ಹೊಯ್ದಾಡುವ ಜೀವ ಜೋಕಾಲಿ
ಹಾರಿಹೋದ ಗಳಿಗೆ ಯಾವುದೋ,
ಎಲ್ಲೂ ಕಾಣುತಿಲ್ಲ ಪುಟ್ಟ ಹಕ್ಕಿ

Wednesday 3 December 2014

ಲೈಲಾ ಮತ್ತು ಖಲೀಫ - ಜಲಾಲುದ್ದೀನ್ ರೂಮಿ




ಖಲೀಫ ಕೇಳಿದ, ‘ಲೈಲಾ, ನಿಜವಾಗಿ ನೀನು ಅವಳೇನಾ?
ಯಾರಿಗಾಗಿ ಮಜನೂ ಹುಚ್ಚಾಗಿ ಪ್ರಾಣವೊಪ್ಪಿಸಿದನೋ ಅವಳು?
ಎಷ್ಟೋ ಹೆಣ್ಣುಗಳಷ್ಟು ಬೆಳ್ಳಗೂ ಇಲ್ಲ ನೀನು’
ಅವಳುತ್ತರಿಸಿದಳು, ‘ಸುಮ್ಮನಿರು, ನೀ ಮಜನೂ ಅಲ್ಲ
ಮಜನೂ ಕಣ್ಣು ನಿನದಾಗಿದ್ದರೆ
ನೋಟದಲಿ ಎರಡು ಲೋಕವಡಗಿರುತಿತ್ತು
ನೀನು ಎಚ್ಚರದ ಗುಂಗಿನಲ್ಲಿರುವೆ,
ಆದರೆ ಮಜನೂ ತನ್ನೊಳಗೇ ತಾನು
ಪ್ರೇಮದಲಿ ನಿಚ್ಚಳ ಎಚ್ಚರ ದ್ರೋಹ
ಕಟು ಎಚ್ಚರ ನಿದ್ರೆಗಿಂತ ಘೋರ
ಎಚ್ಚರವಿದ್ದಷ್ಟೂ ಪ್ರೇಮಕ್ಕೆ ನಿದ್ರಿಸಿದಂತೆ

ಎಚ್ಚರ ಆತ್ಮವ ಬಂಧಿಸುತ್ತದೆ
ಭ್ರಮೆ, ಚಪಲಗಳಿಗೆ ಬಲಿಯಾಗಿಸುತ್ತದೆ
ಲಾಭನಷ್ಟದ ಚಿಂತೆ, ದುಃಖದ ಭಯ ಇರುವಲ್ಲಿ
ಶುದ್ಧತೆ, ಘನತೆ, ಕಾಂತಿಯ ಕಾಣಲಾಗದು
ಸ್ವರ್ಗದ ದಾರಿಯ ಬಯಕೆ ಹುಟ್ಟಲಾರದು
ಪ್ರತಿ ಭ್ರಮೆಗೂ ಎಚ್ಚರಗೊಳುವ
ಪ್ರತಿ ಊಹೆಯೊಂದಿಗೂ ಸಂಧಾನ ನಡೆಸುವವ
ಎಚ್ಚರವಿದ್ದೂ ನಿದ್ರಿಸಿದಂತೇ..’




             




Friday 28 November 2014

ನಾವೆಯೊಳಗೊಂದು ನಾವೆ



ಒಂದು ಪ್ರಶ್ನೋತ್ತರ:

ರಕ್ತದ ಒತ್ತಡ ಎಂದರೇನು?

ಬದುಕಿರುವವರಿಗೆಲ್ಲ ರಕ್ತ ಒತ್ತಡದಿಂದ ಹರಿಯುತ್ತದೆ. ಆ ಒತ್ತಡವೇ ರಕ್ತ ಚಲನಶೀಲವಾಗಿರುವಂತೆ, ದೇಹದ ಮೂಲೆಮೂಲೆಯ ಅಣುಕಣಗಳನ್ನು ತಲುಪುವಂತೆ ಮಾಡಿದೆ. ರಕ್ತದ ಒತ್ತಡವನ್ನು ಸೃಷ್ಟಿಸುವುದು ಹೃದಯ ಮತ್ತು ಕೆಲ ಮಟ್ಟಿಗೆ ಪೆಡಸುಗೊಂಡ ರಕ್ತನಾಳದ ಗೋಡೆಗಳು. ಹೃದಯ ಪಂಪ್‌ಸೆಟ್ಟಿನ ಕೆಲಸ ಮಾಡುತ್ತದೆ. ಹೇಗೆ ಪಂಪಸೆಟ್ ನೀರನ್ನು ಹೊರದಬ್ಬಿ ಮೇಲೂ, ಕೆಳಗೂ ಹರಿಯುವ ಹಾಗೆ ಮಾಡುವುದೋ ಹಾಗೆ ಹೃದಯ ರಕ್ತದೊತ್ತಡ ಸೃಷ್ಟಿಸಿ ಸುಲಲಿತ ಹರಿವು ಸಾಧ್ಯವಾಗುವಂತೆ ಮಾಡುತ್ತದೆ.


ರಕ್ತನಾಳದ ಗೋಡೆಗಳ ಮೇಲೆ ಒತ್ತಡ ಹೆಚ್ಚಾದರೆ? ರಕ್ತನಾಳ ಕಿರಿದಾದರೆ? 

ಅದು ಪ್ರಾಣಕ್ಕೆ ಅಪಾಯ ತರಬಲ್ಲ ಸಾಧ್ಯತೆಯಿದೆ.


ರಕ್ತದೊತ್ತಡ ಹೆಚ್ಚಾದರೆ ಏನು ಮಾಡಬೇಕು? 

ಅದನ್ನು ಸುರಕ್ಷಿತವಾಗಿ ಇಳಿಸುವ ಮಾತ್ರೆಗಳನ್ನು ಬಳಸಬೇಕು. ಹೃದಯ, ರಕ್ತನಾಳಗಳು ಯರ್ರಾಬಿರ್ರಿ ವರ್ತಿಸದಂತೆ ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕು.


ರಕ್ತದೊತ್ತಡ ಸರಿಯಿರುವವರೂ ಅಕಸ್ಮಾತ್ ಏರು ರಕ್ತದೊತ್ತಡದ ಮಾತ್ರೆಗಳನ್ನು ತಿಂದರೆ?

ಒಂದೆರೆಡು ತಿಂದರೆ ಏನೂ ಆಗುವುದಿಲ್ಲ. ಪ್ರಾಯ ಕಳೆದವರು ಕೆಲವನ್ನು ತಿಂದರೂ ಏನಾಗುವುದಿಲ್ಲ. ಆದರೆ ಮೊದಲೇ ರಕ್ತದೊತ್ತಡ ಕಡಿಮೆಯಿರುವ ಎಳಸು ಜೀವಗಳು ಹತ್ತಾರು ಮಾತ್ರೆ ತಿಂದರೆ ರಕ್ತದೊತ್ತಡ ತೀರಾ ಕಡಿಮೆಯಾಗಬಹುದು. ಹೃದಯಸ್ಥಂಭನವಾಗಿ ಕೊನೆಗೆ ಎದೆಬಡಿತ ನಿಂತೇ ಹೋಗಬಹುದು. ಸಾವೂ ಸಂಭವಿಸಬಹುದು.


ಏರು ರಕ್ತದೊತ್ತಡದ ಮಾತ್ರೆ ತಿಂದದ್ದು ಅಕಸ್ಮಾತ್ ಹುಡುಗಿಯಾಗಿದ್ದರೆ; ಅದೂ ಹಿಂದೂ ಹುಡುಗಿಯಾಗಿದ್ದರೆ; ಮುಸ್ಲಿಂ ಹುಡುಗನನ್ನು ಪ್ರೀತಿಸಿ ಅದಕ್ಕೆ ಕುಟುಂಬದ ವಿರೋಧವಿದ್ದರೆ; ಧರ್ಮಾಧಾರಿತ ರಾಜಕಾರಣವು ಮಧ್ಯೆ ಪ್ರವೇಶಿಸಿದರೆ..?

ಆಗ ನಂದಿತಾ ಎಂಬ ತೀರ್ಥಹಳ್ಳಿಯ ಹದಿನಾಲ್ಕರ ಬಾಲೆಗೆ ಏನಾಯಿತೋ ಅದು; ಸಮಾಜವಾದಿಗಳ ನೆಲೆಯಾಗಿದ್ದ ಮಲೆನಾಡಿನ ತಾಲೂಕಿಗೆ ಏನಾಯಿತೋ ಅದು; ರಾಜಕಾರಣಿಗಳಿಗೆ, ಮಾಧ್ಯಮದವರಿಗೆ ಹೇಗೆ ಗರ ಬಡಿಯಿತೋ ಅದು ಆಗುತ್ತದೆ. ಐದು ಮಿಲಿಗ್ರಾಂ ತೂಕದ ಕೆಲವೇ ಕೆಲವು ಆಮ್ಲೋಡೆಪಿನ್ ಮಾತ್ರೆಗಳು, ಎಲ್ಲ ಒಟ್ಟು ಸೇರಿಸಿದರೆ ಅಬ್ಬಬ್ಬಾ ಎಂದರೂ ನೂರಿನ್ನೂರು ಮಿಲಿಗ್ರಾಂ ಭಾರದ್ದು, ಹೆಚ್ಚೆಂದರೆ ನೂರು ರೂಪಾಯಿ ಬೆಲೆಯಾಗುವಂಥದ್ದು - ಜೀವವುಳಿಸುವ ಬದಲು ಜೀವ ತೆಗೆಯುತ್ತದೆ. ಇಡೀ ಸಮಾಜವೇ ಸುಮ್ಮಸುಮ್ಮನೆ ರೊಚ್ಚಿಗೆದ್ದು, ಮೈ ಕೊಡವಿ, ಕಾಲು ಕೆರೆಯುವಂತೆಯೂ ಮಾಡುತ್ತದೆ.


ಸಹಜ-ಅಸಹಜ


ತೀರ್ಥಹಳ್ಳಿಯ ಹದಿನಾಲ್ಕರ ಬಾಲೆ ಎಷ್ಟೋ ಹದಿವಯದ ಹುಡುಗರಿಗಾಗುವಂತೆ ತನ್ನ ಸಹಪಾಠಿಯೊಬ್ಬನತ್ತ ಸೆಳೆಯಲ್ಪಟ್ಟಳು. ಸೆಳೆತವು ಧರ್ಮ, ಜಾತಿ, ವಯಸ್ಸು ಇದಾವುದನ್ನೂ ಅರಿಯದು. ಆದರೆ ವರ್ತಮಾನ ಅಷ್ಟು ಅಮಾಯಕವಾಗಿಲ್ಲ. ಅದರಲ್ಲೂ ಅನ್ಯಧರ್ಮದ ಇಬ್ಬರು ಎಳೆಯರ ನಡುವಿನ ಸ್ನೇಹವನ್ನು ಸಹಿಸುವಷ್ಟು ಅದು ಉದಾರವಾಗಿಲ್ಲ. ಮನೆಯವರಿಗೆ ಓದುವ ವಯಸ್ಸಿನ ಎಳೆ ಹುಡುಗಿಯ ಪ್ರೇಮ ಪ್ರಕರಣ ಭಯಗೊಳಿಸುತ್ತದೆ.

ಅದು ಸಹಜವೇ.

ರಜೆ ಮುಗಿದು ಶಾಲೆ ಶುರುವಾದ ದಿನ, ಅಕ್ಟೋಬರ್ ೨೯. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಅಂಕ ತೆಗೆದದ್ದು ಕಡಿಮೆಯಾಯಿತೆಂದು ನೊಂದಿದ್ದಳೋ; ಗೆಳೆಯನೊಟ್ಟಿಗೆ ಮಾತಾಡಲೆಂದು ಬೆಟ್ಟ ಹತ್ತಿದಳೋ ಅಂತೂ ಶಾಲೆ ಬಿಟ್ಟು ತೀರ್ಥಹಳ್ಳಿ ಹೊರವಲಯದ ಬೆಟ್ಟ ಏರಿದ್ದಾಳೆ. ಒಬ್ಬಳೇ ಆಗಿ ಭಯಗೊಂಡು ಕೂಗಿದಾಗ ಒಬ್ಬ ಮಹಿಳೆ ನೋಡಿ, ಕರೆತಂದು ಅವಳ ಮನೆ ತಲುಪಿಸಿದ್ದಾರೆ. ಮನೆಯವರಿಗೆ ಗಾಬರಿಯಾಗಿ ಗದರಿರಬಹುದು. ಕೊಂಚ ಚಕಮಕಿಯಾಗಿರಬಹುದು. ಹುಡುಗಿ ಮುನಿಸಿಕೊಂಡಿರಬಹುದು.

ಅದೂ ಸಹಜವೇ. ಆದರೆ ಇಲ್ಲಿಂದ ಮುಂದಿನದು ಅಸಹಜವಷ್ಟೇ ಅಲ್ಲ, ದುರ್ದೈವ ಮತ್ತು ಅನ್ಯಾಯ.

ಒಂದೆಡೆ ಇಂಗ್ಲಿಷ್ ಮೀಡಿಯಂ ಶಾಲೆಯ ಅರ್ಥವಾಗದ ಪಾಠಗಳ ಒತ್ತಡ, ಮತ್ತೊಂದೆಡೆ ಎಳೆಯ ಹೃದಯದ ಪ್ರೇಮವೆಂಬ ಸೆಳೆತ; ಮನೆಯವರ ಪ್ರತಿರೋಧಕ್ಕೆ ಎದುರಾಡಲೂ ಆಗದೇ; ಅದನ್ನು ಒಪ್ಪಿಕೊಳ್ಳಲೂ ಆಗದೇ ಹುಡುಗಿಗೆ ಬದುಕೇ ಸಾಕೆನಿಸಿದೆ. ತಂಗಿಗೆ ಹಾಗೂ ಗೆಳೆಯನಿಗೆ ಪತ್ರ ಬರೆದಿಟ್ಟು, ಮೆಸೇಜು ಮಾಡಿ ಮನೆಯಲ್ಲಿದ್ದ ಅಜ್ಜಿಯ ಏರು ರಕ್ತದೊತ್ತಡದ ಮಾತ್ರೆಗಳನ್ನು ತಿಂದು ಮಲಗಿದ್ದಾಳೆ. ಅಸ್ವಸ್ಥಳಾದಾಗ ತಾಯ್ತಂದೆಯರು ಆಸ್ಪತ್ರೆಗೊಯ್ದಿದ್ದಾರೆ. ಅಪರ ರಾತ್ರಿಯಲ್ಲಿ ಗಂಭೀರ ಸ್ಥಿತಿಯಲ್ಲಿ ಶಿವಮೊಗ್ಗ, ಮಣಿಪಾಲ ಎಂದೆಲ್ಲ ತಿರುಗಿದ್ದಾರೆ. ಕೊನೆಗೆ ಪುಟ್ಟ ಹೃದಯ ಇಷ್ಟು ಪೆಟ್ಟು ತಾಳಲಾರೆನೆಂದು ನಿಂತೇ ಹೋಯಿತು.

ಅವಳು ಕನ್ಯೆಯಾಗಿಯೇ ತೀರಿಕೊಂಡಿದ್ದಳು. ಅತ್ಯಾಚಾರವೂ ಆಗಿರಲಿಲ್ಲ, ಕೊಲೆಯೂ ಆಗಿರಲಿಲ್ಲ. ಆದರೆ ಪಾಲಕರು ಹಾಗೆ ಭಾವಿಸಿದರು. ಆ ಒಂದೆರೆಡು ವಾರ ಎಲ್ಲರೂ ಸಂಯಮ ಕಳೆದುಕೊಂಡಂತೆ ಕಂಡುಬಂದರು. ಪ್ರೇಮಿಗಳ ಧರ್ಮ-ಜಾತಿ ಹುಡುಹುಡುಕಿ ಬಿಂಬಿಸಿ ಧರ್ಮವಾದಿಗಳು ಬೊಬ್ಬೆ ಹೊಡೆದರು. ತೀರ್ಥಹಳ್ಳಿ ಕರ್ಫ್ಯೂನಿಂದ ಮಲಗಿತು. ಎಲ್ಲೆಲ್ಲಿಂದಲೋ ಮಹಿಳೆಯರ ಕರೆತಂದು ‘ಅಪರಾಧಿಗಳನ್ನು ಬಂಧಿಸಿ’ ಎಂದು ಕೂಗಲಾಯಿತು. ಮಾಧ್ಯಮಗಳು ದಿನಪೂರ್ತಿ, ವಾರ ಪೂರ್ತಿ ಪುಂಖಾನುಪುಂಖವಾಗಿ ಸುಳ್ಳು ಊಹೆಗಳ ಹರಿಬಿಟ್ಟವು. ಅನುಮಾನದ ಮುಳ್ಳನ್ನು ಅನ್ಯಧರ್ಮೀಯರ ಮೇಲೆ ಹರಿಸಿ ಅತ್ಯಾಚಾರ, ಕೊಲೆ, ಲವ್ ಜಿಹಾದ್ ಎಂದೆಲ್ಲ ಬಿಂಬಿಸಲಾಯಿತು. ಮೊದಲಿನಿಂದ ಸಾರ್ವಜನಿಕ ಅಭಿಪ್ರಾಯದ ಹಾದಿ ತಪ್ಪಿಸಲಾಯಿತು. ತೀರ್ಥಹಳ್ಳಿ ಕರ್ಫ್ಯೂ ಹೊದ್ದು ಮಲಗಲು ಕೋಮು ರಾಜಕಾರಣಿಗಳದ್ದು ಎಷ್ಟೋ ಅಷ್ಟೇ ಮಾಧ್ಯಮಗಳ ಪಾಲೂ ಇದೆ. ಗಾಯಕಿಯೊಬ್ಬರು ಮಠಾಧಿಪತಿ ತನ್ನಮೇಲೆ ಅತ್ಯಾಚಾರ ನಡೆಸಿದರೆಂದು ದೂರು ನೀಡಿದಾಗಲೂ ಬಾಯಿ ಮುಚ್ಚಿಕೊಂಡಿದ್ದ ಮಾಧ್ಯಮಗಳು ಈಗ ತಾವೇ ತನಿಖಾಧಿಕಾರಿಗಳ, ನ್ಯಾಯಾಧೀಶರ ಸ್ಥಾನದಲ್ಲಿ ನಿಂತು ತೀರ್ಪು ಕೊಡತೊಡಗಿದರು. ನಿಜವಾಗಿ ಎರಡು ಹೃದಯಗಳ ನಡುವೆ ನಡೆದಿದ್ದನ್ನು ಪಾಲಕರ ಸಮೇತ ಎಲ್ಲರೂ ಮುಚ್ಚಿಹಾಕಿದರು.

ತೀರ್ಥಹಳ್ಳಿ ಪ್ರಕರಣದ ಎರಡು ಅನಾಹುತಗಳೆಂದರೆ ಹುಡುಗಿಯ ಪಾಲಕರು ತಪ್ಪು ಮಾಹಿತಿಯ ದೂರು ಮತ್ತು ಹೇಳಿಕೆ ಕೊಡುತ್ತ ರಾಜಕಾರಣದ ದಾಳವಾಗಿ ತಮ್ಮನ್ನು ಬಳಸಿಕೊಳ್ಳಲು ಬಿಟ್ಟದ್ದು ಹಾಗೂ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಒಡೆದು ಸಂಘಟಿಸಿದ್ದು. ಎಬಿವಿಪಿ ಕೇವಲ ಹಿಂದೂ ವಿದ್ಯಾರ್ಥಿಗಳನ್ನು ಸಂಘಟಿಸಿದರೆ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮುಸ್ಲಿಂ ಹುಡುಗರನ್ನು ಸಂಘಟಿಸಿತು. ದೆಹಲಿ ಅತ್ಯಾಚಾರ ಪ್ರಕರಣದ ನಂತರ ದೇಶದ ಎಲ್ಲೆಡೆ ಯುವಜನತೆ ಬೀದಿಗಿಳಿದು ಹೋರಾಡಿದಾಗ ಅಲ್ಲಿ ಜಾತಿ-ಧರ್ಮ ಪ್ರಜ್ಞೆ ನುಸುಳಿರಲಿಲ್ಲ. ಆದರೆ ತೀರ್ಥಹಳ್ಳಿಯಲ್ಲಿ ನಡೆದದ್ದು ಅಸಲಿಗೆ ಅತ್ಯಾಚಾರವೇ ಅಲ್ಲವಾದರೂ ಹುಸಿ ಸಾರ್ವಜನಿಕ ಆಕ್ರೋಶ ಹುಟ್ಟಿಸಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಲಾಯಿತು. ರಾಜಕಾರಣದಿಂದ ದೂರವಿರುವ ಆಕ್ಟಿವಿಸ್ಟರೂ ಸಹಾ ವ್ಯವಧಾನ ಕಳೆದುಕೊಂಡು ಅಪರಾಧಿಯನ್ನು ಬಂಧಿಸುವಂತೆ ಒತ್ತಾಯಿಸತೊಡಗಿದರು.

ಈಗ ನಮ್ಮ ದೇಶದಲ್ಲಿ ಅತ್ಯಾಚಾರ, ಅದರಲ್ಲೂ ಶಾಲಾ ಮಕ್ಕಳ ಮೇಲೆ ನಡೆಯುವುದು ಹೆಚ್ಚುತ್ತಿದೆ. ಹೆಚ್ಚೆಚ್ಚು ವರದಿಯಾಗುತ್ತಿದೆ. ಅದರ ಸುದ್ದಿ ಎತ್ತಿದರೆ ಸಾರ್ವಜನಿಕರ ಆಕ್ರೋಶ ಕೆರಳಿಸಬಹುದೆಂದು ಎಲ್ಲರಿಗೂ ಗೊತ್ತಾಗಿದೆ. ದೆಹಲಿಯಲ್ಲಿ ಕಳೆದ ವರ್ಷ ದೂರು ದಾಖಲಿಸಲಾದ ಅತ್ಯಾಚಾರ ಪ್ರಕರಣಗಳಲ್ಲಿ ೭೨% ‘ಮದುವೆಯಾಗಲು ನಿರಾಕರಿಸಿದ’ ಪ್ರೇಮಿಯ ಮೇಲೆ ಕೊಟ್ಟ ದೂರೇ ಆಗಿದೆ. ಎಂದರೆ ಕಾನೂನು, ಜನಾಭಿಪ್ರಾಯವನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಕರಣವೇ ಅಲ್ಲದ ಪ್ರಕರಣಗಳನ್ನು ಸಾರ್ವಜನಿಕ ಚರ್ಚೆಗೆ ಮುನ್ನೆಲೆಗೆ ತರುವ ಪರಿಪಾಠ ಅವಕಾಶವಾದಿ ರಾಜಕಾರಣಿಗಳಲ್ಲಿ, ಮಾಧ್ಯಮದವರಲ್ಲಿ ಹೇಗೋ ಹಾಗೆ ಜನಸಾಮಾನ್ಯರಲ್ಲಿಯೂ ಕಾಣಿಸುತ್ತಿದೆ. ಇದು ಅತ್ಯಾಚಾರದಷ್ಟೇ ಅಪಾಯಕಾರಿ ಬೆಳವಣಿಗೆಯಾಗಿದೆ.

ತಕ್ಷಣದ ಪ್ರತಿಕ್ರಿಯೆ ನೀಡುವ ಗರಜು ಎಷ್ಟು ಹೆಚ್ಚಿದೆಯೆಂದರೆ ಸಂಯಮವೆಂಬ ಪದ ಮಾಯವಾಗಿದೆ. ಕೆಲವಕ್ಷರ ಕಲಿತ ಕೂಡಲೇ, ಕಂಪ್ಯೂಟರಿನ ಮುಂದೆ ಕುಳಿತ ಕೂಡಲೇ ನಾವು ಜಿಜ್ಞಾಸುಗಳಾಗಿಬಿಡುವುದಿಲ್ಲ. ಪ್ರತಿಕ್ರಿಯೆ ನೀಡುವ ಮುನ್ನ ಅದು ಭಾವಾವೇಶದ ಪ್ರತಿಕ್ರಿಯೆಯಾಗದಂತೆ ಚಣನಿಂತು ಎಡಬಲ ಯೋಚಿಸಬೇಕು. ಅವಸರದ ಕ್ರಿಯೆಗಳು, ಪ್ರತಿಕ್ರಿಯೆಗಳು ಕೇಸನ್ನು, ತನಿಖೆಯನ್ನು ‘ಗಟ್ಟಿ’ ಮಾಡುವ ಬದಲು ದುರ್ಬಲಗೊಳಿಸುತ್ತವೆ. ಈ ಸೂಕ್ಷ್ಮವನ್ನು ಬಾಧಿತರೂ, ಹೋರಾಟಗಾರರೂ ಅರಿಯಬೇಕು.

ಜೊತೆಗೆ ಈ ಪ್ರಕರಣದಲ್ಲಿ ರಾಜ್ಯ ಪೊಲೀಸ್ ಮತ್ತು ಸಿಒಡಿ ಇಲ್ಲಿಯವರೆಗೆ ಪರಸ್ಪರ ಪೂರಕವಾಗಿ, ವಿವೇಕಯುತವಾಗಿ ವರ್ತಿಸಿ ಉತ್ತಮ ಕೆಲಸ ಮಾಡಿವೆ. ಸಂಭವಿಸಬಹುದಾದ ಕೋಮುಗಲಭೆ ತಪ್ಪಿದೆ. ಅವರನ್ನು ಅಭಿನಂದಿಸಬೇಕು.

ಪಾಲಕತನ


ಒಬ್ಬ ಸ್ನೇಹಿತರು ಹೇಳುತ್ತಿದ್ದರು: ‘ಮಕ್ಕಳು ಒಂಥರಾ ಬೆಕ್ಕಿನ ಮರಿ ಹಾಗೆ. ಹೊಸಿಲ ಮೇಲೆ ಕೂತಿರುತ್ತದೆ. ನೀವು ಮುದ್ದಿಸಿ ಮೈಸವರಲು ಕೈ ನೀಡಿದ್ದರೂ ತನ್ನನ್ನು ಬುಟ್ಟಿಯಡಿ ಕವುಚಿ ಹಾಕಲಿಕ್ಕೇ ಬಂದರೇನೋ ಎಂದು ಭಾವಿಸಿ ಟಣ್ಣನೆ ದೂರ ಜಿಗಿಯುತ್ತದೆ. ಹತ್ತಿರ ಹೋದರೆ ಹಿಸ್ಸ್ ಎಂದು ಹೆದರಿಸುತ್ತದೆ. ಅವುಕ್ಕೆ ನಾವು ಅರ್ಥವೇ ಆಗಲ್ಲ.’ ನಿಜ. ನಾವು ಏನೆಂದು, ಬದುಕಿನ ನಾವೆ ಎತ್ತ ಹೊರಟಿದೆಯೆಂದು ತಿಳಿಯುವ ಮೊದಲೇ ನಮ್ಮ ನಾವೆಯೊಳಗೆ ಇನ್ನೊಂದು ಪುಟ್ಟ ನಾವೆ ಹುಟ್ಟಿ ಚಲಿಸಲು ಆರಂಭಿಸಿರುತ್ತದೆ. ಪುಟ್ಟ ನಾವೆಗೋ ಸದಾ ಹೊರ ಜಿಗಿಯುವ ತುಡಿತ, ತವಕ. ಆದರೆ ತಾನು ಸುರಕ್ಷಿತವೆಂದು ನಂಬಿಕೊಂಡ ದೊಡ್ಡ ನಾವೆಗೋ ಪುಟ್ಟ ನಾವೆಗೆ ಎದುರಾಗಲಿರುವ ಬಿರುಗಾಳಿ, ಚಂಡಮಾರುತಗಳ ಕಲ್ಪಿತ ಆತಂಕ. ತೊದಲು ಹೆಜ್ಜೆಗಳನ್ನಿಡಲು ಕಲಿಯುವುದರಲ್ಲಿ ಎದ್ದೆನೋ ಬಿದ್ದೇನೋ ಎಂದು ಕಾಲಡಿ ಗಮನಿಸದೇ ಮುಂದೋಡುವ ಎಳೆಯ ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳುವ ಬಗ್ಗೆಯೇ ಪಾಲಕರಿಗೆ ಸದಾ ಚಿಂತೆ. ಆದರೆ ಈ ಸುರಕ್ಷೆಯ ಚಿಂತೆಯಿಂದ ನಮ್ಮಿಂದ ಶರವೇಗದಲ್ಲಿ ಓಡಿ ದೂರವಾಗುತ್ತಿರುವ ಮಕ್ಕಳ ವಾಸ್ತವ ಸತ್ಯ ಅರಗಿಸಿಕೊಳ್ಳುವುದು ಕಷ್ಟವಾಗಿದೆ.

ಈ ಅವಸರದ ಯುಗದಲ್ಲಿ ಉಳಿದೆಲ್ಲ ಕೌಟುಂಬಿಕ ಸಂಬಂಧಗಳ ಹಾಗೇ ಪಾಲಕತನ ಎನ್ನುವುದು ಮೊದಲಿಗಿಂತ ಹೆಚ್ಚೆಚ್ಚು ಸಂಕೀರ್ಣವಾಗುತ್ತ ನಡೆದಿದೆ. ಆಧುನಿಕ ಬದುಕಿನ ಅವಶ್ಯಕತೆಗಳು, ವಿದ್ಯೆ, ನೌಕರಿ, ಉದ್ಯೋಗ, ಸಾಧನೆ ಇವನ್ನೆಲ್ಲ ಎಳೆಯ ಮನಸುಗಳಲ್ಲಿ ತುಂಬುತ್ತ, ಸಫಲತೆ, ವಿಫಲತೆಗಳ ಚೌಕಟ್ಟು ನಿರೂಪಿಸುತ್ತ, ಅದೇ ಪರಿಧಿಯಲ್ಲಿ ಯಶಸ್ಸು ಪಡೆಯುವಂತೆ ಶ್ರಮಿಸುವುದೇ ಪಾಲಕತನ ಎಂದುಕೊಂಡಿದ್ದೇವೆ. ಮಕ್ಕಳ ವ್ಯಕ್ತಿತ್ವ, ಭವಿಷ್ಯ ಹಾಳಾದರೆ ಅದರ ಹೊಣೆ ಪಾಲಕರ ಮೇಲೆ ಬರುತ್ತದೆ; ಹಾಗೆಂದು ನಮಗಿಷ್ಟ ಬಂದಂತೆ ರೂಪಿಸಹೊರಟರೆ ನಿರ್ಬಂಧ ಎನಿಸಿಕೊಳ್ಳುತ್ತದೆ. ಹೀಗಿರುತ್ತ ನಿರ್ಬಂಧ ಮತ್ತು ಶಿಸ್ತಿನ ನಡುವಿನ ಗೆರೆ ತೆಳುವಾಗುತ್ತ; ಸ್ವಾತಂತ್ರ್ಯ-ಸ್ವೇಚ್ಛೆಯ ಅರ್ಥ ವ್ಯಾಪ್ತಿ ಪರಸ್ಪರ ಅಲುಗಾಡುತ್ತ ಮಕ್ಕಳನ್ನು ಸ್ವತಂತ್ರವಾಗಿ ಬಿಡುವುದು ಸರಿಯೋ? ಅವರ ಮೇಲೊಂದು ಕಣ್ಣಿಟ್ಟು ನಿಯಂತ್ರಿಸುವುದು ಸರಿಯೋ? ಎಂಬ ಗೊಂದಲ ಪಾಲಕರಲ್ಲಿದೆ. ಅತಿ ಸಂಪರ್ಕಯುಗದಲ್ಲಿ ಪ್ರೀತಿ ಪ್ರೇಮದ ಕುರಿತು ಕೊಂಚ ಸಾವಧಾನವಾಗಿರುವುದು; ಕಾಮ ಕುರಿತು ಭಯಮೌಢ್ಯವಿರದ ಆರೋಗ್ಯಕರ ಅಭಿಪ್ರಾಯವನ್ನು ಮಕ್ಕಳು ಹೊಂದುವಂತೆ ಮಾಡುವುದು ಸವಾಲಿನ ಕೆಲಸವಾಗಿದೆ.

ಮಕ್ಕಳ ಹೊಟ್ಟೆಬಟ್ಟೆ ನಿಭಾಯಿಸುವುದಷ್ಟೇ ಪಾಲಕತನವಲ್ಲ. ಅವರ ವ್ಯಕ್ತಿತ್ವ ಬೆಳವಣಿಗೆಯಲ್ಲಿ ನಾವು ವಹಿಸುವ ಪಾತ್ರ ಮತ್ತು ಮಾದರಿ ತುಂಬ ಮುಖ್ಯ. ನಮ್ಮ ಪ್ರತಿ ಚಹರೆಯನ್ನೂ, ಸುಳ್ಳನ್ನೂ, ಮೂರ್ಖತನವನ್ನೂ, ಸಫಲತೆ-ವಿಫಲತೆಯನ್ನೂ, ಇಬ್ಬಗೆಯನ್ನೂ ಬಹುಸೂಕ್ಷ್ಮವಾಗಿ ಎಳೆಯ ಮನಸುಗಳು ವಿಶ್ಲೇಷಿಸುತ್ತಿರುತ್ತವೆ. ಹೀಗಿರುವಾಗ ಅವರಿಗೊಂದು ಮಾದರಿಯಾಗಿ ಬದುಕುವುದು; ಮಕ್ಕಳನ್ನು ಆಮಿಷವಾಗಿ ಸೆಳೆಯಬಲ್ಲದರ ವಿರುದ್ಧ ಅವರಲ್ಲೇ ಅಭಿಪ್ರಾಯ ರೂಪಿಸುವುದು ತುಂಬ ಮುಖ್ಯವಾಗಿದೆ. ಮಕ್ಕಳ ರಕ್ಷಿಸಿಕೊಳ್ಳುವ ಸಕಲ ಹೊಣೆಯೂ ಅವರಿಗಿಂತ ಹೆಚ್ಚು ನಮ್ಮ ಮೇಲೇ ಇದೆ; ಮಕ್ಕಳೆಂದರೆ ನಮ್ಮ ಉಪದೇಶ ಕೇಳುತ್ತ ಇರಬೇಕಾಗಿರುವ ಶ್ರೋತೃವರ್ಗ ಎಂಬ ಭಾವನೆಯಿದೆ. ‘ಮಕ್ಕಳಿಗೇನು ತಿಳಿಯುತ್ತದೆ?’ ಎಂಬ ಧೋರಣೆಯಿಂದ ಅವರ ಮಾತು ಕೇಳಿಸಿಕೊಳ್ಳುವುದೂ ಕಡಿಮೆ. ಆದರೆ ನಮ್ಮ, ಅವರ ನಡುವೆ ತಲೆಮಾರುಗಳ ಕಂದರ ಅಗಲವಾಗುತ್ತ ಹೋಗಲು ಈ ಧೋರಣೆಯೇ ಕಾರಣವಾಗಿದೆ.

ತೀರ್ಥಹಳ್ಳಿ ಬಾಲಕಿಯ ಪಾಲಕರ ಈ ಎಲ್ಲ ಆತಂಕಗಳನ್ನು ಯಾರೂ ಅರ್ಥಮಾಡಿಕೊಳ್ಳಬಹುದು. ಆದರೆ ಪಾಲಕತನದ ಜವಾಬ್ದಾರಿ, ಆತಂಕಗಳ ನಡುವೆ ರಾಜಕೀಯವೂ ನುಸುಳಿದರೆ ಏನು ಅನಾಹುತವಾಗಬಹುದೋ ಅದು ಅಲ್ಲಿ ಆಯಿತು. ಅವರು ಅವಳದು ಕೊಲೆಯೇ ಎನ್ನುತ್ತಾರೆ, ಹಾಗಾದರೆ ಕೊಲೆಗಾರ ಯಾರು? ಎಳೆಯ ಮನಸಿನಲ್ಲಿ ಸಾಯುವಷ್ಟು ಧೈರ್ಯ ತುಂಬಿದ ಹುಂಬ ಪ್ರೇಮವೇ? ಎಳೆಯರ ಪ್ರೇಮವನ್ನು ತಮ್ಮ ಪಾಲಕತನದ ವೈಫಲ್ಯವೆಂದು ಭಾವಿಸಿ ಅದನ್ನು ಮುಚ್ಚಿಟ್ಟುಕೊಳ್ಳಬಯಸುವ ಪಾಲಕರ ಮನಸ್ಥಿತಿಯೇ? ಎಳಸು ಜೀವಗಳು ಬದುಕು ಕೊನೆಗೊಳಿಸಲು ಕಾರಣವಾದ ಸಾಮಾಜಿಕ ಮೌಲ್ಯ ವ್ಯವಸ್ಥೆಯೇ? ಎಲ್ಲದರಲ್ಲೂ ಮೂಗು ತೂರಿಸುವ ಲಾಭನಷ್ಟ ಲೆಕ್ಕಾಚಾರದ, ಒಳ ಹಿಕಮತ್ತುಗಳ ರಾಜಕಾರಣವೇ?

ನಮಗೆ ಕ್ಷುಲ್ಲಕ ಎನಿಸುವ ವಿಷಯ ಮಕ್ಕಳಿಗೆ ಜೀವನ್ಮರಣದ ಪ್ರಶ್ನೆಯಾಗುವುದು ಹೆಚ್ಚುತ್ತಿದೆ. ಇಂಥದ್ದು ಮರುಕಳಿಸದಂತೆ ನೋಡಿಕೊಳ್ಳಬೇಕೆಂದರೆ ಪಾಲಕರು ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಿಮಗೆ ಅನುಮಾನಗಳಿದ್ದರೂ, ‘ನನಗೆ ನಿನ್ನ ಮೇಲೆ, ನಿನ್ನ ಸಾಮರ್ಥ್ಯದ ಮೇಲೆ ವಿಶ್ವಾಸವಿದೆ, ನಿನ್ನ ತೀರ್ಮಾನದ ಮೇಲೆ ಗೌರವವಿದೆ’ ಎಂದೇ ಹೇಳಬೇಕು. ಅಷ್ಟಾದರೆ ಸಾಕು, ಅವರು ತಮ್ಮ ಅಳಲು, ಆತಂಕಗಳ ಬಿಚ್ಚಿಡುತ್ತಾರೆ. ಇಲ್ಲದಿದ್ದರೆ ಎಲ್ಲವನ್ನು ಬಚ್ಚಿಡುತ್ತಾರೆ. ಅವರೊಡನೆ ನಡೆಯುತ್ತ, ಎದ್ದಲ್ಲಿ ನಾವೂ ಏಳುತ್ತ, ಬಿದ್ದಲ್ಲಿ ನಾವೂ ಬೀಳುತ್ತ ಹಿಡಿಯುತ್ತ, ಅವರ ಜೊತೆಜೊತೆಗೆ ಸಾಗುವುದೊಂದೇ ಸೂಕ್ತ ಮಾರ್ಗ.

ನೆನಪಿಡುವ: ಮಕ್ಕಳೂ ಯೋಚಿಸುತ್ತಾರೆ, ಅವರ ಕಾಲ ಒತ್ತಡ ಪರಿಸ್ಥಿತಿಗೆ ತಕ್ಕ ಹಾಗೆ. ಅವರು ಗೊಂದಲಗೊಳ್ಳುತ್ತಾರೆ, ತಮ್ಮ ತಿಳುವಳಿಕೆಗೆ ತಕ್ಕ ಹಾಗೆ. ಪಾಲಕರು ನಿಧಾನವಾಗಿ ಅವರ ಲೋಕದ ತೊಡಕುಗಳ ಜಿಗ್ಗಿನೊಳಗೆ ಬಿಡಿಸಿಕೊಂಡು ಒಳಪ್ರವೇಶಿಸಬೇಕು. ಹಾಗಾದರೆ ಮಾತ್ರ ಇಬ್ಬರೂ ಪಾರು. ಇಲ್ಲದಿದ್ದರೆ ಒಬ್ಬರಲ್ಲ ಒಬ್ಬರಿಗೆ ಗಾಯ.






Sunday 23 November 2014

ಚಿವುಟಿದಷ್ಟೂ ಚಿಗುರು




ರೈಲು ಹತ್ತಿದ ಕ್ಷಣದಿಂದ ಕಾಮೆಂಟರಿ ಶುರುವಾಗಿತ್ತು, ಎಲ್ಲಿ ಹತ್ತಿದೆ? ಈಗ ಎಲ್ಲಿದ್ದೇನೆ? ನಿಲಿಸಿದಾಗ ಏನಾದರೂ ತಿಂದೆನೋ ಇಲ್ಲವೋ? ಹದಿನೆಂಟು ತಾಸಿನ ಪ್ರಯಾಣದಲ್ಲಿ ಏಳೆಂಟು ಕರೆ ಮಾಡಿ ವಿಚಾರಿಸಿದ್ದರು ಮಾವ. ಇಷ್ಟು ದಿನಗಳಿಂದ ಮಾತನಾಡದ ಅಪರಿಚಿತತೆಯ ಕಸಿವಿಸಿ ವಿಚಾರಣೆಯಲ್ಲಿ ಕರಗಿಹೋಯಿತು. ಆದರೆ ಅವರೇ ಕರೆಸಿಕೊಳ್ಳುವವರೆಗೂ ಬರದೇ ಉಳಿದೆನಲ್ಲ, ಅದಕ್ಕೆ ಕಾರಣ ನನ್ನ ಮರೆವೋ, ಬೌದ್ಧಿಕ ವಿಲಾಸವೋ ಅಥವಾ ಉದ್ದೇಶಪೂರ್ವಕ ಅಂತರ ಕಾಯ್ದುಕೊಳ್ಳುವಿಕೆಯೋ ಎಂಬ ಗೊಂದಲ, ಪಾಪಪ್ರಜ್ಞೆ ಕಾಡತೊಡಗಿತು.

ಅಂತೂ ಮುಂಬಯಿ ಬಂತು. ಮಾವ ಸ್ಟೇಷನ್ನಿಗೆ ಕಾರು ತಂದಿದ್ದರು. ಎಸಿ ಸೌಲಭ್ಯವಿಲ್ಲದ ಹಳೆಯ ಮಾರುತಿ ಕಾರು. ಅವರಿಗೆ ಪಿಂಚಣಿಯಾದಾಗ ಬಂದ ಹಣದಿಂದ ಕೊಂಡದ್ದಂತೆ. ಹಳೆಯದಾದರೂ ಭಾವನಾತ್ಮಕ ಸಂಬಂಧವೆಂದು ಇಟ್ಟುಕೊಂಡಿದ್ದರು. ‘ಕಿಟಕಿ ಬಾಗಿಲೆಲ್ಲ ತೆಗೆ, ಎಸಿಗಿಂತ ಒಳ್ಳೆ ತಂಪು ಗಾಳಿ ಬೀಸುತ್ತೆ. ಆದರೆ ಗಾಳಿ ಜೊತೆ ಧೂಳು ಉಚಿತ’ ಎಂದು ನಕ್ಕರು.

ಕಾರಿನ ಭರ್ರೋ ಶಬ್ದದ ನಡುವೆಯೇ ಡ್ರೈವರನಿಗೆ ಹೇಗೆ ಹೋದರೆ ಸುರಕ್ಷಿತ, ಹೇಗೆ ಹತ್ತಿರ ಎನ್ನುತ್ತ ಚಾಲನ ಮೀಮಾಂಸೆಯಲ್ಲಿ ಮುಳುಗಿದ್ದರು. ಇಡೀ ಮುಂಬಯಿಯನ್ನು ರೈಲು ಹಳಿ ಈಸ್ಟ್ ಮತ್ತು ವೆಸ್ಟ್ ಆಗಿ ಹೇಗೆ ಇಬ್ಭಾಗಿಸಿದೆ ಎಂದು ವಿವರಿಸುತ್ತಿದ್ದರು.

ಒಂದು ಹಳೆಯ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸಿನಲ್ಲಿ ಅವರ ಮನೆ. ಹಳೆಯತನ ಎಲ್ಲೆಲ್ಲೂ ಎದ್ದು ಕಾಣುತ್ತಿತ್ತು. ಮಳೆನೀರು ಕರೆಗಟ್ಟಿ ಪಾಚಿ ಹಿಡಿದ ಕಂಪೌಂಡ್ ಗೋಡೆ, ಅಲ್ಲಲ್ಲಿ ಕಾಣುವ ಬಿರುಕು, ಬಿರುಕಿನಲ್ಲಿ ಅರಳಿ ಗಿಡ, ಖಾಯಂ ಮುಚ್ಚಿದಂತಿರುವ ಮನೆ ಕಿಟಕಿಗಳು, ಮುರಿದ ಗೇಟಿನ ಸರಳು ಇವೆಲ್ಲ ಕಟ್ಟಡಕ್ಕೊಂದು ಪ್ರಾಚೀನತೆಯನ್ನು ತಂದುಕೊಟ್ಟಿದ್ದವು. ಕಾರು ಬರುವುದಕ್ಕೂ, ಒಂದು ಕರಿನಾಯಿ ಕಂಪೌಂಡ್ ಹಾರಿ ಸರ್ರನೆ ಒಳಹೋಗುವುದಕ್ಕೂ ಸರಿಯಾಯಿತು. ಸದ್ಯ, ಅದರ ಮೈಮೇಲೆ ಕಾರು ಹರಿಯಲಿಲ್ಲ. ಕಳೆದ ಬಾರಿ ಬಂದಾಗಲೂ ಈ ನಾಯಿಯಿತ್ತೆ? ಅಮ್ಮನೊಡನೆ ಯಾವಾಗಲೋ ಒಮ್ಮೆ ಬಂದಿದ್ದೆನಲ್ಲ, ಎಷ್ಟು ವರ್ಷ ಕೆಳಗೆ?

‘ನಾಯಿ ಹತ್ತನ್ನೆರೆಡು ವರ್ಷ ಬದುಕುತ್ತೆ ಅಂತಾರೆ ಅರುಂಧತಿ. ಆದರೆ ಈ ನಾಯಿಗೆ ಅದೆಷ್ಟು ವರ್ಷವಾಯ್ತೋ ಏನೋ. ಪುಟ್ಟ ತಾನು ಸಣ್ಣವನಿದ್ದಾಗಿಂದ ಇದೂ ಇದೆ ಅಂತಾನೆ. ಒಮ್ಮೆ ಯಾರೋ ಕಾರು ಹರಿಸಿ ಅದರ ಬಾಲ ಮುರಿದು ತುಂಡಾಯಿತು. ಅಷ್ಟೇ ಅಲ್ಲ, ಅದಕ್ಕೀಗ ಕಣ್ಣು ಕಾಣಲ್ಲ. ಕ್ಯಾಟರಾಕ್ಟ್. ಆದರೂ ನಮ್ಮ ಗ್ರ್ಯಾಂಡ್ ಮಾರುತಿ ಸದ್ದಿಗೆ ನಾನು ಬಂದ ಗುರುತು ಹಿಡಿದು ಗೇಟಿಗೆ ಬಂದಿದೆ. ಇಷ್ಟೊತ್ತಿಗೆ ಅದಾಗಲೇ ಒಳಹೋಗಿ ಮೆಟ್ಟಿಲು ಹತ್ತಿ ನಮ್ಮನೆ ಬಾಗಿಲೆದುರು ಇರುತ್ತೆ..’

ಕಿರಗುಡುವ ಕಬ್ಬಿಣದ ಗ್ರಿಲ್ ಷಟರ್ ಎಳೆದು ಮೆಟ್ಟಿಲೇರತೊಡಗಿದೆವು. ಲಿಫ್ಟ್ ಇಲ್ಲದ ಅಪಾರ್ಟ್‌ಮೆಂಟ್. ಹತ್ತಿಳಿದು ಹತ್ತಿಳಿದು ಸವೆದು ಸಿಮೆಂಟು ಮೆಟ್ಟಿಲು ಫಳಫಳ ಹೊಳೆಯುತ್ತಿತ್ತು. ಇಡುವ ಹೆಜ್ಜೆಗಳ ಮೇಲೆ ಗಮನ ಕೇಂದ್ರೀಕರಿಸಿ ಮಾವ ನಿಧಾನ ಹತ್ತುತ್ತಿದ್ದರು. ಒಂದು ಕಾಲೆತ್ತಿ ಮೆಟ್ಟಿಲ ಮೇಲಿಟ್ಟು ಇನ್ನೊಂದು ಕಾಲೆಳೆದು ಅದರ ಜೊತೆ ಕೂಡಿಸಿ, ಸಮತೋಲನವನ್ನು ಆವಾಹಿಸುವವರಂತೆ ಚಣ ನಿಂತು ಮುಂದಿನ ಕಾಲಿಡುತ್ತಿದ್ದರು. ಪಾರ್ಕಿನ್ಸನ್ ಕಾಯಿಲೆಗೆ ನಡಿಗೆಯ ಧೈರ್ಯ ಕಳೆದುಕೊಂಡು ಮಗುವಿನಂತೆ ತೆವಳುತ್ತಿದ್ದ ಅಮ್ಮನ ಕೊನೆಯ ದಿನಗಳ ನೆನಪಾಗಿ ಉಸಿರು ಸಿಕ್ಕಿಕೊಂಡಿತು. ಇವರಿಗೂ ಅದೇ ಇರಬೇಕು.

‘ನೀ ಮುಂದೆ ಹೋಗು, ನಾ ಸೆಕೆಂಡ್ ಫ್ಲೋರ್ ಹತ್ತುದ್ರೊಳಗೆ ನೀನು ಹತ್ತು ಸಲ ಹತ್ತಿಳಿತೀ’ ಎಂದು ಸರಿದು ನಿಂತರು. ನಾಲ್ಕು ಮೆಟ್ಟಿಲೇರುವುದರಲ್ಲಿ ಎದುರೇ ನಿಂತ ಅತ್ತೆ! ಅವರ ಪಕ್ಕ ತನ್ನ ಮುರಿದ ಬಾಲ ಅಲ್ಲಾಡಿಸುತ್ತಾ ನಿಂತ ಕುರುಡು ನಾಯಿ ನನ್ನ ಸುತ್ತಮುತ್ತ ಸುಳಿದು ಮೂಸತೊಡಗಿತು.

ಅತ್ತೆ ಕೈಹಿಡಿದು ಒಳ ಕರೆದರು. ಬೆಚ್ಚನೆಯ ಹಿಡಿತ. ಮತ್ತೆ ಅಮ್ಮನ ನೆನಪು. ರಾತ್ರಿಯಿಡೀ ಪ್ರಯಾಣ ಮಾಡಿ ಬಸ್ಸಿಳಿದು, ಬೆಳಬೆಳಿಗ್ಗೆ ಮೂರು ಮೈಲು ನಡೆದು, ಕೊರೆಯುವ ಕೈಕಾಲುಗಳಲ್ಲಿ ಮನೆ ಪ್ರವೇಶಿಸಿದಾಗ ಸ್ವಾಗತಿಸುತ್ತಿದ್ದ ಅವಳ ಆಪ್ಯಾಯಮಾನ ಬೆಚ್ಚನೆಯ ಸ್ಪರ್ಶ! ಯಾವ ಸುಖಸಂಭ್ರಮಗಳನ್ನೂ ಅನುಭವಿಸದೆ ಎಷ್ಟು ಬೇಗ ಸವೆದು ಹೋದಳಲ್ಲ!

ಮನೆಯೊಳಗೆ ರೆಡ್ ಆಕ್ಸೈಡ್ ನೆಲ ಹೊಳೆಯುತ್ತಿತ್ತು. ಅತ್ತೆಯ ಕೈಚಳಕವೋ, ಮನುಷ್ಯ ವಾಸದ ಲಕ್ಷಣವೋ, ಬಿಲ್ಡಿಂಗ್ ಹೊರಗಿನಿಂದ ಕಾಣುವಷ್ಟು ಹಳತಾಗಿ ಒಳಗಿನಿಂದ ಕಾಣಲಿಲ್ಲ.

ಮುಖ ತೊಳೆದು ಬರುವುದರಲ್ಲಿ ಅತ್ತೆ ಕಾಫಿ ತಂದರು. ‘ಪುಟ್ಟನೆಲ್ಲಿ?’ ಕೇಳಿದೆ. ಅವರಿಗೆ ಮದುವೆಯಾಗಿ ಎಷ್ಟೋ ವರ್ಷದ ನಂತರ ಹುಟ್ಟಿದ ಏಕಮಾತ್ರ ಸಂತಾನ ಪುಟ್ಟ. ಅವನ ಹೆಸರು ಸೂರ್ಯ, ಆದರೆ ಕರೆದ ರೂಢಿ, ಪುಟ್ಟನೆಂಬ ಹೆಸರೇ ನಾಲಿಗೆಗೆ ಬರುತ್ತದೆ. ‘ಅವರಾಗಲೇ ಹೋಗಿಯಾಯ್ತು’ ಎಂದರು ಅತ್ತೆ.




ಮಾವ ಬಾಲ್ಕನಿಯ ಬಿಸಿಲಿಗೆ ಮುಖವೊಡ್ಡಿ ನಿಂತಿದ್ದರು. ಎಣ್ಣೆಹಚ್ಚಿದ್ದ ವಿರಳ ಬಿಳಿಕೂದಲು ಮಿರಿಮಿರಿ ಮಿಂಚುತ್ತಿದ್ದವು. ಅವರ ದೃಷ್ಟಿ ಕಣ್ಣೆದುರಿನ ಕಟ್ಟಡ, ಮರಗಳಾಚೆ ಎಲ್ಲೋ ನೆಟ್ಟಿತ್ತು. ಈ ಮಾವನಿಗೆ ತಮ್ಮ ಏಕೈಕ ತಂಗಿಯ ಮಗಳು ಇದ್ದಕ್ಕಿದ್ದಂತೆ ನೆನಪಾಗಿದ್ದು ಏಕೆ? ಬಂದು ನೋಡಿಹೋಗುವಂತೆ ಮೇಲೆಮೇಲೆ ಪತ್ರ ಬರೆದು ನನ್ನ ಕರೆಸಿಕೊಂಡದ್ದೇಕೆ? ನಿಧಾನ ಬಾಲ್ಕನಿಗೆ ನಡೆದು ಅವರ ಪಕ್ಕ ನಿಂತೆ. ಮ್ಲಾನವೋ, ಶಾಂತವೋ ತಿಳಿಯದ ಮುಖದಲ್ಲಿ ಕಿರುನಗೆ ಸುಳಿಯಿತು.

ಬಾಲ್ಕನಿಯಲ್ಲಿ ಮಣ್ಣು ತುಂಬಿದ ದೊಡ್ಡ ಟ್ರೇ, ಕುಂಡಗಳಲ್ಲಿ ಸೊಂಪಾಗಿ ಬೆಳೆದ ಕೆಂಪು ಹರಿಗೆ ಸೊಪ್ಪು. ಅತ್ತೆ ಊರಿಗೆ ಹೋದಾಗ ಬೀಜ ತಂದಿದ್ದರಂತೆ. ‘ಇದರಿಂದ ಬಹಳಷ್ಟು ಪದಾರ್ಥ ಮಾಡಿ ಉಂಡೆವು, ಈ ಹರಿಗೆ ಚಿವುಟಿದಷ್ಟೂ ಬೆಳೆಯುತ್ತದೆ. ಚಿವುಟಿದರೆ ಸಾಕು ಚಿಗುರುತ್ತದೆ. ಈಗ ಬೀಜವಾಗಲಿ ಎಂದು ಬಿಟ್ಟಿದೇವೆ, ತೆನೆಯಾಗುತ್ತಿದೆ’ ಎಂದರು ಅಲ್ಲೇ ಸುಳಿಯುತ್ತಿದ್ದ ಅತ್ತೆ.

‘ಈ ಹರಿಗೆ ಹೇಗೋ ಹಾಗೇ ಮನುಷ್ಯನಿಗೂ ಬೆಳೆಯಲಿಕ್ಕೆ ಒಂದು ಗಾಯ ಅಥವಾ ನೋವು ಬೇಕು ಅರುಂಧತಿ. ಚಿವುಟಿದಷ್ಟೂ ಚಿಗುರು, ಚಿವುಟುವುದು ನಿಲಿಸಿದರೆ ಬೀಜದ ತೆನೆ. ವಿಪರ್ಯಾಸ, ಆದರೂ ಸತ್ಯ. ಗಾಯ ನಿನ್ನ ಬೆಳೆಸುತ್ತದೆ, ಸೋಲು ಗೆಲುವಿನ ಅರಿವು ಹುಟ್ಟಿಸುತ್ತದೆ, ನಷ್ಟವಾದಾಗ ಲಾಭದ ಕುರಿತು ಚಿಂತಿಸತೊಡಗುತ್ತೀ. ಕಹಿ, ಆದರೂ ಸತ್ಯ, ನೋವೇ ನಿನ್ನ ಮೊದಲ ಗುರು..’

ಗಾಯ ನಿನ್ನ ಬೆಳೆಸುತ್ತದೆ! ಮಾವ ಕವಿಯಂತೆ ಮಾತಾಡುತ್ತಿದ್ದಾರೆ. ಕಡೆಗಾಲದಲ್ಲಿ ಅಮ್ಮ ಮಾತನಾಡುತ್ತಿದ್ದದ್ದನ್ನೇ ಆಡುತ್ತಿದ್ದಾರೆ!

‘ಒಬ್ಬಳೇ ಇರಬೇಕೆಂದಿದ್ದವಳು ಅಂತೂ ಮದುವೆಯಾದಿ ಎಂದು ತಿಳಿಯಿತು. ಯಾವ ಮನುಷ್ಯನೂ ಒಂಟಿಯಾಗಿರಲಾರ. ಮನುಷ್ಯ ಒಂಟಿಯಾಗಿ ಹುಟ್ಟಿ ಒಂಟಿಯಾಗಿ ಸತ್ತರೂ ಗುಂಪಲ್ಲೇ ಬಾಳುವವ. ಆ ಗುಂಪೇ ಸಂಸಾರ. ಸಂಸಾರವನ್ನು ಆಳದ ಕಡಲು ಎನ್ನುತ್ತಾರೆ. ನನಗೆ ಹಾಗೆನಿಸುವುದಿಲ್ಲ. ಅದು ತಳವೇ ಇರದ, ಎಲ್ಲೆಯೇ ಇರದ ಕಡಲು. ಆ ಕಡಲೊಳಗೆ ತೇಲುವ ಚೂರುಚೂರು ನೆಲದಂತೆ ನಾವು. ನಿನ್ನಮ್ಮ ತನ್ನ ಸಂಸಾರದ ಜೊತೆಜೊತೆಗೇ ಜಗದ ಸಂಸಾರ ಕಟ್ಟಿಕೊಂಡಳು. ನೀನು ಜಗದ ಸಂಸಾರವೇ ನಿನ್ನ ಸಂಸಾರ ಎಂದುಕೊಂಡವಳು. ಅದೆಲ್ಲ ಇರಲಿ, ನಿನ್ನ ಕ್ರಾಂತಿ ಎಲ್ಲಿಗೆ ಬಂತು?’

ಅರೆ, ಅಮ್ಮನ ಬಳಿ ಇವರು ಮಾತನಾಡಿದ್ದೇ ಕಡಿಮೆ. ನನ್ನ ನೋಡಿ ಎಷ್ಟೋ ಕಾಲವಾಗಿದೆ. ಆದರೂ ಹೇಗೆ ಎಲ್ಲ ತಿಳಿದುಕೊಂಡರು? ನನ್ನ ವಿಷಯ ಎಲ್ಲಿಂದ ಶುರುಮಾಡಲಿ ಎಂದು ಯೋಚಿಸುವಾಗ ‘ಸ್ನಾನ ಮಾಡಿ ತಿಂಡಿಯೋ, ತಿಂಡಿ ತಿಂದು ಸ್ನಾನವೋ?’ ಎಂಬ ಅತ್ತೆಯ ಕೂಗು ಒಳಕರೆಯಿತು.

ಮಾವ ಎಪ್ಪತ್ತರ ಆಸುಪಾಸಿನಲ್ಲಿದ್ದಾರೆ. ಅತ್ತೆ ಅವರಿಗಿಂತ ಹತ್ತು ವರ್ಷ ಕಿರಿಯರು. ಮಾವ ದೊಡ್ಡ ಆಡಳಿತಾತ್ಮಕ ಹುದ್ದೆ ನಿಭಾಯಿಸಿದವರು, ನಾನಾ ರಾಜ್ಯ ತಿರುಗಿದವರು, ನಾನಾ ಭಾಷೆಗಳನ್ನು ನಿರರ್ಗಳವಾಗಿ ಮಾತಾಡಬಲ್ಲವರು. ದಕ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕಾಲ ಶಾಲು ಹೊದೆಸಿ ಸನ್ಮಾನಿಸಿ ನಿವೃತ್ತಿ ನೀಡುವ ಜೊತೆಗೆ ಬಿಪಿ, ಡಯಾಬಿಟಿಸ್, ಥೈರಾಯ್ಡ್, ಅಸ್ತಮಾಗಳನ್ನೂ ಉಡುಗೊರೆಯಾಗಿ ಕೊಟ್ಟಿತು.

‘ಮೊದಲು ನನಗೆ ಯಾವ ಕಾಯಿಲೆಯೂ ಇರಲಿಲ್ಲ. ರಿಟೈರ್ ಆಗಿ ಕೂತಾಗ ಒಂದೊಂದೇ ಬಂದವು. ಅಪ್ಪ, ಅಬ್ಬೆಗಿದ್ದ ಕಾಯಿಲೆಗಳಲ್ಲಿ ನಿಮ್ಮಮ್ಮ ವನಜಂಗೆ ಕೆಲವು, ನನಗೆ ಕೆಲವು ಬಂದವು. ಅವಳು ಬೇಗ ನೆಲದ ಋಣ ಕಳೆದುಕೊಂಡಳು. ನಾನಿನ್ನೂ ಅನುಭವಿಸುತ್ತ ಇದ್ದೇನೆ. ದಿನಕ್ಕೆ ಕನಿಷ್ಠ ಒಂದು ಡಜನ್ ಮಾತ್ರೆ ನುಂಗುತ್ತೇನೆ. ಸರ್ವೀಸ್ ಪೂರಾ ತಿರುಗಿದ್ದೆ, ರಿಟೈರ್ ಆದ್ಮೇಲೆ ಒಂದಷ್ಟು ಓದು, ಚಾರಿಟಿ ಕೆಲಸ ಮಾಡ್ಬೇಕು ಅಂದ್ಕೊಂಡಿದ್ದೆ. ಆದರೀಗ ಹೀಗೆ. ಐ ಡೋಂಟ್ ಬ್ಲೇಮ್. ಬರೀ ಗುಲಾಬಿ ಬೇಕೆಂದರೆ ಹೇಗೆ? ಅದರ ಜೊತೆ ಉದುರೋ ಎಲೆಯೂ, ಮುಳ್ಳೂ, ಕಡ್ಡಿಯೂ ಇದ್ದೇ ಇರ‍್ತಾವೆ.’

ಮಾವ ನಿಧಾನವಾಗಿ ಜಗಿಯುತ್ತ ಮಾತನಾಡುತ್ತಿದ್ದರು. ಅವರ ಪ್ರತಿ ಮಾತೂ ಗಳಿಗೆ ಬಟ್ಟಲಿನ ಕಣ್ಣಿನಿಂದ ಹನಿ ಇಳಿಯುವಂತೆ ನನ್ನೊಳಗಿಳಿಯುತ್ತಿದ್ದವು. ಮಾವ ವೈಯಕ್ತಿಕ ಅನುಭವಗಳನ್ನು ತತ್ವವಾಗಿಸುತ್ತಿದ್ದರು. ಅಮ್ಮನ ಮಾತೂ ಹೀಗೇ ಇತ್ತು. ಕಾಯಿಲೆಯಂತೆ  ತಿಳುವಳಿಕೆಯೂ ವಂಶಪಾರಂಪರ್ಯವೇ?

ಯಾಂತ್ರಿಕವಾಗಿ ಬಾಯಿಗೆ ತಿಂಡಿ ತುರುಕುತ್ತಿದ್ದ ಅತ್ತೆಯ ಬಳಿ ಕುಳಿತೆ. ಅವರ ತಟ್ಟೆಯಲ್ಲಿ ಏನೇನೋ ಇದ್ದವು. ಅವೆಲ್ಲ ‘ಅವರು’ ನಿನ್ನೆ ರಾತ್ರಿ, ಇವತ್ತು ಬೆಳಿಗ್ಗೆ ಮಾಡಿಕೊಂಡು ಉಳಿಸಿ ಬಿಟ್ಟದ್ದು. ಅತ್ತೆ ಅವರ ಕುರಿತು ಹೇಳತೊಡಗಿದರು.

ಸೂರ್ಯ ಶಾಲಾದಿನಗಳ ತನ್ನ ಸಹಪಾಠಿಯನ್ನೇ ಪ್ರೀತಿಸಿ ಮದುವೆಯಾಗಿದ್ದ. ಜಾತಿ, ಭಾಷೆ ಎಲ್ಲ ಬೇರೆಯಾಗಿದ್ದರೂ ತಕರಾರಿರಲಿಲ್ಲ, ಆದರೆ ಇವರ ಗಮನಕ್ಕೇ ಬರದಂತೆ ರಿಜಿಸ್ಟರ್ ವಿವಾಹವಾಗಿದ್ದ. ಅವಳ ಮನೆಯವರಿಗೂ ಹೇಳಿರಲಿಲ್ಲ. ಕೊನೆಗೆ ಇವರೇ ಮುಂದೆನಿಂತು ಅವಳ ಮನೆಯವರ ಬಳಿ ಮಾತನಾಡಿ ಮನೆ ತುಂಬಿಸಿಕೊಂಡಿದ್ದರು. ಆದರೆ ಅಷ್ಟೆಲ್ಲ ಸಂಭಾಳಿಸಿದರೂ ರೈಲು ಹಳಿ ಇಲ್ಲದೇ ಮನೆ ಪೂರ್ವ-ಪಶ್ಚಿಮ ಎಂದು ಇಬ್ಭಾಗವಾಗಿತ್ತು. ಪಶ್ಚಿಮದ ಇಳಿಜಾರು ಮುದುಕರದು, ಪೂರ್ವದ ಏರು ಮಹಡಿ ಪುಟ್ಟನ ಜೋಡಿಯದು.

‘ನಾ ಮಾಡಿದ್ದು ಯಾವ್ದೂ ಸೇರಲ್ಲ ಅವ್ಳಿಗೆ, ಅದ್ಕೇ ಇವ್ನೂ ತಿನ್ನಲ್ಲ. ರಾತ್ರಿ ಹೋಟಲಲ್ಲಿ ತಿಂದು ಬರ‍್ತಾರೆ ಅಥವಾ ನಮ್ಮದು ಮುಗಿದ್ಮೇಲೆ ಒಳಬಂದು ಏನಾದ್ರೂ ಮಾಡ್ಕೋತಾರೆ. ಬೆಳಿಗ್ಗೆ ನಾ ಏಳುದ್ರಲ್ಲಿ ಇಬ್ಬರೂ ಮಾಡಿ, ತಿಂದು ಹೋಗಿರ‍್ತಾರೆ. ಏಳುವುದು ಲೇಟಾದ್ರೆ ಹಾಗೇ ಹೋಗ್ತಾರೆ ಹೊರ‍್ತು ನಾ ಮಾಡಿದ್ದು ತಿನ್ನುದಿಲ್ಲ. ಅವಳಿಲ್ಲದಾಗ ಮಾತ್ರ ಅವ ನಮ್ಮೊಟ್ಟಿಗೆ ತಿನ್ನುವುದು. ಅವಳು ಕೆಲಸಕ್ಕೂ ಹೋಗ್ತಿಲ್ಲ. ಬೆಳಿಗ್ಗೆ ಅವನ ಜೊತೆನೇ ತವರುಮನೆಗೆ ಹೋಗಿ ಸಂಜೆ ಅವ ಬರುವಾಗ ಅವನೊಟ್ಟಿಗೆ ಬರುತ್ತಾಳೆ. ವಾರಗಟ್ಟಲೆ ಮಾತಿಲ್ಲದೆ ಕಳೆದದ್ದಿದೆ.’

ಮೇಲೆ ಪುಟ್ಟನ ಕೋಣೆಯ ಬಾಗಿಲ ಮೇಲೆ ‘ಡೋಂಟ್ ಡಿಸ್ಟರ್ಬ್’ ಬೋರ್ಡು ನೇತಾಡುತ್ತಿತ್ತು. ಬಾಗಿಲ ಆಚೀಚಿನ ಗೋಡೆ ಮೇಲೆ ಅವಳ ನಾಲ್ಕಾರು ಪೇಂಟಿಂಗ್. ಚಿತ್ರಗಳಲ್ಲಿ ಎಳಸು ರೇಖೆ, ಅವಸರದ ಬೆರಳು ಎದ್ದು ಕಾಣುತ್ತಿತ್ತು. ಆದರೆ ಕಲಾಸಕ್ತ ಮನಸು ಅಲ್ಲಿತ್ತು.

‘ನೀವು ಬೇರೆ ಇರಿ ಎಂದು ಬಾಯ್ಬಿಟ್ಟು ಹೇಳಿದೆವು. ಮುಂಬಯಿಯಲ್ಲಿ ಬೇರೆ ಮನೆ ಮಾಡುವುದು, ಸಾಮಾನು-ಮನೆ-ಕೆಲಸದವರನ್ನು ನಿಭಾಯಿಸುವುದು, ಬಾಡಿಗೆ ಮನೆ ಸಿಕ್ಕುವುದು ಸುಲಭವಲ್ಲ. ಈ ಮನೆ ಅವನ ಆಫೀಸಿಗೆ, ಅವಳ ತವರಿಗೆ ಹತ್ತಿರ. ಪುಕ್ಕಟೆ ಮನೆ, ಪುಕ್ಕಟೆ ಕೆಲಸದವರು ಇದೀವಲ್ಲ, ಬೇರೆ ಹೋಗುವ ಮನಸಿಲ್ಲ. ‘ಮದುವೆಯಾದಮೇಲೆ ನಾನು ಆರಾಮ ಇರಬೇಕು, ಮಕ್ಕಳು ಬೇಡ’ ಎಂಬ ಷರತ್ತಿನೊಂದಿಗೆ ಮದುವೆಗೆ ಒಪ್ಪಿದ್ದಾಳಂತೆ! ಅವಳ ಮೈಂಡ್ ಫುಲ್ ಮ್ಯಾಚೂರ್ ಆದ್ಮೇಲೆ ಆ ಬಗ್ಗೆ ವಿಚಾರ ಮಾಡುವ ಎಂದಿದ್ದಾಳಂತೆ. ಷರತ್ತಿಗೆ ಒಪ್ಪಿಯೇ ಮದುವೆಯಾಗಿರುವುದರಿಂದ ಈಗ ಮಕ್ಕಳುಮರಿ ಎಂದು ಯಾವ ಮಾತೂ ಆಡುವಂತಿಲ್ಲ..’

ಆಡಿದ ಪ್ರತಿ ಶಬ್ದದಲ್ಲಿ ನೋವು ಜಿನುಗುತ್ತಿತ್ತು.



‘ಮಗು ಎಂದರೆ ಒಳಿತಿನ ಪ್ರತೀಕ. ನಾಳಿನ ಪ್ರತೀಕ. ಮಗುವನ್ನು ಬೆಳೆಸುವುದು ಎಂದರೆ ನಮ್ಮೊಳಗಿನ ಒಳಿತನ್ನು, ಮನುಷ್ಯತ್ವವನ್ನು ಬೆಳೆಸುವುದು. ಅದೇ ಬೇಡ ಎನ್ನುವವರಿಗೆ ಏನು ಹೇಳುವುದು?’

ಮಾವನ ದನಿ ಗದ್ಗದವಾಯಿತು. ಥಟ್ಟನೆ ಇವ ನೆನಪಾದ. ‘ನಮಗೊಂದು ಮಗು ಬೇಕು, ನನಗೊಂದು ಮಗು ಬೇಕು’ ಎಂದು ಆರ್ತವಾಗಿ ಕಿವಿಯಲ್ಲಿ ಪ್ರತಿಸಾರಿ ಉಸುರುತ್ತಾನೆ. ಎಲ್ಲಿ ಕರಗಿ ನೀರಾಗುವೆನೋ ಎಂದು ಕೂಡಲೇ ನಾವು ಮಾಡಬೇಕಾದ ಕೆಲಸಗಳ ಯಾದಿ ನೆನಪಿಸುತ್ತೇನೆ. ಮಕ್ಕಳ ಸುರಕ್ಷೆ ಆಟವಲ್ಲ ಎಂದು ನಮ್ಮ ಕೋರ್ಟುಕಟ್ಟೆ ಅಲೆದಾಟ ನೆನಪಿಸಿ ಸುಮ್ಮನಾಗಿಸುತ್ತೇನೆ. ನನ್ನತ್ತೆಗೂ ಹೀಗೇ ಅನಿಸುತ್ತಿದೆಯೆ? ಇವನೆದೆಯಲ್ಲೂ ಇಂಥದೇ ಕಂಪನವಿರಬಹುದೇ?

ಬ್ಯುಟಿಷಿಯನ್ ಕೋರ್ಸ್ ಮಾಡಿರುವ ಅವರ ಸೊಸೆ ಜುವೆಲ್ ಮತ್ತು ಷೂ ಡಿಸೈನರ್ ಅಂತೆ. ಹೊರಗೆ ಹಾಲ್‌ನ ರೇಕಿನಲ್ಲಿ ಅಡ್ಡಾದಿಡ್ಡಿ ಬಿದ್ದಿದ್ದ; ಮೇಲೆ ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿಟ್ಟ ಲೆಕ್ಕವಿಲ್ಲದಷ್ಟು ಚಪ್ಪಲಿ, ಷೂಗಳನ್ನು ಮಾವ ತೋರಿಸಿದರು. ಒಳಬರುವಾಗ ನಾನೂ ಗಮನಿಸಿದ್ದೆ.

‘ನಾನು ಲೆಕ್ಕ ಮಾಡಿದಾಗ ಹತ್ರತ್ರ ನೂರು ಜೊತೆ ಇದ್ದವು, ಈಗ ಇನ್ನೆಷ್ಟಾಗಿದೆಯೋ? ಕೊಳ್ಳುವುದೇ ಒಂದು ಚಟ. ಈ ದುಂದು ನಮಗೆ ಸರಿ ಬರುವುದೇ ಇಲ್ಲ, ನೋಡು ಇಷ್ಟು ತಂದು ರಾಶಿ ಹಾಕಿದರೂ ಯಾವುದರಲ್ಲೂ ತೃಪ್ತಿ ಇಲ್ಲ. ಯಾವುದೂ ಎಕ್ಸೈಟ್ ಮಾಡುವುದಿಲ್ಲ. ಎಷ್ಟಿದ್ದರೂ ಇನ್ನೂ ಬೇಕು, ಮತ್ತೂ ಬೇಕು. ಬಯಸುವುದರಲ್ಲೇ ಬದುಕು ಮುಗಿಯುತ್ತದೆ. ಕೊಂಡದ್ದು ಬಳಸುವುದರೊಳಗೆ ಕಣ್ಣು ಇನ್ನೊಂದು ವಸ್ತುವಿನ ಮೇಲಿರುತ್ತದೆ. ಕೊಂಡು ರಾಶಿ ಹಾಕಿದ್ದನ್ನು ನೋಡುವಷ್ಟು, ಜೋಪಾನ ಇಟ್ಟುಕೊಳ್ಳುವಷ್ಟು ಪುರುಸೊತ್ತು ಇಲ್ಲ. ಆದರೂ ಮತ್ತೆಮತ್ತೆ ಕೊಳ್ಳುವುದು. ಈ ಅತೃಪ್ತಿ ಹುಟ್ಟಿಸುವ ಫ್ರಸ್ಟ್ರೇಷನ್‌ಗೆ ಮಾತಾಡುವುದರಲ್ಲಿ ಸಿಟ್ಟು, ಅಳು, ಮುಂಗೋಪ, ದುಡುಕು. ತಡೆಯಲಾರದೇ ಒಮ್ಮೆ ಹೇಳಿಯೇಬಿಟ್ಟೆ. ಅಷ್ಟೇ, ಅವಳಿಗೆ ಅವಮಾನವಾಯಿತಂತೆ. ಅತ್ತುಕರೆದು ಹೊರಳಿ ರಂಪಾಟ ಮಾಡಿ, ಏಕವಚನದಲ್ಲಿ ಬಾಯಿಗೆ ಬಂದಂತೆ ಬೈದಳು. ಒಂದು ಪತ್ರ ಬರೆದಳು. ಅವತ್ತೇ ಕೊನೆ, ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ, ಎಷ್ಟೇ ಪತ್ರ ಬರಲಿ, ಏನೇ ಬರೆಯಲಿ, ಸುಮ್ಮನಿದ್ದೇನೆ.’

‘ಅವಳಿಗೆ ರಾತ್ರಿಯೆಲ್ಲ ಬಂದು ಸುಸ್ತಾಗಿದೆಯೋ ಏನೋ, ನೀವು ಏನೇನೆಲ್ಲ ಹೇಳಿ ತಲೆಬಿಸಿ ಮಾಡಬೇಡಿ. ಸ್ನಾನ ಮಾಡಿ ಒಂಚಣ ಮಲಗಲಿ, ಇವತ್ತಿಡೀ ಇರ‍್ತಾಳಲ್ಲ,’ ಏನನ್ನೋ ಹುರಿಯುತ್ತ ಅತ್ತೆ ಒಳಗಿಂದ ಕೂಗಿದರು.

‘ಇಲ್ಲ ಅತ್ತೆ, ನಾನು ಬಂದಿದ್ದೇ ನಿಮ್ಮತ್ರ ಮಾತಾಡಲು. ನನಗೆ ದಿನಕ್ಕೆ ಮೂರ್ನಾಲ್ಕು ತಾಸು ನಿದ್ರೆ ಆದರೆ ಸಾಕು. ನಿನ್ನೆ ಟ್ರೈನಲ್ಲಿ ನಿದ್ರೆ ಮಾಡಿದ್ದು ಹೆಚ್ಚಾಗಿದೆ, ಇಲ್ಕೊಡಿ, ನಾ ಹೆಚ್ಚುತ್ತೇನೆ. ನೀವು ಏನೇನೋ ಹಚ್ಕೋಬೇಡಿ, ಸಿಂಪಲ್ ಆಗಿ ಒಂದ್ ಚಿತ್ರಾನ್ನ ಮಾಡಿ ಸಾಕು. ಎಲ್ಲ ಕೂತು ಮಾತಾಡುವ ಸ್ವಲ್ಪ ಹೊತ್ತು..’ ಎಂದೆ.

‘ದಿನಾ ನಾವಿಬ್ರೇ, ಸಿಂಪಲ್ಲೇ ಮಾಡುದು. ನಿನ್ನ ಮಾವಂಗೆ ಶುಗರು, ಬಿಪಿ, ಅಸ್ತಮಾ ಅದೂ ಇದೂಂತ ಬರೀ ಪಥ್ಯದ ಊಟ. ಹಬ್ಬಹುಣ್ಣಿಮೆ ಸಂಭ್ರಮ ಯಾವ್ದೂ ಇಲ್ಲ ನಮಗೆ. ಯಾವ ಕಾಯ್ಲೆನೂ ಇಲ್ಲ, ನೀನು ಬೇರೆ ಮಾಡ್ಕೊ ಅಂತಾರೆ ನಂಗೆ. ಆದ್ರೆ ಅವ್ರನ್ನ ಬಿಟ್ ಒಬ್ರೇ ತಿನ್ನುದು ಹೆಂಗೆ? ಇವತ್ ನಿನ್ನ ನೆಪಕ್ಕೆ ಏನಾದ್ರೂ ಒಂಚೂರು..’

ಅವರ ಕಣ್ಣಲ್ಲಿ ನೀರು ತರಿಸಿದ್ದು ನಾನು ಹೆಚ್ಚುತ್ತಿರುವ ಈರುಳ್ಳಿ ಇರಲಿಕ್ಕಿಲ್ಲ. ಅತ್ತೆಯ ಗಮನವನ್ನು ಅವರ ಆರೋಗ್ಯದ ಗುಟ್ಟೇನು ಅಂತ ಕೇಳಿ ಬೇರೆಡೆ ಸೆಳೆಯಲೆತ್ನಿಸಿದೆ.

‘ಎಂಥ ಗುಟ್ಟೋ ಎಂಥ ಮಣ್ಣೋ. ನೀ ಹಿಂಗೆ ಕೇಳುವಾಗ ನೆನಪಾಗುತ್ತೆ: ನಮ್ಮಪ್ಪನ ಮನೇಲಿ ಪ್ರತಿ ದೀಪಾವಳಿ ಹಬ್ಬಕ್ಕೆ ಒಂದ್ ಉಂಡೆ ಮಾಡಿ ತಿನಿಸ್ತಿದ್ರು, ಅದು ನಿನ್ನಜ್ಜಿ ಮನೆ ಕಡೆನೂ ಇದ್ದಿಕ್ಕು. ಎಂತೆಂತದೋ ಚಕ್ಕೆ ಸೇರ‍್ಸಿ ಕಷಾಯ ಮಾಡ್ತಿದ್ರು. ಆ ಚಕ್ಕೆ ಸಂಗ್ರಹ ಮಾಡಕ್ಕೆ ಬೆಳಕು ಹರಿಯೋ ಮುಂಚೆ ಕತ್ತಲಲ್ಲಿ ಬೆತ್ತಲಾಗಿ ಖಾಲಿಹೊಟ್ಟೇಲಿ ಹೋಗ್ಬೇಕು. ಅದು ನೇಮ. ಕತ್ತಿ ಬಳಸೂ ಹಂಗಿಲ್ಲ, ಹಲ್ಲಿಂದ ಕಚ್ಚಿ ಮರದ ಚಕ್ಕೆ ಎಬ್ಬಿಸಿ ತರಬೇಕು. ಪಾಲೆದ ಮರದ ಚಕ್ಕೆ, ಗಜ್ಜುಗ, ಬೆಳ್ಳುಳ್ಳಿ, ಒಳ್ಳೆ ಮೆಣಸು ಎಲ್ಲ ಹಾಕಿ ಅಜ್ಜಿ ಬಾವಿಕಟ್ಟೆ ಮೇಲಿದ್ದ ಕಲ್ಲಲ್ಲಿ ನುಣ್ಣಗೆ ಅರೀತಿದ್ಲು. ತಿಂದ ಉಂಡೆ ಕಹಿಯೋ, ಒಗರೋ, ರುಚಿಹೀನವೋ ಅದು ಹೇಗಿದೆ ಎಂತ ವರ್ಣಿಸದೇ ಬೆಳಿಗ್ಗೆ ಎದ್ದು ಐದೈದು ಉಂಡೆ ಖಾಲಿ ಹೊಟ್ಟೇಲಿ ನುಂಗಿದರೆ ಇಡೀ ವರ್ಷ ಏನೂ ಕಾಯ್ಲೆ ಬರಲ್ಲ ಅಂತ ಹೇಳ್ತಿದ್ರು. ಅಜ್ಜಿ ಇರೋವಷ್ಟ್ ದಿನ ಈ ನೇಮ ನಡೀತಿತ್ತು. ಆ ದಿನಕ್ಕಾಗಿ - ನಮ್ಮನ್ನು ರೋಗರಹಿತರಾಗಿ ಮಾಡೋ ದಿವ್ಯೌಷಧ ತಗೊಳ್ಳೋ ದಿನಕ್ಕಾಗಿ ನಾವೆಲ್ಲ ಕಾದಿರತಿದ್ವಿ. ಅಜ್ಜಿ ಉಂಡೆನ ನಮ್ಮನೆ ಕೆಲ್ಸಕ್ಕೆ ಬರೋವ್ರಿಗೂ ಕೊಡ್ತಿದ್ರು, ಅದ್ರ ಗುಟ್ಟು ಮಾತ್ರ ಯಾರ‍್ಗೂ ಹೇಳ್ತಿರಲಿಲ್ಲ. ನೀವು ಸಾಯನ್ಸ್ ಓದುವವರು ಇದನ್ನೆಲ್ಲ ನಂಬಲ್ಲ. ಆದ್ರೆ ರೋಗ ತಡೀತಿತ್ತೋ ಇಲ್ವೋ ಅನ್ನೋದಕ್ಕಿಂತ ಏನೋ ಒಂದ್ ತಗಂಡ್ವಿ ಅನ್ನೋ ಧೈರ್ಯ ಹೊಟ್ಟೇಲಿರತಿತ್ತಲ್ಲ, ಅದೇ ಮುಖ್ಯ.’

‘ನಿಜ ಅತ್ತೆ, ಈಗ ನಾವು ಸಿಕ್ಕಿದ್ದೆಲ್ಲ ತಿನ್ನುವವರು. ನಮ್ ಹೊಟ್ಟೇಲಿ ಧೈರ್ಯ ಒಂದು ಬಿಟ್ಟು ಮತ್ತೆಲ್ಲ ಇರುತ್ತೆ..’

‘ನಮ್ಮನೇಲಿ ನೋಡ್ಬೇಕು ನೀನು, ಈ ಇಬ್ರ ಊಟ ತಿಂಡಿಗೆಲ್ಲ ಎಂತೆಂಥದಿರುತ್ತೆ ಅಂತ. ಮೊಳದುದ್ದ ಚಾಕಲೇಟ್, ಐಸ್ ಕ್ರೀಂ, ಚಿಪ್ಸ್, ಪಾನಿಪೂರಿ, ಪಾಸ್ತಾ ಇನ್ನೂ ಏನೇನೋ ತಿಂದು ಹೊಟ್ಟೆ ತುಂಬಿಸ್ಕತಾವೆ. ನಾಲಿಗೇನೇ ಮುಖ್ಯ, ಆರೋಗ್ಯ ಅಲ್ಲ ಅನ್ನೋರಿಗೆ ಏನ್ ಹೇಳುದು?’ ಅತ್ತೆ ಮೆಲ್ಲ ದನಿಯಲ್ಲಿ ಮಾತಾಡುತ್ತಿದ್ದರು, ಯಾರಿಗಾದರೂ ಕೇಳೀತೋ ಎಂಬಂತೆ. ಅಡಿಗೆಮನೆಯಲ್ಲಿ ನಿನ್ನೆ ರಾತ್ರಿ ತಿಂದು ಅರ್ಧಂಬರ್ಧ ಉಳಿಸಿ ಬಿಸಾಡಿದ ಪಾಸ್ಟ್ರಿ ತೋರಿಸಿದರು.

ಕುಕರ್ ಏರಿಸಿ ಮೇಲೆ ಹೊರಟವರು ಕಣ್ಸನ್ನೆಯಲ್ಲೇ ಕರೆದರು. ಮಗನ ಕೋಣೆ ಬಾಗಿಲಿಗೆ ಬೀಗ ಹಾಕಿರಲಿಲ್ಲ. ಸಂತೆ ಮುಗಿದ ನಂತರ  ಸಂತೆಮಾಳ ಇರುವಂತೆ ಪುಟ್ಟನ ರೂಮಿತ್ತು. ವಿಶಾಲ ಕೋಣೆಯ  ನಟ್ಟನಡುವೆ ಸೊಳ್ಳೆಪರದೆ ಇಳಿಬಿಟ್ಟ ಡಬಲ್ ಕಾಟು. ಮೂಲೆ ಟೇಬಲಿನ ಮೇಲೆ ದೊಡ್ಡ ಟಿವಿ. ತೆರೆದಿಟ್ಟ ಕಂಪ್ಯೂಟರು. ಹಾಸಿಗೆ ಮೇಲೆ ತೆರೆದಿಟ್ಟ ಪುಸ್ತಕದಲ್ಲಿ ಒಡವೆ, ಚಪ್ಪಲಿಗಳ ನಾನಾ ಡಿಸೈನುಗಳ ಸ್ಕೆಚ್. ಅರೆಬರೆ ತಿಂದುಳಿದ ದೋಸೆ, ಚಿಪ್ಸ್. ತಟ್ಟೆ ಲೋಟಗಳು ಮಂಚದಡಿ ಇದ್ದವು. ಬಚ್ಚಲುಮನೆಯ ಬಾತ್ ಟಬ್ಬಿನೊಳಗೆ ಒಳಉಡುಪುಗಳು ತೋಯಿಸಿಕೊಂಡು ಬಿದ್ದಿದ್ದವು.

ತೊಳೆವ ಬಟ್ಟೆ, ತಟ್ಟೆಯನ್ನೆಲ್ಲ ಒಂದೆಡೆ ಎತ್ತಿಟ್ಟು ಅತ್ತೆ ಆ ಕೋಣೆಗೆ ಹೊಂದಿಕೊಂಡಂತಿದ್ದ ಹಜಾರದ ಬಾಗಿಲು ತೆರೆದರು. ಅದೊಂದು ಅಸ್ತವ್ಯಸ್ತ ಮಿನಿ ಗೋಡೌನು. ಮಕ್ಕಳಾಟಿಕೆಯ ಸಾಮಾನು, ಟೆಡ್ಡಿಬೇರ್‌ನಿಂದ ಹಿಡಿದು ಗಿಟಾರ್, ಹಾರ್ಮೋನಿಯಂ, ಟೆನಿಸ್ ರ‍್ಯಾಕೆಟ್ ತನಕ ತರಹೇವಾರಿ ವಸ್ತುಗಳು ಅಲ್ಲಿದ್ದವು. ‘ಬೋರ್ ಆಯಿತೆಂದರೆ ಶಾಪಿಂಗ್ ಹೋಗುವುದು; ಕಂಡದ್ದು ತರುವುದು; ಕೊನೆಗೆ ಇಲ್ಲಿ ತಂದು ಒಟ್ಟುವುದು’ ಎನ್ನುತ್ತ ಅತ್ತೆ ಜೋಡಿಸಿಡತೊಡಗಿದರು.

ಸಪೂರ ಮೈಯ ಚುರುಕು ಕಣ್ಣುಗಳ ಅತ್ತೆಯನ್ನು ಕೇಳಬೇಕೆನಿಸಿತು: ‘ನೀವು ಆಗ್ಲೆ ಪಿಯುಸಿ ಮಾಡಿದ್ರಂತೆ. ಮನಸ್ಸು ಮಾಡಿದ್ರೆ ಏನಾದ್ರೂ ಕೆಲಸಕ್ ಸೇರ‍್ಬೋದಿತ್ತು. ಮುಂದೆ ಓದ್ಬೋದಿತ್ತು. ಹೌಸ್‌ವೈಫ್ ಆಗೇ ಉಳಿದದ್ದು ಏಕೆ?’

‘ಗಂಡ ಹೆಂಡ್ತಿ ಮಧ್ಯ ಗೌರವ, ಅರ್ಥ ಮಾಡ್ಕೊಳೋದು ಇದ್ರೆ ಗಂಡ ಹೊರಗೆ ದುಡಿದು ತಂದು, ಹೆಂಡ್ತಿ ಅದನ್ನ ನಿಭಾಯಿಸುವ ಹೌಸ್‌ಮೇಕರ್ ಕೆಲಸ ಮಾಡೋದ್ರಲ್ಲಿ ಯಾವ ಕಷ್ಟನೂ ಕಾಣ್ಸಲ್ಲ ನಂಗೆ. ಯಾವ್ದು ಹೆಚ್ಚು? ಯಾವುದು ಕಮ್ಮಿ? ಹೊರಗೆ ದುಡಿಯುವಷ್ಟೇ ಮುಖ್ಯ ಮನೆ ಸುಧಾರಿಸೋದು. ನನಗೆ ಇದು ಯಾವತ್ತೂ ಕಮ್ಮಿ ಅನ್ಸಿಲ್ಲ. ಇದು ಬಿಟ್ಟು ಬೇರೆ ಇನ್ನೇನಾದರೂ ಮಾಡಬೇಕು ಅಂತ್ಲೂ ಅನಿಸಿಲ್ಲ. ಆದ್ರೆ ಅವನೇ ಸರ್ವಸ್ವ ಅಂತ ಒಬ್ಬ ಮಗನ್ನ ಬೆಳೆಸೋದ್ರಲ್ಲಿ ಅಷ್ಟು ಸಮಯ, ಶ್ರಮ ಹಾಕಿದ್ವಲ್ಲ, ಅದು ವ್ಯರ್ಥವಾಯ್ತಾ ಅಂತ ಇತ್ತೀಚೆಗೆ ಅನುಮಾನ ಬರ್ತಿದೆ. ನಿಮ್ಮಮ್ಮ ನಿಮ್ಮಪ್ಪನ್ನ ಮದುವೆಯಾದದ್ದು ಇವರ‍್ಯಾರಿಗೂ ಇಷ್ಟ ಇರಲಿಲ್ಲ. ಜಾತಿಯಲ್ಲ, ಕೆಲಸವಿಲ್ಲ, ಬರೀ ಪತ್ರಿಕೆ ನಡೆಸೋನು ಅಂತ ಸಸಾರ. ಆದ್ರೆ ನಿಮ್ಮಮ್ಮ ನಾಕು ಜನರಿಗಾಗಿ ಬಾಳಿ ಸಾಧನೆ ಮಾಡಿದಳು. ಇವತ್ತು ಅವ್ಳನ್ನ ನೂರಾರು ರೈತರು ನೆನಪು ಮಾಡ್ಕೋತಾರೆ. ನಿನ್ನನ್ನು ಹೀಗೆ ತಯಾರು ಮಾಡಿದಳು. ಆದ್ರೆ ನಾವಂದುಕೊಂಡ ಹಾಗೆ ಪುಟ್ಟನನ್ನ ರೂಪಿಸೋಕೆ ಆಗ್ಲಿಲ್ವಾ ಅನಿಸುತ್ತೆ. ಕೊನೆಗೆ ಹೀಗೂ ಅನ್ಸುತ್ತೆ, ನಾವಂದುಕೊಂಡ ದಾರೀಲೇ ಮಕ್ಕಳು ಯಾಕೆ ಇರಬೇಕು? ಅವ್ರಿಗೆ ಸರಿ ಕಂಡಂತೆ ಅವರು ಇರ‍್ತಾರೆ. ಪುಟ್ಟನಿಗೇನೂ ಅವಳ ಜೊತೆ ಸಮಸ್ಯೆಯಿಲ್ಲ ಅಂತಾದರೆ ಇರಲಿ ಅವರು, ಅವರಿಗೆ ಹೇಗೆ ಬೇಕೋ ಹಾಗೆ. ನಾವ್ಯಾಕೆ ನಮ್ಮ ಅಳತೆಪಟ್ಟಿ ಹಿಡಿದು ಅಳೆಯಬೇಕು? ನಿನ್ನ ಮಾವನ ಹತ್ರ ಇದ್ನೇ ಹೇಳ್ತಾ ಇರ್ತೀನಿ. ಆದರೆ ಅವರು ಸಮಾಧಾನನೇ ಮಾಡ್ಕಳಲ್ಲ.’

ಕಹಿಉಂಡೆಯನ್ನು ಅದರ ರುಚಿ ವರ್ಣಿಸದೇ ಹಾಗೇ ನುಂಗಿದರೆ ರೋಗ ಬರುವುದಿಲ್ಲ.. ಓಹೋ ಅತ್ತೆ, ನಿಮ್ಮ ಆರೋಗ್ಯದ ಗುಟ್ಟು ಗೊತ್ತಾಯಿತು.

‘ಮನುಷ್ಯನಿಗೆ ಬೇಕಾಗುವುದು ಒಂದು ಸೆನ್ಸ್ ಆಫ್ ಬಿಲಾಂಗಿಂಗ್ ಅರುಂಧತಿ. ನಾನು ಒಬ್ಬರಿಗೆ, ಒಂದು ಕುಟುಂಬಕ್ಕೆ, ಸಮಾಜಕ್ಕೆ ಸೇರಿದ ವ್ಯಕ್ತಿ ಎನ್ನುವುದು ಒಂದು ಭದ್ರತೆ ಹುಟ್ಟಿಸುತ್ತೆ. ಅದಕ್ಕೇ ಫ್ಯಾಮಿಲಿ ವ್ಯವಸ್ಥೆ ಉಳಕೊಂಡು ಬಂದಿರೋದು. ಯಾರಿಗೋ ಸೇರಿದವ ಎಂಬ ಕನಿಷ್ಟ ಬೆಚ್ಚನೆಯ ಭಾವನೆನೂ ಇಲ್ದಿದ್ರೆ ಮನುಷ್ಯ ಬದುಕೋಕಾಗಲ್ಲ. ಅವರವರ ಪಾತ್ರಗಳು ಕುಟುಂಬದಲ್ಲಿ ಏನೇ ಇರಲಿ, ಸೆನ್ಸ್ ಆಫ್ ಬಿಲಾಂಗಿಂಗ್ ಇದ್ರೆ ಅಲ್ಲಿ ವಂಚನೆ, ತಾರತಮ್ಯದ ಪ್ರಶ್ನೆ ಹುಟ್ಟಲ್ಲ. ಒಂದೇ ಮನೇಲಿದ್ದೂ ಈ ಭಾವನೆಯೇ ಇಲ್ಲ ಅಂದ್ರೆ ಬದುಕು ಬರೀ ನಾಟಕ. ಅದು ಹೆಚ್ಚು ದಿನ ನಡೆಯಲ್ಲ.’

ಮಾವ ಯಾವಾಗಲೋ ಮೇಲೆ ಬಂದು ನಿಂತಿದ್ದರೆಂದು ಅವರು ಉತ್ತರಿಸಿದಾಗಲೇ ಗೊತ್ತಾಗಿದ್ದು. ಕುಕರ್ ನಾಲ್ಕನೆಯ ಸೀಟಿ ಹೊಡೆಯಿತು. ಅತ್ತೆ ಅನಿವಾರ್ಯವಾಗಿ ಕೆಳಗಿಳಿದರು. ಅವರ ಹಿಂದೆ ನಾವು.



ಅಮ್ಮ ಮಾಡುತ್ತಿದ್ದ, ನಾನು ಮರೆತೇಬಿಟ್ಟ ಒಂದೆರೆಡು ಪದಾರ್ಥಗಳನ್ನು ಮಾಡುತ್ತಿದ್ದರು ಅತ್ತೆ. ಹೇಗೆ ಮಾಡುವುದು ಎಂದು ಕೇಳಿದ್ದೇ ಒತ್ತಾಯದಿಂದ ಪುಸ್ತಕ ಪೆನ್ನು ಕೊಟ್ಟು ರೆಸಿಪಿ ಬರೆಸಿದರು. ಅಂದು ಮಾಡದ ಕೆಲ ಪದಾರ್ಥಗಳ ರೆಸಿಪಿಯನ್ನೂ ‘ತುಂಬ ಸುಲಭ, ಮಾಡಿ ನೋಡು ಬೇಕಾದ್ರೆ, ಆಮೇಲೆ ಹೇಳಕ್ಕೆ ನೆನಪಾಗುತ್ತೋ ಇಲ್ವೋ’ ಎಂದು ನೆನಪು ಮಾಡಿಕೊಳ್ಳುತ್ತ ಹೇಳಿಹೇಳಿ ಬರೆಸಿದರು.

‘ಊಟ ಶುರುಮಾಡು ಅರುಂಧತಿ. ನೀ ಬಂದಿದಿ ಅಂತ ಇವತ್ತು ನಾನು ಪಾಯ್ಸ ಕುಡಿತಿನಿ. ನನಗೂ ಒಂದು ಲೋಟ ಪಾಯಸ ಕೊಡೇ. ಶುಗರ್ ಹೆಚ್ಚಾಗಿ ಮೈಗೆ ಗೊದ್ದ ಮುತ್ತಿದ್ರೆ ಮುತ್ತಲಿ..’

ಹೆಸರು ಬೇಳೆ ಪಾಯಸ ಕುಡಿದ ಖುಷಿಗೋ ಎಂಬಂತೆ ಇದ್ದಕ್ಕಿದ್ದಂತೆ ಒಂದು ಶಾಂತಭಾವ ಮಾವನ ಮುಖವನ್ನು ಆವರಿಸಿತು.

‘ಅರಳುವ ಹೂವನ್ನು ಪ್ರೀತಿಸುವುದು ಸುಲಭ. ಆದರೆ ಉದುರುವ ಎಲೆಯನ್ನು ಪ್ರೀತಿಸುವುದು ಕಷ್ಟ. ತನ್ನ ಮಾಗುವಿಕೆಯ ಕಾರಣವಾಗಿ ಗಿಡದಿಂದ ಬೇರಾದ ಎಲೆ ಪತನದ ದಾರಿ ಕಂಡುಕೊಂಡು ಬೇರು ಸೇರಿ ಗೊಬ್ಬರವಾಗಲೇಬೇಕು. ಮತ್ತೊಂದು ಎಲೆ ಚಿಗುರಲು ಅನುವು ಮಾಡಿಕೊಡಬೇಕು. ಇದು ಪ್ರಕೃತಿ ನಿಯಮ. ಉದುರುವ ಕಾಲದಲ್ಲಿ ಒಬ್ಬರಿಗೊಬ್ಬರು ಆಧಾರವಾಗಿದೀವಲ್ಲ, ಈ ನಮ್ಮ ಬದುಕು ನದಿಯ ಮೇಲೆ ಬಾಗಿದ ತೆಂಗಿನಮರವಿದ್ದ ಹಾಗೆ. ಒಂದೇ ಒಂದು ಬಲವಾದ ಗಾಳಿ ಬೀಸಿದರೆ ಬದುಕು ಒಂದೋ ನೆಲದ ಪಾಲು ಅಥವಾ ನದಿಯ ಪಾಲು. ಜೀವನ ಇಷ್ಟು ಸೂಕ್ಷ್ಮವಾಗಿರುವಾಗ ನಮಗಾಗಿ ನಾವು ಬದುಕುತ್ತೇವೆ, ನಮ್ಮಿಂದಲೇ ನಾವು ಬದುಕಿದೆವು ಅನ್ನುವುದು ತಪ್ಪು.

ನೋಡು. ಈ ಕಟ್ಟಡ ಅಳಿಯಲಿಕ್ಕೆ ಬಂತು. ಮುಂಬಯಿಯ ಎಷ್ಟೋ ಕಟ್ಟಡಗಳ ಹಾಗೆ ಇದೂ. ೩೫ ವರ್ಷ ಕೆಳಗೆ ತಗೊಂಡೆವು. ಅದೀಗ ಶಿಥಿಲವಾಗಿದೆ, ಅಳಿದು ಬೇರೆ ಕಟ್ಟಬೇಕು ಎನ್ನುತ್ತಾನೆ ಬಿಲ್ಡರ್. ಇರುವುದನ್ನು ಕಳಚಲು ಒಂದು ವರ್ಷ, ಮತ್ತೆ ಕಟ್ಟಲು ಮೂರ್ನಾಲ್ಕು ವರ್ಷ ಬೇಕು. ಈಗಿರುವುದಕ್ಕಿಂತ ಹೆಚ್ಚು ಅಂತಸ್ತಿಗೆ ಪರ್ಮಿಶನ್ ತಗೋತಾನೆ. ಫ್ಲೋರ್ ಏರಿಯಾ ಹೆಚ್ಚು ಮಾಡಿಸಿ ಕಟ್ಟುತ್ತಾನೆ. ಕಟ್ಟುವ ಕೆಲಸ ಮುಗಿಯುವವರೆಗೆ ಬೇರೆಡೆ ಉಳಿಯಲು ನಮಗೆ ಬಾಡಿಗೆ ಹಣ ಕೊಡುತ್ತಾನೆ. ಪೂರ್ತಿ ಮುಗಿದ ಮೇಲೆ ಒಂದು ರೂಮು ಹೆಚ್ಚಿಗೆಯೇ ಕೊಡ್ತಾನೆ. ಈಗಿರುವುದಕ್ಕಿಂತ ಹೆಚ್ಚು ಮಹಡಿ ಕಟ್ಟಿ, ಮಾರಿ ಲಾಭ ಮಾಡುತ್ತಾನೆ. ನಾವಿನ್ನೆಷ್ಟು ವರ್ಷ ಬದುಕಿಯೇವು, ನಮಗೆ ಅಳಿದು ಕಟ್ಟುವ ಅವಶ್ಯಕತೆಯಿಲ್ಲ ಎನ್ನುವಂತೇ ಇಲ್ಲ. ಇದನ್ನು ಕೆಡವಲು ಒಪ್ಪಲೇಬೇಕು. ಹಳೆಯ ಪಿಲ್ಲರ್, ಬೀಮ್ ಬದಲಾಯಿಸಿ ಕಟ್ಟಡ ನವೀಕರಣಗೊಳ್ಳಬೇಕು. ಎಂದರೆ ಶಿಥಿಲವಾದ ಹೆಗಲಿಂದ ಭಾರವನ್ನು ಸಮರ್ಥ ಹೆಗಲಿಗೆ ವರ್ಗಾಯಿಸಬೇಕು. ಮಕ್ಕಳೆಂದರೆ ಅಂಥ ಪಿಲ್ಲರ್, ಬೀಮ್, ಹೆಗಲೇ ತಾನೇ?

ಒಬ್ಬ ತತ್ವಜ್ಞಾನಿ - ಬೋರ್ಗ್ ಇರಬೇಕು - ಹೇಳ್ತಾನೆ: ನಾವು ಏನನ್ನು ಕಳಕೊಂಡಿದೀವೋ ಅದು ಮಾತ್ರ ನಮ್ಮದು ಅಂತ. ದೇರ್ ಆರ್ ನೋ ಪ್ಯಾರಾಡೈಸಸ್ ಅದರ್ ದ್ಯಾನ್ ದಿ ಲಾಸ್ಟ್ ಪ್ಯಾರಾಡೈಸಸ್. ಇದು ಅರಗಿಸ್ಕೋಬೇಕಾದ ಸತ್ಯ. ನಾವು ಸುಳ್ಳನ್ನು ನಮಗೆ ಪ್ರಿಯವಾಗಿದ್ದಾದರೆ ಗಟಗಟ ಕುಡಿತಿವಿ. ಆದರೆ ಕಹಿಯಾಗಿದ್ದನ್ನು ಗುಟುಕುಗುಟುಕಾಗಿ ಕುಡಿತಿವಿ. ಗುಟುಕಿನ ಕಹಿ ತಡಕೊಳ್ಳಲಿಕ್ಕೆ ಮಗು, ಅರುಂಧತಿ, ನಿನ್ನತ್ರ ಇಷ್ಟು ಮಾತಾಡಿದೆ. ನಮಗೀಗ ಹೆಚ್ಚು ಆಯ್ಕೆ ಇಲ್ಲ, ಕೇಳು, ನಮ್ಮ ಮಗನ ಜೊತೆಯ ಸಂಬಂಧದ ಕನ್ನಡಿ ಒಡೆದಿದೆ. ಕೂಡಿಸಲು ಸಾಧ್ಯವಿಲ್ಲದ ಹಾಗೆ. ಕೂಡಿಸಹೊರಟರೆ ಕೈ ಗಾಯವಾಗುತ್ತದೆ, ಬಿಂಬವೂ ಒಡಕಲಾಗೇ ಮೂಡುತ್ತದೆ. ಆದರೆ ಒಂದು ಆಸೆ, ಘನತೆಯಿಂದ ಬದುಕಿದೆವು, ಘನತೆಯಿಂದ ನೋವನುಭವಿಸಿದೆವು, ಘನತೆಯಿಂದ ಸಾಯಬೇಕು ಎಂದು. ಅದಕ್ಕೇ..’



ನದಿ ರಭಸದಿಂದ ಹರಿಯತೊಡಗಿತು..

‘ನಾವೊಂದು ವೃದ್ಧಾಶ್ರಮ ನೋಡಿದ್ದೇವೆ. ಒಂದಷ್ಟು ದುಡ್ಡು ಡೆಪಾಸಿಟ್ ಮಾಡಿದರೆ ಸಾಯುವ ತನಕ ನೋಡಿಕೊಳ್ಳುತ್ತಾರೆ. ಈ ಮನೆ ನಮಗೆ ಬೇಡವೆಂದರೆ ಬಿಲ್ಡರ್ ದುಡ್ಡು ಕೊಡುತ್ತಾನೆ. ಅದು ಎರಡು ಕೋಟಿ ಮೀರುತ್ತದೆ. ಆ ಹಣದಲ್ಲಿ ಒಂದು ಭಾಗ ನಾವು ನೋಡಿದ ವೃದ್ಧಾಶ್ರಮಕ್ಕೆ ಕೊಟ್ಟು ಇರುವತನಕ ಅಲ್ಲಿರುವುದು. ನಮ್ಮ ವ್ಯವಸ್ಥೆ ಆಯಿತು. ಇನ್ನು ಪುಟ್ಟನ ಜವಾಬ್ದಾರಿ? ಅದು ನಮ್ಮದಲ್ಲ, ಅವ ಸರ್ವ ಸ್ವತಂತ್ರ. ಆದರೆ ಇತ್ತೀಚೆಗೆ ವನಜ ಬಹಳ ನೆನಪಾಗುತ್ತಿದ್ದಾಳೆ. ಮನೆಬಿಟ್ಟು ಹೋದವಳಿಗೆ, ತಾಯ್ತಂದೆಯರ ಶ್ರಾದ್ಧದ ದಿನವಾದರೂ ಬರದವಳಿಗೆ ಏಕೆ ಪಾಲು ಕೊಡಬೇಕು ಎಂದು ಅಪ್ಪಅಬ್ಬೆ ಸತ್ತಾಗ ಅವಳ ಪಾಲನ್ನು ಗದ್ದೆ ಗೇಯುತ್ತಿದ್ದ ತುಕ್ರನಿಗೆ ಕೊಟ್ಟಿದ್ದೆ. ಆಗ ಹೇಳದೇ ಹೋದವಳು, ನಮ್ಮ ನೆನಪೂ ಆಗದವಳು ಎಂದು ಅಷ್ಟು ಸಿಟ್ಟಿತ್ತು. ಅವಳಷ್ಟು ವಿಚಾರ, ತಿಳುವಳಿಕೆ ನನಗಿರಲಿಲ್ಲವಾಗಿ ಅವಳು ಅರ್ಥವೇ ಆಗಲಿಲ್ಲ. ನಿನ್ನಪ್ಪ ಎನ್‌ಕೌಂಟರ್ ಹೆಸರಲ್ಲಿ ಸತ್ತು ಅವಳು ಏಕಾಂಗಿಯಾದಾಗ ಒಮ್ಮೆ ಬಂದಿದ್ದಳು. ಆಗಲೂ ಕಟುವಾಗಿಯೇ ಉಳಿದೆ. ಆದರೆ ಈಗ ವನಜನಿಗೆ ಕಾಲವೂ, ವ್ಯವಸ್ಥೆಯೂ, ಕುಟುಂಬವೂ ಒಟ್ಟಿಗೆ ಅನ್ಯಾಯ ಮಾಡಿದೆವು ಎಂಬ ಭಾವ ಬಲವಾಗುತ್ತಿದೆ. ಅದಕ್ಕೇ ಹೇಳುತ್ತಿರುವೆ ಕೇಳು: ನೀನು ಸ್ಲಂ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವುದು, ಅನಾಥ ಮಕ್ಕಳಿಗಾಗಿ ನಿಮ್ಮ ಸಂಘಟನೆ ಒಂದು ಹಾಸ್ಟೆಲು ನಡೆಸುತ್ತಿರುವುದು ಇತ್ಯಾದಿ ನಾನಿದ್ದ ಅಧಿಕಾರದ ಸ್ಥಾನದಿಂದ ಎಲ್ಲ ಮಾಹಿತಿ ನನಗೆ ತಿಳಿದಿದೆ. ನಿನ್ನ ಕೆಲಸದ ಜೊತೆಗೆ ನನಗೆ ಸಹಮತವಿದೆ. ಎಂದೇ ಇಲ್ಲಿ ಕೇಳು, ನಿನ್ನ ಸಂಘಟನೆಯ ಗೆಳೆಯರೊಂದಿಗೆ ಮಾತಾಡು. ವೃದ್ಧಾಶ್ರಮಕ್ಕೆ ಕೊಟ್ಟ ಮೇಲೂ ಬಹಳ ದುಡ್ಡು ಉಳಿಯುತ್ತದೆ. ಹೆಚ್ಚುವರಿಯಾದ ಹಣವನ್ನು ನಿಮ್ಮ ಸಂಘಟನೆಗೋ, ಬಡಮಕ್ಕಳ ವಿದ್ಯಾಭ್ಯಾಸಕ್ಕೋ ಬಳಸಿಕೊ ಅಥವಾ ನಿಮ್ಮಮ್ಮನ ಹೆಸರಿನ ಒಂದು ಟ್ರಸ್ಟ್ ಮಾಡು ಅಥವಾ..’

ಹೇಳಹೇಳುತ್ತ ಮಾವನ ದನಿ ಕ್ಷೀಣವಾಯಿತು. ಕೊನೆಯ ತುತ್ತು ತಿಂದು ಎದ್ದವರು ಹತ್ತಿರ ಬಂದು ಆಡುವ ಮಾತೆಲ್ಲ ಮುಗಿಯಿತೋ ಎಂಬಂತೆ ತಲೆ ನೇವರಿಸಿದರು. ‘ನಿಧಾನ ಊಟಮಾಡು’ ಎಂದೆನ್ನುತ್ತ ಕೈ ತೊಳೆಯಲು ಒಳಹೋದರು.

‘ಆದರೆ ಅರುಂಧತಿ, ಒಂದು ಮಾತು ಹೇಳಬೇಕೆನಿಸುತ್ತಿದೆ. ನನಗೆ ಮಗು ಬೇಡ, ಪ್ರಪಂಚದ ಎಲ್ಲ ಮಕ್ಕಳೂ ನಮ್ಮ ಮಕ್ಕಳು ಎಂದುಕೊಳ್ಳುವುದು ತುಂಬ ಉದಾತ್ತವೇ ಹೌದು. ಆದರೆ ನಿನ್ನ ಮಗುವಿದ್ದೂ ಲೋಕದ ಮಕ್ಕಳನ್ನು ನಿನ್ನದರಂತೆ ಪರಿಗಣಿಸುವುದು ಹೆಚ್ಚು ಅರ್ಥಪೂರ್ಣ. ನಿನಗಿನ್ನೂ ವಯಸ್ಸು ಮೀರಿಲ್ಲ, ಎಷ್ಟು ಮೂವತ್ತೆರಡಲ್ಲವೇ? ಒಂದು ಮಗುವಾಗಲಿ. ನಮ್ಮ ಮರಣ ಸಂಸ್ಕಾರಕ್ಕೆ ಮಕ್ಕಳು ಬೇಕೆಂದಲ್ಲ, ಐ ಡೋಂಟ್ ಬಿಲೀವ್ ಲೈಫ್ ಆಫ್ಟರ್ ಡೆತ್. ಆದರೆ ನಾವೇ ನೆಟ್ಟ ಸಸಿ ಮತ್ತೆ ಚಿಗುರೊಡೆಯಲಿಲ್ಲ ಎಂದು ನಾನು, ನಿಮ್ಮಮ್ಮ ಸತ್ತಮೇಲೂ ನರಳದಂತೆ ಆಗದಿರಲಿ, ಒಂದು ಮಗು, ಒಂದಾದರೂ ಮಗು, ನಿನ್ನಿಷ್ಟದಂತೆ ಬೆಳೆಸಬಲ್ಲ ಮಗು..’

ಮಾವನ ದನಿ ಗದ್ಗದವಾಯಿತು.

ಅಷ್ಟೊತ್ತಿಗೆ ನಮ್ಮ ಆಶ್ರಮದ ಮಹಾತಾಯಿಯಾದ ಇವನ ಫೋನು. ಆರ್ದ್ರ ದನಿಯ ಅವನ ಪ್ರತಿ ಶಬ್ದದಲ್ಲೂ ಪುಳಕ ಹೊರಹೊಮ್ಮುತ್ತಿತ್ತು. ‘ಅರು, ಮೂರು ದಿನದ ಮಗುವನ್ನು ನಿನ್ನೆ ಆಶ್ರಮಕ್ಕೆ ತಂದ್ರು. ಪ್ರೊಸೀಜರ‍್ಸ್ ನಡಿತಿದೆ. ಮಗು ಹೆಂಗಿದೆ ಗೊತ್ತಾ? ನೋಡಿದರೆ ಮುದ್ದಾಡ್ಬೇಕು ಅನ್ಸುತ್ತೆ ಕಣೆ. ಪೊಟ್ಟಿ ರಾಂಪುರ ಸ್ಲಂ ಹತ್ರ ಬಿಟ್ಟೋಗಿದ್ದು, ಅದಿರ‍್ಲಿ, ನೀ ಯಾವಾಗ್ಬರ‍್ತೀ..?’




Saturday 22 November 2014

ಅಳಿ




ಎಳೆಯ ಭಿಕ್ಕುವಿನ
ದಟ್ಟಿ ಹರಿದು ಹೋಯಿತು
ಬುದ್ಧಗುರುವನು ಮುಟ್ಟಿತು ತಲ್ಲಣ

‘ಗುರುವೇ, ಹರಿದು ಹೋಯಿತು ದಟ್ಟಿ,
ಏನು ಮಾಡುವುದು?’

‘ಹರಿದರೇನು ಮಗೂ, ಹಾಸಿ ಮಲಗು.’

ದಿನ ಉರುಳಿದವು
ಹಾಸಿ ಹಾಸಿ ಮಲಗಿ
ದಟ್ಟಿ ಇನ್ನಷ್ಟು ಜೀರ್ಣ

‘ಗುರುವೇ, ಹಾಸಿಹಾಸಿ ದಟ್ಟಿ
ಮತ್ತೆಲ್ಲೆಲ್ಲೋ ಹಿಸಿಯಿತು..’

‘ಹಿಸಿದರೇನು ಮಗೂ, ನೆಲ ವರೆಸಲು ಬಳಸು..’

ದಿನ ಉರುಳಿದವು
ಕೊಳೆ ವರೆವರೆಸಿ
ದಟ್ಟಿ ಚಿಂದಿಚೂರು

ಕಳೆದುಕೊಳುವುದ ಅರಿಯದ
ಎಳಸು ದನಿ
ಕ್ಷೀಣವಾಗಿ ಹೇಳಿತು..
‘ಗುರುವೇ, ವರೆಸಿದ ದಟ್ಟಿ
ನೂರು ತುಕಡಾ ತುಂಡು..’

‘ತುಂಡು ಬಟ್ಟೆಯಾದರೇನು ಮಗೂ
ಕಾಲು ವರೆಸಲು ಹಾಕು..’

ದಿನ ಉರುಳಿದವು.
ಹೋಗಿ ಬರುವವರ ಪಾದಧೂಳಿ
ನೆತ್ತಿ ಮೇಲೆ ಹೊತ್ತೊತ್ತು
ದಟ್ಟಿ ಬಣ್ಣ ಸಮೇತ ಕರಗಿತು
ಅಂಗಾಲು ಶುಭ್ರ
ಕಾಷಾಯಕ್ಕೆ ಮಣ್ಣ ಬಣ್ಣ

ತಾನುಟ್ಟ ಮೊದಲ ವಸ್ತ್ರವಿಂದು
ಮಾಸಿದ ಹಿಂಜು ನೂಲಿನಗುಪ್ಪೆ
ಎಳೆ ಆತುಮದ ಮರುಕ
ಕಣ್ಣ ಪಸೆಯಾಗಿ ಇಂಗತೊಡಗಿತು

ಆ ಇರುಳು
ಕಗ್ಗತ್ತಲಿಗೆ ಬೆಚ್ಚುವ ಎಳೆಯ ಬಿಕ್ಕು
‘ದುಗುಡವೇಕೆ ಮಗೂ?
ಅಗತ್ಯವೆಂದು ನಂಬಿದ್ದು ಅನಿವಾರ್ಯವಲ್ಲ
ತನ್ನ ತಾ ಕಳಕೊಂಡು ಪಡೆಯಬೇಕು,
ಇಡಿಯ ಲೋಕವನ್ನ.
ಕೊನೆಗು ಕಾಷಾಯ ತೊಡಲೇಬೇಕು ಮಣ್ಣಬಣ್ಣ
ಬಟ್ಟೆ ಹರಿದರೂ ನೂಲ ಗಟ್ಟಿಯಿರಬಹುದಲ್ಲ?
ಎಳೆ ಹುಡುಕಿ ಹೊಸೆ ಬತ್ತಿ, ಬೆಳಗು ಹಣತೆಯನ್ನ..’

ಝಗ್ಗನೆ ಬೆಳಗಿತು ಆತುಮ ದೀಪ
ಕರಗಿತು ದಟ್ಟಿಯೋ ನೂಲೋ ಎಂಬ ಇರುಳ ತರ್ಕ

ಅನು, ತಿಳಿದೆಯೇನು ಬೆಳಕಿನರಿವನ್ನು?
ಅಳಿಸಲಾಗದು ರೂಹುವಜನಿಲ್ಲದುದನು.



Sunday 16 November 2014

ದಾನ ಮತ್ತು ಹಸಿವೆ: ಒರೆಯಲಿರುವ ಇಬ್ಬಾಯ ಖಡ್ಗಗಳು..




ಜೂನ್ ತಿಂಗಳ ಅಷ್ಟೇನೂ ಪ್ರವಾಸಿಗಳಿಲ್ಲದ ಆಫ್ ಸೀಸನ್. ಆಗ್ರಾದಿಂದ ೨೭ ಮೈಲುಗಳಾಚೆ ಇರುವ ಫತೇಪುರ ಸಿಕ್ರಿಯ ಸುಡು ನೆಲದಲ್ಲಿ ನಡೆದಾಡುತ್ತಿದ್ದೆವು. ಅಕ್ಬರನಿಂದ ಒಂದು ಕಾಲಕ್ಕೆ ವೈಭವೋಪೇತವಾಗಿ ಕಟ್ಟಲ್ಪಟ್ಟ, ದೀನ್ ಇಲಾಹಿ ಕನಸು ಹುಟ್ಟಿದ, ಜೋಧಾಬಾಯಿ-ಬೀರಬಲ್ ನಡೆದಾಡಿದ, ಹದಿನೈದೇ ವರ್ಷಗಳಲ್ಲಿ ತ್ಯಜಿಸಲ್ಪಟ್ಟ ಊರು ಫತೇಪುರ್. ‘ಡೆಸರ್ಟೆಡ್ ಸಿಟಿ’ ಎಂದು ಕರೆಸಿಕೊಂಡರೂ ಸಾಕಷ್ಟು ಜನಭರಿತ.

ಬೆಳಿಗ್ಗೆ ೧೧ಕ್ಕೆ ಬಿಸಿಲು ರಣರಣ ಎನ್ನುತ್ತಿತ್ತು. ಎಲ್ಲ ಐತಿಹಾಸಿಕ ಸ್ಮಾರಕಗಳಿರುವ ಊರುಗಳಲ್ಲಿ ಹೇಗೋ ಹಾಗೆ ಕೆಳಗಿಳಿದ ಕೂಡಲೇ ನಾನು ತಾನೆಂದು ಆಟೋಗಳೂ, ಗೈಡ್‌ಗಳೂ, ಕೆಲ ಹುಡುಗರೂ ನುಗ್ಗಿ ಬಂದರು. ಇಬ್ಬರು ಪುಟ್ಟ ಹುಡುಗರು ನಮ್ಮ ಮಕ್ಕಳ ಹಿಂದೆ ಸುತ್ತುತ್ತಿದ್ದರು. ಅವರು ಕವಿತೆ ಹೇಳುವವರಂತೆ. ಕನ್ನಡದಲ್ಲಿ ಕವಿಗಳನ್ನು ಕೇಳುವವರೇ ಇಲ್ಲ ಎಂದು ಕೊರಗುವಾಗ ಈ ಪುಟ್ಟ ಪೋರರು ಕವಿತೆ ಹೇಳುತ್ತೇವೆ ಎನ್ನುತ್ತಿದ್ದಾರೆ, ಎಲ ಎಲಾ!! ಕೇಳೇಬಿಡುವ ಎಂದು ಕೈಕಟ್ಟಿ ನಿಂತೆವು. ಮುಂದಿನ ಹದಿನೈದು ನಿಮಿಷ ತಾವು ಉರುಹೊಡೆದ ಕವಿತೆಗಳನ್ನೂ, ಶಾಯರಿಗಳನ್ನೂ ಇಬ್ಬರೂ ಒಬ್ಬರಾದ ಮೇಲೊಬ್ಬರು ಹೇಳಿದರು. ಒಬ್ಬ ಪೋರ ನಮ್ಮ ಹೆಣ್ಮಕ್ಕಳ ಹೆಸರು ಸೇರಿಸಿ ತಾನೇ ನಾಲ್ಕು ಸಾಲು ರಚಿಸಿ ಒಡಪು ಹೇಳಿದ. ಉರು ಹೊಡೆದಿದ್ದರೂ ಪರವಾಗಿಲ್ಲ, ಮಕ್ಕಳ ಬಾಯಲ್ಲಿ ಅಷ್ಟು ಕವಿತ್ವ ತುಂಬಿಕೊಂಡಿರುವುದಕ್ಕೆ ಬಿಸಿಲಿನಲ್ಲೂ ಒಳಗೊಂದು ತಂಪು ಹುಟ್ಟಿತು. ‘ನಿಮ್ಮ ಶಾಲೆ?’ ಎಂದು ನಾನು ಬಾಯ್ತೆರೆಯುವುದರಲ್ಲಿ ಮತ್ತೊಂದು ಪ್ರವಾಸೀ ಜೋಡಿಯ ಬಳಿ ಬಾಲಕವಿಗಳು ಹಾರಿಹೋದರು.

ಒಣಗಿಹೋದ ಬಾಯಲ್ಲಿ ರಸ ಒಡೆದೀತೆಂದು ನೇರಿಳೆಹಣ್ಣು ಕೊಂಡು ಬಾಯಿಗೆ ಹಾಕಿದರೆ ಅದೂ ಸುಡುತ್ತಿತ್ತು. ಬಳ್ಳಾರಿ, ಬಿಜಾಪುರಗಳ ಧಗೆಯನ್ನು ಸಿಕ್ರಿಯ ಮುಂದೆ ನಿವಾಳಿಸಬೇಕು, ಅಷ್ಟು ಸೆಕೆ. ಈ ಸೆಕೆಗೆ ಹೆದರಿಯೇ ಕಟ್ಟಿದ ಹದಿನೈದೇ ವರ್ಷಕ್ಕೆ ಅಕ್ಬರ್ ರಾಜಧಾನಿ ಬದಲಿಸಿರಬೇಕು. ಜಾಮಾ ಮಸೀದಿ ಹಾಗೂ ಸಲೀಂ ಚಿಸ್ತಿ ದರ್ಗಾಗಳಿರುವ ಸಂಕೀರ್ಣವನ್ನು ಪ್ರವೇಶಿಸುವಲ್ಲಿ ಒಂದು ಮಹಾದ್ವಾರ ಎದುರಾಯಿತು. ದಕ್ಷಿಣ ಭಾರತವನ್ನು ಗೆದ್ದ ನೆನಪಿಗೆ ಅಕ್ಬರ್ ಕಟ್ಟಿಸಿದ, ೧೭೬ ಅಡಿ ಎತ್ತರದ ಬುಲಂದ್ ದರವಾಜಾ. ಭಾರತದ, ಅಷ್ಟೇ ಏಕೆ ಪ್ರಪಂಚದಲ್ಲೇ ಅತಿ ಎತ್ತರ ಮತ್ತು ಭಾರೀ ಆದ ಮಹಾದ್ವಾರಗಳಲ್ಲಿ ಇದೂ ಒಂದು. ಅದರ ಎತ್ತರವನ್ನು ಉತ್ಪ್ರೇಕ್ಷೆಗೊಳಿಸಲೋ ಎನ್ನುವಂತೆ ನೆಲದಿಂದ ಮೇಲೆದ್ದ ಮೆಟ್ಟಿಲುಗಳು.

ಆಕಾಶಕ್ಕೆ ತಲೆಚಾಚಿ ನಿಂತ ಮಹಾದ್ವಾರದ ಒಳಹೊಕ್ಕರೆ ವಿಶಾಲವಾದ ಪ್ರಾಂಗಣ. ಒಳಾವರಣದ ನಾಲ್ಕೂ ಸುತ್ತು ಬೀದಿಯಷ್ಟು ದೊಡ್ಡ ಪರಿಕ್ರಮ. ಅಲ್ಲಿ ವ್ಯಾಪಾರ ಭರಾಟೆಯಿಂದ ನಡೆಯುತ್ತಿತ್ತು. ಭಾರತ ದೇಶ ಅನಾಥರು, ಭಿಕ್ಷುಕರು, ವಿಕಲ ಚೇತನರಿಂದಲೇ ತುಂಬಿದೆಯೇ ಅನಿಸುವಷ್ಟು ವಿಕಲಾಂಗರು, ಅತಿ ಮುದುಕರು, ಮಕ್ಕಳು, ಅನಾಥರಂತೆ ತೋರುವವರು ಕಣಿ ಹೇಳುತ್ತ, ಬೀಡಿ ಎಳೆಯುತ್ತ, ತೂಕಡಿಸುತ್ತ, ಬೇಡುತ್ತ ಕೂತಿದ್ದರು. ಅವರ ಎದುರಿನ ಬಟ್ಟೆಯಲ್ಲಿ ಬಿದ್ದ ರೂಪಾಯಿ ಕಾಸುಗಳು ಮೌನವಾಗಿದ್ದವು. ಒಬ್ಬಳೇಒಬ್ಬ ಭಿಕ್ಷುಕಿಯೂ ಕಾಣದೇ ಆಶ್ಚರ್ಯ, ಸಮಾಧಾನ ಒಟ್ಟಿಗೇ ಹುಟ್ಟಿತು.

ಅಕ್ಬರನಿಗೆ ೩೦೦ ಹೆಂಡತಿಯರಿದ್ದರೂ ಗಂಡು ಮಕ್ಕಳಿರಲಿಲ್ಲ. ಸೂಫಿ ಸಂತ ಸಲೀಂ ಚಿಸ್ತಿಯ ಅನುಗ್ರಹದಿಂದ ಸಲೀಂ (ಜಹಾಂಗೀರ್) ಎಂಬ ಮಗ ಹುಟ್ಟಿದ. ಮಸೀದಿಯ ಅಂಗಳದ ಒಂದುಕಡೆ ಈ ಸಂತನ ಚಚ್ಚೌಕಾಕಾರದ ಅಮೃತಶಿಲೆಯ ದರ್ಗಾವಿದೆ. ಭಕ್ತಿ, ಆರ್ತತೆಯೇ ಮೈವೆತ್ತು ಬಂದಂತೆ ಕಣ್ಮುಚ್ಚಿ ಪ್ರಾರ್ಥಿಸುವವರು ದರ್ಗಾದ ಬಳಿ ಕಂಡುಬಂದರು.



ಇದ್ದಕ್ಕಿದ್ದಂತೆ ಅಸಂಖ್ಯ ಮಕ್ಕಳು ಚಿಲಿಪಿಲಿ ಚಿಲಿಪಿಲಿ ಎನ್ನುತ್ತಿದ್ದ ಒಳಾವರಣದಲ್ಲೊಂದು ಸಂಚಲನೆ ಮೂಡಿತು. ಮಕ್ಕಳು ಎದ್ದೆನೋ ಬಿದ್ದೆನೋ ಎನ್ನುವಂತೆ ಓಡತೊಡಗಿದರು. ಓಡುವ ಭರದಲ್ಲಿ ಒಂದಿಬ್ಬರು ನನಗೂ ಢಿಕ್ಕಿ ಹೊಡೆದರು. ಏನಾಯಿತು? ಎಲ್ಲಿ ಓಡುತ್ತೀರಿ? ಶಾಲೆಯ ಗಂಟೆ ಹೊಡೆಯಿತೇ? ಯಾರಿಗೂ ಉತ್ತರಿಸುವ ಪುರುಸೊತ್ತೇ ಇಲ್ಲ.

ಪಕ್ಕದ ಬಾಗಿಲಿನಿಂದ ನಾವೂ ಹೊರಬಂದು ನೋಡಿದರೆ ಅಗೋ ಅಲ್ಲಿ ದೂರದಲ್ಲಿ ನಿಂತ ವಾಹನದ ಬಳಿಗೆ ಎಲ್ಲ ಓಡುತ್ತಿದ್ದಾರೆ. ಹತ್ತೇ ನಿಮಿಷ. ಏದುಸಿರು ಬಿಡುತ್ತ, ಮೆಟ್ಟಿಲು ಹತ್ತುತ್ತ, ಎರಡೂ ಕೈಗಳಲ್ಲಿ ಒಂದೊಂದು ಪೇಪರ್ ಪ್ಲೇಟ್ ಹಿಡಿದು ಬ್ಯಾಲೆನ್ಸ್ ಮಾಡುತ್ತ ಮಕ್ಕಳು ವಾಪಸಾಗತೊಡಗಿದವು. ಹಬೆಯಾಡುವ ಪಲಾವ್, ಪಕ್ಕಕ್ಕೆ ಚಟ್ನಿಯಂತಹ ಏನೋ ಒಂದು. ಅದರ ಪರಿಮಳವನ್ನ ನಮ್ಮ ಹೊಟ್ಟೆಯೂ ಗ್ರಹಿಸಿ ಗುಡುಗುಡು ಸದ್ದು ಮಾಡಿತು. ಮಕ್ಕಳು ತರುವ ತಟ್ಟೆಗಾಗಿ ಕಾಯುತ್ತ ಕೂತವರು ಊಟ ಬಂದದ್ದೇ ಗುಂಪಾಗಿ ಕುಳಿತು ಸರಸರ ಉಣ್ಣತೊಡಗಿದರು.

ಮೆಟ್ಟಿಲಿಳಿದು ವಾಹನದ ಬಳಿ ನಡೆದೆ. ಪುಟ್ಟ ಲಾರಿಯಲ್ಲಿ ಅರ್ಧಾಳೆತ್ತರದ ಸ್ಟೀಲ್ ಡ್ರಮ್ಮುಗಳ ಪಕ್ಕ ಸ್ವಯಂಸೇವಕರು ತಟ್ಟೆಗಳಿಗೆ ಊಟ ತುಂಬಿ ಚಾಚಿದ ಕೈಗಳಿಗೆ ವರ್ಗಾಯಿಸುತ್ತಿದ್ದರು. ಕಾಲೆತ್ತಿ, ಸಾಧ್ಯವಿರುವಷ್ಟು ದೂರದವರೆಗೂ ಕೈಚಾಚಿ, ಬೇಗ ತಟ್ಟೆ ಹಿಡಿಯುವ ಅವಸರದ ಕೈಗಳು. ಬೊಗಸೆ ವಜ್ಜೆಯಾದದ್ದೇ ಓಡಿಹೋಗುವ ಹುರುಪು, ಕೆಂಚಾಗಿ ಮಾಸಿದ ಕೆದರು ಕೂದಲ ಮುಖದಲ್ಲಿ ಹೊಳೆಹೊಳೆವ ಕಣ್ಣುಗಳು..

ತಮಗೆ ದೊರೆಯದ ನ್ಯಾಯಕ್ಕೆ ಪರ್ಯಾಯವಾಗಿ ಈ ದಾನ ಸಿಕ್ಕಿದೆಯೆಂದು ಅವರು ಭಾವಿಸಿರುವುದನ್ನು ತಾತ್ಕಾಲಿಕ ತೃಪ್ತಿ, ಹಪಾಹಪಿಗಳೇ ಹೇಳುತ್ತಿದ್ದವು. ಬಡವನಿಗಿರುತ್ತದೆ ಎನ್ನಲಾದ ಸಿಟ್ಟು, ದಂಗೆ ಎಲ್ಲವೂ ಹೊಟ್ಟೆಯ ಜೊತೆ ತಣಿದುಹೋಗಬಹುದೇ ಎನಿಸಿ ಕಂಗಾಲಾಯಿತು. ಚಾಚುವ ಕೈಗಳ ಚಿತ್ರದೆದುರು ವಿಶಾಲ ಸಂಪದ್ಭರಿತ ಮೊಘಲ್ ಸಾಮ್ರಾಜ್ಯ, ಅಕ್ಬರ್, ದೀನ್ ಇಲಾಹಿ, ಆಸ್ಥಾನದ ನವರತ್ನಗಳು ಇತ್ಯಾದಿ ಎಲ್ಲ ಚಿತ್ರಗಳೂ ಕಲಸಿಹೋದವು.

ತಟ್ಟೆಗೆ ಕೈನೀಡದೇ ಆಚೆ ನಿಂತ ನನ್ನೊಡನೆ ಸ್ವಯಂಸೇವಕನೊಬ್ಬ ಮಾತನಾಡಿದ. ಅವನ ಪ್ರಕಾರ: ಆ ವಾಹನ ಪ್ರತಿದಿನ ಮಧ್ಯಾಹ್ನ ೧೨ ಗಂಟೆಗೆ ಬರುತ್ತದೆ. ಒಂದು ಬಿಲಿಯನ್ ಡಾಲರು ವಹಿವಾಟಿನ ಭಾರತದ ಪ್ರಸಿದ್ಧ ಕೋಳಿಸಾಕಣೆ ಕಂಪನಿಯು ಪ್ರತಿದಿನ ಅಜ್ಮೇರ್, ಸಿಕ್ರಿ, ಹಜ್ರತ್ ನಿಜಾಮುದ್ದೀನ್, ಮುಂಬಯಿ ಇತ್ಯಾದಿ ಐದು ದರ್ಗಾಗಳ ಬಳಿ ಊಟ ಪೂರೈಸುತ್ತದೆ. ಎಷ್ಟೇ ಜನ ಬರಲಿ, ಊಟ ಗ್ಯಾರಂಟಿ. ಕಡಿಮೆ ಬಿದ್ದಿದ್ದೇ ಇಲ್ಲ. ಇಲ್ಲಿ ಉಳಿದರೆ ಬೇರೆಕಡೆ ಕೊಟ್ಟು ಹೋಗುತ್ತಾರೆ. ನನ್ನ ಹರಕು ಹಿಂದಿ ಕೇಳಿ ಎಲ್ಲಿಯವಳು ಎಂದು ಕೇಳಿದರು. ಕರ್ನಾಟಕ ಎಂದಕೂಡಲೇ ಬಿಜಾಪುರ ಕಡೆಯ ಒಬ್ಬ ಕನ್ನಡದಲ್ಲಿ ಮಾತನಾಡತೊಡಗಿದ.

ಅವ ಐದಾರು ವರ್ಷದಿಂದ ಅದರಲ್ಲಿದ್ದಾನೆ. ಊಟ ತುಂಬ ಚೆನ್ನಾಗಿರುತ್ತೆ, ಬೇಕಾದ್ರೆ ನೋಡಿ ಎಂದ. ‘ಬೇಡ, ಬೆಳಿಗ್ಗೆ ತಿಂದಿದ್ದು ಇನ್ನೂ ಕರಗಿಲ್ಲ’ ಎಂದೆ. ದಿನದಿನಾ ಒಂದೊಂದು ಬೇರೆಬೇರೆ ಐಟಂ ಇರುತ್ತದೆ ಅಂದ. ಆದರೆ ಇಷ್ಟೊಂದು ಜನರಿಗೆ, ಅಮಿತ ಪ್ರಮಾಣದಲ್ಲಿ ಊಟ ಪೂರೈಸುವುದು ಕಷ್ಟವಲ್ಲವೆ? ಬಿಜಾಪುರಿಯ ಉತ್ತರ ಸರಳವಾಗಿತ್ತು: ಇಡೀ ಊರೇ ಕೈಲಿ ತಟ್ಟೆ ಹಿಡಿದು ಬಂದರೂ ಎರಡು ಹೊತ್ತಿನ ಊಟವನ್ನಷ್ಟೇ ಒಯ್ಯಬಲ್ಲರು. ಕಾಳು ಕೊಡುವುದು ಕಷ್ಟ, ಬೇಯಿಸಿದ್ದು ಕೊಡುವುದು ಸುಲಭ..

ಯಾರೋ ಮಾಡಿಕೊಟ್ಟದ್ದನ್ನು ಯಾರಿಗೋ ದಿನನಿತ್ಯ ಬಡಿಸುವ ಸ್ವಯಂಸೇವಕರು ಧನ್ಯತಾ ಭಾವದಲ್ಲಿ ಕೊಚ್ಚಿಹೋದಂತಿದ್ದರು. ಹಸಿದವರಷ್ಟೇ ರೊಟ್ಟಿಯಿರುವವನ ಮಾತು ಕೇಳಬಲ್ಲರು ಎಂದು ಅವರಿಗೂ ಗೊತ್ತಾದಂತಿತ್ತು. ದಾನ, ಸಹಾನುಭೂತಿಗಳು ದೀನರ ಆತ್ಮಗೌರವ ಕಳೆಯುವುದಿಲ್ಲವೆ ಎಂಬ ಅಳುಕಿನ ಸುಳಿವೂ ಕಾಣಲಿಲ್ಲ..

ನೆನಪು ೨೪ ವರ್ಷ ಹಿಂದೆ ಓಡಿತು. ಇಂದು ಕೇವಲ ನೆನಪಾಗಿರುವ ಅವಳೊಡನೆ ಇಲ್ಲೆಲ್ಲ ಓಡಾಡಿದ್ದೆ. ಆದರೆ ಅಂದು ಇಂಥ ಕಸಿವಿಸಿಯೇ ಹುಟ್ಟಿರಲಿಲ್ಲ!


೧೯೯೦. ಎರಡನೇ ಎಂಬಿಬಿಎಸ್ ಓದುವಾಗ ನ್ಯಾಷನಲ್ ಯುತ್ ಅಸೋಸಿಯೇಷನ್ ವತಿಯಿಂದ ಜಮ್ಮುವಿನಲ್ಲಿ ೧೫ ದಿನದ ಕ್ಯಾಂಪ್ ಇತ್ತು. ಭಾರತದ ಎಲ್ಲ ರಾಜ್ಯಗಳಿಂದ ಬಂದ ಸರಿ ಸುಮಾರು ೨೦೦ ವಿದ್ಯಾರ್ಥಿಗಳು ಜಮ್ಮುವಿನ ನಿರಾಶ್ರಿತ ಶಿಬಿರಗಳಲ್ಲಿ ಉಳಿದು, ನಂನಮ್ಮ ಹಾಡುಹಸೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಒಂದು ದಿನ ವೈಷ್ಣೋದೇವಿಗೆ ಕರೆದೊಯ್ದರು. ನಾನೂ, ನನ್ನ ಸಹಪಾಠಿ ಮುಮ್ತಾಜ್ ಒಟ್ಟಿಗೆ ಹೊರಟೆವು. ಕ್ಯಾಂಪಿನಿಂದ ಹೊರಟ ಐದಾರು ಬಸ್ಸುಗಳು ದೊಡ್ಡ ಪರ್ವತಶ್ರೇಣಿಯ ಬುಡದಲ್ಲಿ ನಿಂತವು. ಮಧ್ಯಾಹ್ನ ಊಟ ಹಾಕಿರಲಿಲ್ಲ. ಸಂಜೆ ಐದೂವರೆಗೆ ಆ ದೊಡ್ಡ ಹಜಾರದೆದುರು ನಿಲಿಸಿ ‘ಊಟ ಮಾಡಿ’ ಎಂದರು. ಸ್ವಯಂಸೇವಕರು ಒಂದೇ ಸಮ ರೋಟಿ, ಚನಾ, ಅನ್ನ ಬಡಿಸಿಕೊಡುತ್ತಿದ್ದರು. ಅದು ಟಿ ಸೀರೀಸ್ ಕೆಸೆಟ್ ಕಂಪನಿಯವರದೆಂದರು. ಉಂಡು ಹತ್ತಲು ಶುರು ಮಾಡಿದವರು ಸರಿ ರಾತ್ರಿ ಒಂದೂವರೆಗೆ ತುದಿ ಮುಟ್ಟಿದೆವು. ಗದಗದ ನಡುಗಿಸುವ ಚಳಿಗೆ ದರ್ಶನ, ಸ್ನಾನ ಎಲ್ಲ ಮರೆತುಹೋಗಿತ್ತು. ನಿದ್ದೆಯಿಲ್ಲದೆ, ಹತ್ತಿಹತ್ತಿ ದಣಿದ ನಾನು ಮತ್ತು ಮುಮ್ತಾಜ್ ವೈಷ್ಣೋದೇವಿ ಹೇಗಿದ್ದಾಳೆ ಎಂದಷ್ಟೇ ಒಳಹೊಕ್ಕು ನೋಡಿ ಚಣಹೊತ್ತು ಕೂತು ಸುಧಾರಿಸಿಕೊಂಡು ವಾಪಸು ಹೊರಟೆವು. ಇಳಿಯತೊಡಗಿ ಮರುಬೆಳಿಗ್ಗೆ ೭ರ ಸುಮಾರು ತಳ ಮುಟ್ಟಿದೆವು. ಕೆಳಗಿಳಿದ ಮೇಲೇ ಮತ್ತೆ ತಿಂದದ್ದು. ದಿನದ ೨೪ ಗಂಟೆಯೂ ಜನ ಹತ್ತಿಳಿಯುತ್ತಾರೆ. ೨೪ ಗಂಟೆಯೂ ಊಟದ ವ್ಯವಸ್ಥೆಯಿದೆ.

ಈಗಲ್ಲಿ ಹೇಗಿದೆಯೋ ಗೊತ್ತಿಲ್ಲ. ಮುಮ್ತಾಜ್ ಗತಿಸಿ ೨೦ ವರ್ಷ ಕಳೆದಿವೆ. ಅವಳ ದನಿ, ಸ್ಪರ್ಶ ನೆನಪಿನಿಂದ ಮಾಸತೊಡಗಿದೆ. ಆದರೆ ಸಿಕ್ಕಾಪಟ್ಟೆ ಹಸಿದಾಗ ಉಂಡ ಹಬೆಯಾಡುವ ಊಟದ ರುಚಿ ನೆನಪಿನಕೋಶಗಳಲ್ಲಿ ಭದ್ರವಾಗಿದೆ.

ಹಾಗೆಯೇ, ಹೊಟ್ಟೆಹಸಿವೆಂಬ ಒಡಲೊಳಗಿನ ಇಬ್ಬಾಯ ಖಡ್ಗದ ಕುರಿತ ಅಚ್ಚರಿಯೂ..

ಹೀಗೊಂದು ದಾನ ಚಿಂತನೆ


ದಾನ ಕೊಡುವಾಗ ಕೇವಲ ಚಾಚಿದ ಬೊಗಸೆ ನೋಡಬೇಕು, ಪಡೆವಾಗ ಕೊಡುವವನ ಮುಖ ನೋಡಬೇಕೆಂದು ಹಿರಿಯರು ಹೇಳುತ್ತಿದ್ದರು. ಹಸಿದವನಿಗೆ ತುತ್ತು ಅನ್ನ ನೀಡುವುದು ಪುಣ್ಯ ಎಂದು ಎಲ್ಲ ಧರ್ಮಗಳೂ ಹೇಳಿವೆ. ಆದರೆ ದಾನ ಎಂಬ ಕಾನ್ಸೆಪ್ಟ್ ಏಕೆ, ಹೇಗೆ ಹುಟ್ಟಿದೆ?

ಬಹುಶಃ ಆಸ್ತಿ ಕಲ್ಪನೆ ಮೂಡಿದಮೇಲೆ ಅವಶ್ಯಕತೆಗಿಂತ ಹೆಚ್ಚು ಸಂಗ್ರಹಿಸುವುದು ಪಾಪ ಎಂದು ಮೊದಮೊದಲು ಮನುಷ್ಯನಿಗೆ ಅನಿಸಿದೆ. ಹಂಚಿಕೆಯ ಅಸಮಾನತೆಯನ್ನು ಸಮರ್ಥಿಸಿಕೊಳ್ಳಲು ಕರ್ಮಸಿದ್ಧಾಂತ ಹುಟ್ಟಿದ ಮೇಲೂ ಇಲ್ಲದವನ ಸಿಟ್ಟಿನ ಬಗೆಗೆ ಧರ್ಮಕ್ಕೂ, ಅದನ್ನು ಪೋಷಿಸಿಕೊಂಡು ಬಂದ ಅನುಕೂಲಸ್ಥರಿಗೂ ಭಯವಾಗಿದೆ. ಆದರೆ ಹೆಚ್ಚು ಸಂಗ್ರಹಿಸಬೇಡ ಎಂದು ಲೌಕಿಕನಾದ ಭಕ್ತನಿಗೆ ಲೌಕಿಕವಾದ ಧರ್ಮವು ಹೇಳುವುದಾದರೂ ಹೇಗೆ? ಎಂದೇ ಹೆಚ್ಚು ಸಂಗ್ರಹವಾದದ್ದನ್ನು ಪವಿತ್ರೀಕರಣಗೊಳಿಸುವ ಸಲುವಾಗಿ, ಸಂಗ್ರಹಕ್ಕೆ ಪ್ರಾಯಶ್ಚಿತ್ತವಾಗಿ ದಾನದ ಕಲ್ಪನೆ ಹುಟ್ಟಿಕೊಂಡಿದೆ.

ಅಮೆರಿಕದ ಬರಹಗಾರ ಪಾದ್ರಿ ಬಕ್‌ವೈಟ್ ಹೇಳುವಂತೆ, ‘ಸಂಪತ್ತನ್ನು ದಾನದ ಕೆಲಸಗಳಲ್ಲಿ ತೊಡಗಿಸುವುದು ಎಲ್ಲ ಕಾಲದಲ್ಲೂ ಸುಲಭದ ಸೇವಾಕಾರ್ಯವೆಂದು ನಂಬಿಕೊಂಡು ಬರಲಾಗಿದೆ. ದಾನಿ ಸಿರಿವಂತ ತನ್ನ ಸುತ್ತಮುತ್ತಲಿರುವವರಿಗೆ ಮಹಾಪೋಷಕನಾಗಿರುತ್ತಾನೆ. ಅವರ ಕೃತಜ್ಞತಾ ಭಾವವನ್ನು ಅವನು ಅನುಭವಿಸುವಂತೆ ಮಾಡಲಾಗುತ್ತದೆ. ಅವನಿಗೆ ಎಲ್ಲ ಬಾಗಿಲುಗಳೂ ತೆರೆದುಕೊಳ್ಳುತ್ತವೆ. ಆದರೆ ದಾನ ಎನ್ನುವುದು ಇಬ್ಬಗೆಯ ಶಾಪ. ಅದು ಕೊಡುವವನನ್ನು ಕಠೋರನನ್ನಾಗಿಯೂ, ಪಡೆದುಕೊಳ್ಳುವವನನ್ನು ಮೃದುವಾಗಿಯೂ ಪರಿವರ್ತಿಸುತ್ತದೆ. ಬಡವನಿಗೆ ಶೋಷಣೆಗಿಂತ ದಾನವೇ ಹೆಚ್ಚು ಅಪಾಯಕಾರಿ. ಏಕೆಂದರೆ ಅದು ಅವನನ್ನು ಶೋಷಿತನಾಗಲು ಸಿದ್ಧಗೊಳಿಸುತ್ತದೆ. ದಾನ ಬೆಳೆಸುವ ಗುಲಾಮತನ ನೈತಿಕ ಆತ್ಮಹತ್ಯೆಯಲ್ಲದೆ ಬೇರೇನಲ್ಲ.’

ದಾನ ಎಂದೂ ಪ್ರಶ್ನಿಸದಂತೆ, ಮೌನವಾಗಿರುವಂತೆ ಮಾಡುವುದಷ್ಟೇ ಅಲ್ಲ; ಸಮಾಜದ ಆಳವಾದ, ಮಾಯದ ಗಾಯವನ್ನು ಗುಣಪಡಿಸಲು ಭಿಕ್ಷೆ ನೀಡುವುದು ಒಂದು ವಿಧಾನವಲ್ಲ ಎಂದು ಹೇಳುವ ಹಕ್ಕನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಈಗಾಗುತ್ತಿರುವುದು ಅದೇ: ಜನತಂತ್ರ ವ್ಯವಸ್ಥೆಯ ಸಂಸ್ಥೆಗಳೂ ಸೇರಿದಂತೆ ದಾನ-ಸವಲತ್ತು ನೀಡುವವರ ಯಾದಿ ಬೆಳೆಯುತ್ತಿದೆ. ಬಿಲಿಯನ್ನುಗಟ್ಟಲೆ ಗಳಿಸುವವರು ಮಿಲಿಯನ್ನುಗಟ್ಟಲೆ ಆಸ್ತಿಯನ್ನು ದಾನಸೇವೆಗಾಗಿ ವಿನಿಯೋಗಿಸುವುದು ನಡೆದೇ ಇದೆ.

ಆದರೆ ಬೇಕಿರುವುದಕ್ಕಿಂತ ಹೆಚ್ಚೇ ನನಗಿಟ್ಟುಕೊಂಡು ಮಿಗುವುದನ್ನು ಹಂಚಿದರೆ ಅದು ದಾನವೇ? ಹುಲಿಸಿಂಹಗಳು ಹೊಟ್ಟೆ ತುಂಬಿತೆಂದು ಬಿಟ್ಟುಹೋದ ಮಾಂಸವನ್ನು ತೋಳಕಿರುಬಗಳು ತಿಂದರೆ ಅದನ್ನು ದಾನವೆನಲು ಬರುವುದೆ?

ಅರ್ಥ ಮೀಮಾಂಸೆ ಸುಲಭವಿಲ್ಲ. ಅದೂ ನನ್ನ ಥೈಲಿ ತುಂಬಿರುವಾಗ, ಮತ್ತೆಮತ್ತೆ ತುಂಬಿಸಲು ಸಫಲಮಾರ್ಗವೊಂದು ಕಣ್ಣೆದುರು ತೆರೆದಿರುವಾಗ, ಮುಂದಿನ ಹೊತ್ತಿನ ಕೂಳು ಕಾಯುತ್ತಲಿರುವಾಗ, ಸಮರ್ಥನೆಗೆ ಧರ್ಮ-ಸಿದ್ಧಾಂತಗಳ ಹಲವು ನೆಪ ಬೆಂಬಲಕ್ಕಿರುವಾಗ..

ಅರ್ಥ ಮೀಮಾಂಸೆ, ದಾನ ಚಿಂತನೆ ಸರಳವಿಲ್ಲ.




Saturday 15 November 2014

ವೇಶ್ಯಾವೃತ್ತಿ: ದೀಪದ ಬೆಂಕಿಯೂ, ಪತಂಗವೂ..



ಚಿತ್ರ: ಪಿಕಾಸೊ

(೧)

ಸರಿಯಾಗಿ ಹತ್ತೂವರೆಗೆ ಅಲ್ಲಿರಬೇಕು. ಇವತ್ತು ಒಳ್ಳೆಯ ದಿನ, ಮೂರು ಅಪಾಯಿಂಟ್‌ಮೆಂಟುಗಳಿವೆ ಅಂದುಕೊಂಡಳು. ಮೂರೂ ಕಡೆ ಮುಗಿಸಿ ಸಂಜೆ ಐದೂವರೆಗೆ ಮನೆಗೆ ಹೊರಟುಬಿಡಬೇಕು. ಮಕ್ಕಳಿಗೆ ಟೆಸ್ಟ್ ನಡೆಯುತ್ತಿದೆ, ಓದಿಸಬೇಕು. ಅತ್ತೆಮಾವನ ಕೈಲಿ ಅದು ಸಾಧ್ಯವಿಲ್ಲ, ತಾನೇ ಹೋಗಬೇಕು. ಆಫೀಸಿಗೆ ಹೋಗುತ್ತಾಳೆ, ಒಳ್ಳೆಯ ಕೆಲಸಗಾರ್ತಿಯಾದ್ದರಿಂದ ಒಳ್ಳೆಯ ಸಂಬಳ ತರುತ್ತಾಳೆ ಎಂದು ಮನೆಯವರು ತಿಳಿದಿದ್ದಾರೆ. ಆದರೆ ತಾನು ಮಾಡುತ್ತಿರುವುದು ಸೆಕ್ಸ್‌ವರ್ಕ್ ಎಂದು ಹೋಟೆಲ್ ಕೆಲಸ ಮಾಡುವ ಗಂಡ ಮಾತ್ರ ಅರಿತಿದ್ದಾನೆ. 

ಆಕೆಯ ಭಯ ಇಷ್ಟೇ: ಪೊಲೀಸ್ ರೈಡ್‌ನಲ್ಲಿ ಸಿಕ್ಕಿಬಿದ್ದರೆ ಬಿಡುಗಡೆ ಮಾಡಲು ಆಧಾರ ಕಾರ್ಡು, ರೇಷನ್ ಕಾರ್ಡು ಮತ್ತಿತರ ಐಡೆಂಟಿಟಿ ಕಾರ್ಡ್ ಬೇಕೇಬೇಕೆನ್ನುತ್ತಾರೆ ಆಗ ತನ್ನ ಗುರುತು ಹತ್ತಿ ಮನೆಯಲ್ಲಿ ಮಕ್ಕಳಿಗೆಲ್ಲ ಅಮ್ಮನ ವೃತ್ತಿ ಗೊತ್ತಾಗಿಬಿಟ್ಟರೆ? ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ಈ ವೃತ್ತಿಯ ಕಷ್ಟ ತನಗೇ ಮುಗಿಯಬೇಕೆನ್ನುವುದು ಅವಳ ಮಹದಾಸೆ. 

ಪ್ರತಿ ಗಿರಾಕಿಗೆ ಬೆನ್ನುಹಾಕಿ ನಡೆಯುವಾಗಲೂ ಆದಷ್ಟು ಬೇಗ ಧಂಧೆ ಬಿಡಬೇಕೆನ್ನುವುದು ಸರಸರ ಚಲಿಸುವ ಅವಳ ಕಾಲುಗಳ ನಿರ್ಧಾರ.

(೨)

ಹೀಗೊಂದು ಬಯೋಡೇಟ್ರಾ: 

ಹೆಸರು: ನಿತ್ಯ ಸುಮಂಗಲಿ, ೨೫ ವರ್ಷ.
೯ನೇ ವರ್ಷ - ಅಪಹರಣ, ಮಾರಾಟ 
೧೦ನೇ ವರ್ಷ - ಅತ್ಯಾಚಾರ
೧೧ನೇ ವರ್ಷ - ಹಿಂಸೆ, ಹಸಿವು, ಹೊಡೆತ.
೧೨ನೇ ವರ್ಷ - ವೇಶ್ಯಾವೃತ್ತಿ
೧೩ನೇ ವರ್ಷ - ಮೊದಲ ಗರ್ಭಪಾತ
೧೮ನೇ ವರ್ಷ - ಎಚ್ಚೈವಿ ಪಾಸಿಟಿವ್, 
೨೫ನೇ ವರ್ಷ - ಬೀದಿ ಬದಿಗೆ ಮಾರುಕಟ್ಟೆ ವಿಸ್ತರಣೆ. ರೈಡ್‌ನಲ್ಲಿ ೨ ಸಲ ಬಂಧನ, ಬಿಡುಗಡೆ.

(೩)

ದೇವದಾಸಿಯರ ಕುರಿತ ತೆಲುಗಿನ ಅಜ್ಞಾತ ಕವಯಿತ್ರಿಯ ಸಾಲು:  

‘ನನ್ನ ಖ್ಯಾತಿ ಏನೆಂದರೆ, ನಾನು
ಸೂಳೆಯೆಂದು ಗುರುತಿಸಲ್ಪಟ್ಟಿದ್ದೇನೆ
ಹುಟ್ಟಾ ಸೂಳೆಯೆಂದು..
ನನ್ನ ನೋವಿನ ಕತೆ
ಈ ಸಂಸ್ಕೃತಿಯ ನಾಯಕನ ತಲೆಯನ್ನು 
ನಾಚಿಕೆಯಿಂದ
ಪಾತಾಳಕ್ಕೆ ಗದುಮಬಲ್ಲದು.
ಈ ದೇಶದ ಘನ ಇತಿಹಾಸದ
ಯಾವ ಅಧ್ಯಾಯದ ಯಾವ ಪುಟದಲ್ಲಿ
ನನ್ನ ಇತಿಹಾಸ ಬರೆಯುವಿರಿ ನೀವು?’


(೪)

ಆಕೆಯ ವಯಸ್ಸು ೨೩. ದೇಹಸೌಂದರ್ಯವನ್ನು ನೆಚ್ಚಿಕೊಂಡು ಸಿನಿಮಾ ಜಗತ್ತಿಗೆ ಬಂದು ಅವಕಾಶಗಳಿಗಾಗಿ ಪಡಬಾರದ ಪಾಡುಪಟ್ಟಳು. ಅಂತೂ ಕೆಲ ಧಾರಾವಾಹಿ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಳು. ಅವಕಾಶಕ್ಕೆ ಒದ್ದಾಡುತ್ತ, ಸಣ್ಣಪುಟ್ಟ ಪಾತ್ರ ಸಿಗಬೇಕಾದರೂ ಹಲ್ಲುಗಿಂಜಿ ನಿರ್ಮಾಪಕರ ಹಿಂದೆಮುಂದೆ ಓಡಾಡಿದಳು. ಥಳುಕಿನ ಜಗತ್ತು ಅಂದುಕೊಂಡಷ್ಟು ಕಾಸು ಹುಟ್ಟಿಸದೇ ರೋಸಿಹೋಗುತ್ತಿದ್ದಾಗ ಆ ‘ಆಫರ್’ ಬಂತು. ಗಂಟೆಗೆ ಒಂದು ಲಕ್ಷ. ಸೇಫ್ ಸೆಕ್ಸ್. ಎಲ್ಲ ಹೈ ಪ್ರೊಫೈಲ್ ಗಿರಾಕಿಗಳು. ಗುಪ್ತ. ಪೊಲೀಸ್ ರೈಡು ನಡೆಯುವ ಚೀಪ್ ಹೋಟೆಲುಗಳಲ್ಲ, ಎಲ್ಲ ಸ್ಟಾರ್ ಹೋಟೆಲುಗಳಲ್ಲಿ ಎನ್ನಲಾಯಿತು. ಲಕ್ಷ ಗಳಿಸುತ್ತ, ಸಂಸಾರದ ಪಿರಿಪಿರಿಯಿಲ್ಲದೆ ಕಾರು-ಮನೆ ಮಾಡಿಕೊಂಡು ‘ಸುಖ’ವಾಗಿಯೇ ಇದ್ದಳು. ನೀಗಲಾರದ ಒಂಟಿತನಕ್ಕೆ ಇತ್ತೀಚೆಗೆ ಕುಡಿತ, ಮಾದಕ ವಸ್ತುಗಳ ಬೆನ್ನು ಹತ್ತಿ ಅಲ್ಲೂ ‘ಸುಖ’ ಕಾಣುತ್ತ ಬದುಕಿದ್ದಳು. 

ಆದರೆ ಗಿರಾಕಿಯೊಬ್ಬ ಕಾಸು ಕೊಡಲು ಸತಾಯಿಸಿ ಪೊಲೀಸರಿಗೆ ಮಾಹಿತಿ ನೀಡಿ ರೈಡಿನ ನಾಟಕವಾದಾಗ ಅವಳ ಯಶಸ್ವಿ ಜೀವನದ ಕತೆ ಜಗಜ್ಜಾಹೀರಾಯಿತು. ಒಂದು ವಾರವಿಡೀ ಟಿವಿ ಪರದೆಯ ಮೇಲೆ ಅವಕುಂಠನವತಿಯಾದ ಅವಳ ಮುಖ ಹರಿದಾಡಿತು.

(೫)

ಅವನಿಗೆ ಹೆಣ್ಣುದೇಹಕ್ಕಿಂತ ಗಂಡುದೇಹಗಳ ಮೇಲೇ ಎಂಥದೋ ಮೋಹ. ಆದರೆ ಬಲಿಷ್ಟರಾದವರ ಹಿಂಸೆ, ಅತಿರೇಕ ಸಹಿಸುವುದು ಆ ಸೂಕ್ಷ್ಮಜೀವಿಗೆ ಕಷ್ಟ. ಅದಕ್ಕೇ ತುಂಬ ಚೂಸಿಯಾಗಿ ಹೊಸಬರನ್ನು, ಸಣ್ಣ ಹುಡುಗರನ್ನು ಆಯ್ದುಕೊಳ್ಳುತ್ತಾನೆ. ಬರಬರುತ್ತ ಬೆಂಗಳೂರಿನಲ್ಲಿ ಪುರುಷ ಸೆಕ್ಸ್ ವರ್ಕರ್‌ಗಳ ಸಂಖ್ಯೆ ಹೆಚ್ಚುತ್ತಿರುವುದು ಅವನಿಗೆ ಸಮಾಧಾನದ ವಿಷಯ. ಆದರೂ ತನ್ನ ಅಭಿರುಚಿ, ಪರ್ಸ್‌ಗೆ ಸರಿಹೊಂದುವಂತಹ ಜೋಡಿಯನ್ನು ಆಯ್ದುಕೊಳ್ಳಲು ಬಿಎಂ ಆಡ್ಸ್ ಸಹಾಯ ಮಾಡುತ್ತದೆ. ೧೪೦ ರೂ. ಕೊಟ್ಟು ಪತ್ರಿಕೆ ತೆರೆದರೆ ಸಾಕು. ಎಂತೆಂಥ ಮಾಲು ಎಲ್ಲೆಲ್ಲಿದೆ, ಎಷ್ಟು ದರ ಎಂಬಿತ್ಯಾದಿ ಬಿಸಿಬಿಸಿ ವಿವರಗಳು ಸಂಪರ್ಕ ಸಂಖ್ಯೆಯ ಸಮೇತ ದೊರೆಯುತ್ತದೆ.

ಸಂಸಾರ ಜಂಜಾಟಕ್ಕಿಂತ ಬೇಕಾದಾಗ ಹಣಕೊಟ್ಟು ಹೀಗೆ ಸುಖಪಡೆಯುವುದರಲ್ಲಿ ಅವನಿಗೆ ಸಂಪೂರ್ಣ ತೃಪ್ತಿಯಿದೆ. ಸದ್ಯಕ್ಕೆ ಅವನ ಸಮಸ್ಯೆ ಅಕಸ್ಮಾತ್ ರೈಡಿನಲ್ಲಿ ಅಥವಾ ಮಾಲಿನ ತರಲೆಯಲ್ಲಿ ಸಿಕ್ಕಿಬಿದ್ದು ತಾನು ಹೀಗೆ ಎಂದು ಜಗಜ್ಜಾಹೀರಾದರೆ ಎನ್ನುವುದಷ್ಟೇ ಆಗಿದೆ.

***

ಮೇಲಿನ ನಿರೂಪಣೆಗಳನ್ನು ಓದುತ್ತ ನಿಮ್ಮ ಮನದಲ್ಲೊಂದು ಕಾಮನಬಿಲ್ಲಿನಂಥ ಭಾವಪರದೆ ಹಾದುಹೋಗಿರಬಹುದು. ಇಷ್ಟು ಮಾತ್ರ ಅರ್ಥಮಾಡಿಕೊಳ್ಳಬಹುದು: ಸೆಕ್ಸ್‌ವರ್ಕಿಗೆ ಹಲವು ಮುಖಗಳಿವೆ. ಹಲವು ಕಾರಣಗಳಿವೆ. ಹಲವು ಸಂಕಟಗಳಿವೆ. ಅದರಲ್ಲಿಯೂ ವರ್ಗವಿದೆ. ಬಾಧಿತರು, ಫಲಾನುಭವಿಗಳು ಯಾರು ಎಂದು ನಿರ್ಧರಿಸುವುದೇ ಕಷ್ಟವಿದೆ. ವೇಶ್ಯಾವೃತ್ತಿಯ ಸಮಸ್ಯೆಗಳನ್ನು ಗುರುತಿಸಿ ಪರಿಹಾರದ ಕುರಿತು ಮಾತನಾಡಹೊರಟರೆ ಅದನ್ನು ಉತ್ತೇಜಿಸಿದ ಹಾಗಾಗುತ್ತದೆ. ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿರುವ ವೃತ್ತಿ ಹೋಗಿಯೇಬಿಡಬೇಕು ಎಂದರೆ ಕಟುವಾಸ್ತವವು ನಿನ್ನನ್ನು ನೀನೇ ಮೂರ್ಖಳಾಗಿಸಿಕೊಳ್ಳುತ್ತಿರುವೆಯಾ ಎಂದು ಅಣಕಿಸುತ್ತದೆ. 

ವೇಶ್ಯಾವೃತ್ತಿಯ ಕಷ್ಟಗಳು ವೇಶ್ಯೆಯರ ದೃಷ್ಟಿಯಿಂದ ಒಂದು ರೀತಿಯಾದರೆ, ಅವರ ಗಿರಾಕಿಗಳ ದೃಷ್ಟಿಯಿಂದ ಬೇರೆಯೇ ಇದೆ. ಒಂದು ಬದಲಾವಣೆ, ಪ್ರಯೋಗ ಅಥವಾ ಕುತೂಹಲಕ್ಕೆ  ವೇಶ್ಯಾವಾಟಿಕೆ ಹೊಕ್ಕು ಹೊರಬರುವವರ ದೃಷ್ಟಿಯಿಂದ ಯೋಚಿಸಿದರೆ ವೃತ್ತಿ ಬೇರೆಯದೇ ರೂಪದಲ್ಲಿ ಕಾಣಿಸುತ್ತದೆ. ಆ ಜಾಲಕ್ಕೆ ಎಳೆತಂದವರ ಕಷ್ಟ-ಪರಿಹಾರಗಳೂ; ಹೈಪ್ರೊಫೈಲ್ ಸೆಕ್ಸ್ ವರ್ಕರುಗಳ ಸಮಸ್ಯೆ-ಪರಿಹಾರಗಳೂ; ಸಲಿಂಗಿ ಸೆಕ್ಸ್ ವರ್ಕರುಗಳ ಸಮಸ್ಯೆಗಳೂ ವಿಭಿನ್ನವಾಗಿವೆ. ಮುಗ್ಧತೆ, ಬಾಲ್ಯ ಕಳೆದುಕೊಂಡ ಬಾಲವೇಶ್ಯೆಯರ ಕುರಿತು ಯೋಚಿಸಿದರೆ ಸೆಕ್ಸ್‌ವರ್ಕ್ ಪರವಾದ ಮಾತುಗಳೆಲ್ಲ ಪುತಪುತನೆ ಉದುರಿಬೀಳುತ್ತವೆ. 

ಹೊಸಸಂಪರ್ಕ ಏರ್ಪಡುವ, ಕಾಣದೂರುಗಳಿಗೆ ಪ್ರಯಾಣ ಮಾಡುವ, ಎಲ್ಲಿಂದೆಲ್ಲಿಗೋ ಹೋಗಿ ‘ಮಜಾ’ ಮಾಡುವ ಲೌಕಿಕದ ಕಾಲಮಾನದಲ್ಲಿ ವೇಶ್ಯಾವೃತ್ತಿ ಕುರಿತ ಮನದ ಮಾತುಗಳೆಲ್ಲ ಪ್ಯೂರಿಟಾನಿಕಲ್ ಆಗಿ ಕೇಳುತ್ತವೆ. ಯಾವಾಗಲೂ ಹಾಗೇ ಮಾನವ ದೌರ್ಬಲ್ಯವನ್ನು ಸಮಸ್ಯೆಯಾಗಿ ಪರಿಗಣಿಸಿ ನೋಡಿದರೆ ಪರಿಹಾರದ ಎಲ್ಲ ಚೌಕಟ್ಟೂ ಕಿತ್ತು ಹಾರಿಹೋಗುತ್ತದೆ. 

ಆದರೆ ಇಷ್ಟು ಮಾತ್ರ ನಿಜ, ಎಲ್ಲ ದೇಶಕಾಲಗಳಲ್ಲಿಯೂ ಅತ್ಯಂತ ಹೀನಾಯವಾಗಿ ಬದುಕಿದವರು, ಹೊಟ್ಟೆಚೀಲ ತುಂಬಿಸಲೆಂದೋ ಅಥವಾ ಮದ ಇಳಿಸಲೆಂದೋ ತಮ್ಮ ಜೀವನಾಶ ಮಾಡಿಕೊಂಡವರು ವೇಶ್ಯೆಯರು. 

***

ಈಗಾಗಲೇ ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧ. ಆದರೆ ಅದಕ್ಕೆ ಸಂಬಂಧಿಸಿದ ಹಲವಾರು ಚಟುವಟಿಕೆಗಳು - ಸಾರ್ವಜನಿಕ ಸ್ಥಳದಲ್ಲಿ ಆಹ್ವಾನಿಸುವುದು, ವೇಶ್ಯಾವಾಟಿಕೆ ನಡೆಸುವುದು, ದಲ್ಲಾಳಿತನ, ತಲೆಹಿಡುಕತನ, ವೇಶ್ಯೆಯರನ್ನರಸುತ್ತ ಬೀದಿ ತಿರುಗುವುದು - ಇವೆಲ್ಲ ಕಾನೂನು ಬಾಹಿರ. ೧೯೫೬ರಲ್ಲಿ ಬಂದ ಸಪ್ರೆಷನ್ ಆಫ್ ಇಮ್ಮಾರಲ್ ಟ್ರಾಫಿಕಿಂಗ್ ಆಕ್ಟ್   ಸಾರ್ವಜನಿಕ ಸ್ಥಳಗಳ ೨೦೦ ಗಜದ ಒಳಗೆ ಲೈಂಗಿಕ ಕ್ರಿಯೆ ನಡೆಸುವುದು ಶಿಕ್ಷಾರ್ಹ ಎಂದಿತು. ಆದರೆ ಖಾಸಗಿಯಾಗಿ ನಡೆಸುವ ವೇಶ್ಯಾವೃತ್ತಿ, ಸ್ವಇಚ್ಛೆಯಿಂದ ವೈಯಕ್ತಿಕವಾಗಿ ಮಾಡುವ ಸೆಕ್ಸ್‌ವರ್ಕ್ ಕಾನೂನುಬಾಹಿರ ಅಲ್ಲ ಎಂದಿತು. ಈಗದು  ಪ್ರಿವೆನ್ಷನ್ ಆಫ್ ಇಮ್ಮಾರಲ್ ಟ್ರಾಫಿಕಿಂಗ್ ಆಕ್ಟ್  ಆಗಿ ಪರಿಷ್ಕೃತಗೊಂಡಿದೆ. 

ಆದರೆ ವೈಯಕ್ತಿಕವಾಗಿ, ವೇಶ್ಯಾಗೃಹಗಳಲ್ಲಿ ವೃತ್ತಿ ನಡೆಸಬಹುದು ಎಂದಿದ್ದರೂ ಐಪಿಸಿ ಸೆಕ್ಷನ್ ಅಡಿ ‘ಸಾರ್ವಜನಿಕ ಅಸಭ್ಯ ವರ್ತನೆ’, ಸಾರ್ವಜನಿಕ ಉಪದ್ರವವೆಂದು ವೇಶ್ಯಾವೃತ್ತಿಯಲ್ಲಿ ತೊಡಗಿರುವವರನ್ನು ಬಂಧಿಸಲಾಗುತ್ತಿದೆ. ಪಿಟಾ ಕಾಯ್ದೆಯ ಸೆ. ೮ ವೇಶ್ಯೆಯರನ್ನು ಬಂಧಿಸಲು ಮಾತ್ರ ಬಳಕೆಯಾಗುತ್ತಿದೆ.  

ವೇಶ್ಯಾವೃತ್ತಿಯಲ್ಲಿ ದೈಹಿಕ, ಮಾನಸಿಕ ಹಿಂಸೆ ಅಂತರ್ಗತವಾಗಿದೆ. ಗಿರಾಕಿಯೋ, ಗಂಡನೋ, ಜೊತೆಗಾರನೋ, ಪೊಲೀಸರೋ - ಒಬ್ಬರಲ್ಲಾ ಒಬ್ಬರಿಂದ ಅವರು ನಿರಂತರ ಹಿಂಸೆಗೊಳಗಾಗುತ್ತಾರೆ. ಒಂದು ಸರ್ವೇ ಪ್ರಕಾರ: ೭೬% ವೇಶ್ಯೆಯರು ಗಿರಾಕಿಗಳಿಂದ ಹಿಂಸೆಗೊಳಗಾಗುತ್ತಾರೆ. ೭೩% ಬಲವಂತವಾಗಿ ಇಷ್ಟವಿಲ್ಲದೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ೪೦% ವೇಶ್ಯೆಯರು ಗಿರಾಕಿಯ ಬಳಿ ಹೋಗುವ ಮೊದಲೇ ಹೆಂಡ ಕುಡಿಯುತ್ತಾರೆ. ಸೆಕ್ಸ್ ವರ್ಕರ್‌ಗಳಿಗೆ ಸಾಧಾರಣವಾಗಿ ಒಬ್ಬ ಪಾರ್ಟನರ್ ಅಥವಾ ಪ್ರೇಮಿ ಇದ್ದು ಬಹಳಷ್ಟು ಸಲ ಅವರನ್ನು ಎಲ್ಲ ರೀತಿಯಲ್ಲೂ ದೋಚುವವ ಈ ಪ್ರೇಮಿಯೇ ಆಗಿರುತ್ತಾನೆ. ಆದರೂ ಅವನಿಗೆ ತಮ್ಮ ‘ನಿಷ್ಠೆ’ಯನ್ನು ವೈವಿಧ್ಯಮಯವಾಗಿ ಪ್ರದರ್ಶಿಸುತ್ತಾ ೯೮% ಪ್ರಕರಣಗಳಲ್ಲಿ ಪ್ರೇಮಿಯಿಂದಲೂ ಹಿಂಸೆ ಅನುಭವಿಸುತ್ತಾರೆ. 

ಎಲ್ಲ ಹಿಂಸೆಗಿಂತ ಅವರಿಗೆ ಅತಿ ಭಯ ಹುಟ್ಟಿಸುವುದು ಪೊಲೀಸ್ ದೌರ್ಜನ್ಯ ಮತ್ತು ಸುಲಿಗೆ. ಪರ್ಸಿನಲ್ಲಿ ಕಾಂಡೋಂ ಇಟ್ಟುಕೊಂಡರೆ ಪೊಲೀಸರಿಂದ ಅವಮಾನ, ಹಫ್ತಾ ವಸೂಲಿಗೊಳಗಾಗುತ್ತಾರೆ. ಅತ್ಯಾಚಾರ, ಹಿಂಸೆಯಾಗಿದೆ ಎಂದು ದೂರು ಒಯ್ದರೆ ಪೊಲೀಸರಿಂದಲೇ ದೌರ್ಜನ್ಯ ಎದುರಿಸುತ್ತಾರೆ. ಪೊಲೀಸರಿಗೆ ಸೆಕ್ಸ್‌ವರ್ಕ್ ಮಾಡುವವರು ಮನುಷ್ಯರೆಂದೇ ಅನಿಸಿಲ್ಲ. ಕಂಡಕಂಡವರ ಜೊತೆ ಮಲಗುವವರು ತಮ್ಮ ಜೊತೆಯೂ ಪುಕ್ಕಟೆ ಮಲಗಲಿ ಎಂದು ಭಾವಿಸುತ್ತಾರೆನ್ನುವುದು ಸೆಕ್ಸ್ ವರ್ಕರ್‌ಗಳ ಅನುಭವ. 

ಇದರ ನಡುವೆ ವೇಶ್ಯೆಯರ ಕುರಿತು ಸಹಾನುಭೂತಿ, ಕರುಣೆ ಹೊಂದಿರುವವ ವರ್ಗವೊಂದು ವೇಶ್ಯಾವೃತ್ತಿಯನ್ನು ಕಾನೂನು ನಿಯಂತ್ರಣದಡಿ ತರುವ ಮಾತು ಹೇಳುತ್ತಿದೆ. ‘ವೃತ್ತಿ’ ಎಂದು ಪರಿಗಣಿಸಲ್ಪಟ್ಟರೆ ಗಿರಾಕಿಗಳಿಗೆ ಸೇವೆ ನಿರಾಕರಿಸುವ; ನಿರ್ದಿಷ್ಟ ಶುಲ್ಕ ವಿಧಿಸುವ; ಗೂಂಡಾಗಳ ನಿಯಂತ್ರಣ ತಪ್ಪಿಸಿಕೊಳ್ಳುವ, ಪೊಲೀಸ್ ದೌರ್ಜನ್ಯ ನಿಲ್ಲುವ ಸಾಧ್ಯತೆಯಿದೆ ಎನ್ನುವುದು ಅವರ ಅಭಿಪ್ರಾಯ. ನ.೮ರಂದು ಕೇಂದ್ರ ಮಹಿಳಾ ಆಯೋಗದ ಅಧ್ಯಕ್ಷರು ಸುಪ್ರೀಂಕೋರ್ಟ್ ರಚಿಸಿರುವ ಸಂಸದೀಯ ಸಮಿತಿ ಎದುರು ವೇಶ್ಯಾವೃತ್ತಿಯನ್ನು ಕಾನೂನಿನ ನಿಯಂತ್ರಣಕ್ಕೊಳಪಡಿಸುವ ಕುರಿತು ತಮ್ಮ ಸಲಹೆ ಸಲ್ಲಿಸಿದ್ದಾರೆ. 

ಆದರೆ ನಮ್ಮ ದೇಶದಲ್ಲಿ ಅತಿ ಕಠಿಣ ಕಾನೂನು ತಂದಮೇಲೂ ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಸಾರಾಯಿ ಬಳಕೆ, ಮಾದಕ ವಸ್ತು ಸಾಗಾಟ, ವರದಕ್ಷಿಣೆ, ಅತ್ಯಾಚಾರ, ಬಾಲಕಾರ್ಮಿಕರ ನೇಮಕ ಇತ್ಯಾದಿ ಸಾಮಾಜಿಕ ಸಮಸ್ಯೆಗಳು ಬಗೆಹರಿಯಲಿಲ್ಲ. ಕಾನೂನುಗಳು ಕಾಗದದ ಮೇಲಿನ ಅಕ್ಷರಗಳಾಗಿಯೇ ಉಳಿದಿವೆ. ಹೀಗಿರುವಾಗ ಕಾನೂನಿನ ಮೂಲಕ ವೇಶ್ಯೆಯರ ಬದುಕನ್ನು ಬದಲಾಯಿಸಲು ಸಾಧ್ಯವೇ ಎನ್ನುವುದರ ಬಗೆಗೆ ವಸ್ತುನಿಷ್ಠ ಚರ್ಚೆ ಅಗತ್ಯವಿದೆ. ಸೆಕ್ಸ್‌ವರ್ಕ್ ಎಂಬ ವಿಶಿಷ್ಟ ವೃತ್ತಿಯನ್ನು ಕಾನೂನುಬದ್ಧ ಯಾ ನಿಯಂತ್ರಣಕ್ಕೊಳಪಡಿಸುವ ಸಾಧಕ-ಬಾಧಕಗಳೇನು? ವೇಶ್ಯೆಯರ ಬದುಕಿನ ಹೊತ್ತಗೆಯಲ್ಲಿ ಘನತೆಯೆಂಬ ಶಬ್ದ ಯಾವ ಪುಟದ ಯಾವ ಸಾಲಿನಲ್ಲಾದರೂ ಸುಳಿಯಲು ಸಾಧ್ಯವಿದೆಯೇ? ಎನ್ನುವ ಕುರಿತು ಭಿನ್ನ ಆಯಾಮಗಳಿಂದ ಯೋಚಿಸಬೇಕಿದೆ. 

ಘನತೆಯ ಬದುಕು: ಕೆಲ ಪ್ರಶ್ನೆಗಳು 

ಕೆಲವೊಮ್ಮೆ ಬದುಕಿನ ದಾರುಣ ಘಳಿಗೆಗಳ ಅಸಹಾಯಕತೆ ಹಾಗೂ ಗಳಿಕೆಯ ಆಮಿಷಕ್ಕೆ ಹೆಣ್ಣು, ಗಂಡೆನ್ನದೇ ಎಲ್ಲರೂ ಪಕ್ಕಾಗಿಬಿಡುವ ಸಾಧ್ಯತೆಯಿದೆ. ಅದಕ್ಕಾಗಿ ಗಂಡನನ್ನೋ, ಹೆಂಡತಿಯನ್ನೋ, ಮಕ್ಕಳನ್ನೋ, ಬಂಧುವನ್ನೋ ಮಾರಿಯಾರು ಅಥವಾ ಕೊಂದಾರು. ವೇಶ್ಯಾವೃತ್ತಿಯಿಂದ ಸಾಕಷ್ಟು ಗಳಿಸಿ ತಾನು ಸುಖಿಯೆನುವ ಕೆಲ ಅಪವಾದಗಳ ಮಾತು ಬಿಟ್ಟರೆ ಉಳಿದಂತೆ ಬಹುಪಾಲು ಮಹಿಳೆಯರು ಕೌಟುಂಬಿಕ, ಆರ್ಥಿಕ ಸಂಕಷ್ಟಕ್ಕೆ ವೃತ್ತಿಗಿಳಿದವರು. ಹೆಚ್ಚಿನವರು ಗ್ರಾಮೀಣ ಭಾಗಗಳಿಂದ ಬಂದ ಬಡ, ತಳ ಸಮುದಾಯಗಳ ಅಸಹಾಯಕ ಹೆಣ್ಮಕ್ಕಳು. ವೇಶ್ಯೆಯರಲ್ಲಿ ೪೦% ಬಾಲ ವೇಶ್ಯೆಯರು. ೭೦% ನಿರಕ್ಷರಿಗಳು. ೬೧% ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದವರು. 

ಸೆಕ್ಸ್ ವರ್ಕರ್ ಆತ್ಮಕಥನಗಳನ್ನು ಓದಿದರೆ ಆ ಬದುಕಿನ ವಿವಿಧ ಮಗ್ಗುಲುಗಳ ಪರಿಚಯವಾಗುತ್ತದೆ. ಎಷ್ಟೋ ಮಕ್ಕಳು ತಾಯ್ತಂದೆಯರಿಂದ ಮಾರಲ್ಪಡುತ್ತವೆ. ಅವರನ್ನು ರೈಡ್‌ಗಳಲ್ಲಿ ರಕ್ಷಿಸಿ ಮನೆಗೆ ತಂದು ಬಿಟ್ಟರೆ ಪಾಲಕರು ಮತ್ತೊಬ್ಬ ದಲ್ಲಾಳಿಗೆ ಎರಡನೇ ಬಾರಿ ಮಾರುತ್ತಾರೆ! ಸೆಕ್ಸ್ ಎಂದರೇನೆಂದು ತಿಳಿಯದ ಅಪ್ರಾಪ್ತ ಬಾಲೆಯರ ಆಪೋಶನ ತೆಗೆದುಕೊಳ್ಳುವ; ಹಿಂಸೆ, ಮಾದಕ ವಸ್ತು, ಅಪರಾಧ ಇವೆಲ್ಲವೂ ತಳುಕು ಹಾಕಿಕೊಂಡಿರುವ ೮ ಬಿಲಿಯನ್ ಡಾಲರ್ ವಹಿವಾಟಿನ ದೊಡ್ಡ ಜಾಲ ವೇಶ್ಯಾವಾಟಿಕೆ. ನಮ್ಮ ದೇಶದಲ್ಲಿ ಸೆಕ್ಸ್ ವರ್ಕ್ ಮಾಡುವವರ ಸಂಖ್ಯೆ ೪೦ ಲಕ್ಷಕ್ಕಿಂತ ಹೆಚ್ಚು. ಅದರಲ್ಲಿ ೧೫ ಲಕ್ಷ ಬಾಲವೇಶ್ಯೆಯರು. ಪ್ರಪಂಚದ ಕಾಲುಭಾಗ ಬಾಲವೇಶ್ಯೆಯರು ಭಾರತದಲ್ಲಿದ್ದಾರೆ. ಮುಂಬಯಿಯ ಕಾಮಾಟಿಪುರ ಒಂದರಲ್ಲೇ ೨ ಲಕ್ಷ ವೇಶ್ಯೆಯರಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ೪೦೦೦೦ ಅಪಹರಣ ಪ್ರಕರಣ ದಾಖಲಾಗುತ್ತವೆ. ೧೧೦೦೦ ಮಕ್ಕಳು ಪತ್ತೆಯೇ ಆಗುವುದಿಲ್ಲ. ದೇಶದೊಳಗಿನವರಷ್ಟೇ ಅಲ್ಲ, ನೆರೆಕೆರೆಯ ಹೊರದೇಶದಿಂದಲೂ ಮಾನವ ಸಾಗಾಟ ನಡೆಯುತ್ತದೆ. ಒಟ್ಟು ೨ ಲಕ್ಷ ನೇಪಾಳಿ ಹುಡುಗಿಯರು ಭಾರತದ ವೇಶ್ಯಾಗೃಹಗಳಲ್ಲಿದ್ದಾರೆ. ಪ್ರತಿವರ್ಷ ೫-೭ ಸಾವಿರ ನೇಪಾಳಿ ಹುಡುಗಿಯರು ಭಾರತದ ವೇಶ್ಯಾಗೃಹಗಳಿಗೆ ಮಾರಲ್ಪಡುತ್ತಾರೆ. 


ಹೆಣ್ಣು, ಹೆಣ್ಣುಮಗು, ಮಕ್ಕಳು ಕಾಮದ ಆಟಿಕೆಯಾಗಿದ್ದಾರೆ. ಇತ್ತೀಚೆಗೆ ಶಾಲೆಗಳಲ್ಲಿ ಎಳೆಯ ಹುಡುಗಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದು ಅದನ್ನು ತಡೆಗಟ್ಟಲು ಕಠಿಣ ನೀತಿ ನಿಯಮಾವಳಿ ರೂಪುಗೊಂಡಿವೆ. ಅದರ ಪ್ರಕಾರ ಮಕ್ಕಳನ್ನು ಎಲ್ಲೆಲ್ಲೋ ಮುಟ್ಟುವುದು, ಚಿಗುಟುವುದು, ನೋಡುವುದು, ತಬ್ಬುವುದು ತಪ್ಪು. ವಿಪರ್ಯಾಸವೆಂದರೆ ಶಾಲೆಗೆ ಬರುವ ಮಕ್ಕಳಿಗೆ ನೆಪಮಾತ್ರದ ಕಾನೂನಾದರೂ ಇದೆ, ಆದರೆ ಶಾಲೆಗೆ ಬರದೇ ಮಾರಾಟವಾದ ಮಕ್ಕಳು ಧಂಧೆ ನಡೆಯುವ ಜಾಗಗಳಲ್ಲಿ ಎಷ್ಟು ಬೇಕಾದರೂ ಸಿಗುತ್ತಾರೆ. ಅವರನ್ನು ನೀವು ಹೇಗಾದರೂ ಕೂರಿಸಿ, ಬಾಗಿಸಿ, ಮಲಗಿಸಿ ಹಿಂಸಿಸಿದರೂ ತಪ್ಪಲ್ಲ. ಏಕೆಂದರೆ ನೀವು ಅದಕ್ಕೆಂದೇ ದುಡ್ಡು ತೆತ್ತಿದ್ದೀರಿ! 

ಹೀಗೆ ಹೇಳಲಾಗುತ್ತದೆ:

  • ಪ್ರವಾಸೋದ್ಯಮ ಬೆಳೆದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
  • ವ್ಯಾಪಾರ ವಹಿವಾಟು ವೃದ್ಧಿಸಿದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
  • ನ್ಯಾಷನಲ್ ಹೈವೇ, ರೈಲ್ವೇ ಲೈನು ಬಂದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
  • ಯುದ್ಧ ಚಟುವಟಿಕೆ ತೀವ್ರಗೊಂಡರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
  • ಶಾಂತಿಕಾಲದಲ್ಲಿ ಮನೋರಂಜನೆಗೆಂದು ವೇಶ್ಯಾವಾಟಿಕೆ ಬೆಳೆಯುತ್ತದೆ.
  • ಬಡತನ, ನಿರುದ್ಯೋಗ, ಅಪರಾಧ ಹೆಚ್ಚಿದರೆ ವೇಶ್ಯಾವಾಟಿಕೆ ಬೆಳೆಯುತ್ತದೆ.
  • ಶ್ರೀಮಂತ ನಗರ, ದೇಶಗಳಲ್ಲಿ ವೇಶ್ಯಾವಾಟಿಕೆ ಹೆಚ್ಚಿದೆ.

ಹಾಗಾದರೆ ವೇಶ್ಯಾವಾಟಿಕೆ ಯಾವುದರಿಂದ, ಯಾವಾಗ ಕಡಿಮೆಯಾಗುತ್ತದೆ?

ಸಂವಿಧಾನ ಬದುಕುವ ಹಕ್ಕು ಕೊಟ್ಟಿದೆ, ಆದರೆ ‘ನನ್ನ ದೇಹ, ನನ್ನ ಹಕ್ಕು’ ಎಂದು ಆತ್ಮಹತ್ಯೆಗೆಳಸಿದರೆ ಅಪರಾಧವಾಗುತ್ತದೆ. ಕಾಸಿಗಾಗಿ ಲೈಂಗಿಕತೆ ಸರಿಯೆನ್ನುವುದಾದರೆ ಕಾಸಿಗಾಗಿ ನನ್ನಿಷ್ಟದಂತೆ ನನ್ನ ದೇಹದ ಕಿಡ್ನಿಯನ್ನೋ, ಮತ್ತೊಂದನ್ನೋ ಮಾರುವುದು ಏಕೆ ಅಪರಾಧವಾಗುತ್ತದೆ? ಹೊಟ್ಟೆಪಾಡೋ, ಐಶ್ವರ್ಯ-ಐಷಾರಾಮವೋ, ಬಯಸಿದಂತಹ ಒಂದು ಬದುಕನ್ನು ಸಾಕಾರಗೊಳಿಸಿಕೊಳ್ಳಲು ಮನುಷ್ಯ ಕೈಗೊಂಡ ಮಾರ್ಗಗಳೆಲ್ಲ ಸರಿಯೇ ಎನ್ನುವುದಾದರೆ ಕಾನೂನಿನ ಅವಶ್ಯಕತೆ, ಅರ್ಥವ್ಯಾಪ್ತಿ ಏನಾಯಿತು? ವೇಶ್ಯಾವೃತ್ತಿ ಸರಿ ಎಂದರೆ ವ್ಯಭಿಚಾರದ ವ್ಯಾಖ್ಯೆ ಏನಾಯಿತು? ಬಹುಪತ್ನಿತ್ವ ಮತ್ತು ದೇವದಾಸಿ ಪದ್ಧತಿ ನಿಷೇಧಿಸುವ ಕಾನೂನಿನ ಉದ್ದೇಶ ಎಲ್ಲಿ ಹೋಯಿತು? ಒಬ್ಬ ವೇಶ್ಯೆ ಇದ್ದಾಳೆಂದರೆ ನೂರಾರು ವ್ಯಭಿಚಾರಿ ಗಂಡಸರಿರುತ್ತಾರೆಂದೇ ಅರ್ಥ. ಹಾಗಾದರೆ ದಾಂಪತ್ಯದ ವ್ಯಾಖ್ಯೆ ಏನಾಯಿತು? ವೇಶ್ಯಾವೃತ್ತಿ ಕಾನೂನಿನ ನಿಯಂತ್ರಣಕ್ಕೊಳಪಟ್ಟ ನಂತರ ತಲೆಹಿಡುಕರು-ದಲ್ಲಾಳಿಗಳು-ಪೂರೈಕೆದಾರರ ಡೆಸಿಗ್ನೇಷನ್ ಏನಾದೀತು? 

ಇಂಥ ಹಲವು ಪ್ರಶ್ನೆಗಳಿಗೆ ಕಾನೂನಿನ ನಿಯಂತ್ರಣ ಉತ್ತರವಾಗುವುದಿಲ್ಲ. ಆದರೆ ಇಂಥ ವಿಷಯಗಳನ್ನೆಲ್ಲ ಭಾವುಕ ಎಂದು  ಅತ್ತ ಸರಿಸಲೂ ಬರುವುದಿಲ್ಲ.

ಆಷಾಢಭೂತಿತನ

ಚಿತ್ರ: ವಿನ್ಸೆಂಟ್ ವ್ಯಾನ್ ಗೊ

ಒಂದಂತೂ ಸ್ಪಷ್ಟ: ಲೈಂಗಿಕತೆ ಕುರಿತ ಸಮಾಜದ ವ್ಯಾಖ್ಯೆ ಆಷಾಢಭೂತಿತನದಿಂದ ತುಂಬಿದೆ. ಬೋಧಿಸುವುದಕ್ಕೂ, ನಡೆಯುತ್ತಲಿರುವುದಕ್ಕೂ, ನಡೆಯಲು ಅವಕಾಶ ಕೊಟ್ಟಿರುವುದಕ್ಕೂ ಅರ್ಥಾರ್ಥ ಸಂಬಂಧವಿಲ್ಲ. ಈ ಎಲ್ಲ ಸಹಸ್ರಮಾನಗಳಲ್ಲಿ ಹೆಣ್ಣಿನ ಮತ್ತು ಗಂಡಿನ ಲೈಂಗಿಕತೆಯ ಭಿನ್ನತೆಗಳನ್ನು, ಅದಕ್ಕೆ ತಕ್ಕ ಅವಶ್ಯಕತೆಗಳನ್ನು ಸಮಾಜ ಅರ್ಥಮಾಡಿಕೊಂಡಿಲ್ಲ. ತನ್ನ ಲೈಂಗಿಕತೆಯನ್ನೂ, ಅದರ ಅವಶ್ಯಕತೆಗಳನ್ನೂ ಸರಿಯಾಗಿ ವ್ಯಾಖ್ಯಾನಿಸಿಕೊಳ್ಳದೇ, ಅದಕ್ಕೆ ತಕ್ಕ ನಿಯಂತ್ರಣಗಳನ್ನೂ ಹೊಂದದೇ ಪುರುಷಕೇಂದ್ರಿತ ಸಮಾಜ ತನ್ನನ್ನು ತಾನು ಹಾಗೂ ಮಹಿಳೆಯನ್ನು ವಂಚಿಸುತ್ತ ಬಂದಿದೆ.  

ಪ್ರಾಣಿಗಳಲ್ಲಿ ಎಲ್ಲ ಕಾಲದಲ್ಲೂ ಗಂಡಿಗೆ ಲೈಂಗಿಕಾಪೇಕ್ಷೆ ಇರುತ್ತದೆ. ಆದರೆ ಹೆಣ್ಣು ‘ಸಿದ್ಧ’ವಾಗುವುದು ಈಸ್ಟ್ರಸ್ ಸೈಕಲ್ ಇರುವಾಗ ಮಾತ್ರ. ಮನುಷ್ಯರಲ್ಲೂ ಹೆಣ್ಣಿನ ಲೈಂಗಿಕತೆ ಪುರುಷನದಕ್ಕಿಂತ ಕೊಂಚ ಭಿನ್ನ. ಹಾರ್ಮೋನ್ ಏರುಪೇರುಗಳು ಋತುಚಕ್ರದ ಕಾರಣ ಪದೇಪದೇ ಬದಲಾಗುವುದರಿಂದ ಹೆಣ್ಣಿನ ಅಪೇಕ್ಷೆ ಸದಾಕಾಲ ಒಂದೇರೀತಿ ಇರುವುದಿಲ್ಲ. ಅರ್ಧಕ್ಕಿಂತ ಹೆಚ್ಚು ಪತ್ನಿಯರು ಜೀವಮಾನವಿಡೀ ಗಂಡನ ಜೊತೆ ಮಲಗೆದ್ದರೂ ಲೈಂಗಿಕ ಸುಖದ ಅನುಭವವೇ ಆಗದೇ ಇರುತ್ತಾರೆ. ಒಂದು ನೇವರಿಸುವಿಕೆಗೆ, ಬೆಚ್ಚನೆಯ ಸ್ಪರ್ಶಕ್ಕೆ, ಒಳ್ಳೆಯ ಮಾತಿಗೆ ದೊರೆವ ಸಮಾಧಾನದಿಂದ ಲೈಂಗಿಕತೆ ನೀಡುವ ತೃಪ್ತಿಯನ್ನು ಕಂಡುಕೊಂಡಿರುತ್ತಾರೆ. 

ಇತ್ತೀಚೆಗೆ ಒಂದು ಸಮೀಕ್ಷೆ ಹೇಳಿರುವಂತೆ ಗಂಡು ಪ್ರತಿದಿನ ಕನಿಷ್ಠ ೧೯ ಬಾರಿ ಲೈಂಗಿಕತೆ ಕುರಿತು ಯೋಚಿಸುತ್ತಾನೆ. ಆದರೆ ಅಷ್ಟು ಸಲ ತನ್ನ ಹೆಣ್ಣನ್ನು ಹಾಸಿಗೆಗೆ ಒಯ್ಯಲು ಅವಳೂ ಒಪ್ಪುವುದಿಲ್ಲ. ಅವನ ದೇಹವೂ ಸ್ಪಂದಿಸಲಾರದು. ದೇಹ, ಮನಸ್ಸು, ಲಭ್ಯತೆಗಳ ನಡುವಿನ ವಿಪರ್ಯಾಸಗಳನ್ನು ತೂಗಿಸಿಕೊಂಡುಹೋಗುವುದೇ ಕ್ರಿಯಾಶೀಲ, ಆರೋಗ್ಯವಂತ ಪುರುಷನ ದೊಡ್ಡ ಸವಾಲು. ಲೈಂಗಿಕತೆ ಹುಟ್ಟಿಸುವ ಅದಮ್ಯ ಒತ್ತಡ ಮತ್ತು ಶಕ್ತಿಯನ್ನು ಸದ್ಬಳಕೆಗಾಗಿ ಚಾನೆಲೈಸ್ ಮಾಡುವಂತೆ ನೋಡಿಕೊಳ್ಳಬೇಕಾದ್ದು ಸಮಾಜ, ಕುಟುಂಬ ವ್ಯವಸ್ಥೆ ಮತ್ತು ರಾಜಕಾರಣದ ಜವಾಬ್ದಾರಿಯಾಗಿದೆ. ಆದರೆ ವಿಪರ್ಯಾಸವೆಂದರೆ ಹೆಣ್ಣಿನ ಲೈಂಗಿಕತೆ-ಚಂಚಲತೆ ಬಗ್ಗೆ ಕತೆ ಕಟ್ಟಿ ಹೇಳಿದ ಸಮಾಜ ಗಂಡಿನ ಅಗತ್ಯಗಳನ್ನು, ನಿಯಂತ್ರಣವನ್ನು ಮುಚ್ಚುಮರೆಯಲ್ಲಿಟ್ಟು ಮುಕ್ತವಾಗಿ ಮಾತನಾಡದೇ ಹೋಯಿತು. ಕಾಮಸೂತ್ರ ವ್ಯಾಖ್ಯಾನವೂ ಸೇರಿದಂತೆ ಪುರುಷತ್ವದ ಶಕ್ತಿ ಹಾಗೂ ಅದನ್ನು ತಣಿಸುವ ವಿಧಾನಗಳ ಕುರಿತ ವೈಭವೀಕರಣ ನಡೆಯಿತು. ಗಂಡಿನ ವೈವಿಧ್ಯಮಯ ಲೈಂಗಿಕತೆಯ ಅವಕಾಶಕ್ಕೆ ಮುಕ್ತಚಲನೆಯ ರಹದಾರಿ ಸೃಷ್ಟಿಸಲಾಯಿತು. ಜೊತೆಗೆ ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮರಣ ಎಂಬ ಅಪ್ರಾಯೋಗಿಕ ಹುಸಿ ತತ್ವವನ್ನು ಗಂಡಸಿಗೆ ಬೋಧಿಸಿ, ಮುಷ್ಠಿ ಮೈಥುನದಂತಹ ವಿಷಯ ಕುರಿತು ತಪ್ಪು ಗ್ರಹಿಕೆಗಳನ್ನು ತುಂಬಿ, ಪುರುಷನ ಲೈಂಗಿಕ ಬದುಕು ಇನ್ನಷ್ಟು ಬಿಗಡಾಯಿಸುವಂತೆ ಮಾಡಿತು. ಬಹುಶಃ ಇವೆಲ್ಲ ಗಂಡಿನ ಮನಸ್ಥಿತಿಯಲ್ಲಿ, ಸಮಾಜದ ಪುರುಷ ವ್ಯಾಖ್ಯಾನದಲ್ಲಿ ಎಷ್ಟು ಆಳವಾಗಿ ಬೇರುಬಿಟ್ಟಿದೆಯೆಂದರೆ ವೇಶ್ಯಾವಾಟಿಕೆಯನ್ನು ಜೀವಂತವಾಗಿಟ್ಟಿರುವಲ್ಲಿ ಇವೆಲ್ಲ ಅಂಶಗಳು ಕೆಲಸ ಮಾಡಿವೆ. ಯಾವ ಜವಾಬ್ದಾರಿಯಿಲ್ಲದೇ ಹಣ ಮತ್ತು ಉಡುಗೊರೆಗೆ ಬದಲಾಗಿ ಲೈಂಗಿಕ ತೃಪ್ತಿ ಹೊಂದುವ ಪುರುಷನ ಬಯಕೆಗೆ ವೇಶ್ಯಾವೃತ್ತಿ ಸೃಷ್ಟಿಯಾಗಿ ಮುಂದುವರೆಯುತ್ತ ಬಂದಿದೆ. 

ದುಡಿಮೆಗೆ ಸಾವಿರ ದಾರಿಗಳಿವೆ. ಅದರಲ್ಲಿ ದೇಹ ಮಾರುವುದೂ ಒಂದು ಎಂದು ಅಂದುಕೊಳ್ಳುವಷ್ಟು ಸರಳವಲ್ಲ ಸೆಕ್ಸ್ ವರ್ಕ್. ಈಗಲೂ ಕುಟುಂಬವನ್ನು ಸಮಾಜದ ಯುನಿಟ್ ಎಂಬಂತೆ ನೋಡಲಾಗುತ್ತದೆ. ಅದರಲ್ಲಿ ವೇಶ್ಯೆಯರಿಗೆ ಸ್ಥಾನವೇ ಇಲ್ಲ. ವೇಶ್ಯೆಯರ, ವೇಶ್ಯಾವಾಟಿಕೆಯ ಹಾಗೂ ಅದರಿಂದ ನಲುಗುವ ಲಕ್ಷಾಂತರ ಕುಟುಂಬಗಳ ಆಳದ ಸಮಸ್ಯೆ ವಿಚಿತ್ರವಾಗಿದೆ. ವೇಶ್ಯೆಯರ ಸಮಸ್ಯೆಯ ಜೊತೆಗೆ ಅವರ ಗಿರಾಕಿಗಳ ಕುಟುಂಬ, ಆರೋಗ್ಯ ಕುರಿತೂ ಯೋಚಿಸಬೇಕಾದ ಅಗತ್ಯವಿದೆ. 

ಒಟ್ಟಾರೆ..

ಇತ್ತೀಚೆಗೆ ವೆಜೈನ ಟ್ಯಾಕ್ಸ್ ಎಂಬ ಪದ ಕೇಳಿಬಂತು. ಎಂದರೆ ಹೆಣ್ಣಾಗಿ ಹುಟ್ಟಿದ್ದಕ್ಕೆ ಕೊಡಲೇಬೇಕಾದ ತೆರಿಗೆ ಎಂಬರ್ಥದಲ್ಲಿ ಅದು ಬಳಸಲ್ಪಟ್ಟಿತ್ತು. ನಿಸ್ಸಂಶಯವಾಗಿ ಮಾನವ ಪ್ರಭೇದದ ಹೆಣ್ಣುಜೀವಿಯಾಗಿ ಹುಟ್ಟಿದ್ದಕ್ಕೆ ತೆರುತ್ತಿರುವ ಭಯಾನಕ ವೆಜೈನ ಟ್ಯಾಕ್ಸ್ ವೇಶ್ಯಾವೃತ್ತಿ. ಅದರ ಜೊತೆ ಎಚ್ಚೈವಿ ಮತ್ತು ಹಿಂಸೆ ಉಚಿತ ಬಳುವಳಿಗಳು. ಎಲ್ಲ ದೇಶಕಾಲಗಳಲ್ಲಿಯೂ ಅತ್ಯಂತ ಹೀನಾಯವಾಗಿ ಬದುಕಿದವರು ವೇಶ್ಯೆಯರು. 

ಆದರೆ ಹೆಣ್ಣು ತನ್ನ ದೇಹವನ್ನು ತನ್ನಿಷ್ಟದಂತೆ ಬಳಸಿಕೊಳ್ಳುವ ಹಕ್ಕಿದೆಯೆಂಬ ಪ್ರತಿಪಾದನೆ ಸ್ತ್ರೀವಾದ ಎನ್ನಲಾಗುತ್ತಿದೆ. ಕ್ಷಮಿಸಿ, ಹೊಟ್ಟೆಯ ಹಿಟ್ಟಿಗಾಗಿ; ಜುಟ್ಟಿನ ಮಲ್ಲಿಗೆ ಹೂವಿಗಾಗಿ ತಮ್ಮ ದೇಹ/ಆತ್ಮವನ್ನೇ ಮಾರಿಕೊಳ್ಳಬೇಕೆಂದು ಹೇಳುವುದು; ಹಕ್ಕಿನ ನೆಪವೊಡ್ಡಿ ತನ್ನ ಬದುಕನ್ನು ತಾನು ನಾಶ ಮಾಡಿಕೊಳ್ಳುವುದು ಸ್ತ್ರೀವಾದವಲ್ಲ. ಮಾನವತಾವಾದವೂ ಅಲ್ಲ. ಅದು ಕೇವಲ ಉಪಭೋಗ ಸಂಸ್ಕೃತಿಯನ್ನು ಉತ್ತೇಜಿಸುವ ವಿತಂಡವಾದ. ವೇಶ್ಯಾವೃತ್ತಿಯ ಸೋದರಿಯರ ಸಂಖ್ಯೆ ಸಾಧ್ಯವಾದಷ್ಟು ಕಡಿಮೆಯಾಗಲಿ; ಆ ವಿಷವರ್ತುಲಕ್ಕೆ ಅವರು ಬೀಳದಿರಲಿ ಎಂದೇ ಹೆಣ್ಣುಮನಸುಗಳು ಹಾರೈಸುತ್ತವೆ.

ಇವೆಲ್ಲ ಪ್ಯೂರಿಟಾನಿಕಲ್ ಅಟ್ಟಿಟ್ಯೂಡ್ ಎನಿಸಿದರೂ ಸರಿಯೇ, ನನಗನಿಸುವ ಪ್ರಕಾರ ಎಲ್ಲ ರೀತಿಯ ವೇಶ್ಯಾವಾಟಿಕೆಯೂ ಕೇವಲ ಎಕ್ಸ್‌ಪ್ಲಾಯ್ಟೇಷನ್. ತಲೆತಲಾಂತರದಿಂದ ನಮ್ಮ ಅಸಂಖ್ಯ ಸೋದರಿಯರನ್ನು, ತೃತೀಯ ಲಿಂಗಿಗಳನ್ನು, ಅಸಹಾಯಕ ಗಂಡಸರನ್ನೂ ನಿಕೃಷ್ಟ ಬದುಕಿಗೆ ಒಡ್ಡಿರುವ ಸೆಕ್ಸ್‌ವರ್ಕ್‌ಗೆ ಯಾವುದೇ ಸಮರ್ಥನೆಯಿಲ್ಲ. ಘನತೆಯ ಬದುಕೆಂಬ ನೀರಗುಳ್ಳೆಯನ್ನು ತಲೆಗೆ ಮುಡಿಯಲಾಗುವುದಿಲ್ಲ; ಕಾನೂನು ಅದನ್ನು ಹೆಕ್ಕಿಕೊಡುವುದೂ ಇಲ್ಲ. 

ಯಾವುದೇ ವೇಶ್ಯೆಯನ್ನು ಸಂದರ್ಶಿಸಿ ಕೇಳಿ, ಅವಳು ಈ ಕೆಲಸ ತನಗೇ ಸಾಕು, ತನ್ನ ಮಕ್ಕಳಿಗೆ ಆ ನರಕ ಬೇಡವೆಂದು ಹೇಳುತ್ತಾಳೆ. ನಾಶವಾದ ಲಕ್ಷಾಂತರ ಜೀವಗಳನ್ನು ಕಣ್ಣೆದುರು ಇಟ್ಟುಕೊಂಡು ವೇಶ್ಯೆಯರ ಬದುಕುವ ಮಾರ್ಗವನ್ನು ಕಾನೂನುಬದ್ಧಗೊಳಿಸುವ ಮಾತನಾಡುವುದೇ ಹೀನ. ಗಂಟೆಗೊಬ್ಬರಂತೆ ಹಲವರ ಜೊತೆ ತನ್ನ ಖಾಸಗಿ ಕ್ಷಣಗಳನ್ನು ಕಳೆಯಬೇಕಾದ ದುಡಿಮೆ ಹೆಣ್ಣಿಗೆ ಘನತೆ ತಂದುಕೊಡುವುದೆನ್ನುವುದೇ ಹಾಸ್ಯಾಸ್ಪದ. ಹೆಣ್ಣಿಗೊಂದು ಘನತೆಯ ಬದುಕನ್ನು ಒದಗಿಸಬೇಕಾದದ್ದು ಆಳುವವರ ಜವಾಬ್ದಾರಿ. ಅದಕ್ಕೆ ವೇಶ್ಯಾವಾಟಿಕೆಯನ್ನು ಕಾನೂನಿನ ನಿಯಂತ್ರಣದಡಿ ತರುವುದು ಉತ್ತರವಲ್ಲ. ವೇಶ್ಯಾವೃತ್ತಿಯನ್ನು ಜೀವಂತವಾಗಿಟ್ಟ ತನ್ನ ಪಾಪದ ಹೊರೆಯನ್ನು ಕಾನೂನಿನ ನಿಯಂತ್ರಣ ತರುವುದರಿಂದ ಸಮಾಜ ಕಳಚಿಕೊಳ್ಳಲಾಗುವುದಿಲ್ಲ. ಹಿಸಿದು ಹೋಗಿ, ವ್ರಣವಾಗಿ ಸೋರುವ, ನಾರುವ ಯೋನಿಗಳನ್ನು ಯಾವ ಕಾನೂನೂ ಕಾಪಾಡುವುದಿಲ್ಲ. 

ವೇಶ್ಯೆಯರ ಸಮಸ್ಯೆಗಳ ಬಗೆಗೆ ತಳಮಟ್ಟ ಕೆಲಸ ಮಾಡಿದ ಚೇತನಗಳು ಮನ್ನಿಸಲಿ: ಈಗ ವೇಶ್ಯೆಯರ ಪರವಾಗಿ ಕೆಲಸ ಮಾಡಲು ಲೆಕ್ಕವಿಲ್ಲದಷ್ಟು ಎನ್‌ಜಿಒಗಳು ಹುಟ್ಟಿವೆ. ಎಚ್ಚೈವಿಗಾಗಿ ಮೆಲಿಂಡಾ ಗೇಟ್ಸ್ ಫೌಂಡೇಷನ್ ೧೦೦ ಮಿಲಿಯನ್ ಡಾಲರನ್ನು ದೇಣಿಗೆ ನೀಡಿದ ಮೇಲೆ ಹಲವರಿಗೆ ಎಚ್ಚೈವಿ ರೋಗಿಗಳ, ವೇಶ್ಯೆಯರ ಮೇಲೆ ಇದ್ದಕ್ಕಿದ್ದಂತೆ ಪ್ರೀತಿ ಹುಟ್ಟಿದೆ. ಎನ್‌ಜಿಒಗಳನ್ನು ಕಟ್ಟಿ ಬೆಳೆಸುವುದೇ ಉದ್ಯೋಗವಾಗಿದೆ. ಆದರೆ ಈ ತೆರನ ಸಮಾಜಸೇವಕರಿಗೆ ಎಚ್ಚೈವಿಯೂ ಇರಬೇಕು, ವೇಶ್ಯಾವಾಟಿಕೆಯೂ ಇರಬೇಕು. ಇಲ್ಲದಿದ್ದರೆ ಅವರು ಕೆಲಸ ಕಳಕೊಳ್ಳುತ್ತಾರೆ. ವೇಶ್ಯೆಯರ ಸಮಸ್ಯೆ ಎಂದರೆ ಜನ ಅವರನ್ನು ಘನತೆಯಿಂದ ನೋಡದಿರುವುದು/ಪೊಲೀಸರು ದೌರ್ಜನ್ಯಕ್ಕೊಳಪಡಿಸುವುದು/ಸಂಘಟಿತರಾಗಲು ಸಾಧ್ಯವಾಗದಿರುವುದು ಎಂದಷ್ಟೇ ಬಿಂಬಿಸುತ್ತ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಇದು ಯಾರನ್ನೋ ಬಾವಿಗೆ ದೂಡಿ ಅದರ ಆಳ ಅಳೆಯುವ ಕ್ರಮ. ಅಂಥವರ ಕುರಿತು ಸಮಾಜ ಎಚ್ಚರ ವಹಿಸಬೇಕಿದೆ. 

ಬೆಂಕಿಯನ್ನೇ ದೀಪವೆಂದೂ, ಬೆಳಕೆಂದೂ ಪತಂಗ ಭಾವಿಸಿ ಸುಟ್ಟುಕೊಳ್ಳುವುದು ಜೀವಸೃಷ್ಟಿಯ ನಿಯಮವೇ ಇರಬಹುದು. ಹಾಗೆಂದು ಇರುವುದೆಲ್ಲ ಹಾಗೇ ಇರಲಿ ಎನ್ನುವುದು ಸಾಧ್ಯವೇ? ಇದುವರೆಗೆ ಲೈಂಗಿಕತೆ ಮೂಲದ ಸಮಸ್ಯೆ ಎದುರಾದಾಗಲೆಲ್ಲ ಗಂಡಿಗೆ, ಅಧಿಕಾರಸ್ಥರಿಗೆ ಉಪಯೋಗವಾಗುವಂತಹ ಕ್ರಮಗಳನ್ನೇ ಕೈಗೊಳ್ಳುತ್ತ ಬರಲಾಗಿದೆ. ಈಗ ತರಲಿಚ್ಛಿಸುವ ಕಾನೂನು ಅಂತಹ ಮತ್ತೊಂದು ಕ್ರಮ ಆಗದಿರಲಿ. ಕಾನೂನು ಬರುವುದಾದರೆ ಮನುಷ್ಯ ಸಾಗಾಟ ತಡೆಯುವ ಕಠಿಣ ಕಾನೂನು, ಪತ್ತೆ ಜಾಲ ಸಿದ್ಧವಾಗಲಿ. ಪೊಲೀಸರ ವಸೂಲಿ, ಹಿಂಸೆ ನಿಲ್ಲಲಿ. ಅಸಲಿಗೆ ವೇಶ್ಯಾವೃತ್ತಿಗಿಳಿಯುವ ಅವಶ್ಯಕತೆಯೇ ಬರದಂತೆ ಮಹಿಳೆಗೆ, ಬಡವರಿಗೆ ಘನತೆಯ ಬದುಕಿನ ಅವಕಾಶ ಸಿಗಲಿ.