Monday 21 March 2016

ಮಹಿಳೆ, ಮಹಿಳಾ ವಾದ ಮತ್ತು ಅಂಬೇಡ್ಕರ್





ಜೈ ಭೀಮ್, ಜೈ ಶ್ರೀರಾಂ


  • ಕರ್ನಾಟಕದ ಪ್ರಭಾವಿ ಮೇಲ್ಜಾತಿ ಮಠದ ರೇಪಿಸ್ಟ್ ಸ್ವಾಮಿಯನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲು ಸಿಐಡಿ ಪೋಲೀಸರು ಮಠಕ್ಕೆ ತೆರಳಿದರು. ಬಾಗಿಲಲ್ಲಿ ನಿಂತು ಅವರನ್ನು ಒಳಬರದಂತೆ ಅಡ್ಡಗಟ್ಟಿದವರು ನಾರಿ ಹಿತರಕ್ಷಣಾ ಸಮಿತಿಯಲ್ಲಿದ್ದ ದಲಿತ ಮಹಿಳೆಯರು! ತಲೆತಲಾಂತರದಿಂದ ತಮ್ಮನ್ನು ಹೊರಗಿಟ್ಟಿದ್ದ ಮಠದೊಳಗೆ ಬಿಟ್ಟುಕೊಂಡ ಸ್ವಾಮಿಯನ್ನು ರಕ್ಷಿಸಿ ಕೃತಕೃತಾರ್ಥರಾದ ಅವರು ಒಳಗೆ ಹೆಜ್ಜೆಯಿಡದಂತೆ ಪೋಲೀಸರನ್ನು ತಡೆದರು. ಜೈ ಭೀಮ್, ಜೈ ಶ್ರೀರಾಮ್ ಎಂದು ಒಟ್ಟೊಟ್ಟಿಗೆ ಕೂಗಿದರು!
  • ಎರಡು ತಿಂಗಳ ಕೆಳಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಗೋಪಾಲಕೃಷ್ಣನ್ ಎಂಬುವವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ‘ಹೆಂಗಸರ ಮುಟ್ಟನ್ನು ಪತ್ತೆ ಹಚ್ಚುವ ಡಿಟೆಕ್ಟಿಂಗ್ ಮಶೀನುಗಳನ್ನು ಅಭಿವೃದ್ಧಿಪಡಿಸಿದರೆ ಅವರನ್ನು ದೇವಳದ ಒಳಗೆ ಬಿಡಬಹುದು’ ಎಂದು ಹೇಳಿದರು. ಅದೇವೇಳೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶನಿ ಸಿಂಗ್ನಾಪುರ ಎಂಬ ಊರಿನ ಶನಿದೇವಾಲಯವನ್ನು ಒಬ್ಬ ಮಹಿಳೆ ಪ್ರವೇಶಿಸಿ ತನ್ನ ಸಂಕಷ್ಟ ಪರಿಹಾರಾರ್ಥ ಶನಿ ದೇವರನ್ನು ಮುಟ್ಟಿ, ಎಣ್ಣೆ ಎರೆದು ಬಂದಳು. ಶನಿಯನ್ನು ಹೆಂಗಸರು ಮುಟ್ಟುವಂತಿಲ್ಲ, ಅವರು ಮುಟ್ಟಿದರೆ ಶನಿಯ ಶಕ್ತಿ ಕಡಿಮೆಯಾಗುತ್ತದೆ ಎಂದು ಹಾಹಾಕಾರ ಎದ್ದಿತು! ಕೊನೆಗೆ ಶನಿಯ ಕಳೆಯೇರಿಸಲು ಶುದ್ಧೀಕರಣದ ಪೂಜೆ-ಹೋಮಗಳು ನಡೆದವು. ಮಹಿಳೆಯರ ದೇವಾಲಯ ಪ್ರವೇಶ ಕುರಿತು ಮಹಿಳಾ ಸಂಘಟನೆಗಳು ಪ್ರತಿಭಟನೆ ಶುರುಮಾಡಿದಾಗ ಧಾರ್ಮಿಕ ವಿಷಯಗಳಲ್ಲಿ ಸ್ತ್ರೀವಾದ ಮೂಗು ತೂರಿಸಬಾರದೆಂದು ಮಂತ್ರಿಣಿಯೊಬ್ಬರು ಹೇಳಿದರು. 
  • ಮಹಾರಾಷ್ಟ್ರ ಅಂಬೇಡ್ಕರ್ ಹುಟ್ಟಿದ ರಾಜ್ಯ. ಅದರಲ್ಲೂ ಸತಾರಾ ಜಿಲ್ಲೆ ಮಹಿಳಾ ಶಿಕ್ಷಣ ಮತ್ತು ಸಮಾನತೆ ಪ್ರತಿಪಾದಿಸಿದ ಸಾವಿತ್ರಿಬಾಯಿ ಹಾಗೂ ಜ್ಯೋತಿಬಾ ಫುಲೆಯವರ ಜನ್ಮಸ್ಥಳ. ಆ ಜಿಲ್ಲೆಯಲ್ಲಿ ೨೦೧೦-೧೧ರಲ್ಲಿ ಜಿಲ್ಲಾಡಳಿತ ೧-೪೦ ವರ್ಷ ವಯೋಮಾನದೊಳಗಿನ ೨೮೫ ಹೆಣ್ಮಕ್ಕಳನ್ನು ಗುರುತಿಸಿ ಹೆಸರು ಬದಲಿಸುವ ಅಭಿಯಾನ ನಡೆಸಿತು. ಏಕೆ ಗೊತ್ತೆ? ಅವರೆಲ್ಲರ ಹೆಸರು ನಕೂಸ, ನಕುಶಿ ಎಂದಿತ್ತು. ಆ ಹೆಸರಿನರ್ಥ ‘ಬೇಡದವಳು’. ಅವರೆಲ್ಲ ಮೂರನೆಯ ಅಥವಾ ನಾಲ್ಕನೆಯ ಹೆಣ್ಣುಮಕ್ಕಳು, ಬೇಡದವರು. ಅವರಿಗೆ ನಾಮಕರಣವಿಲ್ಲ, ಬಣ್ಣಬಂಗಾರವಿಲ್ಲ. ಆ ಹೆಣ್ಣು ನೋಯಬೇಕು, ಆಗ ದೇವರಿಗೆ ತನ್ನ ಸೃಷ್ಟಿಯ ಬಗೆಗೆ ಮರುಕವೆನಿಸಿ ಅವರ ನಂತರ ಗಂಡು ಹುಟ್ಟಿಸುತ್ತಾನೆ ಎಂಬ ನಂಬಿಕೆ ಈಗಲೂ ಅಲ್ಲಿ ಚಾಲ್ತಿಯಲ್ಲಿದೆ. 
  • ದಲಿತ ಮಹಿಳೆ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ ಏಕೈಕ ರಾಜ್ಯ ಉತ್ತರ ಪ್ರದೇಶ. ಅಲ್ಲಿ ಕಳೆದ ವರ್ಷ ಗಣೇಶಪುರ ಎಂಬ ಹಳ್ಳಿಯಲ್ಲಿ ದಲಿತ ಹೆಣ್ಣುಮಗಳ ನೆರಳು ಮೇಲ್ಜಾತಿ ವ್ಯಕ್ತಿಯೊಬ್ಬರ ಬಿದ್ದು ಮಡಿ ಹಾಳುಮಾಡಿತು ಎಂಬ ಕಾರಣಕ್ಕೆ ಮಾರಣಾಂತಿಕವಾಗಿ ಅವಳನ್ನು ಹೊಡೆದರು. ಅದೇ ರಾಜ್ಯದ ಕುಶೀನಗರದ ದಿವಾನ್ ತೋಲಾದಲ್ಲಿ ಉತ್ತಮ ಅಂಕ ಗಳಿಸುತ್ತಿದ್ದ, ಮೆಟ್ರಿಕ್ ಪರೀಕ್ಷೆ ಕಟ್ಟಿದ್ದ ದಲಿತ ಹುಡುಗಿಯನ್ನು ರೊಟ್ಟಿ ಬೇಯಿಸುತ್ತ ಕುಳಿತ ಒಲೆಯೆದುರೇ ಮೇಲ್ಜಾತಿ ಹುಡುಗರು ಸುಟ್ಟು ಹಾಕಿದರು. ಬದಾವೂಂ ಎಂಬ ಹಳ್ಳಿಯಲ್ಲಿ ಇಬ್ಬರು ದಲಿತ ಬಾಲಕಿಯರ ಅತ್ಯಾಚಾರಗೈದು, ಕೊಂದು ಮರಕ್ಕೆ ನೇತುಹಾಕಿದರು.
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ‘ಕೊಡುಗೆ’ಯೊಂದು ಘೋಷಿಸಲ್ಪಟ್ಟಿದೆ. ಮಹಿಳೆಯರನ್ನು ಸನಾತನ ಮೌಲ್ಯಗಳಿಗೆ ಕಟ್ಟಿಹಾಕುತ್ತ, ವ್ಯವಸ್ಥೆಯ ರಕ್ಷಕರಾಗಿ ಬಳಸಿಕೊಳ್ಳುವ ಸಂಘಪರಿವಾರವು ಅವರಿಗೆ ದೇವಸ್ಥಾನ ಪ್ರವೇಶ ಕಲ್ಪಿಸಬೇಕೆನ್ನುತ್ತಿದೆ! ಮಹಿಳಾ ದಿನಾಚರಣೆಯ ದಿನ ಮಹಿಳೆಯರಷ್ಟೇ ಸಂಸತ್ತಿನಲ್ಲಿ ಮಾತನಾಡುವ ಅವಕಾಶವನ್ನು ಆ ಪಕ್ಷ ಒದಗಿಸಿಕೊಟ್ಟಿದೆ. ಹೆಣ್ಣುಮಕ್ಕಳಿಗೆ ವಸ್ತ್ರಸಂಹಿತೆ, ನೀತಿಸಂಹಿತೆ, ಆಚಾರಸಂಹಿತೆಗಳ ವಿಧಿಸುವ ಪಕ್ಷವು ಅತಿ ಹೆಚ್ಚು ಮಹಿಳೆಯರನ್ನು ಸಂಸತ್ತಿಗೆ ಕಳಿಸಿದ್ದು ಮಹಿಳಾ ಮಂತ್ರಿ, ಸ್ಪೀಕರುಗಳನ್ನು ಹೊಂದಿದೆ.


ಇವೆಲ್ಲ ಈ ಕಾಲದ ವಿಪರ್ಯಾಸವನ್ನು ಹಾಗೂ ಪ್ರಗತಿಪರ ಚಳುವಳಿಗಳು ಜನಸಾಮಾನ್ಯರ ಜಾಗೃತಿಯಾಗಿ ಮರುಹುಟ್ಟು ಪಡೆಯಲಾಗದಿರುವುದನ್ನು ಸೂಚಿಸುತ್ತವೆ. ಧರ್ಮಾಧಾರಿತ ಧೃವೀಕರಣದ ತಂತ್ರವಾಗಿ ದಲಿತರನ್ನು, ಮಹಿಳೆಯರನ್ನು ಕೋಮುವಾದ ದಿಕ್ಕು ತಪ್ಪಿಸುತ್ತಿದೆ. ಜನಸಾಮಾನ್ಯರ ಮಾತಂತಿರಲಿ, ದಲಿತ - ಮಹಿಳಾ ನಾಯಕಿಯರನ್ನೂ ಸಹಾ ಹಿಂದೂತ್ವದ ಜಾಲದೊಳಗೆ ಸೆಳೆಯಲಾಗಿದೆ. ತಮಗರಿವಿಲ್ಲದೆ ಜಾತಿ, ಧರ್ಮ ಮತ್ತು ರಾಜಕಾರಣಗಳು ಒಡ್ಡುವ ಭಾವುಕ ಹಾಗೂ ಲೌಕಿಕ ಬಲೆಯೊಳಗೆ ಮಹಿಳೆಯರು ಬೀಳುತ್ತ ಲಿಂಗಪ್ರಶ್ನೆ ಮರೆಗೆ ಸರಿಯುತ್ತಿದೆ. ಇದಕ್ಕೆ ಕಾರಣ ವಿಸ್ತೃತ ಮಹಿಳಾ ಜಾಗೃತಿಯ ಕೊರತೆ ಹಾಗೂ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರ ‘ಇಲ್ಲದಿರುವಿಕೆ.’

ಆದ್ದರಿಂದ ಜಾತಿ, ವರ್ಗ ಹಾಗೂ ಲಿಂಗ ಎಂಬ ಸಂರಚನೆಗಳನ್ನು ಇವತ್ತಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಾದ ತುರ್ತು ಭಾರತದ ಮಾನವಹಕ್ಕು ಹೋರಾಟಗಾರರಿಗಿದೆ. ಭಾರತದ ಮಾನವಹಕ್ಕು ಹೋರಾಟದ ತಾತ್ವಿಕತೆಯನ್ನು ಸಮರ್ಥವಾಗಿ ರೂಪಿಸಿಕೊಳ್ಳಲು, ಜಾತ್ಯತೀತ ನೆಲೆಯ ಸಂಘಟನೆ ಮತ್ತು ಹೋರಾಟ ಕಟ್ಟಲು ಅವರಿಗೆ ಅಂಬೇಡ್ಕರ್ ಮಾದರಿ ಸೂಕ್ತವಾಗಿದೆ. ಮದರಾಸು ಐಐಎಂ-ಹೈದರಾಬಾದ್ ವಿವಿ-ಜೆಎನ್‌ಯು ಹೋರಾಟ ಸಾಕ್ಷಿಯಾಗಿ ದಮನಿತ, ಹತ್ತಿಕ್ಕಲ್ಪಟ್ಟ ದನಿಗಳ ಸಂಘರ್ಷಕ್ಕೆ ಅಂಬೇಡ್ಕರ್ ಚಿಂತನೆಗಳು ಸಶಕ್ತ ಮಾರ್ಗದರ್ಶಕ ನೀತಿಯಾಗಿವೆ. ಅಂಬೇಡ್ಕರರು ಇಂಥದೇ ಕಷ್ಟ ಕಾಲದಲ್ಲಿ, ರಾಷ್ಟ್ರೀಯ ಹೋರಾಟದಿಂದ ಭಿನ್ನವಾಗಿ ಸಿಡಿದು ನಿಂತು ಶೋಷಿತರ ಹೋರಾಟ ಕಟ್ಟಿದವರು. ತಮ್ಮ ಎಲ್ಲ ಹೋರಾಟಗಳಲ್ಲೂ ಮಹಿಳೆಯರನ್ನು ಸಹಭಾಗಿಗಳನ್ನಾಗಿ ಪರಿಗಣಿಸಿದವರು. ಜಾತಿಪದ್ಧತಿ, ಹಿಂದೂ ಕುಟುಂಬ ವ್ಯವಸ್ಥೆ, ಹೆಣ್ಣಿನ ಜೈವಿಕ ಜವಾಬ್ದಾರಿಗಳು ಇವನ್ನೆಲ್ಲ ತಳಮಟ್ಟ ಅರಿತು ವಿಶ್ಲೇಷಿಸಿದವರು.

ಈ ಹಿನ್ನೆಲೆಯಿಂದ ಎಲ್ಲ ಚಳುವಳಿಗಳು ಮಹಿಳೆಯರನ್ನೊಳಗೊಳ್ಳುವುದು ಮತ್ತು ಮಹಿಳೆಯರು ಎಲ್ಲ ಹೋರಾಟಗಳಲ್ಲಿ ಭಾಗಿಯಾಗುವುದು ಈ ಕಾಲದ ಅವಶ್ಯಕತೆಯಾಗಿದೆ. ಎಂದೇ ಅಂಬೇಡ್ಕರರ ಹೋರಾಟ ಮತ್ತು ಚಿಂತನೆಗಳನ್ನು ಪುನರ್ಮನನ ಮಾಡಿಕೊಳ್ಳಲು ‘ಅಂಬೇಡ್ಕರ್ ಮತ್ತು ಭಾರತೀಯ ಮಹಿಳೆ’ಯ ದೃಷ್ಟಿಯಿಂದ ಕೆಲ ಸಂಗತಿಗಳನ್ನಿಲ್ಲಿ ಚರ್ಚಿಸಲಾಗಿದೆ.


ಭಾರತೀಯ ಮಹಿಳೆ ಮತ್ತು ಅಂಬೇಡ್ಕರ್ 
                         
‘ನಾನೊಂದು ಬಂಡೆಯ ತರಹ. ಅದು ಕರಗದಿರಬಹುದು. ಆದರೆ ನದಿ ಪಾತ್ರ ಬದಲಿಸಬಲ್ಲದು..’
- ಅಂಬೇಡ್ಕರ್


ಭಕ್ತಿ ಚಳುವಳಿಯ ಕಾಲದಿಂದಲೂ ಮಹಿಳೆ ಧಾರ್ಮಿಕ ಸಮಾನತೆ ಕೇಳಲು ಶಕ್ತಳಾಗಿದ್ದಳೇ ಹೊರತು ಸಾಮಾಜಿಕ ಸ್ಥಾನಮಾನಗಳಲ್ಲಿ ಯಾವ ಬದಲಾವಣೆಯೂ ಸಾಧ್ಯವಾಗಿರಲಿಲ್ಲ. ಬ್ರಿಟಿಷರ ಆಗಮನವಾದ ನಂತರ ಸಮಾಜ ಸುಧಾರಕರು ಸ್ತ್ರೀ ಶೋಷಣೆಯ ವಿರುದ್ಧ ಜನಜಾಗೃತಿಗೆ ಶ್ರಮಿಸಿದರು. ೧೮೪೮ರಲ್ಲಿ ಜ್ಯೋತಿಬಾ ಫುಲೆಯವರು ವಿದ್ಯೆಯಿಂದ ವಂಚಿತರಾಗಿದ್ದ ಅಸ್ಪೃಶ್ಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಶಾಲೆ ಶುರು ಮಾಡಿದರು. ಬಾಲ್ಯವಿವಾಹ, ವಿಧವಾ ಪದ್ಧತಿ, ಸತಿ ಪದ್ಧತಿ, ಶಿಕ್ಷಣ ಹಕ್ಕು ನಿರಾಕರಣೆ, ಆಸ್ತಿ ಹಕ್ಕು ನಿರಾಕರಣೆಯಂತಹ ವಿಷಯಗಳನ್ನು ಸಮಾಜ ಸುಧಾರಕರು ಪರಿಗಣಿಸಿದರು. ಆದರೆ ಮಹಿಳಾ ಶೋಷಣೆಯ ವಿವಿಧ ಮಗ್ಗುಲುಗಳ ಬಗ್ಗೆ ಆಳವಾಗಿ ಚಿಂತಿಸಿ, ಧಾರ್ಮಿಕ-ಸಾಮಾಜಿಕ-ರಾಜಕೀಯ ಹಕ್ಕುಗಳನ್ನು ಸಂವಿಧಾನದತ್ತವಾಗಿ ನೀಡಲು ಶ್ರಮಿಸಿದ ಮೊದಲ ವ್ಯಕ್ತಿ ಅಂಬೇಡ್ಕರ್. ‘ಯಾವುದೇ ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಪರಿಗಣಿಸಬೇಕು’ ಎಂದು ಮಹಿಳೆಯರ ಸ್ಥಿತಿಗತಿಯನ್ನು ಸಮಾಜದ ಏಳ್ಗೆಯ ಸೂಚ್ಯಂಕವಾಗಿ ಪರಿಗಣಿಸಿದ ಅಂಬೇಡ್ಕರ್ ಭಾರತದಲ್ಲಿ ಮಾನವ ಹಕ್ಕು ಹಾಗೂ ಮಹಿಳಾ ಹಕ್ಕು ಹೋರಾಟಗಳಿಗೆ ಕಾನೂನಿನ ಚೌಕಟ್ಟು ನೀಡಿದ ಮೊದಲ ನಾಯಕರಾಗಿದ್ದಾರೆ.

‘ಹೆಣ್ಣು ಹಿಂದೂ ಸಮಾಜದ ಅತ್ಯಂತ ಶೋಷಿತಳು. ದಲಿತರು ಮತ್ತು ಮಹಿಳೆಯರ ಸ್ಥಿತಿಗತಿ ಒಂದೇ. ಭಾರತೀಯ ಸಮಾಜ ಒಂದು ಕೈಯಲ್ಲಿ ಅವಳನ್ನು ಪೂಜಿಸುತ್ತ, ಮತ್ತೊಂದು ಕೈಯಲ್ಲಿ ಬೆತ್ತ ಹಿಡಿದು ಲಕ್ಷ್ಮಣರೇಖೆಗಳನ್ನು ದಾಟದಂತೆ ನಿರ್ಬಂಧ ವಿಧಿಸಿದೆ’ ಎಂಬುದನ್ನು ಅಂಬೇಡ್ಕರ್ ಅರಿತಿದ್ದರು. ವಿದೇಶೀ ವಿದ್ಯಾಭ್ಯಾಸ, ಅದರಲ್ಲೂ ಜರ್ಮನಿಯ ಬಾನ್‌ನಲ್ಲಿ ಕಳೆದ ದಿನಗಳು ಪಾಶ್ಚಾತ್ಯ ಸ್ತ್ರೀವಾದಿ ಚಿಂತನೆಗೆ ಅವರನ್ನು ಹತ್ತಿರ ತಂದವು. ಮೊದಲ ಅಲೆಯ ಮಹಿಳಾ ಚಳುವಳಿಯ ಪ್ರತಿಫಲವಾಗಿ ೧೯೧೮ರ ಹೊತ್ತಿಗೆ ಬ್ರಿಟನ್ ಹಾಗೂ ೧೯೨೦ರ ವೇಳೆಗೆ ಅಮೆರಿಕಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕೊಡಲಾಯಿತು. ಸಮಾನ ವೇತನ, ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕು ಮೊದಲಾದವು ಅಲ್ಲಿ ಬಹುಚರ್ಚಿತ ವಿಷಯಗಳಾಗಿದ್ದವು. ಸಹಜವಾಗಿಯೇ ಮುಕ್ತ ಚಿಂತನೆಯ ಅಂಬೇಡ್ಕರರನ್ನು ಮಹಿಳಾಪರ ಚಿಂತನೆಗಳು ಸೆಳೆದವು. ರಾಜಕೀಯ ಅಧಿಕಾರ ಸಿಗದೇ ಯಾವುದೂ ಬದಲಾಗುವುದು ಅಷ್ಟು ಸುಲಭವಲ್ಲ ಎಂಬುದನ್ನವರು ಗುರುತಿಸಿದರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದುವಾಗ ತಮ್ಮ ಗೆಳೆಯನಿಗೆ ಬರೆದ ಪತ್ರವೊಂದರಲ್ಲಿ ಹಿಂದುಳಿದ ವರ್ಗಗಳ ವಿದ್ಯಾಭ್ಯಾಸ, ಅದರಲ್ಲೂ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಬಹುಮುಖ್ಯವೆಂದು, ‘ಸದ್ಯದಲ್ಲಿಯೇ ಒಳ್ಳೆಯ ದಿನಗಳನ್ನು ಕಾಣುತ್ತೇವೆ. ಆದರೆ ಅದಕ್ಕಾಗಿ ಪುರುಷರ ಜೊತೆಗೆ ಮಹಿಳೆಯರೂ ಒಟ್ಟೊಟ್ಟಿಗೇ ಶಿಕ್ಷಣ ಪಡೆಯುವುದು ಅವಶ್ಯವಿದೆ’ ಎಂದೂ ಹೇಳಿದ್ದರು.


ಅವರು ಹೊರತರುತ್ತಿದ್ದ ‘ಮೂಕನಾಯಕ’ ಹಾಗೂ ‘ಬಹಿಷ್ಕೃತ ಭಾರತ’ ಪತ್ರಿಕೆಗಳಲ್ಲಿ ಮಹಿಳಾ ಸಮಸ್ಯೆ ಮುಖ್ಯವಾಗಿ ಚರ್ಚಿತವಾಗುತ್ತಿತ್ತು. ಮಹಾಡ್ ಸತ್ಯಾಗ್ರಹ ಮೆರವಣಿಗೆಯಲ್ಲಿ ೫೦೦ ಸ್ತ್ರೀಯರು ಪಾಲ್ಗೊಂಡಿದ್ದರು. ಕಾಳಾರಾಮ್ ದೇವಾಲಯ ಪ್ರವೇಶ ಸಂದರ್ಭದಲ್ಲಿ ಕೂಡಾ ಮಹಿಳೆಯರಿದ್ದರು ೧೯೨೭ರಲ್ಲಿ ಡಿಪ್ರೆಸ್ಡ್ ಕ್ಲಾಸ್ ವಿಮೆನ್ಸ್ ಅಸೋಸಿಯೇಷನ್ ಶುರುವಾಯಿತು. ಅದರ ಸಮಾವೇಶದಲ್ಲಿ ೩೦೦೦ ಹಿಂದುಳಿದ ಮಹಿಳೆಯರನ್ನುದ್ದೇಶಿಸಿ ಮಾತನಾಡುತ್ತಾ, ‘ನಿಮ್ಮ ಬಟ್ಟೆ ತೇಪೆಯಿಂದ ಕೂಡಿದ್ದರೇನಾಯಿತು? ಸ್ವಚ್ಛವಾಗಿರಿ. ನಿಮ್ಮನ್ನು ನೀವೇ ಮುಟ್ಟಿಸಿಕೊಳ್ಳದವರೆಂದು ಭಾವಿಸಬೇಡಿ. ನಿಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ. ಮಕ್ಕಳ ಮನಸ್ಸಿನ ಕೀಳರಿಮೆ ತೆಗೆದು ಅವರಲ್ಲಿ ಆತ್ಮಗೌರವ ತುಂಬಿ. ಮಹಾನ್ ವ್ಯಕ್ತಿಗಳಾಗಲು ಹುಟ್ಟಿದ್ದಾರೆಂದು ಅವರನ್ನು ನಂಬಿಸಿ’ ಎಂದು ಕಿವಿಮಾತು ಹೇಳಿದ್ದರು.

ಅಂಬೇಡ್ಕರರ ತಾತ್ವಿಕ ಬೆಂಬಲ ಹಾಗೂ ಸಂಘಟನೆಗಳ ಬಲದೊಂದಿಗೆ ಮಹಿಳಾ ಜಾಗೃತಿಯ ಹೊಸ ಅಧ್ಯಾಯವೇ ಶುರುವಾಯಿತು. ೧೯೨೮ರಲ್ಲಿ ಹಿಂದುಳಿದ ಮಹಿಳೆಯರ ಸಂಘಟನೆ ಆರಂಭವಾಯಿತು. ಅನೇಕ ಕಡೆಗಳಲ್ಲಿ ದಲಿತ ಮಹಿಳಾ ಸಮಾವೇಶಗಳು ಜರುಗಿದವು. ತುಳಸೀಬಾಯಿ ಬಣಸೋಡೆ ‘ಚೊಕ್ಕಮೇಲ’ ಎಂಬ ಪತ್ರಿಕೆ ಶುರುಮಾಡಿದರು. ಮಹಿಳಾ ಹಾಸ್ಟೆಲ್ಲುಗಳು, ಶಾಲೆಗಳನ್ನು ತೆರೆಯಲಾಯಿತು. ಹೆಣ್ಣುಮಕ್ಕಳು ಆತ್ಮಕತೆ, ನಾಟಕಗಳನ್ನು ಬರೆದರು. ಧರ್ಮಪ್ರಸಾರಕರಾದರು. ೧೯೩೧ರಲ್ಲಿ ರಾಧಾಬಾಯಿ ವಢಾಳೆ ಎಂಬಾಕೆ, ‘ಹಿಂದೂ ದೇವಸ್ಥಾನ ಪ್ರವೇಶಿಸಲು ಹಾಗೂ ಕುಡಿಯುವ ನೀರಿಗಾಗಿ ಸಾರ್ವಜನಿಕ ಜಲಮೂಲಗಳಿಗೆ ಹೋಗಲು ನಮಗೆ ಹಕ್ಕು ಬೇಕು. ಅಷ್ಟೇ ಅಲ್ಲ ವೈಸರಾಯ್ ಅವರೇ, ಸಾಮಾಜಿಕ ಹಕ್ಕುಗಳ ಜೊತೆ ನಮಗೆ ರಾಜಕೀಯ ಹಕ್ಕುಗಳೂ ಬೇಕು. ಕಠಿಣ ಶಿಕ್ಷೆಗೆಲ್ಲ ನಾವು ಹೆದರುವವರಲ್ಲ. ದೇಶದ ಎಲ್ಲ ಜೈಲುಗಳನ್ನೂ ಬೇಕಾದರೆ ತುಂಬಲು ಸಿದ್ಧರಿದ್ದೇವೆ. ಅವಮಾನಕರವಾಗಿ ಬದುಕುವುದಕ್ಕಿಂತ ನೂರು ಸಲವಾದರೂ ಹೋರಾಡಿ ಸಾಯಲು ನಾವು ಸಿದ್ಧರಿದ್ದೇವೆ’ ಎಂದು ಹೇಳಿದಳು.


ಮಹಿಳೆಯರು ಎದುರಿಸುವ ಜೈವಿಕ, ದೈಹಿಕ ಕಷ್ಟಗಳ ಕುರಿತು; ನಿಭಾಯಿಸಬೇಕಾದ ವಿಶೇಷ ಜವಾಬ್ದಾರಿಯ ಕುರಿತು ಅಂಬೇಡ್ಕರ್ ಮಾತನಾಡಿದರು. ೧೯೩೮ರಷ್ಟು ಹಿಂದೆಯೇ ಕುಟುಂಬ ಯೋಜನಾ ವಿಧಾನವನ್ನು ಸರ್ಕಾರ ಜನಪ್ರಿಯಗೊಳಿಸಬೇಕೆಂದು ಮುಂಬಯಿಯ ಶಾಸನಸಭೆಯಲ್ಲಿ ವಾದಿಸಿದರು. ಹೆತ್ತುಹೆತ್ತು ಮಕ್ಕಳನ್ನು ಸಾಕುವುದರಲ್ಲೇ ಹೆಣ್ಣುಮಕ್ಕಳು ಹೈರಾಣಾಗುತ್ತಿದ್ದಾರೆಂದೂ, ಅವರ ಶಕ್ತಿಸಾಮರ್ಥ್ಯವನ್ನು ಸಮಾಜ ಉಪಯೋಗಿಸಿಕೊಳ್ಳಬೇಕೆಂದರೆ ಕುಟುಂಬ ಯೋಜನೆ ಅವಶ್ಯವೆಂದೂ ಪ್ರತಿಪಾದಿಸಿದರು. ೧೯೪೨ರಲ್ಲಿ ದೆಹಲಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಹೆರಿಗೆ ಭತ್ಯೆ ನೀಡುವ ಬಗ್ಗೆ ಪ್ರಸ್ತಾಪಿಸಿದರು. ವೇತನ ಸಹಿತ ಹೆರಿಗೆ ಭತ್ಯೆ ರಜೆ ನೀಡುವುದು ಸರ್ಕಾರಕ್ಕೆ ಆರ್ಥಿಕ ಹೊರೆಯೆನಿಸಿದರೂ ಸಹ ಮನುಷ್ಯ ಸಮಾಜದ ನಾಳಿನ ಸಂತತಿಯನ್ನು ಹೆತ್ತು ಸಾಕುವ ಹೆಣ್ಣುಮಕ್ಕಳನ್ನು ಅಷ್ಟಾದರೂ ಗೌರವಿಸುವುದು, ಅವರಿಗೆ ಅವಶ್ಯವಿರುವಷ್ಟು ವಿರಾಮ ನೀಡುವುದು ಉಳಿದ ಸಮಾಜದ ಕರ್ತವ್ಯ ಎಂದೂ, ಅದಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕೆಂದೂ ಸೂಚಿಸಿದರು.

ಒಂದು ಸಭೆಯಲ್ಲಿ ಮಾತನಾಡುತ್ತ, ‘ಮದುವೆಗೆ ಅವಸರಪಡಬೇಡಿ. ಮದುವೆ ಒಂದು ಬಂಧನ. ಮದುವೆಯ ನಂತರದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಶಕ್ತಿಶಾಲಿಯಲ್ಲದಿದ್ದರೆ ಮದುವೆಯಾಗಬೇಡಿ. ಮದುವೆಯಾದ ಹೆಣ್ಣು ಗಂಡನ ಪಕ್ಕ ಸರಿಸಮಾನಳಾಗಿ ನಿಲ್ಲಬೇಕು, ದಾಸಿಯಂತಲ್ಲ. ಮದುವೆಯಾದವರು ನೆನಪಿಡಿ: ತುಂಬ ಮಕ್ಕಳನ್ನು ಹೆರುವುದು ಅಪರಾಧ. ಏಕೆಂದರೆ ನಮ್ಮ ಪಾಲಕರು ನೀಡಿದ್ದಕ್ಕಿಂತ ಹೆಚ್ಚಿನದನ್ನು ನಾವು ನಮ್ಮ ಮಕ್ಕಳಿಗೆ ನೀಡಲು ಶಕ್ತರಾಗಿರಬೇಕು’ ಎಂದು ಹೇಳಿದರು. ಇಂಥ ತಾಯ್ತನದ ಅಂತಃಕರಣದ ಮಾತುಗಳ ಕಾರಣವಾಗಿಯೇ ಜನಪದರ ಭಾವಕೋಶದಲ್ಲಿ ಅಂಬೇಡ್ಕರ್ ಬಾಬಾ ಎಂದು ಚಿರಸ್ಥಾಯಿಯಾದರು.

ಭಾರತೀಯ ಮಹಿಳೆ ಮತ್ತು ಹಿಂದೂ ಕೋಡ್ ಬಿಲ್






ಯಾವುದೇ ಸಾಮಾಜಿಕ ಬದಲಾವಣೆ ಬಯಸುವುದಾದರೂ ಅದಕ್ಕೆ ಪೂರಕವಾಗಿ ಕಾನೂನು ಚೌಕಟ್ಟು ಒದಗಿಸಬೇಕು ಎನ್ನುವುದು ಅಂಬೇಡ್ಕರ್ ನಿಲುವು. ಮಹಿಳಾ ಹಕ್ಕುಗಳ ಪರವಾಗಿ ಖಚಿತ ನಿಲುವು ಹೊಂದಿದ್ದ ಅಂಬೇಡ್ಕರರ ಸಂವಿಧಾನವು ಮಹಿಳೆಯರಿಗೆ ಪುರುಷರಿಗಿರುವ ಎಲ್ಲ ಸವಲತ್ತುಗಳನ್ನೂ ನೀಡಿತು. ಜೊತೆಗೆ ೧೫(೩), ೫೧(ಎ) ಕಲಮುಗಳು ವಿಶೇಷ ಸವಲತ್ತುಗಳನ್ನು ನೀಡಲು ಅವಕಾಶ ಕಲ್ಪಿಸಿದವು. ಅದಕ್ಕೆ ಪೂರಕವಾಗಿ ಅಂಬೇಡ್ಕರ್ ಬಹಳ ಪ್ರಯತ್ನಪಟ್ಟು ತರಲೆತ್ನಿಸಿದ್ದು ಹಿಂದೂ ಕೋಡ್ ಬಿಲ್.

ಭಾರತೀಯ ಹಿಂದೂ ವಿವಾಹಪದ್ಧತಿ ಮಹಿಳೆಗೆ ಸ್ವಾತಂತ್ರ್ಯವನ್ನೂ, ಸಮಾನತೆಯನ್ನೂ ನೀಡುವಂಥದಲ್ಲ. ಅದು ಮಹಿಳೆಗೆ ದಾಸ್ಯ ಹೇರುವುದಲ್ಲದೇ ವಿಚ್ಛೇದನಕ್ಕೆ ಅವಕಾಶ ನಿರಾಕರಿಸಿ, ಪುರುಷರ ಬಹುಪತ್ನಿತ್ವವನ್ನು ಮಾನ್ಯ ಮಾಡುತ್ತದೆ. ಹಿಂದೂ ವೈಯಕ್ತಿಕ ಕಾನೂನಿಗೆ ಏಕರೂಪ ಸಂಹಿತೆಯೊಂದನ್ನು ತರಬೇಕೆಂಬುದು ಬ್ರಿಟಿಷ್ ಆಡಳಿತ ಕಾಲದಿಂದಲೂ ನಡೆದ ಪ್ರಯತ್ನವಾಗಿತ್ತು. ೧೯೪೪ರಲ್ಲಿ ತಯಾರಾದ ಹಿಂದೂ ಕೋಡ್ ಬಿಲ್ ಹಲವು ವಿರೋಧಗಳ ನಡುವೆ ಮೂಲೆಗುಂಪಾಗಿತ್ತು. ನೆಹರೂ ಮೊದಲಿನಿಂದಲೂ ಹಿಂದೂ ವೈಯುಕ್ತಿಕ ಕಾನೂನು ಸುಧಾರಣೆ ತನ್ನ ಪ್ರಥಮ ಆದ್ಯತೆ ಎಂದೇ ಹೇಳುತ್ತಿದ್ದರು. ಸ್ವಾತಂತ್ರ್ಯಾನಂತರ ೧೯೪೪ರ ಹಿಂದೂ ಕೋಡ್ ಬಿಲ್ ಅನ್ನು ಪರಿಷ್ಕರಣೆಗಾಗಿ ಕಾನೂನು ಮಂತ್ರಾಲಯಕ್ಕೆ ಕಳಿಸಿದರು. ಆಗ ಕಾನೂನು ಮಂತ್ರಿಯಾಗಿದ್ದ ಅಂಬೇಡ್ಕರ್ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದರು. ಹಿಂದೂ ಸಾಮಾಜಿಕ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಅಂಬೇಡ್ಕರ್ ಪರಿಷ್ಕೃತ ಹಿಂದೂ ಕೋಡ್ ಬಿಲ್ ಅನ್ನು ಮಂಡಿಸಿದರು. ಅದರಲ್ಲಿ ಮೂರು ಮುಖ್ಯ ಬದಲಾವಣೆಗಳು ಪ್ರಸ್ತಾಪಿಸಲ್ಪಟ್ಟಿದ್ದವು:


  • ಹಿಂದೂಗಳಲ್ಲಿ ಪ್ರಚಲಿತವಿದ್ದ ಹಲವು ತೆರನ ಮದುವೆ ಪದ್ಧತಿಗಳನ್ನು ರದ್ದುಗೊಳಿಸಿ ಒಂದೇ ವಿಧದ ಮದುವೆಯನ್ನು ಊರ್ಜಿತಗೊಳಿಸುವುದು.
  • ಮಹಿಳೆಗೆ ಆಸ್ತಿ ಹಕ್ಕು ಮತ್ತು ದತ್ತು ತೆಗೆದುಕೊಳ್ಳುವ ಹಕ್ಕು ಕೊಡುವುದು.
  • ಮಹಿಳೆಗೆ ವಿಚ್ಛೇದನದ ಹಕ್ಕು ನೀಡುವುದು. 


ಈ ಮಸೂದೆಯು ಎಂಟು ಭಾಗಗಳನ್ನೊಳಗೊಂಡಿತ್ತು. ಹಿಂದೂ ಯಾರು/ಮದುವೆ/ದತ್ತು ಸ್ವೀಕಾರ/ಪೋಷಕತ್ವ/ಅವಿಭಕ್ತ ಕುಟುಂಬದ ಆಸ್ತಿ ಕಾನೂನು/ಹೆಣ್ಣುಮಕ್ಕಳ ಆಸ್ತಿ ಹಕ್ಕು/ವಾರಸುದಾರಿಕೆ ಹಾಗೂ ಜೀವನಾಂಶಗಳ ಕುರಿತ ಕಾನೂನುಗಳನ್ನು ಅದರಲ್ಲಿ ರೂಪಿಸಲಾಗಿತ್ತು. ಈ ಪರಿಷ್ಕರಿತ ಆವೃತ್ತಿಯಲ್ಲಿ ಮಹಿಳೆಗೆ ವಿಚ್ಛೇದನಕ್ಕೆ ಅವಕಾಶವಿತ್ತು. ವಿಧವೆಗೆ ಗಂಡನ ಆಸ್ತಿಯ ಪೂರಾ ಹಕ್ಕು ಹಾಗೂ ಮದುವೆಯಾದ ಹೆಣ್ಣುಮಕ್ಕಳಿಗೆ ತವರಿನ ಆಸ್ತಿ ಹಕ್ಕುಗಳು ಪ್ರಸ್ತಾಪಿಸಲ್ಪಟ್ಟಿದ್ದವು. ಅಲ್ಲದೇ ಯಾರು ಹಿಂದೂ ಎಂದು ವಿವರಿಸುವಾಗ ಎಲ್ಲ ಜಾತಿಗಳೂ ಏಕರೂಪ ಸಂಹಿತೆಗೆ ಒಳಪಡುತ್ತಿದ್ದುದರಿಂದ ಅದು ಜಾತಿವ್ಯವಸ್ಥೆಯನ್ನು ಭಗ್ನಗೊಳಿಸುವಂತಿತ್ತು.

ಹೀಗೆ ಪುರುಷ ಪ್ರಧಾನ ಸಮಾಜಕ್ಕೂ, ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಗೂ ಬದಲಾವಣೆ ತರಬಯಸಿದ್ದ ಹಿಂದೂ ಕೋಡ್ ಬಿಲ್ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಎತ್ತಿ ಹಿಡಿಯುವಂತಿತ್ತು. ಆದರೆ ಅದು ಮೂರ‍್ನಾಲ್ಕು ವರ್ಷ ಸಂಸತ್ತಿನಲ್ಲಿ ಹಲವು ವಿವಾದ, ಚರ್ಚೆಗೊಳಗಾಯಿತು. ಕಾಂಗ್ರೆಸ್ಸಿನ ಕೆಲವು ಧುರೀಣರೇ ಅದನ್ನು ವಿರೋಧಿಸಿದರು.  ನೆಹರೂ ಅದನ್ನು ಭಾಗಶಃ ಚರ್ಚೆಗಾದರೂ ಪರಿಗಣಿಸಬೇಕೆಂದು ಯತ್ನಿಸಿದರು. ಆದರೆ ಅದೂ ಸಾಧ್ಯವಾಗದೇ ಕೊನೆಗೆ ಮತಕ್ಕೆ ಹಾಕಿದಾಗ ೨೮/೨೩ ಮತಗಳ ಅಂತರದಲ್ಲಿ ತಿರಸ್ಕೃತವಾಯಿತು. ಇದರಿಂದ ಅತೀವ ನೊಂದ ಅಂಬೇಡ್ಕರ್ ‘ಅಳುವವರಿಲ್ಲದೇ ಶೋಕಿಸುವವರಿಲ್ಲದೇ ಹಿಂದೂ ಕೋಡ್ ಬಿಲ್ ಕೊಲೆಯಾಯಿತು’ ಎಂದೇ ಪ್ರತಿಕ್ರಿಯಿಸಿ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು.

ಬದ್ಧತೆ ಎಂದರೆ ಅದು. ಆತ್ಮಗೌರವ ಗಳಿಸಿಕೊಳ್ಳುವ ಹಾದಿಯಲ್ಲಿ ಜನಪರ ಹೋರಾಟಗಾರರು ಆಮಿಷಗಳಿಂದ ದೂರವುಳಿಯುವುದು ತುಂಬ ಮುಖ್ಯವಾಗಿದೆ. ಅವರ ವ್ಯಕ್ತಿತ್ವದಿಂದ ನಾವು ಕೆಲ ಸಂಗತಿಗಳನ್ನು ಅವಶ್ಯವಾಗಿ ಕಲಿಯಬೇಕಿದೆ.


ಒಂದಿಡೀ ಸಮುದಾಯದ ಪ್ರತಿನಿಧಿಯಾಗಿ ಮುಂಚೂಣಿ ಹೋರಾಟಗಾರರಾಗಿದ್ದ ಅಂಬೇಡ್ಕರ್ ಜನಸಂಪರ್ಕದ ಧಾವಂತ, ಖ್ಯಾತಿಯಿಂದಾಚೆ ತಮ್ಮ ನೇರನಡೆನುಡಿಯ ವ್ಯಕ್ತಿತ್ವವನ್ನು ಕಾಯ್ದುಕೊಂಡರು. ಆರೋಗ್ಯ, ವೈಯಕ್ತಿಕ ಸುಖಗಳನ್ನು ಗಮನಿಸದೆ ಸತತ ಸಂಘಟನೆ-ಹೋರಾಟ-ಅಧ್ಯಯನ-ಬರವಣಿಗೆಯಲ್ಲಿ ತೊಡಗಿದ ಅವರ ಶಕ್ತಿಮೂಲ ಅವರ ಬದ್ಧತೆಯೇ ಆಗಿತ್ತು. ತಮ್ಮ ಜೀವಮಾನದುದ್ದಕ್ಕೂ ಅಂಬೇಡ್ಕರ್ ರಾಜಿ ಆಮಿಷಗಳಿಗೆ ಬಲಿಯಾಗದಂತೆ ನೈತಿಕತೆಯ ಕಾವಲಿಗೆ ನಿಷ್ಠುರತೆಯನ್ನು ಉಳಿಸಿಕೊಂಡುಬಂದರು. ವ್ಯಕ್ತಿಪೂಜೆಯನ್ನು ಅವರು ಒಪ್ಪುತ್ತಿರಲಿಲ್ಲ. ತಮ್ಮ ಬರಹ-ಭಾಷಣಗಳಲ್ಲಿ ಯಾವುದೇ ವ್ಯಕ್ತಿ-ಸಿದ್ಧಾಂತವನ್ನು ಪ್ರಶ್ನೆಗಳಿಲ್ಲದೇ ಅವರು ಒಪ್ಪಿಕೊಂಡಿದ್ದೇ ಇಲ್ಲ. ಈ ವಿಷಯದಲ್ಲಿ ಬುದ್ಧನೂ, ಬೌದ್ಧಧರ್ಮವೂ ಹೊರತಾಗಿರಲಿಲ್ಲ. ಜೊತೆಗೆ ಅಂಬೇಡ್ಕರರದು ಆತ್ಮಮರುಕದ ಛಾಯೆಯಿಲ್ಲದ ಚಿಂತನೆ. ಕೌಟುಂಬಿಕ, ಆರ್ಥಿಕ ಸಂಕಷ್ಟದಲ್ಲಿದ್ದಾಗಲೂ, ಒಂಟಿಯಿರುವಾಗಲೂ ಅವರ ವ್ಯಕ್ತಿತ್ವದಲ್ಲಿ ಆತ್ಮಮರುಕದ ಛಾಯೆ ಸುಳಿಯಲಿಲ್ಲ. ಅತಿಭಾವುಕರೆನಿಸಿಕೊಂಡ, ಆ ಕಾರಣಕ್ಕೇ ‘ಸೋಲುವ’ ಹೆಣ್ಣುಮಕ್ಕಳು ಈ ಗುಣಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ. ಅಲ್ಲದೆ ಇವು ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳದ ವೈಜ್ಞಾನಿಕ ಮನೋಭಾವವನ್ನೂ, ದೂರದೃಷ್ಟಿಯನ್ನೂ, ಮುಕ್ತಮನಸ್ಥಿತಿಯನ್ನೂ ಬೆಳೆಸುತ್ತವೆ.


ಭಾರತೀಯ ಮಹಿಳಾವಾದ ಮತ್ತು ಅಂಬೇಡ್ಕರ್



ಸರ್ವಸಮಾನತೆ ಸಾರುವ ಸಂವಿಧಾನ ಬಂದು ೬೫ ವರ್ಷಗಳಾದ ನಂತರವೂ ಹಿಂದೂ ದೇವಾಲಯದೊಳಗೆ ಮಹಿಳೆಗೆ ಪ್ರವೇಶ ನೀಡಬೇಕೋ ಬೇಡವೋ ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಮಹಿಳಾ ಮೀಸಲಾತಿ ಕುರಿತು ದಶಕಗಳಿಂದ ಮಾತು ಕೇಳಿಬರುತ್ತಿದ್ದರೂ ಬೆರಳೆಣಿಕೆಯಷ್ಟು ಮಹಿಳಾ ರಾಜಕಾರಣಿಗಳಿದ್ದಾರೆ. ಕಾನೂನಿನ ಒತ್ತಾಯವಿಲ್ಲದಿದ್ದರೆ ರಾಜಕೀಯ ಪಕ್ಷಗಳಾಗಲೀ, ಸಮಾಜವಾಗಲೀ ಅವಕಾಶವಂಚಿತರಿಗೆ ಯಾವ ಅವಕಾಶವನ್ನೂ ಮೀಸಲಿಡುವುದಿಲ್ಲ ಎನ್ನುವುದು ಮತ್ತೆಮತ್ತೆ ಸಾಬೀತಾಗುತ್ತಿದೆ. ಕಾನೂನಿನ ಬೆಂಬಲವಿದ್ದರೂ ಅದನ್ನು ನಿರುಪಯೋಗಿಯಾಗಿಸುವ ರಾಜಕೀಯ ಹುನ್ನಾರಗಳೂ ದಿನನಿತ್ಯ ಸಂಭವಿಸುತ್ತಿವೆ.

ಈ ಎಲ್ಲ ತಾರತಮ್ಯಕ್ಕೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣವಾಗಿರುವುದು ಜಾತಿಪದ್ಧತಿ. ಅದು ಭಾರತದಲ್ಲಿ ಹೇಗೆ ಹುಟ್ಟಿತು ಎಂಬ ಬಗ್ಗೆ ಅತ್ಯಂತ ವೈಜ್ಞಾನಿಕ ವಿವರಣೆ ನೀಡಿದವರು ಅಂಬೇಡ್ಕರ್. ಜಾತಿ ವಿನಾಶವಾದ ಹೊರತು ಹೆಣ್ಣಿಗೆ ಪರಿಪೂರ್ಣ ಬಿಡುಗಡೆ ಒದಗಲಾರದೆಂದು ಭಾರತದ ಇವತ್ತಿನ ಸ್ತ್ರೀವಾದಿಗಳು, ಮಹಿಳೆಯರು ಅರ್ಥ ಮಾಡಿಕೊಂಡದ್ದು ಅಂಬೇಡ್ಕರರ ಜಾತಿ ವಿಶ್ಲೇಷಣೆಯನ್ನು ಓದಿದ ಬಳಿಕ. ಜಾತಿವ್ಯವಸ್ಥೆಯ ಉಪಉತ್ಪನ್ನವಾದ ಪಿತೃಪ್ರಾಧಾನ್ಯತೆಯ ಆಳವಿಸ್ತಾರಗಳನ್ನರಿಯಲು ಸಾಧ್ಯವಾಗಿಸಿದ್ದೂ ಅಂಬೇಡ್ಕರರ ಚಿಂತನೆಗಳೇ.

ತಮ್ಮ ಜಾತಿವಿನಾಶ ಪ್ರಬಂಧದಲ್ಲಿ ಅಂಬೇಡ್ಕರ್ ಹೇಳಿರುವಂತೆ ಪ್ರಾಚೀನ ಕಾಲದ ಭಾರತೀಯ ಸಮಾಜ ವರ್ಣ, ಜಾತಿಗಳಾಗಿ ಶ್ರೇಣೀಕರಣಗೊಳ್ಳಲು ಪ್ರಾರಂಭಿಸಿದ ದಿನವೇ ಹೆಣ್ಣಿನ ಹಕ್ಕು, ಅಧಿಕಾರಗಳು ಮೊಟಕುಗೊಳ್ಳಲೂ ಶುರುವಾದವು. ಜಾತಿಪದ್ಧತಿ ಹುಟ್ಟಿದ್ದು ಹೆಣ್ಣಿನ ಲೈಂಗಿಕತೆಯನ್ನು ಚೌಕಟ್ಟಿಗೊಳಪಡಿಸಿ ನಿರ್ಬಂಧಿಸುವ ಮೂಲಕ. ಜಾತಿಪದ್ಧತಿ ಬೆಳೆದಿದ್ದು ಒಳವಿವಾಹ ಚಾಲ್ತಿಗೆ ತರುವ ಮೂಲಕ. ಜಾತಿಪದ್ಧತಿ ಉಳಿದಿದ್ದು ತನಗೆ ಲಭ್ಯವಿರುವ ಹೆರುವ ಹೆಣ್ಣುಗಳನ್ನು ತನಗೆಂದೇ ಕಾಯ್ದಿಟ್ಟುಕೊಳ್ಳುವ ಮೂಲಕ. ಒಟ್ಟಾರೆ ಜಾತಿ ವ್ಯವಸ್ಥೆಯೆನ್ನುವುದು ಹೆಣ್ಣಿನ ಲೈಂಗಿಕತೆ, ಆಯ್ಕೆಯನ್ನಷ್ಟೆ ನಿರ್ಬಂಧಗೊಳಿಸಲಿಲ್ಲ; ಅವಳನ್ನು ಶಾಶ್ವತವಾಗಿ ನಿರ್ಬಂಧಿತ ಸ್ಥಿತಿಯಲ್ಲಿಡಲು ಅನುಕೂಲವಾಗುವ ಆಚರಣೆ, ರೂಢಿ, ಪರಿಕಲ್ಪನೆಗಳನ್ನು ಜಾರಿ ಮಾಡಿತು. ಜ್ಞಾನ, ಅವಕಾಶ, ಆರ್ಥಿಕ ಸಂಪನ್ಮೂಲ, ಅಧಿಕಾರ ಈ ಎಲ್ಲ ನೆಲೆಗಳಿಂದಲೂ ಹೆಣ್ಣನ್ನು ವಂಚಿಸಿ ಅಂಚಿಗೆ ತಳ್ಳಲಾಯಿತು. ಭಾರತೀಯ ಸಮಾಜದ ಸಾಮಾಜಿಕ, ಆರ್ಥಿಕ ಅಸಮಾನ ರಚನೆಗಳೇ ಲಿಂಗತಾರತಮ್ಯದ ಮೂಲ ಕಾರಣವಾಗಿ ಇವತ್ತಿಗೂ ಮುಂದುವರೆದಿವೆ. ಅವಮರ್ಯಾದಾ ಹತ್ಯೆ-ಖಾಪ್ ಪಂಚಾಯ್ತಿಗಳು ಸಂಭವಿಸುತ್ತಿವೆ.

ವಾಸ್ತವ ಹೀಗಿದ್ದರೂ ‘ಸ್ತ್ರೀವಾದವೆಂಬುದೇ ಪಾಶ್ಚಾತ್ಯ ಪರಿಕಲ್ಪನೆ. ಭಾರತದಲ್ಲಿ ಲಿಂಗವಿಶಿಷ್ಟ ಜವಾಬ್ದಾರಿಗಳಿವೆ; ಲಿಂಗ ಅನನ್ಯತೆಯ ಕುರುಹಾದ ಆಚರಣೆಗಳಿವೆಯೇ ಹೊರತು ಲಿಂಗತಾರತಮ್ಯ ಇಲ್ಲ’ ಎನ್ನುವುದು ಸನಾತನ ಭಾರತ ಸಂಸ್ಕೃತಿಯ ಪ್ರತಿಪಾದಕರ ಆರೋಪ. ಆದರೆ ಭಾರತದಲ್ಲಿ ಅನಾದಿಯಿಂದ ರೂಪುಗೊಂಡಿದ್ದ ಮುಕ್ತ ಚಿಂತನೆಯ ಫಲವೋ ಎನ್ನುವಂತಿರುವ ಅಂಬೇಡ್ಕರ್ ಚಿಂತನೆಗಳು ಇಲ್ಲಿನ ಸ್ತ್ರೀವಾದಿ ಹೋರಾಟಗಳ ತಾತ್ವಿಕತೆಯಾಗುವಷ್ಟು ಗಟ್ಟಿತನ ಪಡೆದಿವೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಾರ್ಗಗಳ ಅವರ ದೇಶೀ ಮಾದರಿಯು ಮಹಿಳಾ ಹಕ್ಕು ಜಾಗೃತಿ ಮೂಡಿಸಲು ಕ್ರಾಂತಿಕಾರಕ ಮಾದರಿಯಾಗಿದೆ.

ಭಾರತದಲ್ಲಿ ಮೊದಲ ಹಂತದ ಮಹಿಳಾ ಚಳುವಳಿ ಜಾತಿಪ್ರಶ್ನೆಯನ್ನು, ಅಂಬೇಡ್ಕರ್ ಚಿಂತನೆಗಳನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ಅದು ವರ್ಗ-ಅಧಿಕಾರ-ಕುಟುಂಬ ರಚನೆಗೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೈಗೆತ್ತಿಕೊಂಡಿತ್ತು. ಆದರೆ ನಂತರ ಜಾತಿಯೆಂಬ ವಾಸ್ತವವನ್ನುದ್ದೇಶಿಸದ ಹೊರತು ಇಲ್ಲಿ ಯಾವ ಹೋರಾಟವೂ ಅರ್ಥಪೂರ್ಣವಾಗದೆಂಬ ಅರಿವಾಗಿ ಉಮಾ ಚಕ್ರವರ್ತಿ, ವಿ. ಗೀತಾ, ಶರ್ಮಿಳಾ ರೇಗೆ ಮೊದಲಾದ ಮಹಿಳಾ ಚಿಂತಕರು ಜಾತಿ ಮತ್ತು ಲಿಂಗಪ್ರಶ್ನೆಯನ್ನು ಒಟ್ಟೊಟ್ಟಿಗೆ ನೋಡತೊಡಗಿದರು. ಅದಕ್ಕೆ ಆಧಾರವಾಗಿ ಅಂಬೇಡ್ಕರರ ಚಿಂತನೆಗಳನ್ನು ಬಳಸಿಕೊಂಡರು. ಆದರೂ ಭಾರತದ ಮಹಿಳೆಯರಿಗೆ ಜಾತಿ-ಧರ್ಮ-ಕುಟುಂಬಗಳು ಒಂದರೊಳಗೊಂದು ಹೆಣೆದುಕೊಂಡಿರುವ ಕಾರಣವಾಗಿ ಪರಿಣಾಮಕಾರಿ ಜಾತ್ಯತೀತ ಹೋರಾಟ ಕಟ್ಟುವುದು ಕಷ್ಟಸಾಧ್ಯವಾಗಿದೆ.

ಅದಕ್ಕೆ ಕಾರಣ ಜಾತಿ-ಧರ್ಮಗಳೆಂಬ ಸಂಸ್ಥೆಗಳು ತಮ್ಮ ರಚನೆಯಲ್ಲಿಯೇ ಮಹಿಳಾ ವಿರೋಧಿಗಳೆಂದು ಜನರಿಗೆ ಅರ್ಥ ಮಾಡಿಸಲು ಚಳುವಳಿಗೆ ಸಾಧ್ಯವಾಗದೇ ಇರುವುದು. ಒಂದು ಕಡೆ ಜಾತಿಧರ್ಮದ ಆಧಾರದ ಮೇಲೆ ಮನುಷ್ಯರನ್ನು ಒಡೆಯುವ, ಅಸಹನೆ ಹುಟ್ಟಿಸುವ ಕೋಮುವಾದವು ಮಹಿಳೆಯರನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ. ಕೋಮುವಾದವು ಅರಿವಿನ ಬೆಳಕಿನೆಡೆಗೆ ಒಯ್ಯಬಹುದಾದ ಧರ್ಮ ಎಂಬ ಸಂಸ್ಥೆಯನ್ನು ಸಂಪೂರ್ಣ ಢಾಂಭಿಕ ಆಚರಣೆಗಳಿಗಷ್ಟೆ ಸೀಮಿತಗೊಳಿಸಿಬಿಟ್ಟಿದೆ. ಭಾರತ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ, ಹಿಂದೂತ್ವವನ್ನು ತನ್ನೆಲ್ಲ ಅಜೆಂಡಾಗಳ ಕಾರ್ಯಸೂಚಿಯಾಗಿಸಿಕೊಂಡಿರುವ ರಾಜಕಾರಣವು ಭಾರತೀಯ ಸಂಸ್ಕೃತಿಯನ್ನು ವೈಭವೀಕರಿಸುತ್ತ ಅದರ ಮುಖ್ಯ ವಕ್ತಾರಳಾಗಿ, ವಾಹಕಳಾಗಿ ಹೆಣ್ಣನ್ನು ಕಾಣಿಸುತ್ತಿದೆ. ಎಲ್ಲ ಧಾರ್ಮಿಕ, ಸಾಂಸ್ಕೃತಿಕ ಸಂಕೇತಗಳಲ್ಲಿ ಹೆಣ್ಣನ್ನು ಯಥೇಚ್ಛವಾಗಿ ಬಳಸಿಕೊಳ್ಳುತ್ತಿದೆ. ಭಾರತದ ಬಹುಪಾಲು ಹೆಣ್ಮಕ್ಕಳು ಧರ್ಮ ಮತ್ತದು ವಿಧಿಸಿರುವ ಕೌಟುಂಬಿಕ-ನೈತಿಕ ಚೌಕಟ್ಟಿನಿಂದ ಹೊರಬರಲಾರದವರಾಗಿ ಉಸಿರು ಕಟ್ಟಿಸುವ ಬಿಗಿಯನ್ನು ಸುರಕ್ಷೆಯೆಂದು ನಂಬಿದ್ದಾರೆ.

ಇನ್ನೊಂದು ಕಡೆ ಮಾರುಕಟ್ಟೆಯು ಸೃಷ್ಟಿಸಿರುವ ಭ್ರಮಾತ್ಮಕ ಜಗತ್ತಿನಲ್ಲಿ, ಬಂಡವಾಳ ಹಾಕಿರುವ ಉದ್ದಿಮೆಪತಿಗಳ ಲಾಭಕೋರ ನಡೆಗಳಲ್ಲಿ ಕೊನೆಯ ಬಲಿಪಶು ಹೆಣ್ಣು ಮತ್ತವಳ ದೇಹವೇ ಆಗಿದೆ. ಎಲ್ಲವೂ ಸರಕಾಗಿರುವ ಕಾಲದಲ್ಲಿ ಹೆಣ್ಣು, ಹೆಣ್ತನ, ಗರ್ಭಕೋಶ ಎಲ್ಲವೂ ಕಚ್ಛಾವಸ್ತುಗಳಾಗಿವೆ. ಸರಕೀಕರಣ ಸೃಷ್ಟಿಸಿರುವ ಕೊಳ್ಳುಬಾಕತನಕ್ಕೆ ಹಣವೇ ಮೌಲ್ಯ. ಅಲಂಕರಣವೇ ಸೌಂದರ್ಯ. ಆರೋಗ್ಯ, ನೈತಿಕತೆ, ಸಹಬಾಳ್ವೆ, ಚಿಂತನೆಗಳಿಗೆ ಸಮಯವೇ ಇಲ್ಲವಾಗಿದೆ.

ಹೀಗೆ ಧರ್ಮರಾಜಕಾರಣ ಮತ್ತು ಮಾರುಕಟ್ಟೆ ಹುಟ್ಟುಹಾಕಿರುವ ಅನೂಹ್ಯ ಸಾಮಾಜಿಕ ಬದಲಾವಣೆಗಳು ಮಹಿಳೆಯರ ಮತ್ತು ಶೋಷಿತರ ಚಳುವಳಿ ಕಟ್ಟಲು ಇರುವ ದೊಡ್ಡ ತೊಡಕುಗಳಾಗಿವೆ. ಅಷ್ಟೇ ಅಲ್ಲ, ಧರ್ಮ ಮತ್ತು ಮಾರುಕಟ್ಟೆಗಳು ರಾಜಕಾರಣದೊಂದಿಗೆ ಹಸ್ತಕ್ಷೇಪ ಮಾಡುತ್ತಿರುವುದರಿಂದಲೇ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಜನತಂತ್ರ ದುರ್ಬಲಗೊಳ್ಳುತ್ತ, ಸಾಂಕೇತಿಕಗೊಳ್ಳುತ್ತ ಸಾಗುತ್ತಿದೆ. ಹೀಗಿರುತ್ತ ಡೆಮಾಕ್ರಸಿ, ಧರ್ಮ, ರಾಷ್ಟ್ರೀಯತೆ, ಮಾರುಕಟ್ಟೆ ಮತ್ತಿತರ ‘ಒಪ್ಪಿತ’ ವ್ಯವಸ್ಥೆಗಳನ್ನು ಪ್ರಶ್ನಿಸುತ್ತಲೇ ಅವನ್ನು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ಮಹಿಳೆಯರ ಮೇಲಿದೆ. ಜೊತೆಗೆ ಮದುವೆ ಮತ್ತು ಕುಟುಂಬ ಎಂಬ ಸಾಮಾಜಿಕ ರಚನೆಗಳನ್ನು ಹಾಗೂ ಧರ್ಮ/ ರಾಜಕಾರಣಗಳನ್ನು ಚಲನಶೀಲಗೊಳಿಸುವ ಜವಾಬ್ದಾರಿಯೂ ಹೆಣ್ಮಕ್ಕಳ ಮೇಲಿದೆ.

ಎಂದೇ ಭಾರತೀಯರ ಕೌಟುಂಬಿಕ ಹಾಗೂ ವೈಯಕ್ತಿಕ ಬದುಕಿನಲ್ಲಿ ಬದಲಾವಣೆ ತರುವತ್ತ ಜನಚಳುವಳಿಗಳು ಗಮನ ಹರಿಸಬೇಕಿದೆ. ಅದರಲ್ಲೂ ಮಹಿಳೆಗೆ ಈಗ ಎರಡೆರಡು ಗಹನ ಜವಾಬ್ದಾರಿಗಳಿವೆ: ಒಂದು ಸೆಲ್ಫಿ ಮತ್ತು ಇನ್ನೊಂದು ಗ್ರೂಪಿ. ಕುಟುಂಬ ಮತ್ತು ಸಮಾಜ. ಈ ಎರಡನ್ನೂ ನಿಭಾಯಿಸುವ ಶಕ್ತಿಯನ್ನೂ, ಬೆಸೆಯುವ ಪ್ರೀತಿಯನ್ನೂ ಮಹಿಳೆ ಬೆಳೆಸಿಕೊಳ್ಳಬೇಕು. ಗೂಡುಗಳ ಬೆಳಗುವ ಜೋತಮ್ಮನಾಗುತ್ತಲೆ ಲೋಕ ಬೆಳಗುವ ದೀವಟಿಗೆಯೂ ಆಗಬೇಕು. ಅದು ಮಹಿಳಾ ರಾಜಕಾರಣ. ಅಂಬೇಡ್ಕರ್ ದಿನಾಚರಣೆಯ ಹೊತ್ತಿಗೆ, ಬಾಬಾ ಅವರ ನೆನಪಿಗೆ ಹೆಣ್ಣುಮಕ್ಕಳು ಈ ದಿಕ್ಕಿನತ್ತ ಚಲಿಸುವರೆಂದು ನಂಬಬಹುದೆ?





















Friday 11 March 2016

ಸಾವಿನ ಸುತ್ತ ತಾಯ್ತನದ ಕವಚ: ಬ್ಯೂನಸ್ ಐರಿಸ್‌ನ ಪ್ಲಾಜಾ ಡಿ ಮೆಯೊ







ಕಳೆದ ತಿಂಗಳು ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ಸುತ್ತಾಡುವಾಗ ಓವರ್ ಬ್ರಿಡ್ಜ್‌ಗಳ ತಳಭಾಗದಲ್ಲಿ ಸಾವಿರಾರು ಭಾವಚಿತ್ರಗಳು ಅಂಟಿಸಲ್ಪಟ್ಟಿದ್ದು ಗಮನಕ್ಕೆ ಬಂತು. ಮುಖ್ಯ ಚೌಕ ಪ್ಲಾಜಾ ಡಿ ಮೇಯೊ ಬಳಿ ಕುತೂಹಲಕರ ಸಂಗತಿಯೊಂದು ಎದುರಾಯಿತು. ಪ್ರತಿ ಗುರುವಾರ ಮಧ್ಯಾಹ್ನ ೩.೩೦ಕ್ಕೆ ಅಮ್ಮಂದಿರು ಅಲ್ಲಿ ಸೇರುತ್ತಾರೆ; ವಿಶ್ವಾದ್ಯಂತ ನಡೆವ ಮಾನವ ಹಕ್ಕು ಉಲ್ಲಂಘನೆಗಳನ್ನು ಪ್ರತಿಭಟಿಸುತ್ತಾರೆ; ಕಳೆದ ೪೦ ವರ್ಷಗಳಿಂದ ಇದು ನಡೆಯುತ್ತಿರುವುದರಿಂದ ಚೌಕಕ್ಕೆ ‘ಅಮ್ಮಂದಿರ ಚೌಕ’ ಎಂಬ ಹೆಸರು ಬಂದಿದೆ ಎಂದು ಗೈಡ್ ಚುಟುಕಾಗಿ ಹೇಳಿದಳು. ತಮ್ಮ ಹೆಮ್ಮೆಯ ಸ್ಮಾರಕಗಳ ತೋರಿಸುತ್ತಿದ್ದವಳಿಗೆ ಇದು ಕಹಿಗುಳಿಗೆಯಂತೆ ಕಂಡಿರಬೇಕು, ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತ ಅವಳ ಪ್ರಸನ್ನತೆ ಮಾಯವಾಯಿತು. ಆ ಕಡೆಯಿಂದ ಟುಪಾಕ್ ಅಮಾರು ಸಂಘಟನೆಯ ಬುಡಕಟ್ಟು ಮಹಿಳೆ ಮಿಲಾಗ್ರಿಸ್ ಸಾಲಾ ಬಿಡುಗಡೆಗಾಗಿ ಆಗ್ರಹ ಕೇಳಿಬರತೊಡಗಿತ್ತು.

‘ಮದರ‍್ಸ್ ಆಫ್ ಪ್ಲಾಜಾ ಡಿ ಮೆಯೊ’ ಅಹಿಂಸಾತ್ಮಕ ಹಾಗೂ ಪರ್ಯಾಯ ಹೋರಾಟದ ಮಾದರಿ ಸಂಘಟನೆ. ಅದು ಸಾವಿನ ಸುತ್ತ ಹೆಣೆಯಲಾದ ತಾಯ್ತನದ ವರ್ತುಲ. ಅಧ್ಯಕ್ಷೀಯ ಭವನ ‘ಕಾಸಾ ರೋಸಾಡಾ’ (ಪಿಂಕ್ ಹೌಸ್) ಎದುರು ಪ್ರತಿವಾರ ಮಹಿಳೆಯರು ಕಲೆತು ಆಳುವವರ ಹಿಂಸಾತ್ಮಕ ನಡೆಗಳನ್ನು ಪ್ರಶ್ನಿಸುವ ಜಾಗ. ತಾಯ್ತನಕ್ಕೆ ಹೊಸ ವ್ಯಾಖ್ಯೆ ಬರೆದ ಸ್ಥಳ.

ಸಾಂಪ್ರದಾಯಿಕ ನೈತಿಕ-ಧಾರ್ಮಿಕ-ನ್ಯಾಯಿಕ ವ್ಯವಸ್ಥೆಯಿಂದಾಗಲೀ, ಆಳುವ ಪ್ರಭುತ್ವದಿಂದಾಗಲೀ ತಮಗೆ ಸಿಗಬೇಕಾದ ನ್ಯಾಯ ಸಿಗುವುದಿಲ್ಲ ಎನಿಸಿದಾಗಲೆಲ್ಲ ಮಹಿಳೆಯರು ತಮ್ಮದೇ ನ್ಯಾಯವ್ಯವಸ್ಥೆಯನ್ನು ಅನ್ವೇಷಿಸಿಕೊಂಡಿದ್ದಾರೆ. ಅಂಥ ನ್ಯಾಯಹೋರಾಟಕ್ಕಾಗಿ ಅಮಾಯಕ ತಾಯಂದಿರ ದುಃಖಾರ್ತ ಘಳಿಗೆಯಲ್ಲಿ ‘ಮದರ್ಸ್ ಆಫ್ ಪ್ಲಾಜಾ ಡಿ ಮೇಯೊ’ ರೂಪುಗೊಂಡಿತು. ಅರ್ಜೆಂಟೀನಾ ಚರಿತ್ರೆಯಲ್ಲಿ ೧೯೭೬ರಿಂದ ೧೯೮೩ರವರೆಗಿನ ಏಳೆಂಟು ವರ್ಷಗಳ ಅರಾಜಕತೆ ‘ಡರ್ಟಿ ವಾರ್’ ಎಂದು ಗುರುತಿಸಲ್ಪಡುತ್ತದೆ. ಜೀವಗಳು ಹರಣವಾದ, ಕುಟುಂಬಗಳು ಛಿದ್ರಗೊಂಡ, ಮಾನವೀಯತೆ ಕ್ಷೀಣಿಸಿದ ಅವಧಿ ಅದು. ಆಗ ‘ರಾಷ್ಟ್ರೀಯ ಪುನರ್ನಿರ್ಮಾಣ ಪ್ರಕ್ರಿಯೆ’ಯನ್ನು ಶುರುಮಾಡಿದ ಸೇನಾಡಳಿತ ದಿಟ್ಟ ದನಿಗಳನ್ನು ಶಾಶ್ವತವಾಗಿ ಇಲ್ಲವಾಗಿಸಿತು. ಒಂದು ವರ್ಷದಲ್ಲಿ ಹಲವಾರು ಕಾರ್ಯಕರ್ತರು, ಅದರಲ್ಲೂ ಸಮಾಜವಾದಿ ಒಲವಿದ್ದ ವೈದ್ಯ, ವಕೀಲ, ವಿದ್ಯಾರ್ಥಿ, ನಾಗರಿಕರು ಇದ್ದಕ್ಕಿದ್ದಂತೆ ಕಾಣೆಯಾದರು. ದುಃಖತಪ್ತ ತಾಯಂದಿರು ತಮ್ಮ ಮಕ್ಕಳು ಎಲ್ಲಿ ಹೋದರೆಂದು, ಯಾರನ್ನು ಕೇಳುವುದೆಂದು ತಿಳಿಯದೇ ಕಂಗೆಟ್ಟರು.

ಆಗ ಮಗ-ಸೊಸೆಯನ್ನು ಕಳೆದುಕೊಂಡ ಅಜುಸೆನಾ ವಿನ್ಸೆಂಟಿ ಎಂಬಾಕೆ ಹತ್ತಾರು ತಾಯಂದಿರೊಂದಿಗೆ ಮೇ ಸ್ಕ್ವೇರ್ ಕಡೆ ಹೊರಟರು. ಭಿನ್ನ ಹಿನ್ನೆಲೆಗಳ ಅವರೆಲ್ಲ ದುಃಖವನ್ನು ಸಾಮೂಹಿಕವಾಗಿ ಹಂಚಿಕೊಳ್ಳಲು, ಪರಸ್ಪರ ಚರ್ಚಿಸಲು ಒಗ್ಗೂಡಿದರು. ಏನಾಗುತ್ತಿದೆ ಎನ್ನುವುದರ ಸ್ಪಷ್ಟ ಅರಿವು ಆಗಲೇ ಅವರಿಗೆ ದೊರೆತದ್ದು. ಪೊಲೀಸರೇ ಕಾರ್ಯಕರ್ತರನ್ನು ಗುರುತಿಸಿ, ಅಪಹರಿಸಿ ಅನಾಮಿಕ ಸ್ಥಳಗಳಿಗೆ ಒಯ್ದಿದ್ದರು. ಭಯಾನಕ ಹಿಂಸೆ ನೀಡಿ, ಕೊಂದು ದೂರದ ಗ್ರಾಮೀಣ ಪ್ರದೇಶಗಳಲ್ಲಿ, ಗುರುತಿಲ್ಲದ ಸಾಮೂಹಿಕ ಗೋರಿಗಳಲ್ಲಿ ಹುಗಿದಿದ್ದರು. ನಾಪತ್ತೆಯಾದ ಗರ್ಭಿಣಿ ಹೆಂಗಸರು ಹಿಂಸಾಕೇಂದ್ರಗಳಲ್ಲಿ ಹೆತ್ತ ಮಕ್ಕಳನ್ನು ಯಾರ‍್ಯಾರಿಗೋ ದತ್ತು ಕೊಟ್ಟು ಬಾಣಂತಿಯರನ್ನೂ ಕೊಲ್ಲಲಾಗಿತ್ತು. ದತ್ತು ಕೊಟ್ಟ ೨೫೬ ಎಳೆಗೂಸುಗಳು ನಾಪತ್ತೆಯಾಗಿದ್ದವು.

ಕರುಳು ಕತ್ತರಿಸುವ ದುಃಖ, ಒತ್ತರಿಸಿ ಬರುವ ಅಸಹಾಯಕ ಸಿಟ್ಟು, ಆಳುವವರ ಕಣ್ಣಿಗೆ ಬೀಳುವುದೆ ಅಪಾಯಕಾರಿ ಎನ್ನುವಂತೆ ಮಾಡಿದ್ದ ಮಿಲಿಟರಿ ಆಡಳಿತ - ಮುಂದೇನು ಮಾಡುವುದು? ವಾರದಿಂದ ವಾರಕ್ಕೆ ನೂರಾರು ಮಹಿಳೆಯರು ಸೇರಿಕೊಂಡಾಗ ತಮ್ಮ ಬಲದ ಅರಿವಾಯಿತು. ಪ್ರತಿವಾರ ಮೆರವಣಿಗೆ, ಪ್ರದರ್ಶನ ನಡೆಸಿ ಪ್ರಭುತ್ವದ ಹಿಂಸೆಯನ್ನು ಖಂಡಿಸಿದರು. ಹಿಂಸೆಯನ್ನು ಕಂಡೂ ಸುಮ್ಮನಿರುವ ನಿರ್ಲಿಪ್ತಿಯನ್ನು ವಿರೋಧಿಸಿದರು. ಅರ್ಜೆಂಟೀನಾದ ಮಾನವಹಕ್ಕು ಉಲ್ಲಂಘನೆಯನ್ನು ಹೊರ ಜಗತ್ತಿಗೆ ತಿಳಿಸಿದರು.

ಸರ್ಕಾರ ಅವರನ್ನು ಹುಚ್ಚು ಹೆಂಗಸರು ಎಂದು ಬಣ್ಣಿಸಿತು!


‘ನಾಪತ್ತೆಯಾದವರ’ ಸಂಖ್ಯೆ ಬೆಳೆಯುತ್ತ ಹೋದಂತೆ ನಾಪತ್ತೆಯಾದವರ ಕತೆಗಳೂ ಬೆಳೆದವು. ೧೯೭೭ರಲ್ಲಿ ಮಾನವ ಹಕ್ಕು ದಿನಾಚರಣೆಯಂದು ಕಾಣೆಯಾದವರ ಭಾವಚಿತ್ರ, ಹೆಸರುಗಳಿರುವ ಪತ್ರಿಕೆ ಪ್ರಕಟಿಸಿ ತಾಯಂದಿರು ಮಾಧ್ಯಮದ ಗಮನ ಸೆಳೆದರು. ಆದರೆ ಅದೇ ರಾತ್ರಿ ಈ ಸಂಘಟನೆ ಶುರುಮಾಡಿದವರಲ್ಲಿ ಒಬ್ಬರಾದ ಮಹಿಳೆ ಅಜುಸೆನಾರನ್ನು ಅವರ ಮನೆಯಿಂದ ಅಪಹರಿಸಿ ಎಸ್ಮಾ ಕ್ಯಾಂಪಿಗೆ ಒಯ್ಯಲಾಯಿತು. ಹಾಗೆ ಅಪಹರಿಸಲ್ಪಟ್ಟವರನ್ನು ಬರ್ಬರವಾಗಿ ಹಿಂಸಿಸಿ, ಮಾದಕ ದ್ರವ್ಯ ನೀಡಿ ಪ್ರಜ್ಞೆ ತಪ್ಪಿಸಿ, ಬಟ್ಟೆ ಬಿಚ್ಚಿ, ಸಮುದ್ರ ಮಧ್ಯೆ ಬಿಸಾಡಲಾಗುತ್ತಿತ್ತು.

೧೯೭೮ರಲ್ಲಿ ಅರ್ಜೆಂಟೀನಾವು ಫುಟ್ಬಾಲ್ ವಿಶ್ವಕಪ್ ಆಯೋಜಿಸಿತು. ಇದೇವೇಳೆ ಸಂಘಟನೆಯ ಮತ್ತಿಬ್ಬರು - ಎಸ್ತರ್ ಮತ್ತು ಮಾರಿಯಾ ನಾಪತ್ತೆಯಾದರು. ಇಬ್ಬರು ಫ್ರೆಂಚ್ ಸನ್ಯಾಸಿನಿಯರಾದ ಲಿಯೊನಿ ಡುಕೆ ಮತ್ತವರ ಸೋದರಿ ಸೇರಿದಂತೆ ಹಲವರು ನಾಪತ್ತೆಯಾದರು. ಕೆಲವರ ದೇಹ ಅಟ್ಲಾಂಟಿಕ್ ತೀರದಲ್ಲಿ ವಿಕಾರಗೊಂಡು ಬಂದು ಬಿದ್ದರೆ ಮತ್ತೆ ಕೆಲವರ ದೇಹ ಪತ್ತೆಯಾಗಲೇ ಇಲ್ಲ. ಫ್ರಾನ್ಸ್ ಆ ನನ್‌ಗಳ ಪತ್ತೆ ತಿಳಿಸಲು ಒತ್ತಾಯಿಸಿ ವಿಶ್ವಸಂಸ್ಥೆಯ ತನಕ ವಿಷಯ ಕೊಂಡೊಯ್ದಿತು. ಮಿಲಿಟರಿ ಆಡಳಿತದ ವಿರುದ್ಧ ಒತ್ತಡ ಬೆಳೆದು ಅವರು ಒಂಭತ್ತು ಸಾವಿರ ಜನರನ್ನು ಅಪಹರಿಸಿದ್ದಾಗಿ ಒಪ್ಪಿಕೊಂಡರು. ಆದರೆ ಅಮ್ಮಂದಿರು ಅಪಹೃತರ ಸಂಖ್ಯೆ ೩೦ ಸಾವಿರಕ್ಕೂ ಮಿಕ್ಕಿದೆ ಎಂದು ದಾಖಲೆ ಒದಗಿಸಿದರು.

ಪಾಪದ ಕೊಡ ತುಂಬಿತು. ೧೯೮೩ರಲ್ಲಿ ಅಂತೂ ಮಿಲಿಟರಿ ಆಳ್ವಿಕೆ ಕೊನೆಗೊಂಡು ಜನಪ್ರಿಯ ಸರ್ಕಾರ ಅಧಿಕಾರಕ್ಕೆ ಬಂತು.

ಆಗಲಾದರೂ ಸರ್ಕಾರ ತಮ್ಮ ಮಕ್ಕಳ ಕುರಿತ ಮಾಹಿತಿ ನೀಡಬಹುದೆಂದು ಅಮ್ಮಂದಿರು ಭಾವಿಸಿದರು. ಸರ್ಕಾರ ರಾಷ್ಟ್ರೀಯ ಆಯೋಗವೊಂದನ್ನು ರಚಿಸಿ ತನಿಖೆ, ಡಿಎನ್‌ಎ ಹೋಲಿಕೆ ಶುರುಮಾಡಿತು. ಮಿಲಿಟರಿಯ ಹಲವು ಉನ್ನತ ಅಧಿಕಾರಿಗಳು ಶಿಕ್ಷಿಸಲ್ಪಟ್ಟರು. ದತ್ತು ಕೊಟ್ಟ ೩೧ ಮಕ್ಕಳು ತಂತಮ್ಮ ಕುಟುಂಬ ಸೇರಿದವು. ಕೆಲವು ಮಕ್ಕಳು ಸಾಕು ತಾಯ್ತಂದೆಯರು ಹಾಗೂ ಮೂಲ ಪಾಲಕರಿಂದ ಜಂಟಿಯಾಗಿ ಬೆಳೆಸಲ್ಪಟ್ಟವು.

೨೦೦೫ರಲ್ಲಿ ಗುರುತಿಸದ ಗೋರಿಗಳಲ್ಲಿದ್ದ ದೇಹವನ್ನು ಫೋರೆನ್ಸಿಕ್ ತಜ್ಞರು ಪರೀಕ್ಷೆಗೊಳಪಡಿಸಿದಾಗ ನಾಪತ್ತೆಯಾಗಿದ್ದ ಸಂಘಟನೆಯ ಮೂವರು ಮಹಿಳೆಯರ ಶವ ಪತ್ತೆಯಾಯಿತು. ಅಜುಸೆನಾ ದೇಹವನ್ನು ಸುಟ್ಟು ಬೂದಿಯನ್ನು ಮೇ ಚೌಕದಲ್ಲಿ ಸಮಾಧಿ ಮಾಡಲಾಯಿತು. ‘ನನ್ನಮ್ಮ ಹುಟ್ಟಿದ್ದು ಈ ಸಾರ್ವಜನಿಕ ಸ್ಥಳದಲ್ಲಿ. ಅವಳು ಬದುಕಿರುವುದು ಇಲ್ಲಿಯೇ. ಅದಕ್ಕೇ ಅವಳ ಅಂತಿಮ ಅವಶೇಷಗಳು ಇಲ್ಲಿಯೇ ಇರಲಿ’ ಎಂದು ಅವರ ಮಗಳು ಹೇಳಿದಳು. ಸಂಘಟನೆಯು ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆಯಿತು.

ನಂತರ ಬಹುಪಾಲು ಸಂಘಟನೆಗಳಿಗೆ ಆಗುವಂತೆ ಇಲ್ಲೂ ಆಯಿತು. ೧೯೮೬ರ ಹೊತ್ತಿಗೆ ಈ ಗುಂಪು ಒಡೆಯಿತು. ಒಂದು ಭಾಗವು ತಮ್ಮ ಮಕ್ಕಳ ಮಾಹಿತಿ, ಅಂತಿಮ ಅವಶೇಷಗಳನ್ನು ಪಡೆಯಲಷ್ಟೇ ಪ್ರಯತ್ನಿಸಿತು. ಅಧ್ಯಕ್ಷರಿಗೆ ಹತ್ತಿರದವರಾಗಿ ಒಂದು ಪತ್ರಿಕೆ, ರೇಡಿಯೊ ಕೇಂದ್ರ ಹಾಗೂ ವಿಶ್ವವಿದ್ಯಾಲಯ ಶುರು ಮಾಡಿತು. ಸ್ಲಂವಾಸಿಗಳಿಗೆ ಮನೆ ಕಟ್ಟಿಕೊಡುವ ಸರ್ಕಾರಿ ಕಾರ್ಯಕ್ರಮದ ಸಂಚಾಲಕರಾಗಿ ಮಾತೆಯರು ಧನಸಹಾಯ ಪಡೆದರು. ೨೦೦೬ರ ಜನವರಿ ೨೬ರಂದು ನಡೆಯುವುದು ತಮ್ಮ ಕೊನೆಯ ವಾರ್ಷಿಕ ಪ್ರದರ್ಶನವೆಂದೂ, ‘ಶತ್ರುವು ಸರ್ಕಾರಿ ಕಚೇರಿಯೊಳಗಿಲ್ಲ’ ಎಂದೂ ಅದು ಘೋಷಿಸಿತು.

ಅಂದಹಾಗೆ ನಮ್ಮ ಗೈಡ್ ಈ ಗುಂಪಿನ ಮೊಮ್ಮಗಳು.


ಸಂಘಟನೆಯ ಮತ್ತೊಂದು ಭಾಗ ತಮ್ಮ ಮಕ್ಕಳ ರಾಜಕೀಯ ಅಜೆಂಡಾ ಮುಂದುವರೆಸಲು ನಿರ್ಧರಿಸಿತು. ಈ ಕ್ರಾಂತಿಕಾರಕ ಗುಂಪು ಸರ್ಕಾರದ ಸಹಾಯಧನ, ಪರಿಹಾರ ನಿರಾಕರಿಸಿ ಅರ್ಜೆಂಟೀನಾದ ರಾಜಕೀಯ ಸಂಸ್ಕೃತಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಬಯಸಿತು. ಅವರಿಗೆ ಕ್ಯೂಬಾ ಕ್ರಾಂತಿಯನ್ನು ಆದರ್ಶವಾಗಿಟ್ಟುಕೊಂಡಿದ್ದ ತರುಣರ ಗುಂಪಿನ ಬೆಂಬಲ ದೊರೆಯಿತು. ಈ ತಾಯಂದಿರು ನ್ಯೂಯಾರ್ಕ್ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ಉಗ್ರಗಾಮಿಗಳ ದಾಳಿಂiನ್ನು ‘ಅಮೆರಿಕದಿಂದ ಅನ್ಯಾಯಕ್ಕೊಳಗಾದ ನಾಗರಿಕ ಗುಂಪುಗಳ ಹತಾಶ ಪ್ರಯತ್ನ’ ಎಂದು ಬಣ್ಣಿಸಿ ವಿವಾದಕ್ಕೊಳಗಾದರು.


‘ಮೊದಲು ಏಕಾಂಗಿಯಾಗಿ ಅಳುತ್ತಿದ್ದೆವು. ಈಗ ಸಾಮೂಹಿಕವಾಗಿ ದುಃಖಿಸುವುದು ಕಲಿತಿದ್ದೇವೆ’

ಈ ಸಂಘಟನೆ ಹಲವು ದೇಶಗಳ ಅಮ್ಮಂದಿರನ್ನು ಪ್ರಭಾವಿಸಿತು. ನಾನಾಕಾರಣಗಳಿಗಾಗಿ ಆಳುವವರ ಹಿಂಸೆಗೆ ಮಕ್ಕಳನ್ನು ಕಳಕೊಂಡವರ ಹೋರಾಟ ಮಾದರಿಗಳನ್ನೂ ಸೃಷ್ಟಿಸಿತು. ಅಂಥವುಗಳಲ್ಲಿ ಕೆಲ ಸಂಘಟನೆಗಳಿವು:

  • ಇರಾನಿನ ಜೈಲುಗಳಲ್ಲಿ ರಾಜಕೀಯ ಬಂದಿಗಳ ಸಾಮೂಹಿಕ ಹತ್ಯೆಯನ್ನು ವಿರೋಧಿಸಿ ೧೯೮೧ರಿಂದ ಶುರುವಾದ ಸಂಘಟನೆ ಮದರ್ಸ್ ಆಫ್ ಕಾವರಾನ್. ಪ್ರತಿ ತಿಂಗಳ ಮೊದಲ ಶುಕ್ರವಾರ ಕಾವರಾನಿನ ಸಾಮೂಹಿಕ ಗೋರಿಯ ಬಳಿ ಅವರ ಪ್ರದರ್ಶನ. ಈ ಗುಂಪು ೨೦೦೯ರಿಂದ ಇರಾನಿನಲ್ಲಿ ಶುರುವಾದ ‘ಮೌರ್ನಿಂಗ್ ಮದರ್ಸ್’ ಅಥವಾ ‘ಮದರ್ಸ್ ಆಫ್ ಲಾಲೇಹ್ ಪಾರ್ಕ್’ ಜೊತೆ ಸೇರಿತು. ೨೦೦೯ರ ಅಧ್ಯಕ್ಷೀಯ ಚುನಾವಣೆ ವೇಳೆ ಸಂಗಾತಿ-ಮಕ್ಕಳನ್ನು ಕಳೆದುಕೊಂಡ ಮಹಿಳೆಯರು ಪ್ರತಿ ಶನಿವಾರ ಸಂಜೆ ೭ ರಿಂದ ೮ರ ತನಕ ಟೆಹ್ರಾನಿನ ಲಾಲೇಹ್ ಪಾರ್ಕಿನಲ್ಲಿ ಕಪ್ಪುಬಟ್ಟೆ ಧರಿಸಿ ತಮ್ಮವರ ಸಾವು, ಬಂಧನ, ನಾಪತ್ತೆಗೆ ಸರ್ಕಾರ ಉತ್ತರದಾಯಿತ್ವ ಹೊಂದಿದೆಯೆಂದು ಪ್ರತಿಪಾದಿಸಿ ನ್ಯಾಯ ಕೇಳುತ್ತಾರೆ. ಮರಣದಂಡನೆ ರದ್ದುಗೊಳಿಸಲು ಆಗ್ರಹಿಸುತ್ತಾರೆ. ನೊಬೆಲ್ ವಿಜೇತೆ ಶಿರೀನ್ ಎಬಾಡಿ ಈ ಗುಂಪಿನವರು.

  • ೧೯೮೮ರ ಜನವರಿಯಲ್ಲಿ ಜೆರುಸಲೇಂನ ಇಸ್ರೇಲಿ ಮಹಿಳೆಯರಿಂದ ಶುರುವಾದ ‘ವಿಮೆನ್ ಇನ್ ಬ್ಲಾಕ್’ ಕಪ್ಪು ಉಡುಗೆಯ ಮಹಿಳೆಯರ ಯುದ್ಧವಿರೋಧಿ ಸಂಘಟನೆ. ಅರ್ಜೆಂಟೀನಾದ ಅಹಿಂಸಾತ್ಮಕ ಪ್ರತಿರೋಧದಿಂದ ಸ್ಫೂರ್ತಿ ಪಡೆದ ಇಸ್ರೇಲಿ ಮಹಿಳೆಯರು ಪ್ರತಿ ಶುಕ್ರವಾರ ಜೆರುಸಲೇಂನ ಹಗಾರ್ ಸ್ಕ್ವೇರ್‌ನಲ್ಲಿ ಮಧ್ಯಾಹ್ನ ಒಂದರಿಂದ ಎರಡರ ತನಕ ‘ಸ್ಟಾಪ್ ಆಕ್ಯುಪೇಷನ್’ ಎಂಬ ಪ್ಲಕಾರ್ಡ್ ಹಿಡಿದು ಮೌನವಾಗಿ ನಿಂತರು. ಇಸ್ರೇಲಿನ ಇತರ ನಗರಗಳಲ್ಲೂ ವಾರಕ್ಕೊಮ್ಮೆ ಮಹಿಳೆಯರು ನಗರದ ಚೌಕಗಳಲ್ಲಿ, ಹೆದ್ದಾರಿ ಜಂಕ್ಷನ್‌ಗಳಲ್ಲಿ, ಮೌನವಾಗಿ ಕಪ್ಪುಬಟ್ಟೆ ಧರಿಸಿ ನಿಂತು ಜನರ ಗಮನ ಸೆಳೆದರು. ೧೯೯೩ರ ಓಸ್ಲೋ ಒಪ್ಪಂದದ ಬಳಿಕ ಇದು ಕಡಿಮೆಯಾಯಿತು. 

  • ಟರ್ಕಿಯ ಇಸ್ತಾನ್‌ಬುಲ್‌ನ ‘ಸ್ಯಾಟರ್ಡೆ ಮದರ್ಸ್’ ಪ್ರತಿ ಶನಿವಾರ ಮಧ್ಯಾಹ್ನ ೧೨ ಗಂಟೆಗೆ ಅರ್ಧ ತಾಸು ಅವಧಿಗೆ ೧೯೯೫ರಿಂದ ಸೇರುತ್ತ ಮೌನ ಜಾಗೃತಿ ಮಾಡುತ್ತಿದ್ದಾರೆ. ೮೦-೯೦ರ ದಶಕಗಳ ಕ್ಷಿಪ್ರಕ್ರಾಂತಿ ಮತ್ತು ಅರಾಜಕ ಆಡಳಿತದ  ವೇಳೆ ‘ನಾಪತ್ತೆ’ಯಾದವರ ಮಹಿಳಾ ಸಂಬಂಧಿಗಳು ‘ಮೊದಲು ಏಕಾಂಗಿಯಾಗಿ ಅಳುತ್ತಿದ್ದೆವು. ಈಗ ಸಾಮೂಹಿಕವಾಗಿ ದುಃಖಿಸುವುದು ಕಲಿತಿದ್ದೇವೆ’ ಎನ್ನುತ್ತಾರೆ.

  • ಕ್ಯೂಬಾ ಹವಾನಾದಲ್ಲಿ ಜೈಲಿಗೆ ಕಳಿಸಲ್ಪಟ್ಟ ಭಿನ್ನಮತೀಯರ ಕುಟುಂಬದ ಮಹಿಳೆಯರು ‘ಲೇಡೀಸ್ ಇನ್ ವೈಟ್’. ಅವರು ೨೦೦೩ರಿಂದ ಪ್ರತಿ ಭಾನುವಾರ ಬಿಳಿಬಟ್ಟೆ ಧರಿಸಿ ಮೌನವಾಗಿ ನಡೆಯುತ್ತಾರೆ. 

  • ಚೀನಾದಲ್ಲಿ ೧೯೮೯ರಲ್ಲಿ ಟಿಯಾನಾನ್ಮನ್ ಸ್ಕ್ವೇರ್ ಪ್ರತಿಭಟನೆ ವೇಳೆ ಮರಣಿಸಿದ ಹುಡುಗರ ತಾಯಂದಿರ ಗುಂಪು ಟಿಯಾನಾನ್ಮನ್ ಮದರ್ಸ್. ಇದು ಚೀನಾದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಬರಬೇಕೆಂದು ಪ್ರತಿಪಾದಿಸುತ್ತದೆ. ಸಾರ್ವಜನಿಕವಾಗಿ ಆ ಘಟನೆಯ ವಿಚಾರಣೆ; ಶಾಂತಿಯುತ ದುಃಖಾಚರಣೆಗೆ ಅವಕಾಶ; ದೇಶ-ವಿದೇಶಗಳಿಂದ ಪರಿಹಾರ ಪಡೆಯಲು ಅವಕಾಶ; ಬಂಧಿಸಲ್ಪಟ್ಟವರ ಬಿಡುಗಡೆ; ಮರಣದಂಡನೆ ತಡೆ ಮೊದಲಾದ ಬೇಡಿಕೆಗಳನ್ನದು ಮುಂದಿಟ್ಟಿದೆ. ಆದರೆ ಚೀನಾ ಸರ್ಕಾರ ಈ ಗುಂಪು ‘ಪ್ರತಿಕ್ರಾಂತಿಗೆ ಪೂರಕ’ ಎಂದು ಭಾವಿಸಿ ಸಂಘದ ಸ್ಥಾಪಕಿ ಡಿಂಗ್ ಜಿಲಿನ್‌ರ ಬಂಧಿಸಿ ಕಮ್ಯುನಿಸ್ಟ್ ಪಕ್ಷದಿಂದ ಉಚ್ಛಾಟಿಸಿದೆ. 


***

ಮಹಿಳಾ ಚಳುವಳಿ ಎಂಬುದೊಂದು ಸಂಭವಿಸುತ್ತಿದೆಯೆ? ಅದರ ಸ್ವರೂಪ, ಶೈಲಿ ಯಾವುದು? ಅದರ ನಾಳೆ ಹೇಗಿರಬಹುದು? ರೂಪುಗೊಳ್ಳಲು ಇರುವ ಮುಕ್ತ ಅವಕಾಶ ಎಷ್ಟು? ವಿದ್ಯೆ-ಸಂಪರ್ಕ-ಸಂಪನ್ಮೂಲಕ್ಕೆ ಮೊದಲಿಗಿಂತ ಹೆಚ್ಚು ಅವಕಾಶವಿದ್ದರೂ ಮಹಿಳಾ ಸಂಘಟನೆ ಕಟ್ಟಿ ಬೆಳೆಸುವುದು ಏಕೆ ಕಷ್ಟವಾಗುತ್ತಿದೆ? ಮುಂತಾದ ಪ್ರಶ್ನೆಗಳು ಮುನ್ನೆಲೆಗೆ ಬರುತ್ತಿರುವ ಈ ಹೊತ್ತು; ಪ್ರತಿಭಟನಾ ಮಾದರಿಗಳು ಸವಕಲಾಗುತ್ತ ಸಾಂಕೇತಿಕವಾಗುತ್ತ ಹೋದಂತೆನಿಸುತ್ತಿರುವ ಈ ಹೊತ್ತು ಹೊಸ ಸ್ಥಳೀಯ, ಸರಳ ಹೋರಾಟ ಮಾದರಿಗಳು ಸೃಷ್ಟಿಯಾಗಬೇಕಿದೆ. ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬದಿಗಿರಿಸಿ ಮಹಿಳೆಯರು ಜೀವಪರ ಸಂಘಟನೆ ಕಟ್ಟಬೇಕಿದೆ. ಸ್ತ್ರೀವಾದವೆಂಬುದು ಕೇವಲ ಹಕ್ಕಿನ ಹೋರಾಟವಷ್ಟೇ ಅಲ್ಲ, ಎಲ್ಲವನ್ನು ಒಳಗೊಂಡು ನೇರ್ಪಡಿಸುವ ಭರವಸೆಯ ತಾಯ್ತನ. ಹಾಗಿರುತ್ತ ತಮ್ಮ ತರುಣ ಪ್ರತಿಭಾವಂತ ಮಕ್ಕಳನ್ನು ಸಮಾಜದ ಅಸೂಕ್ಷ್ಮ, ಅನ್ಯಾಯಗಳಿಗೆ ಕಳಕೊಂಡ ಭಾರತದ ತಾಯಂದಿರಿಗೆ ಅರ್ಜೆಂಟೀನಾ ಅಮ್ಮಂದಿರ ಮಾದರಿ ಕೈದೀಪವಾಗಬಹುದಲ್ಲವೆ?






ರೋಹಿತ್ ವೇಮುಲ: ಎರಡು ಕವಿತೆಗಳು





೧. ಬಲೆ ಎಂದಿನಿಂದ ಇದೆ

ತಮಾ, ವೇಮುಲ
ಯಾಕಯ್ಯ ತಂದೆ ಇಂಥ ತಳಮಳ?
ನೆತ್ತರ ಬಸಿದು
ನರನಾಡಿ ಹೊಸೆದು
ದೊಂದಿ ಹೊತ್ತಿಸ ಹೊರಟವನು
ಉರಿದು ಲಯವಾಗಬಹುದೆ ಹೀಗೆ
ಯಾರೊ ಹೊತ್ತಿಸಿದ ಕಿಚ್ಚಿಗೆ?
ಒದ್ದೆ ರೆಕ್ಕೆಯ ಹಕ್ಕಿಗೆ
ಒಳಗದೆಂಥ ಬೇಗೆ?

ಕಿತ್ತುಕೊಂಡವರು ಬಿಟ್ಟುಬಿಡಲಾರರು ಸುಲಭಕ್ಕೆ.
ಸೋಲುವ ಭಯಕೆ ಕತ್ತಿಯಾಗಿಸುತಾರೆ ನಾಲಿಗೆ.
ನಿನ್ನ ಕಣ್ಣಹನಿ ಎಣಿಸಲು
ಕೊಳ್ಳಿದೆವ್ವಗಳು ಪಹರೆ ಕೂತಿವೆ.
ತಮ್ಮ ಹಸಿವೆ ತೀರಿಸಲು ಬೇಯಿಸುತಾವೆ
ನಿನ್ನನೊಂದು ರೊಟ್ಟಿ ತುಣುಕೆಂಬ ಹಾಗೆ.
ಧರೆಗೆ ರಕ್ತಗಂಬಳಿ ಹಾಸುವವರೆಗೆ
ನೆಮ್ಮದಿಯಿಲ್ಲ ಅಧಿನಾಯಕನಿಗೆ
ಗೌಳಿ ಪತನ ಫಲ ನೆಚ್ಚಿ ತಿರುಗಿಸಲಾಗಿದೆ
ನೆಲದ ಗಡಿಯಾರಗಳ ಹಿಂದಕೆ.

ರೆಕ್ಕೆ ತೇವಗೊಂಡ ಹಕ್ಕಿಗಳೇ
ಹಣತೆಯೆಂದೂ ಕಗ್ಗತ್ತಲ ಕುರಿತು ದುಃಖಿಸುವುದಿಲ್ಲ
ಕೊಳಲೆಂದೂ ಮೌನ ಭಾಷೆ ಆಡುವುದಿಲ್ಲ
ಕರುಣದ ಗುರುವಿದ್ದಾನೆ ನಮಗೆ
ನಿತ್ಯಸೂರ್ಯ ಬಾಬಾ ಇದ್ದಾರೆ
ನಮ್ಮ ಹಗಲುಗಳಿಂದ ಬೆಳಕ ಕಿತ್ತುಕೊಳ್ಳಲಾರರು ಯಾರೂ
ಇರುಳಿನಾಗಸದಿಂದ ಚಿಕ್ಕೆಗಳ ಕದಿಯಲಾರರು ಯಾರೂ..

ಜಿಗಣಿ ಬಲೆ ಎಂದಿನಿಂದ ಇದೆ
ಮಾಲಕರು ಬದಲಾಗಿದ್ದಾರೆ ಅಷ್ಟೆ
ಬನ್ನಿ, ಕಿತ್ತು ಕಡಿದು ಹಾರಿಬಿಡೋಣ ಒಟ್ಟಿಗೆ
ಸೂರ್ಯ, ಬಿಸಿಲು, ರೆಕ್ಕೆ, ಮುಗಿಲು
ಎಲ್ಲವೂ ನಮದೆ..

೨ ಕರುಣವೆಂಬುದು ಬರಿಯ ಶಬುದವಷ್ಟೆ 


(ಚಿತ್ರ: ಅಂತರ್ಜಾಲದಿಂದ, ಬರೆದವರು ಕರುಣಾ ಪ್ರಿಯಾ, ಒರಿಸ್ಸಾ)
ಶಾಯಿ ಕುಡಿವ ಲೇಖನಿ
ಪತಾಕೆ ಹಿಡಿವ ಕೈ
ತುತ್ತುಣಿಸುವ ಬೆರಳೂ
ಕೊಲುವ ಹತಾರವಾಗಿ
ಹರಿತಗೊಳುತಿರುವ ಈ ಹೊತ್ತು
ಪ್ರಾರ್ಥಿಸುತ್ತಿದ್ದೇವೆ
‘ಕಟುಕನೆ ಕತ್ತಿ ಹಿಡಿದ ಕೈ ಕೆಳಗಿಳಿಸು
ಮಸೆಯದಿರು ಅಲಗು’ ಎಂದು.
ಕುರಿಮಂದೆ ಸಾಲಾಗಿ
ತಲೆಗೊಟ್ಟು ನಿಂತಿರುವಾಗ
ಸುಮ್ಮನಾದೀತೇ ಕತ್ತಿ?
ಬಿಮ್ಮನುಳಿದೀತೇ ರಟ್ಟೆಯ ಶಕ್ತಿ?
ತಣ್ಣಗಿದ್ದೀತೇ ಹಸಿ ನೆತ್ತರ ಕಂಡು
ಬಿಸಿಯಾಗುವ ಮನದ ಭಕುತಿ?

ಕಲ್ಲಿಗು ದೇವರಿಗು
ಪವಾಡಕೂ ಕಣ್ಕಟ್ಟಿಗೂ
ಬಲಿಗೂ ಓಕುಳಿಗೂ
ಫರಕೇ ಇಲ್ಲದ ಕಡೆ
ಸಹಸ್ರಮಾನಗಳಿಂದ
ಶಬುದಗಳು ಉದುರಿ ಬೀಳುತ್ತಲಿವೆ.
ಒಂದು ಹನಿ ಮಳೆ ಬೀಳದೆ
ಯುಗಯುಗಾಂತರಗಳೇ ಸರಿದು ಹೋಗಿವೆ.
ಸಮತೆಯ ನೀರೆರೆಯಲೇಬೇಕು
ಹಸಿರೆಲೆ ಒಣಗುವ ಮೊದಲೆ..
ಇಲ್ಲವಾದರೆ
ಕರುಣವೆಂಬುದು ಬರಿಯ ಶಬುದವಷ್ಟೆ..

                                                                                    ಡಾ. ಎಚ್. ಎಸ್. ಅನುಪಮಾ