Monday 10 July 2017

‘ಮುಟ್ಟಿನ ಮನುಷ್ಯ’ ಅರುಣಾಚಲಂ ಮುರುಗಾನಂದಂ




ಒಂದೆಡೆ ತಮ್ಮ ಮನೆಯ ಹೆಂಗಸರ ಮುಟ್ಟಿನ ಕುರಿತು ಮಾತನಾಡದ, ಏನೂ ಗೊತ್ತಿಲ್ಲದ, ಹಿಂಜರಿಕೆ-ಅಸಡ್ಡೆ ತುಂಬಿಕೊಂಡ ಪುರುಷ ಸಮಾಜದ ಇದ್ದರೆ, ಮತ್ತೊಂದೆಡೆ ತಮ್ಮ ಪೊರೆವ ಹೆಣ್ಣುಕುಲ ಅನುಭವಿಸುವ ಅನಿವಾರ್ಯ ಸಂಕಟವನ್ನು ತಾವು ಹಂಚಿಕೊಳ್ಳಲಾರೆವಲ್ಲ, ಅವರಿಗೆ ಏನಾದರೂ ಸಹಾಯ ಮಾಡಲೇಬೇಕಲ್ಲ ಎಂಬ ತುಡಿತ ಹೊಂದಿರುವವರೂ ಇರುತ್ತಾರೆ. ಆದರೆ ಸಮಾಜ, ಹೆಣ್ಮಕ್ಕಳೂ ಸಹ, ಅಂಥವರನ್ನು ಸುಲಭವಾಗಿ ಸ್ವೀಕರಿಸುವುದಿಲ್ಲ. ತಮ್ಮ ಮುಟ್ಟಿನ ಬಗ್ಗೆ ಪುರುಷ ಹೆಚ್ಚು ಮಾತನಾಡಿದರೆ ಅನುಮಾನದಿಂದ ನೋಡುತ್ತಾರೆ. ಅಮೆರಿಕದ ಎಳೆಯ ವಿವಾಹಿತ ಮಿತ್ರ ಗಿರಿ ಗುಂಜಗೋಡು, ‘ಮುಟ್ಟು-ಪ್ಯಾಡುಗಳ ಕುರಿತು ಸಹಜವೆಂಬಂತೆ ಗಂಡಸರು ಮಾತನಾಡಿದರೆ, ಅಂಗಡಿಗಳಲ್ಲಿ ಪ್ಯಾಡು-ಟ್ಯೂಬು-ಬ್ರ್ಯಾಂಡುಗಳ ಬಗ್ಗೆ ಹೆಚ್ಚು ಕೇಳಿದರೆ, ಅಮೆರಿಕದಲ್ಲೂ ಅಂಥವರನ್ನು ಬೀದಿ ಕಾಮಣ್ಣನಂತೆ ನೋಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದಲ್ಲೂ ಹೆಂಗಸರ ಮುಟ್ಟಿನ ಮ್ಯಾನೇಜ್‌ಮೆಂಟ್ ಬಗೆಗೆ ಇನ್ನಿಲ್ಲದಷ್ಟು ತಲೆ ಕೆಡಿಸಿಕೊಂಡ ವ್ಯಕ್ತಿಯೊಬ್ಬರನ್ನು ಮೊದಲು ಅರೆಹುಚ್ಚನೆಂದು ತೀರ್ಮಾನಿಸಿ ಕುಟುಂಬ, ಸಮಾಜ ಹೊರಹಾಕಿತು. ‘ಪ್ಯಾಡ್‌ಮ್ಯಾನ್’, ‘ಮುಟ್ಟಿನ ಮನುಷ್ಯ’ ಎಂಬ ಅಡ್ಡಹೆಸರಿಟ್ಟು ಕರೆಯಿತು. ಈಗ ಅದೇ ವ್ಯಕ್ತಿ ಗ್ರಾಮೀಣ, ಬಡ ಹೆಣ್ಮಕ್ಕಳ ಮುಟ್ಟನ್ನು ಸಹ್ಯಗೊಳಿಸಿದರೆಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆ ವ್ಯಕ್ತಿ ಅರುಣಾಚಲಂ ಮುರುಗಾನಂದಂ. ಅವರ ಬದುಕು-ಸಾಧನೆ ಕುರಿತು ತಿಳಿಯಲು ಇದು ಸಕಾಲ.

ಕೊಯಮತ್ತೂರಿನ ಅರುಣಾಚಲಂ ಮುರುಗಾನಂದಂ ಉಳಿದ ಬ್ರ್ಯಾಂಡುಗಳು ತಯಾರಿಸುವ ಪ್ಯಾಡುಗಳ ಮೂರನೇ ಒಂದರಷ್ಟು ಬೆಲೆಗೆ ಪ್ಯಾಡು ತಯಾರಿಸುವ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ಅವರ ಮಿನಿ ಮಶಿನುಗಳು ಹಲವು ಸ್ವಸಹಾಯ ಗುಂಪುಗಳಿಗೆ ಸಣ್ಣ ಉದ್ದಿಮೆ ಸ್ಥಾಪಿಸಲು, ಗ್ರಾಮೀಣ ಭಾಗದ ಮಹಿಳೆಯರು ಉದ್ಯೋಗಸ್ಥರಾಗಲು ಸಹಾಯ ಮಾಡಿವೆ. ಆ ಯಂತ್ರದ ಪೇಟೆಂಟ್ ಪಡೆದಿರುವ ಅವರು ಆ ಸರಳ ಯಂತ್ರಗಳನ್ನು ೧೦೬ ದೇಶಗಳಿಗೆ ವಿಸ್ತರಿಸುವ ಇರಾದೆ ಹೊಂದಿದ್ದಾರೆ. ವಿಶ್ವಾದ್ಯಂತ ಮನ್ನಣೆಗೆ ಪಾತ್ರರಾದ ಅವರ ಬದುಕಿನ ವಿವರವೇ ಒಂದು ಸಿನಿಮಾ ನೋಡಿದ ಅನುಭವ ನೀಡುತ್ತವೆ.

ಕೊಯಮತ್ತೂರಿನ ಕೈಮಗ್ಗ ಕಾಯಕದ ದಂಪತಿಗಳ ಮಗ ಅರುಣಾಚಲಂ. ಅವರ ತಂದೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದಾಗ ೧೪ನೇ ವರ್ಷಕ್ಕೆ ಶಾಲೆ ಬಿಟ್ಟು ಮನೆಯ ಬಡತನ ನೀಗಿಸಲು ಯಾವ್ಯಾವುದೋ ಕೆಲಸ ಮಾಡಿದರು. ಮೆಕ್ಯಾನಿಕ್ ಆದರು. ಬಟ್ಟೆ, ಲಡಿಯ ವ್ಯಾಪಾರ ಮಾಡಿದರು. ನೂಲುಂಡೆಯ ಏಜೆಂಟ್ ಆದರು. ಗ್ಯಾರೇಜಿನಲ್ಲಿ ಯಂತ್ರಗಳ ನಡುವೆ ದುಡಿದರು. ಅಂತೂ ದುಡಿಮೆ ಕೈಹತ್ತುವ ವೇಳೆಗೆ ತಮ್ಮ ೩೬ನೇ ವಯಸ್ಸಿನಲ್ಲಿ ಶಾಂತಿಯನ್ನು ಮದುವೆಯಾದರು. ಅವರ ಹೆಂಡತಿ ಮುಟ್ಟಾದಾಗ ಬಳಸಲು ಹಳೆಯ ಚಿಂದಿ ಬಟ್ಟೆ ಹಾಗೂ ಪೇಪರ್ ಬಳಸುತ್ತಿದ್ದದ್ದು ಗಮನಕ್ಕೆ ಬಂದು ತೀರಾ ಆಘಾತಗೊಂಡರು. ಬಹಳಷ್ಟು ಮಹಿಳೆಯರು ಅಂಥವನ್ನೇ ಬಳಸುವರೆಂದೂ, ಪ್ಯಾಡು ತುಟ್ಟಿ ಎಂದೂ ಜವಾಬು ಬಂತು. ಕಚ್ಛಾವಸ್ತುಗಳಿಗೆ ೧೦ ಪೈಸೆ ಖರ್ಚಾಗದಿದ್ದರೂ ಕಂಪನಿಗಳು ಒಂದು ಪ್ಯಾಡಿಗೆ ೪ ರೂಪಾಯಿ ತೆಗೆದುಕೊಳ್ಳುತ್ತವೆಂದು ಅವರಿಗೆ  ತಿಳಿಯಿತು. ಹೆಣ್ಮಕ್ಕಳಿಗೆ ಶುಭ್ರವಾದ ಕಡಿಮೆ ಬೆಲೆಯ ಪರ್ಯಾಯ ಹುಡುಕಲೇಬೇಕೆಂಬ ಪ್ರಯತ್ನ ಶುರುವಾಯಿತು.

ಸರಿ, ಅಲ್ಲಿಂದ ಪ್ಯಾಡು ಮಾಡುವ ಅವರ ಪ್ರಯೋಗ ಶುರು. ಮೊದಲು ಹತ್ತಿ ಬಳಸಿ ಪ್ಯಾಡು ತಯಾರಿಸಿದರು. ಅದನ್ನು ಅವರ ಹೆಂಡತಿ ಮತ್ತು ಅಕ್ಕತಂಗಿಯರು ಸರಿಯಿಲ್ಲವೆಂದು ನಿರಾಕರಿಸಿದರು. ಅವರದನ್ನು ಉತ್ತಮಗೊಳಿಸಲು ಬದಲಿಸುತ್ತ ಹೋದರು. ಬದಲಾದಂತೆ ಅದು ಸರಿಯಿಲ್ಲ ಎಂಬ ಪ್ರತಿಕ್ರಿಯೆಯೇ ಪ್ರತಿಸಲ ಬಂತು. ಅವರು ಹೊಸಹೊಸ ಆಕಾರ, ವಸ್ತುಗಳಲ್ಲಿ ಪ್ಯಾಡುಗಳನ್ನೇನೋ ಮಾಡುತ್ತ ಹೋದರು. ಆದರೆ ಹೆಂಡತಿ, ಸೋದರಿಯರು ತಮ್ಮ ಪರೀಕ್ಷೆ ಫಲಿತಾಂಶ ತಿಳಿಸಲು ಒಂದು ತಿಂಗಳು ಕಾಯಬೇಕಿತ್ತು. ಕೊನೆಕೊನೆಗೆ ಮನೆಯ ಹೆಣ್ಮಕ್ಕಳು ಇವರ ವಸ್ತುಗಳಿಗೆ ಪರೀಕ್ಷಕರಾಗಿ ಆಗಿ ಬೇಸತ್ತು ಅವರ ತಲೆ ಕೆಟ್ಟಿದೆಯೆಂದು ನಿರ್ಧರಿಸಿದರು.

ಬೇರೆ ಹೆಂಗಸರಿಗೆ ತಮ್ಮ ಹೊಸಹೊಸ ವಿನ್ಯಾಸದ ಪ್ಯಾಡುಗಳ ಕೊಟ್ಟು ಹೇಗಿವೆಯೆಂದು ಕೇಳತೊಡಗಿದರು. ಅವರು ಒಂದಷ್ಟು ದಿನ ಮಾಹಿತಿ ಕೊಟ್ಟರೂ ಮುಟ್ಟಿನ ಸೂಕ್ಷ್ಮಗಳನ್ನು ಒಂದು ಗಂಡಸಿನ ಜೊತೆ ಚರ್ಚಿಸಲು ಹಿಂಜರಿದರು. ಮೆಡಿಕಲ್ ಕಾಲೇಜಿನ ಹುಡುಗಿಯರಿಗೆ ಉಚಿತವಾಗಿ ಕೊಟ್ಟು, ಬಳಸಿದ ಪ್ಯಾಡ್‌ಗಳನ್ನು ನಂತರ ಮರಳಿ ಕೊಡಬೇಕೆಂದು ಕೇಳಿದರು. ಅದೂ ಕಷ್ಟವಾದಾಗ ಕೊನೆಗೆ ಪ್ರಾಣಿರಕ್ತ ತುಂಬಿದ ಚೀಲಕ್ಕೊಂದು ಸೋರುವ ಟ್ಯೂಬು ಫಿಕ್ಸ್ ಮಾಡಿ ಅದನ್ನು ಕಟ್ಟಿಕೊಂಡು ರಕ್ತಸ್ರಾವವನ್ನು ತಮ್ಮ ಪ್ಯಾಡು ಹೇಗೆ ತಡೆಯುವುದೆಂದು ಅರಿಯಲು ತಾವೇ ಯತ್ನಿಸಿದರು. ಇದು ಜನರಿಗೆ ತಿಳಿದು ನಗೆಪಾಟಲಿಗೀಡಾದರು. ಅವರ ಕುಟುಂಬದವರು, ಜಾತಿಯವರು ಅವರನ್ನು ದೂರವಿಟ್ಟರು. ಹೆಂಡತಿ ಶಾಂತಿ ಮನೆ ಬಿಟ್ಟು ಹೋದರು.


ಈಗ ಅರುಣಾಚಲಂ ಏಕಾಂಗಿ. ಆದರೇನು, ಅವರ ಗುರಿಯನ್ನು ಬಿಡಲಿಲ್ಲ. ಏನು ಮಾಡಿದರೆ ಪ್ಯಾಡುಗಳು ಬಳಸಿದ ನಂತರವೂ ಆಕಾರ ಉಳಿಸಿಕೊಳ್ಳುತ್ತವೆ? ಹೇಗೆ ಅವು ಹೆಚ್ಚು ರಕ್ತ ಹೀರಿಕೊಂಡು ಮುದ್ದೆಯಾಗದಿರಲು ಸಾಧ್ಯವಿದೆ? ಎಂಬ ಬಗ್ಗೆ ತಲೆಕೆಡಿಸಿಕೊಂಡರು. ಪ್ಯಾಡುಗಳು ತಮ್ಮ ಶೇಪು ಉಳಿಸಿಕೊಳ್ಳುವಂತೆ ಕಂಪನಿಗಳು ಪೈನ್‌ವುಡ್ ತಿರುಳನ್ನು ಬಳಸುತ್ತವೆಂದು ತಿಳಿಯಲು ಅವರಿಗೆ ೨ ವರ್ಷ ಹಿಡಿಯಿತು. ಆ ಕಚ್ಛಾವಸ್ತುವಿನಿಂದ ವಿವಿಧ ಆಕಾರ ವೈವಿಧ್ಯದ ಪ್ಯಾಡು ತಯಾರಿಸುವ ೩.೫ ಕೋಟಿ ರೂ ವೆಚ್ಚದ ಮಶೀನು ವಿದೇಶದಿಂದ ಬರಬೇಕಿತ್ತು. ಅದುವೇ ಪ್ಯಾಡಿನ ಬೆಲೆ ಹೆಚ್ಚಿಸಿತ್ತು. ಆಗ ಅರುಣಾಚಲಂ ಲಭ್ಯವಿರುವ ಉಪಕರಣಗಳಿಂದ ೬೫,೦೦೦ ರೂಪಾಯಿ ವೆಚ್ಚದಲ್ಲಿ ತಾವೇ ಮಶೀನು ತಯಾರಿಸಿದರು! ಮುಂಬಯಿಯ ವ್ಯಾಪಾರಿಯೊಬ್ಬನ ಬಳಿ ಪೈನ್‌ವುಡ್ ತಿರುಳು ಕೊಂಡು, ಅದರ ನಾರು ತೆಗೆದು, ಸಣ್ಣ ಪುಡಿ ಮಾಡಿ, ಒತ್ತಿ, ಶುದ್ಧಗೊಳಿಸಿ, ಪ್ಯಾಡುಗಳ ತಯಾರಿಸಿಯೇ ಬಿಟ್ಟರು. ಐಐಟಿ ಮದ್ರಾಸಿನಲ್ಲಿ ಅದನ್ನು ತೋರಿಸಿ ಸಲಹೆ ಪಡೆದು ವಿನ್ಯಾಸ ಕೊಂಚ ಬದಲಿಸಿದರು.


ಅಲ್ಲಿಂದಾಚೆ ಯಶೋಗಾಥೆ.



ಜನಧನ ಎತ್ತಿ ಜಯಶ್ರೀ ಇಂಡಸ್ಟ್ರೀಸ್ ಶುರುಮಾಡಿದರು. ಅದು ಸರಳ, ಕಡಿಮೆ ಬೆಲೆಯ, ನ್ಯಾಪ್ಕಿನ್ ತಯಾರಿಸುವ ಮಿಶಿನನ್ನು ತಯಾರಿಸಿ ವಿತರಿಸುತ್ತದೆ. ಬೃಹತ್ ಬಂಡವಾಳ ಹೂಡಿ ದೊಡ್ಡ ಪ್ರಮಾಣದಲ್ಲಿ ಯಂತ್ರತಯಾರಿ ಘಟಕ ಹೂಡುವಂತೆ ಎಷ್ಟೋ ಸಲಹೆಗಳು, ಆಫರ್‌ಗಳು ಬಂದರೂ ಅರುಣಾಚಲಂ ಜಗ್ಗಲಿಲ್ಲ. ಸಣ್ಣ ಉದ್ದಿಮೆ ಶುರು ಮಾಡುವವರಿಗೆ, ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ಮಾತ್ರ ಅವನ್ನು ಪೂರೈಸುತ್ತಾರೆ. ೨೩ ರಾಜ್ಯಗಳಲ್ಲಿ ಎಷ್ಟೋ ಮಹಿಳೆಯರಿಗೆ ಅದು ಕೆಲಸ ಕೊಟ್ಟಿದೆ. ಮಹಿಳಾ ಸ್ವಸಹಾಯ ಸಂಘಗಳಿಂದ ತಯಾರಾದ ನ್ಯಾಪ್ಕಿನ್ ಅನ್ನೇ ಮಹಾರಾಷ್ಟ್ರ ಸರ್ಕಾರ ಖರೀದಿಸಿ ವಿತರಿಸುತ್ತಿದೆ. ಹಲವರು ಅದರಲ್ಲಿ ಸುಧಾರಣೆ ತರುವ ಕುರಿತೂ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವರು ಪೈನ್‌ವುಡ್ ಬದಲು ಬಿದಿರು ಅಥವಾ ಬಾಳೆಗಿಡದ ತಿರುಳು ಬಳಸುವ ಯೋಚನೆಯಲ್ಲೂ ಇದ್ದಾರೆ.

ಇವೆಲ್ಲ ಅರುಣಾಚಲಂ ಅವರೆಡೆಗೆ ದೇಶದ ಗಮನ ಸೆಳೆಯಲು ಕಾರಣವಾಯಿತು. ಹಲವು ಐಐಟಿ, ಐಐಎಂಗಳಿಗೆ ಹೋಗಿ ಮಾತನಾಡಿದರು. ಹಲವಾರು ಪ್ರಶಸ್ತಿಗಳು ಅವರನ್ನರಸಿ ಬಂದವು. ದೇಶವಿದೇಶಗಳಲ್ಲಿ ಮನ್ನಣೆ ಸಿಕ್ಕಿತು. ೨೦೧೬ರಲ್ಲಿ ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿತು. ಅವರ ಮೇಲೊಂದು ಸಾಕ್ಷ್ಯಚಿತ್ರ (ಮೆನ್‌ಸ್ಟ್ರುವಲ್ ಮ್ಯಾನ್) ಬಂದಿದೆ. ಜೀವನಚಿತ್ರವೂ (ಪ್ಯಾಡ್ ಮ್ಯಾನ್) ಬಂದಿದೆ.






ಆದರೆ ಅರುಣಾಚಲಂ ಅವರಿಗೆ ಎಲ್ಲಕ್ಕಿಂತ ದೊಡ್ಡ ಪ್ರಶಸ್ತಿಯೆಂದರೆ ಅವರ ಹೆಂಡತಿ ಶಾಂತಿ ಪೇಪರು, ಟಿವಿಗಳಲ್ಲಿ ತನ್ನ ಗಂಡನ ಯಶೋಗಾಥೆ ಕಂಡು, ಕೇಳಿದಮೇಲೆ ಮತ್ತೆ ಮನೆಗೆ ಮರಳಿ ಬಂದಿದ್ದಾರೆ. ತನ್ನ ಗಂಡನಿಗೆ ತಲೆ ಕೆಟ್ಟದ್ದು ಅಲ್ಲವೆಂದು ಈಗವರಿಗೆ ಖಚಿತವಾಗಿದೆ!



2 comments:

  1. ಈ ಲೇಖನ ಓದಿ ತುಂಬಾ ಅಚ್ಚರಿಯಾಯಿತು.ಗಂಡು ಹೆಣ್ಣು ಎಂಬ ಮಾನಸಿಕ ಚೌಕಟ್ಟನ್ನು ಮೀರಿನಿಂತಾಗ ಬದುಕು ಎಲ್ಲವನ್ನೂ ಸಾಧಿಸುವ, ತಿಳಿದುಕೊಳ್ಳುವ, ಸಹಕಾರಿಯಾಗಿ ಬಾಳುವ ಅವಕಾಶವನ್ನು ಕಲ್ಪಸುವುದಂತು ಸುಳ್ಳಲ್ಲ. ಉತ್ತಮ ಪಾಠ ಧನ್ಯವಾದಗಳು.

    ReplyDelete
  2. First time when my brother came to know of women's monthly menstrual cycle, he reacted thus'Oh God I am not a women'.Arunachalum's efforts are appreciable h richly deserves the award! Congratulations to a true feminist!

    ReplyDelete