Thursday 19 October 2017

ಒಂದು ಗಜಲ್, ಒಂದು ಕವಿತೆ





ಎಚ್ಚರ

(ಆಧಾರ್ ಲಿಂಕ್ಡ್ ಕವಿತೆ, ಆಧಾರ್ ನಂಬರ್ 8191 1421 1611 31)

ಮುಜರಾಯಿ ಇಲಾಖೆ ಇತಿಹಾಸ ಬೋಧಿಸುವುದಾದರೆ
ಸರ್ಕಾರ ಮಾರಾಟದ ಮಳಿಗೆಯಾದರೆ
ನದಿ ಪರ್ವತ ಗಣಿಗಳೆಲ್ಲ ಕೇವಲ ಅಸೆಟ್
ಖರ್ಚು ಮಾಡುವವನೇ ಆದರ್ಶ ನಾಗರಿಕ
ಬದುಕು ಸಂಬಳವಿಲ್ಲದ ನೌಕರಿ
ಹರ್ಕ್ಯುಲಿಸ್ ಸಿಸಿಫಸರ ಗ್ರೀಸ್ ದಿವಾಳಿ

ಆಗ ..
ಬೇರು ಸಮೇತ ಕಿತ್ತು ಹಾಕಿರುವವೆಲ್ಲ
ವಸ್ತು ಸಂಗ್ರಹಾಲಯದಲ್ಲಿ ನೋಡ ಸಿಗುತಾವೆ.
ಬಣ್ಣ ಬದಲಾಯಿಸುತ್ತ ಇರುವವರೆಗೆ ನೀವು ಕ್ಷೇಮ
ಎಂದು ಬೋಧಿಸಲಾಗುತ್ತದೆ
ಅನಾದಿವಾಸಿಗಳು ಎದೆತನಕ ಮುಳುಗಿದರೂ
ನರ್ಮದೆ ಸರೋವರವಾಗುತಾಳೆ..

ಎಚ್ಚರ ಗೆಳೆಯಾ, ಭಾರತ ಹೊಳೆಯುತಿದೆ
ನಿನ್ನ ಗುರುತು ಕೇವಲ ಗುರುತಿನ ಚೀಟಿಯಷ್ಟೇ.
ಬಂಗಾಳದ ಹುಲಿ, ಬರ್ಮಾದ ರೊಹಿಂಗ್ಯಾ
ಇಬ್ಬರಲಿ ಯಾರು ಮೊದಲು ನಿರ್ನಾಮವಾಗುವರು
ಎನ್ನುವುದು ಕೇವಲ ಒಂದು ಜೋಕ್ ಅಷ್ಟೇ.

ಗೆಳೆಯಾ, ಇವು ಅಚ್ಛೇ ದಿನಗಳು
ಮುಜರಾಯಿ ಇಲಾಖೆ ಇತಿಹಾಸ ಬೋಧಿಸುತಿರಲು
ಸರ್ಕಾರ ಮಾರಾಟ ಮಳಿಗೆಯಾಗಿರಲು
ದೇಶವೇ ಒಂದು ಅಸೆಟ್
ನೀನು ಕೊಳ್ಳಲ್ಪಡುವ ಮಾಲು,
ಕೊಳ್ಳುಬಾಕನೇ ಅಮೂಲ್ಯ ಕಸ್ಟಮರು,
ಒಂದು ಮತವಷ್ಟೇ ನಿನ್ನ ವ್ಯಾಲ್ಯೂ.
ನಿನ್ನ ಗುರುತು ಆಧಾರ ಕಾರ್ಡು
‘ಮಡಿಸಬೇಡ, ಹಾಳುಮಾಡಬೇಡ,
ಗರ್ಭದಿಂದ ಗೋರಿಯವರೆಗೂ ಬೇಕು,
ಕಳಕೊಳಬೇಡ, ಹುಶಾರು!’


ಯಾರಿಂದ ಯಾರಿಗೆ?




ನಾನು ಬುಗುರಿ ನೀನು ಚಾಟಿ ಬಿಡುಗಡೆ ಯಾರಿಂದ ಯಾರಿಗೆ?
ನೀನು ಬುಗುರಿ ನಾನು ಚಾಟಿ ಬಂಧನ ಯಾರಿಂದ ಯಾರಿಗೆ?

ನಾನು ನಿದ್ರೆ ನೀನು ಕನಸು ನಶೆ ಯಾರಿಂದ ಯಾರಿಗೆ?
ನೀನು ನಿದ್ರೆ ನಾನು ಕನಸು ಎಚ್ಚರ ಯಾರಿಂದ ಯಾರಿಗೆ?

ನಾನು ಕಡಲು ನೀನು ಬಿಸಿಲು ಬೇಗೆ ಯಾರಿಂದ ಯಾರಿಗೆ?
ನೀನು ಕಡಲು ನಾನು ಬಿಸಿಲು ಮಳೆಯು ಯಾರಿಂದ ಯಾರಿಗೆ?

ನಾನು ಚಿಗುರು ನೀನು ಬೇರು ಬೆಳಸು ಯಾರಿಂದ ಯಾರಿಗೆ?
ನೀನು ಚಿಗುರು ನಾನು ಬೇರು ಯಾರ ಕಸುವು ಯಾರಿಗೆ?

ನಾನು ವೀಳ್ಯೆ ನೀನು ಅಡಕೆ ರಸವು ರುಚಿಯು ಯಾರದು?
ನೀನು ಅಡಕೆ ನಾನು ವೀಳ್ಯೆ ನಂಟು ಬಾಯೊಡನಾರದು?

ನೀನು ಎಳೆಯು ಹಚ್ಚಡವು ನಾನು ಬೆಚ್ಚನನುಭವ ಯಾರದು?
ನಾನು ಎಳೆಯು ಹಚ್ಚಡವು ನೀನು ಒಂಟಿತನವೆಲ್ಲಿರುವುದು?

ಬತ್ತಿ ನೀನು ಹಣತೆ ನಾನು ಜೀವತೈಲ ತುಂಬಿರಲು, ಅನು,
ಬೆಳಕು ದಿಟವು ಕತ್ತಲೆಯೂ ದಿಟವು ಪ್ರಶ್ನೆ ಏಳುವುದೇತಕೊ?

No comments:

Post a Comment