Sunday 29 October 2017

ಎರಡಳಿದು




ಈ ಕೊಡದಿಂದ ಆ ಕೊಡಕ ಜಿಗಿ ಅಂತಿ.
ಅದನ ಕ್ರಾಂತಿ ಅಂತ ಹ್ಯಾಂಗ್ ನಂಬಲಿ?

ಕೊಡಪಾನ ಒಲ್ಯಾಂದರ ಹೊಂಡಕ ಸುರಕೊ ಅಂತಿ
ಗುಂಡಿ ನೀರಿಲೆ ಈಸೋದ್ರಾಗ ಹೊಸಾದೇನೈತಿ?

ಈ ಮಗ್ಗಲ ನೂಸ್ತದಂದ್ರ ಆಚಿ ಮಗ್ಗಲಾ ತಿರುಗಂತಿ
ಆಕಾಶಲೋಕದ ಕನಸ ಕಂಡು ಹಂಗ ಹ್ಯಾಂಗ್ ಸುಮ್ಮಿರಲಿ?

ಖರೆ, ಇಟ್ಟಲ್ಲಿಂದ ಹಂದಬೇಕು ಒಂದರೆ ಹೆಜ್ಜಿ
ಆಗಷ್ಟ ಮುಂದ್ ಹೋಗಾಕ್ ಹುಕಿ ಹುಟ್ಟತೇತಿ

ಗೂಟದಂತ ಕಾಲಿನ್ಯಾಗ ಕಂಪನ ಮೂಡಬೇಕಂದ್ರ
ನೀ ಮೀಟಬೇಕು ಫರಕ ಅಳಿಸೊ ತಂಬೂರಿ ತಂತಿ

ಆವಾಗ್ ನೋಡು ಜೀಂವಾ,
ಕರಿಯೂದನು ಬ್ಯಾಡ ಕೊರಗೂದನೂ ಬ್ಯಾಡ
ಅನುವಿನ ತನು ಕಳಚಿ ನಿನ ಬಲ್ಲಿ ನೀನ ಆಗಿ ಬರತೇನಿ
ಎರಡಳಿದು ನಿನ ಬಲ್ಲಿ ನೀನ ಆಗಿ ಇರತೇನಿ

(ಚಿತ್ರ: ಅಂತರ್ಜಾಲ)

Thursday 19 October 2017

ಒಂದು ಗಜಲ್, ಒಂದು ಕವಿತೆ





ಎಚ್ಚರ

(ಆಧಾರ್ ಲಿಂಕ್ಡ್ ಕವಿತೆ, ಆಧಾರ್ ನಂಬರ್ 8191 1421 1611 31)

ಮುಜರಾಯಿ ಇಲಾಖೆ ಇತಿಹಾಸ ಬೋಧಿಸುವುದಾದರೆ
ಸರ್ಕಾರ ಮಾರಾಟದ ಮಳಿಗೆಯಾದರೆ
ನದಿ ಪರ್ವತ ಗಣಿಗಳೆಲ್ಲ ಕೇವಲ ಅಸೆಟ್
ಖರ್ಚು ಮಾಡುವವನೇ ಆದರ್ಶ ನಾಗರಿಕ
ಬದುಕು ಸಂಬಳವಿಲ್ಲದ ನೌಕರಿ
ಹರ್ಕ್ಯುಲಿಸ್ ಸಿಸಿಫಸರ ಗ್ರೀಸ್ ದಿವಾಳಿ

ಆಗ ..
ಬೇರು ಸಮೇತ ಕಿತ್ತು ಹಾಕಿರುವವೆಲ್ಲ
ವಸ್ತು ಸಂಗ್ರಹಾಲಯದಲ್ಲಿ ನೋಡ ಸಿಗುತಾವೆ.
ಬಣ್ಣ ಬದಲಾಯಿಸುತ್ತ ಇರುವವರೆಗೆ ನೀವು ಕ್ಷೇಮ
ಎಂದು ಬೋಧಿಸಲಾಗುತ್ತದೆ
ಅನಾದಿವಾಸಿಗಳು ಎದೆತನಕ ಮುಳುಗಿದರೂ
ನರ್ಮದೆ ಸರೋವರವಾಗುತಾಳೆ..

ಎಚ್ಚರ ಗೆಳೆಯಾ, ಭಾರತ ಹೊಳೆಯುತಿದೆ
ನಿನ್ನ ಗುರುತು ಕೇವಲ ಗುರುತಿನ ಚೀಟಿಯಷ್ಟೇ.
ಬಂಗಾಳದ ಹುಲಿ, ಬರ್ಮಾದ ರೊಹಿಂಗ್ಯಾ
ಇಬ್ಬರಲಿ ಯಾರು ಮೊದಲು ನಿರ್ನಾಮವಾಗುವರು
ಎನ್ನುವುದು ಕೇವಲ ಒಂದು ಜೋಕ್ ಅಷ್ಟೇ.

ಗೆಳೆಯಾ, ಇವು ಅಚ್ಛೇ ದಿನಗಳು
ಮುಜರಾಯಿ ಇಲಾಖೆ ಇತಿಹಾಸ ಬೋಧಿಸುತಿರಲು
ಸರ್ಕಾರ ಮಾರಾಟ ಮಳಿಗೆಯಾಗಿರಲು
ದೇಶವೇ ಒಂದು ಅಸೆಟ್
ನೀನು ಕೊಳ್ಳಲ್ಪಡುವ ಮಾಲು,
ಕೊಳ್ಳುಬಾಕನೇ ಅಮೂಲ್ಯ ಕಸ್ಟಮರು,
ಒಂದು ಮತವಷ್ಟೇ ನಿನ್ನ ವ್ಯಾಲ್ಯೂ.
ನಿನ್ನ ಗುರುತು ಆಧಾರ ಕಾರ್ಡು
‘ಮಡಿಸಬೇಡ, ಹಾಳುಮಾಡಬೇಡ,
ಗರ್ಭದಿಂದ ಗೋರಿಯವರೆಗೂ ಬೇಕು,
ಕಳಕೊಳಬೇಡ, ಹುಶಾರು!’


ಯಾರಿಂದ ಯಾರಿಗೆ?




ನಾನು ಬುಗುರಿ ನೀನು ಚಾಟಿ ಬಿಡುಗಡೆ ಯಾರಿಂದ ಯಾರಿಗೆ?
ನೀನು ಬುಗುರಿ ನಾನು ಚಾಟಿ ಬಂಧನ ಯಾರಿಂದ ಯಾರಿಗೆ?

ನಾನು ನಿದ್ರೆ ನೀನು ಕನಸು ನಶೆ ಯಾರಿಂದ ಯಾರಿಗೆ?
ನೀನು ನಿದ್ರೆ ನಾನು ಕನಸು ಎಚ್ಚರ ಯಾರಿಂದ ಯಾರಿಗೆ?

ನಾನು ಕಡಲು ನೀನು ಬಿಸಿಲು ಬೇಗೆ ಯಾರಿಂದ ಯಾರಿಗೆ?
ನೀನು ಕಡಲು ನಾನು ಬಿಸಿಲು ಮಳೆಯು ಯಾರಿಂದ ಯಾರಿಗೆ?

ನಾನು ಚಿಗುರು ನೀನು ಬೇರು ಬೆಳಸು ಯಾರಿಂದ ಯಾರಿಗೆ?
ನೀನು ಚಿಗುರು ನಾನು ಬೇರು ಯಾರ ಕಸುವು ಯಾರಿಗೆ?

ನಾನು ವೀಳ್ಯೆ ನೀನು ಅಡಕೆ ರಸವು ರುಚಿಯು ಯಾರದು?
ನೀನು ಅಡಕೆ ನಾನು ವೀಳ್ಯೆ ನಂಟು ಬಾಯೊಡನಾರದು?

ನೀನು ಎಳೆಯು ಹಚ್ಚಡವು ನಾನು ಬೆಚ್ಚನನುಭವ ಯಾರದು?
ನಾನು ಎಳೆಯು ಹಚ್ಚಡವು ನೀನು ಒಂಟಿತನವೆಲ್ಲಿರುವುದು?

ಬತ್ತಿ ನೀನು ಹಣತೆ ನಾನು ಜೀವತೈಲ ತುಂಬಿರಲು, ಅನು,
ಬೆಳಕು ದಿಟವು ಕತ್ತಲೆಯೂ ದಿಟವು ಪ್ರಶ್ನೆ ಏಳುವುದೇತಕೊ?

Thursday 12 October 2017

ನನ್ನ ಅಕ್ಕ, ನನ್ನ ಆತ್ಮಸಂಗಾತಿ..





















ಅವಳು ಕೂಗಾಡಿದಳು ಅಬ್ಬರಿಸಿದಳು
ಎಷ್ಟೋ ಸಲ ಸ್ಫೋಟಿಸಿದಳು
ಮೇಲ್ಜಾತಿಯ ಇದು.. ಬ್ರಾಹ್ಮಣ್ಯದ ಅದು..
ಅದರೊಳಗಿನ ಅಮಾನವೀಯತೆ ಕುರಿತು
ಅದರೊಳಗಿನ ಅನ್ಯಾಯ ಕುರಿತು

ತಡೆಯಿರಿ ಒಂದು ನಿಮಿಷ..
ಇವಳು ಅವಳೇನಾ?
ಮೆಲು ಮಾತಿನವಳು
ಮೃದುವಾಗಿ ಆಲಿಂಗಿಸುವವಳು?
ಎಳೆಗೂಸುಗಳು
ಅಸ್ಪ್ರುಶ್ಯರು
ಮುಸ್ಲಿಮರು
ಮಹಿಳೆಯರು
ಅಲ್ಪಸಂಖ್ಯಾತರು
ಮಾವೋವಾದಿಗಳ ಅಪ್ಪಿದವಳು?

ಕೆಲ ಹುಚ್ಚುನಾಯಿಗಳು 
ಅವಳೊಂದು ಹೆಣ್ಣುನಾಯೆಂದು ಜರೆದವು
ಕೆಲವರು ಸೂಳೆಯೆಂದರು
ಯಾಕೆಂದರೆ ಅವಳು ಒಬ್ಬಂಟಿಯಾಗಿದ್ದಳು
ತನಗಿಷ್ಟ ಬಂದಂತೆ ಬದುಕಿದಳು
ಆದರೆ ಅವಳ ಅಕ್ಕ ಎಂದರು ನೂರಾರು ಜನ 
ಅಮ್ಮ ಎಂದವರು ಸಾವಿರಾರು ಜನ 
ನಾನೂ ಗೌರಿ ಎನುತಿದ್ದಾರೆ ಈಗ ಲಕ್ಷಾಂತರ ಜನ

ಕಾರಿನ ಕಿಟಕಿಯಿಂದ ಸಿಗರೇಟು ತುಂಡು
ಬಿಸುಡಿದವರಿಗೆ ಉಗಿದಿದ್ದಳು
ಟೂವೀಲರಿನವರ ಮೇಲೆ ಬಿದ್ದೀತೆಂದು!
ಅವಳ ಮನೆಯೇ ತೋಟವಾಗಿತ್ತು
 ಎಷ್ಟೋ ಹಾವುಗಳು ಅಲೆಯುತ್ತ ಬರುತಿದ್ದವು 
ಕಾಯುತಿದ್ದಳು ಸಹನೆಯಿಂದ
ಅದು ಸರಿದು ಹೋಗುವ ತನಕ
ತಡೆಯದೇ, ಗಾಯಗೊಳಿಸದೇ, ಕೊಲ್ಲದೇ.
ಅದರಷ್ಟಕ್ಕೆ ಅದು ಇವಳಷ್ಟಕ್ಕೆ ಇವಳು..

ಆದರೆ ಬಂದೇ ಬಂತು ಕೊನೆಗೊಂದು ಹಾವು
ಸರಿದು ಹೋಗಲೇ ಇಲ್ಲ ಮನುಷ್ಯ ಹಾವು
ಎರಡು ಚಕ್ರದ ಮೇಲೆ ಬಂದು
ಅವಳೊಳಗಿನ ಬೆಂಕಿ ನಂದಿಸಿದ ಹಾವು
ಅವಳ ಸುಮ್ಮನಾಗಿಸಿದ ಹಾವು..

ಗೌರಿಯ ಸುಮ್ಮನಾಗಿಸುವುದೆ?

ಹ್ಹಹ್ಹಹ್ಹ! ಒಳ್ಳೇ ತಮಾಷೆ!!
ಅವಳು ಸೂರ್ಯಕಾಂತಿಯ ಬೀಜದಂತೆ ಸಿಡಿದಳು
ಭಾರತದಾದ್ಯಂತ ಚದುರಿದಳು
ಇಲ್ಲೂ ಅಲ್ಲೂ ಸಾಗರದಾಚೆಗೂ
ಈಗ ಮೌನವೇ ಗುಣುಗುಣಿಸುತ್ತಿದೆ, 
ಪ್ರತಿಧ್ವನಿಸುತ್ತಿದೆ
ನಾನು ಗೌರಿ ನಾನೂ ಗೌರಿ..

- ಇಂಗ್ಲಿಷ್ ಮೂಲ: ಕವಿತಾ ಲಂಕೇಶ್

















ಕನ್ನಡಕ್ಕೆ: ಡಾ. ಎಚ್. ಎಸ್. ಅನುಪಮಾ